About the Author

ಕಥೆಗಾರ, ಸಾಹಿತಿ ಎಸ್.ಆರ್. ಗುರುನಾಥ್ ಅವರ ಹುಟ್ಟೂರು ಚಿತ್ರದುರ್ಗ ತಾಲ್ಲೂಕಿನ ಹಿರೇಗುಂಟನೂರು ಹೋಬಳಿಯ ಸಿಂಗಾಪುರ. ಅನೇಕ ವರ್ಷಗಳಿಂದಲೂ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿ ವಾಸವಾಗಿದ್ದರು. ಬಡತನ, ಶೋಷಣೆ ಅದರ ಜತೆಗೆ ದಲಿತ ಸಮುದಾಯದವರ ಮೇಲೆ ಆಗಿಂದಾಗ್ಗೆ ಆಗುತ್ತಿದ್ದ ಅಪಮಾನ, ಆತಂಕ, ತಲ್ಲಣಗಳೇ ಅವರನ್ನು ಬರವಣಿಗೆಯತ್ತ ಪ್ರೇರೇಪಿಸಿತು. ದೌರ್ಜನ್ಯ, ನೋವುಗಳಿಗೆ ಅಕ್ಷರದ ರೂಪ ನೀಡುವ ಮೂಲಕ ಹಿಂದುಳಿದ ಸಮುದಾಯಗಳ ದನಿಯಾಗಿ 4 ದಶಕಗಳ ಕಥೆಗಾರರಾಗಿ ಅನೇಕ ಕಥೆ, ಕವನಗಳನ್ನು ಬರೆದಿದ್ದಾರೆ.

ಒಡಂಬಡಿಕೆ, ಹಾಡು, ದಲಿತದನಿ, ಕೆರೆಗೆ ಹಾರವಾದ ಬಂದಮ್ಮನ ಇತಿಹಾಸ, ಅಧೋಲೋಕ, ವರ್ಣಾವರ್ಣ ಹೀಗೆ ಅನೇಕ ಕಥೆ, ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಗುರುನಾಥ್ ಅವರಿಗೆ ದೆಹಲಿಯ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯಿಂದ 1997ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಷಿಪ್, 2007ರಲ್ಲಿ ಮಹಾತ್ಮ ಜ್ಯೋತಿಬಾ ಫುಲೆ ರಾಷ್ಟ್ರೀಯ ಫೆಲೋಷಿಪ್ ಅವಾರ್ಡ್, 2011ರಲ್ಲಿ ಬಾಬು ಜಗಜೀವನರಾಂ ರಾಷ್ಟ್ರೀಯ ಸಮ್ಮಾನ್ ಪದಕ ಸೇರಿ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಗುರುನಾಥ್, 2019ರಲ್ಲಿ ಮದಕರಿಪುರ ಗ್ರಾಮದಲ್ಲಿ ನಡೆದ 4ನೇ ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಆಯ್ಕೆಯಾದಾಗ ಸರಳವಾಗಿ ಸಮ್ಮೇಳನ ನಡೆಸುವಂತೆ ಸಂಘಟಕರಲ್ಲಿ ಮನವಿ ಮಾಡಿದ್ದರು. ವಿದ್ಯಾರ್ಥಿ ದೆಸೆಯಿಂದಲೂ ಸಂಶೋಧನೆಯ ಬಗ್ಗೆ ಆಸಕ್ತಿ ಇದ್ದ ಅವರು ಇತಿಹಾಸ ಸಂಶೋಧಕ ಲಕ್ಷ್ಮಣ್ ತೆಲಗಾವಿ ಅವರೊಂದಿಗೆ ಅನೇಕ ವರ್ಷ ಸಂಶೋಧನೆಗಳಲ್ಲಿ ತೊಡಗಿದ್ದರು.

1972ರಿಂದ 2004ರವರೆಗೂ ಸರ್ಕಾರಿ ಕುಶಲಕರ್ಮಿ ತರಬೇತಿ ಸಂಸ್ಥೆಯಲ್ಲಿ ಸಹಾಯಕ ಭೋದಕ, ಹಿರಿಯ ಬೋಧಕರಾಗಿ ಸೇವೆ ಸಲ್ಲಿಸಿದ್ದ ಗುರುನಾಥ್ ಅವರು ತಮ್ಮ 75ನೇ ವಯಸ್ಸಿನಲ್ಲಿ 2022ರ ಅಕ್ಟೋಬರ್ ತಿಂಗಳಿನಲ್ಲಿ ಅನಾರೋಗ್ಯದಿಂದ ನಿಧನರಾದರು.

ಎಸ್.ಆರ್. ಗುರುನಾಥ್