About the Author

ವ್ಯಾಕರಣ, ಭಾಷೆ, ಕಾವ್ಯಮೀಮಾಂಸೆ, ವಿಮರ್ಶಾಕ್ಷೇತ್ರಗಳಲ್ಲಿ ದುಡಿಯುತ್ತಿರುವ ಅಬ್ದುಲ್ ಬಷೀರ್‌ರವರು ಹುಟ್ಟಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನಕಪುರ ತಾಲ್ಲೂಕಿನ ಕೆಬ್ಬೆದೊಡ್ಡಿ ಗ್ರಾಮದಲ್ಲಿ. ತಂದೆ ಅಬ್ದುಲ್ ಗಫೂರ್‌ಸಾಬ್, ತಾಯಿ ಬಿಯಾಂಬಿ. ಪ್ರಾಥಮಿಕ ವಿದ್ಯಾಭ್ಯಾಸ ಗಬ್ಬಾಡಿ ಶಾಲೆಯಲ್ಲಿ ಮುಗಿಸಿದ ಅವರು ಹಾರೋಹಳ್ಳಿ ರೂರಲ್ ಹೈಸ್ಕೂಲಿನಲ್ಲಿ ಪ್ರೌಢಶಿಕ್ಷಣ ಮುಗಿಸಿದರು. ಕಾಲೇಜು ವಿದ್ಯಾಭ್ಯಾಸ ಆಚಾರ‍್ಯ ಪಾಠಶಾಲೆಯ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿ.ಎ. (ಆನರ್ಸ್), ಮತ್ತು  ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. (ಕನ್ನಡ) ಪದವಿ ಪಡೆದಿದ್ದಾರೆ. 1972 ರಲ್ಲಿ ಉದ್ಯೋಗಕ್ಕೆ ಸೇರಿದ ಅವರು ಕಲಿತ ಕಾಲೇಜಿನಲ್ಲೇ ಅಧ್ಯಾಪಕ ವೃತ್ತಿ ಆರಂಭಿಸಿದರು. ಕನ್ನಡ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 2005ರಲ್ಲಿ ನಿವೃತ್ತಿಯಾದರು. ಆನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಪ್ರಕಟಣಾ ಸಲಹಾ ಸಮಿತಿ, ಪಠ್ಯಪುಸ್ತಕ ರಚನೆ ಮತ್ತು ಪರಿಷ್ಕರಣ ಸಮಿತಿ, ಪ್ರಥಮ ಮತ್ತು ದ್ವಿತೀಯ ಪದವಿ ಪೂರ್ವ ತರಗತಿ ಸಾಹಿತ್ಯ ಸಮಕ್ಷಮ, ಸಾಹಿತ್ಯ ಸಂಗಮ, ಸಿರಿಗನ್ನಡ, ಸವಿಗನ್ನಡ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿ, ಕೆ.ವಿ.ಎಸ್.ಸಿ. ಕಡ್ಡಾಯ ಕನ್ನಡ ಪಠ್ಯ ರಚನ ಸಮಿತಿಯ ಸದಸ್ಯರಾಗಿ ಹೀಗೆ ಹಲವಾರು ಸಮಿತಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಜಾತಿ, ಮತ, ಪಂಥದ ಗೊಡವೆ ಇಲ್ಲದೆ ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಕೈಂಕರ್ಯ ಹಾಗೂ ಸಾಂಸ್ಕೃತಿಕ ರಾಯಭಾರಿಯಾಗಿ ನಾಡಿನುದ್ದಗಲಕ್ಕೂ ಸಂಚರಿಸಿದ್ದಾರೆ.  ವಿದ್ವತ್‌ಪೂರ್ಣ ಉಪನ್ಯಾಸ, ವ್ಯಾಕರಣ, ಭಾಷೆ, ಕಾವ್ಯ ಮೀಮಾಂಸೆ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಹಾಗೂ ಹಳಗನ್ನಡ ವ್ಯಾಕರಣ ವ್ಯಾಖ್ಯಾನದ ಶಬ್ದಮಣಿ ದರ್ಪಣ ದೀಪಿಕೆ, ಕನ್ನಡ ಭಾಷಾ ಕೃತಿಗಳಾದ ವಾಣಿಜ್ಯ ಕನ್ನಡ ಪರಿಚಯ, ಕನ್ನಡ ಪ್ರವೇಶ ಭಾರತಿ (ಭಾಗ ೧, ೨), ಭಾಷೆ : ಕೆಲವು ವಿಚಾರಗಳು, ಕನ್ನಡ ಕಡ್ಡಾಯ ಮೊದಲಾದ ಕೃತಿಗಳನ್ನು ಪ್ರಕಟಿಸಿದ್ದಾರೆ. ಶರಣ ಸಾಹಿತ್ಯ ಚಿಂತನ, ವಾಙ್ಞಯ ವಿಹಾರ, ವಿವೇಕ, ಕಾವ್ಯಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ, ಹರಿದಾಸ ಸಾಹಿತ್ಯ ಮೊದಲಾದ ವಿಮರ್ಶಾ ಕೃತಿಗಳು. ಮೌಲನಾ ಅಬ್ದುಲ್ ಕಲಾಂ ಆಜಾದ್, ಹರಿದಾಸ ಬಡೇ ಸಾಹೇಬರು, ಶಿಕ್ಷಣ ಶಿಲ್ಪಿ ಪ್ರೊ. ಎನ್. ಅನಂತಾಚಾರ್-ಜೀವನಚರಿತ್ರೆ. ಹೊಸ ಅಲೆಗಳು, ಹೊಸಗನ್ನಡ ಕವಿತೆಗಳು-ಸಂಪಾದಿತ ಕವಿತೆಗಳು. ಬಂಧ-ಪ್ರಬಂಧ, ಚಿಂತನ-ಪ್ರಬಂಧ ಸಂಕಲನಗಳು. ಸೆರಗು ಕಣ್ಣೊತ್ತಿ ಅಳುತಾಳೆ-ಜಾನಪದ ಕೃತಿ ಸೇರಿದಂತೆ 20ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ್ದಾರೆ. ಬೆಂಗಳೂರಿನ ಆಕಾಶವಾಣಿ, ದೂರದರ್ಶನದಲ್ಲಿ ನೂರಾರು ಚಿಂತನ, ಭಾಷಣ, ಚರ್ಚೆಗಳಲ್ಲಿ ಭಾಗಿ. ಅನ್ಯಭಾಷಿಕರು ಕನ್ನಡ ನಾಡಿನ ಮುಖ್ಯವಾಹಿನಿಯಲ್ಲಿ ಸೇರಬೇಕಾದ ಅನಿವಾರ್ಯತೆಯ ಸೇರಿದಂತೆ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಇನ್ನೂ ಸಾಹಿತ್ಯ ಕ್ಷೇತ್ರ ಹಾಗೂ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸ್ವಾತಂತ್ರ್ಯ ಸುವರ್ಣ ಮಹೋತ್ಸವ ಪ್ರಶಸ್ತಿ, ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಪ್ರಶಸ್ತಿ ಪಡೆದಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲಾ-ಕನಕಪುರದಲ್ಲಿ ನಡೆದ ಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸೇರಿದಂತೆ ಹಲವು ಗೌರವಗಳು ಸಂದಿವೆ. 

ಅಬ್ದುಲ್ ಬಷೀರ್‌

(06 May 1947)