About the Author

ಲೇಖಕ, ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿರಾವ್ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ದೊಡ್ಡ ಹುಲ್ಲೂರಿನಲ್ಲಿ 1958ರಲ್ಲಿ ಜನಿಸಿದರು. ರಂಗಭೂಮಿ, ಚಲನಚಿತ್ರ ಮತ್ತು ಬರವಣಿಗೆ ಅವರ ಆಸಕ್ತಿಯ ಕ್ಷೇತ್ರಗಳು. ಹಲವಾರು ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.  ‘ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೧, ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೨’ ಅವರ ಪ್ರಮುಖ ಕೃತಿಗಳು. ಡಾ. ರಾಜಕುಮಾರ್ ಸಮಗ್ರ ಜೀವನಚರಿತ್ರೆಯನ್ನು ಅಭೂತಪೂರ್ವವಾಗಿ ಚಿತ್ರ ಸಹಿತ ರಚಿಸಿ ಎರಡು ಮಹಾ ಸಂಪುಟಗಳಲ್ಲಿ ಹೊರತಂದಿದ್ದು ಕನ್ನಡ ಸಾಹಿತ್ಯರಂಗದಲ್ಲಿ ಇದೊಂದು ದೊಡ್ಡ ದಾಖಲೆ. ರಾಜ್‌ಕುಮಾರ್‌ ಅವರ ಸಮಗ್ರ ಜೀವನವನ್ನು ಕಟ್ಟಿಕೊಡುವ `ರಾಜ್‌ಕುಮಾರ್‌ ಸಮಗ್ರ ಚರಿತ್ರೆ ಸಂಪುಟ-1, ಸಂಪುಟ-2’ ಈ ಕೃತಿಗಳನ್ನು ರುಕ್ಕೋಜಿ ಅವರು ತಮ್ಮ 15 ವರ್ಷಗಳ ಪರಿಶ್ರಮದಿಂದ ಸುಮಾರು 87 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಇದು ಅವರ ಅದಮ್ಯ ಸಾಧನೆ. 2,140 ಪುಟಗಳ ಬೃಹತ್‌ ಪುಸ್ತಕದಲ್ಲಿ ರಾಜ್‌ಕುಮಾರ್‌ ಅವರ ಜೀವನ ಚರಿತ್ರೆಯೊಂದಿಗೆ ಅಪರೂಪದ ಛಾಯಾಚಿತ್ರಗಳು (8310 - ಎರಡು ಸಂಪುಟಗಳಿಂದ) ಒಳಗೊಂಡಿರುವುದು ಮತ್ತೊಂದು ಹೆಗ್ಗಳಿಕೆ. ಈ ಕೃತಿಗೆ 63ನೇ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ. ದೇಶದ ಚಲನಚಿತ್ರ ಇತಿಹಾಸದಲ್ಲಿ ಯಾವುದೇ ನಟನ ಜೀವನ ಚಿತ್ರಣವನ್ನು ಈ ಬಗೆಯ ವಿನ್ಯಾಸದಲ್ಲಿ, ವಿನೂತನವಾಗಿ ಪ್ರಕಟಗೊಂಡಿಲ್ಲ. 

ದೊಡ್ಡಹುಲ್ಲೂರು ರುಕ್ಕೋಜಿ