About the Author

ಜಾನಪದ ಹಾಗೂ ಶಿಕ್ಷಣತಜ್ಞ ಎಚ್.ಜೆ. ಲಕ್ಕಪ್ಪಗೌಡ ಅವರು ಸೃಜನಶೀಲ ಸಾಹಿತಿ ಮತ್ತು ಚಿಂತಕರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಅವರು ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನಹಳ್ಳಿಯಲ್ಲಿ 1939ರ ಮೇ 8ರಂದು ಜನಿಸಿದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಅವರು 'ಶ್ರೀರಾಮಾಯಣ ದರ್ಶನಂ : ಒಂದು ವಿಮರ್ಶಾತ್ಮಕ ಅಧ್ಯಯನ' ಮಹಾಪ್ರಬಂಧಕ್ಕೆ ಪಿಎಚ್‌.ಡಿ. ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರಯ ಅಧ್ಯಾಪನ ಉಪನ್ಯಾಸಕ, ಸಂಶೋಧನ ಸಹಾಯಕರಾದರು. ಕಾಲೇಜು ದಿನಗಳಲ್ಲಿಯೇ ಬರವಣಿಗೆಯ ಗೀಳು ಹಚ್ಚಿಕೊಂಡ ಅವರು 'ಹೆಮ್ಮೆ' ಎಂಬ ಕವನ ಸಂಕಲನ ಪ್ರಕಟಿಸಿದ್ದರು.  ಪ್ರೌಢಶಾಲಾ ಶಿಕ್ಷಕರಾಗಿದ್ದಾಗ ಪುರಂದರದಾಸರನ್ನು ಕುರಿತು 'ತಮಸ್ಸಿನಿಂದ ಜ್ಯೋತಿಗೆ' ನಾಟಕ ರಚಿಸಿದ್ದರು. ನಂತರ ಜಾನಪದದೆಡೆಗೆ ಒಲವು ಬೆಳೆಸಿಕೊಂಡ ಅವರು ನಡೆಸಿದ ಜಾನಪದ ವಿಚಾರಸಂಕಿರಣಗಳು, ಮೇಳಗಳ ಆಯೋಜನೆ, ಅಜ್ಞಾತ ಜಾನಪದ ಕಲಾವಿದರನ್ನು ಬೆಳಕಿಗೆ ತರಲು ಕಾರಣವಾಯಿತು. ಮೈಸೂರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಚಟುವಟಿಕೆಗಳ ಮೂಲಕ ಗಮನಸೆಳೆದ ಅವರಯ ಕುಲಸಚಿವ, ಕನ್ನಡಭಾರತಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಕುಲಪತಿಗಳಾದರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಸೆನೆಟ್, ಸಿಂಡಿಕೇಟ್ ಸದಸ್ಯ, ಕರ್ನಾಟಕ ರಾಜ್ಯ ಭಾಷಾ ಆಯೋಗದ ಸದಸ್ಯ, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ, ಕರ್ನಾಟಕ ಜಾನಪದ ಪರಿಷತ್ತಿನ ಸಂಸ್ಥಾಪಕ ಸದಸ್ಯ. ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಮುಂತಾದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಬಹುಮಾನ, ಜಾನಪದ ಅಕಾಡೆಮಿ ಪ್ರಶಸ್ತಿ, ಅಖಿಲ ಕರ್ನಾಟಕ ಜಾನಪದ ಸಮ್ಮೇಳನಾಧ್ಯಕ್ಷತೆಯ ಗೌರವ ಸಂದಿವೆ.

ಅವರು7 ಕವನ ಸಂಕಲನ, 2 ಸಣ್ಣಕತೆಗಳ ಸಂಕಲನ, 2 ನಾಟಕ, 4 ಜೀವನಚರಿತ್ರೆ, 10 ಸಾಹಿತ್ಯ ವಿಮರ್ಶೆ, 7 ಜಾನಪದ, 6 ಮಕ್ಕಳ ಸಾಹಿತ್ಯ ಸೇರಿದಂತೆ ಒಟ್ಟು 65 ಕೃತಿ ಪ್ರಕಟಿಸಿದ್ದಾರೆ. ಎಚ್.ಜೆ. ಲಕ್ಕಪ್ಪಗೌಡ ಅವರ ಪ್ರಮುಖ ಕೃತಿಗಳು: ವಸಂತಗೀತ, ಊರ ಮುಂದಿನ ಬಾವಿ, ಪದ್ದು-ಹದ್ದು, ಅಕ್ಷತೆ, ಕಿರುಗೆಜ್ಜೆ, ಸೂಜಿಸಂಪಿಗೆ ಮತ್ತು ವಚನ (ಕಾವ್ಯ), ಹೊನ್ನಾರು ಮತ್ತು ಹುಲಿಯ ಹೆಜ್ಜೆ (ಸಣ್ಣಕತೆ), ಸಿದ್ಧರಾಮ, ತಮಸ್ಸಿನಿಂದ ಜ್ಯೋತಿಗೆ ಮತ್ತು ಕಾಯಕ ಯೋಗಿ (ನಾಟಕ), ದಲಿತ ಸೂರ್ಯ, ಸಮತೆಯ ಶಿಲ್ಪಿ, ವಿಶ್ವಕವಿ ಕುವೆಂಪು ಮತ್ತು ಡಾ. ಅಂಬೇಡ್ಕರ್ (ಜೀವನಚರಿತ್ರೆ), ಅಂತರಂಗ, ಸಂಗಮ, ಕಥಾಸಂಕಲನ, ಗೋಪುರದ ದೀಪಗಳು, ಅಂತರಾಳ, ಬಾಳದೇಗುಲದ ನೋಟಗಳು, ವಿಲೋಕನ, ಸಾಹಿತ್ಯ: ಬಹುಮುಖಿ ಚಿಂತನೆ, ಪುಸ್ತಕ ರೇಖೆಗಳು ಮತ್ತು ಕನಕ ಮುಖಗಳು (ಸಾಹಿತ್ಯ ವಿಮರ್ಶೆ), ಜಾನಪದ ಕಥಾವಳಿ, ಒಗಟುಗಳು, ಮಲೆನಾಡು ಜಾನಪದ, ವಿಶಿಷ್ಟ ಜಾನಪದ, ಡೊಳುಮೇಳ, ಮಲ್ಲಿಗೆ ಮೊಗ್ಗು ಸುರಿದಾವೆ ಮತ್ತು ಹೊಂಬಾಳೆ (ಜಾನಪದ), ಇಲಿಯಡ್, ಒಡಿಸ್ಸಿ, ಕಾಯಕವೇ ಕೈಲಾಸ, ದೀನಬಂಧು, ಭೋಗ-ಯೋಗ ಮತ್ತು ಕಾಮನಬಿಲ್ಲು (ಮಕ್ಕಳ ಸಾಹಿತ್ಯ ), ಇಬ್ಬನಿ (ಸ್ವತಂತ್ರ ಗಾದೆಗಳು), ಅನ್ಯಾರ್ಥಕೋಶ (ಕೋಶ), ರಸಋಷಿ, ಮಂಗಳಗಂಗೆ, ಸಾಧನೆಯ ಹಾದಿಯಲ್ಲಿ, ನಾಗಸಂಪಿಗೆ, ರಾಷ್ಟ್ರಕವಿ, ಸಿಂಗಾರ, ಗ್ರಂಥಸರಸ್ವತಿ, ಮುತ್ತು ಬಂದಿಗೆ ಕೇರಿಗೆ, ಕನಕಭಾರತಿ, ಸ್ವಯಂಸೇವಕ, ಕುರುಬರು ಮತ್ತು ಉಣ್ಣೆ ನೇಕಾರರು, ಕನಕಕಿರಣ, ಸಂಸ್ಕೃತಿ, ಜನಪ್ರಿಯ ಕನಕ ಸಂಪುಟ, ಸಹ್ಯಾದ್ರಿ ಸಿರಿ, ಜೀಶಂಪ ಸಂಸ್ಕರಣೆ, ಹತ್ತರಹಸಿರು ಮತ್ತು ಅಭಿಜ್ಞ (ಸಂಪಾದಿತ ಕೃತಿಗಳು)

ಇಂಗ್ಲಿಷ್ : ಲಿಂಗರಿಂಗ್ ಫಾಗ್ರೆನ್ಸ್, ಶ್ರೀಗಂಧ, ಎ ಬೊಕೆ ಆಫ್ ಫ್ಲವರ್ಸ್, ಪ್ರೈಸ್‌ಲೆಸ್ ಗೋಲ್ಡ್ (ಇತರರೊಡನೆ) ಮತ್ತು ಕನಕಭಾರತಿ.

ಎಚ್. ಜೆ. ಲಕ್ಕಪ್ಪಗೌಡ

(08 May 1939)