About the Author

ಪ್ರೊ. ಸದಾಶಿವ ಒಡೆಯರ ಅವರು ಶಿಕ್ಷಣ ತಜ್ಞರು. ಧಾರವಾಡದ ಮರೇವಾಡ ಗ್ರಾಮದವರು. ತಂದೆ ಶಿವದೇವ ಒಡೆಯರ್, ತಾಯಿ ಗಿರಿಜಾದೇವಿ. ಸದಾಶಿವರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ನಡೆಯಿತು. ಆಟದಲ್ಲಿ ಸದಾ ಮುಂದಿದ್ದ ಅವರಿಗೆ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಪ್ರಿಯವಾದ ಆಟಗಳಾಗಿದ್ದವು.

ಧಾರವಾಡದಲ್ಲಿ 1945ರಲ್ಲಿ ಬಿ.ಎ. (ಆನರ್ಸ್) ಪದವಿ, 1947ರಲ್ಲಿ ಬೆಳಗಾವಿಯ ಲಾ ಕಾಲೇಜಿನಿಂದ ಎಲ್.ಎಲ್.ಬಿ. ಪದವಿ, 1948ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಅಹಮದಾಬಾದಿನ ಗುಜರಾತ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. 1949ರಲ್ಲಿ ಸ್ಥಾಪನೆಗೊಂಡ ಕರ್ನಾಟಕ ವಿಶ್ವವಿದ್ಯಾಲಯದ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿ ನೇಮಕಗೊಂಡರು. 1951ರಲ್ಲಿ ಸಹಾಯಕ ಕುಲಸಚಿವರಾಗಿ, 1957ರಲ್ಲಿ ಕುಲಸಚಿವರಾಗಿ, 1967-68ರಲ್ಲಿ ಉಪಕುಲಪತಿಗಳಾಗಿ ಕಾರ‍್ಯನಿರ್ವಹಿಸಿದರು. ಅಮೆರಿಕಾ, ಇಂಗ್ಲೆಂಡ್ ಫ್ರಾನ್ಸ್, ಜರ್ಮನಿ, ಇಟಲಿ, ಸ್ವಿಡ್ಜರ್‌ಲ್ಯಾಂಡ್, ಈಜಿಪ್ಟ್ ದೇಶಗಳಿಗೆ ವಿವಿಧ ಸಂದರ್ಭಗಳಲ್ಲಿ ಆಹ್ವಾನಿತರಾಗಿ, ಶೈಕ್ಷಣಿಕ ಮತ್ತು ಸಾಂಸ್ಕೃತಿಕತೆ ಕುರಿತು ತಮ್ಮ ವಿಚಾರಗಳನ್ನು ಮಂಡಿಸಿದ್ದರು. ಉತ್ತಮ ಆಡಳಿತಗಾರರಾಗಿದ್ದರು.

ಕೃತಿಗಳು: ಜೀವನ ಕಲೆ (ಪ್ರಬಂಧ ಸಂಕಲನ), ರವೀಂದ್ರ ದರ್ಶನ (ಜೀವನ ಚರಿತ್ರೆ), ಜೋನ್ ಆಫ್ ಆರ್ಕ್ ಮತ್ತು ಇತರ ನಾಟಕಗಳು ಅವರ ನಾಟಕಗಳ ಸಂಗ್ರಹ. ಇಂಗ್ಲಿಷ್‌ನಲ್ಲಿ The Light of other days, Trailing cloud ಕೃತಿಗಳನ್ನು ರಚಿಸಿದರು. Basveshwara Commemoration volume ಅವರ ಸಂಪಾದಿತ ಕೃತಿ. ಸದಾಶಿವ ಒಡೆಯರ್ ಅವರ ರವೀಂದ್ರ ದರ್ಶನ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತ್ತು. ‘ಸವಿಸಂಚಯ' ಎಂಬುದು ಅವರಿಗೆ ಅರ್ಪಿಸಿದ ಗೌರವ ಗ್ರಂಥ. ಸದಾಶಿವ ಒಡೆಯರ್ 1996ರ ಸೆ. 11ರಂದು ಧಾರವಾಡದಲ್ಲಿ ನಿಧನರಾದರು.

ಸದಾಶಿವ ಒಡೆಯರ

(07 Aug 1924-11 Sep 1996)