About the Author

ಲೇಖಕ ಎ.ಎಸ್. ಧರಣೇಂದ್ರಯ್ಯನವರು ಮೂಲತಃ ಹಾಸನ ಜಿಲ್ಲೆಯ ಅಡುಗೂರು ಗ್ರಾಮದವರು. ತಂದೆ-ಸಿಂದಪ್ಪ ಶೆಟ್ಟರು, ತಾಯಿ-ಪದ್ಮಾವತಮ್ಮ. ಪ್ರಾಥಮಿಕ ವಿದ್ಯಾಭ್ಯಾಸ ಅಡುಗೂರಿನಲ್ಲಿ, ಹಾಸನದಲ್ಲಿ ಪ್ರೌಢಶಾಲೆ ಮುಗಿಸಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ.ಎ. (ಆನರ್ಸ್), ಎಂ.ಎ. ಮತ್ತು “A STUDY OF OCCUPATIONAL INTEREST PATTERNS OF SCIENTISTS” ಮಹಾ ಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು.

ಮೈಸೂರಿನ ಬನುಮಯ್ಯ ಕಾಲೇಜಿನಲ್ಲಿ ವೃತ್ತಿ ಆರಂಭಿಸಿದರು. ನಂತರ ತಿಪಟೂರು ಕಾಲೇಜು, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಕಾಲೇಜುಗಳಲ್ಲಿ ಮನೋವಿಜ್ಞಾನ ಅಧ್ಯಾಪಕರಾಗಿ, ರೀಡರ್ ಆಗಿ, ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ, ನಿವೃತ್ತರು. ಸಾಹಿತ್ಯ, ಜೈನ ಸಿದ್ಧಾಂತಗಳಲ್ಲಿ ಸಮಾನ ಪ್ರಭುತ್ವ-ಪಾಂಡಿತ್ಯವನ್ನು ಹೊಂದಿದ್ದು, ಮನೋ ವಿಜ್ಞಾನವನ್ನು ಜೈನದರ್ಶನದ ಹಿನ್ನೆಲೆಯಲ್ಲಿ ತುಲನಾತ್ಮಕವಾಗಿ ವಿವರಿಸುತ್ತಿದ್ದರು.

ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಗೋಷ್ಠಿ, ಅಖಿಲ ಭಾರತ ಮನೋವಿಜ್ಞಾನ ಸಮ್ಮೇಳನ, ಯು.ಜಿ.ಸಿ. ಸೆಮಿನಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಜಾನಪದೀಯ ಸಮ್ಮೇಳನ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಸಮ್ಮೇಳನಗಳು ಸೇರಿದಂತೆ ಹಲವಾರು ಮನೋವಿಜ್ಞಾನ ಕಮ್ಮಟ, ಸಮ್ಮೇಳನಗಳಲ್ಲಿ ಭಾಷಣ, ಪ್ರಬಂಧಗಳನ್ನು ಮಂಡಿಸಿದ್ದಾರೆ. ಮೈಸೂರಿನಲ್ಲಿದ್ದಾಗಲೇ ಮಕ್ಕಳಿಗಾಗಿ ‘ರತ್ನತ್ರಯಸಂಘ’ ಪ್ರಾರಂಭಿಸಿದ ಅವರು ಮಕ್ಕಳಲ್ಲಿ ಜೈನ ಧರ್ಮದ ಅರಿವು ಮೂಡಿಸಲು ಜೈನತತ್ತ್ವ, ಸಂಸ್ಕೃತಿ, ಪ್ರಚಾರ ಕಾರ್ಯವನ್ನು ಕೈಗೊಂಡರು. ಈ ಕಾರ್ಯವನ್ನು ಧಾರವಾಡದಲ್ಲೂ ಮುಂದುವರಿಸಿದರು. ಮನೋವಿಜ್ಞಾನಕ್ಕೆ ಸಂಬಂದಿಸಿದಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಮನೋವಿಶ್ಲೇಷಣೆ ನಡೆದು ಬಂದ ದಾರಿ, ವಿಕಾಸ ಮನೋವಿಜ್ಞಾನ, ಸಾಮಾನ್ಯ ಮನೋವಿಜ್ಞಾನ, ಮಾನಸಿಕ ಆರೋಗ್ಯ, ವ್ಯಕ್ತಿತ್ವ, ಮಾನವ ಮತ್ತು ಶಾಖಾಹಾರ, ಅಭಿರುಚಿಗಳು, ನೆನಪು ಮತ್ತು ಮರೆವು, ಪ್ರತಿಭಾವಂತ ಮಕ್ಕಳಿಗೆ ಮಾರ್ಗದರ್ಶನ, ಮನೋವಿಜ್ಞಾನಕ್ಕೆ ಸಂಬಂಸಿದಂತೆ ಪಾರಿಭಾಷಿಕ ಪದಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಪದಗಳನ್ನು ಸೂಚಿಸಿ ರಚಿಸಿದ “ಮನೋವೈಜ್ಞಾನಿಕ ಪಾರಿಭಾಷಿಕ ಕೋಶ” ಅಮೂಲ್ಯ ಗ್ರಂಥ. ಜೈನಮತ ತತ್ತ್ವಗಳಿಗೆ ಸಂಬಂಸಿದಂತೆ ಜೈನ ಮನೋವಿಜ್ಞಾನ, ರತ್ನಾಕರ ಕವಿಯ ಅಪರಾಜಿತೇಶ್ವರ ಶತಕ (ಭಾವಾರ್ಥ ಸಹಿತ) ಜೈನಧರ್ಮ ಮತ್ತು ಸಾಮಾಜಿಕ ಐಕ್ಯಮತ್ಯ, ಸಪ್ತತತ್ತ್ವಗಳು, ಅಹಿಂಸಾಧರ್ಮ ಮುಂತಾದವು. ಮುನಿ ನಾಥಮಲ್‌ಜಿಯವರ ‘ಮಚ್ ಇನ್ ಲಿಟ್ಲ್’ ಗ್ರಂಥಾನುವಾದ ‘ಬಿಂದುವಿನಲ್ಲಿ ಸಿಂಧು’ ಮನೋವಿಜ್ಞಾನ ಕೃತಿಗೆ ಮೈಸೂರು ವಿಶ್ವವಿದ್ಯಾಲಯದಿಂದ ಬಹುಮಾನ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

ಎ.ಎಸ್. ಧರಣೇಂದ್ರಯ್ಯ

(14 Jun 1933)