About the Author

ಹಿರಿಯ ಸಂಶೋಧಕ, ಲೇಖಕ ಡಾ. ಶ್ರೀನಿವಾಸ ರಿತ್ತಿ ಅವರು ಹಾವೇರಿ ಜಿಲ್ಲೆಯವರು. ತಂದೆ- ಹನುಮಂತಾಚಾರ್ಯರು, ತಾಯಿ- ಭಾರತಿ. ಧಾರವಾಡದಲ್ಲಿ ಶಿಕ್ಷಣ ಪೂರೈಸಿ, ಆನಂತರ ಉದಕಮಂಡಲದ ಪ್ರಾಚ್ಯವಸ್ತು ಸಂಶೋಧನಾ ಇಲಾಖೆಯಲ್ಲಿ ವೃತ್ತಿ ಆರಂಭಿಸಿದರು. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಸಂಶೋಧನ ಸಂಸ್ಥೆ ಹಾಗೂ ಪ್ರಾಚೀನ ಭಾರತ ಇತಿಹಾಸ ಮತ್ತು ಶಾಸನ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಎರಡೂವರೆ ದಶಕಗಳ ಕಾಲ ಕಾರ್ಯನಿರ್ವಹಿಸಿ, ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾದರು. ತದನಂತರವೂ ಲಿಪಿಶಾಸ್ತ್ರದಲ್ಲಿ ಶಾಸನ ಪ್ರತಿ ಸಿದ್ಧಪಡಿಸುವುದು, ಸಂಗ್ರಹ, ಸಂಪಾದನೆ ಕಾರ್ಯವನ್ನು ಮುಂದುವರೆಸಿದರು. ಎಪಿಗ್ರಾಫಿಯಾ ಇಂಡಿಕಾ, ಜರ್ನಲ್ ಆಫ್ ಓರಿಯಂಟಲ್ ರೀಸರ್ಚ್‌, ಮಿಥಿಕ್‌ ಸೊಸೈಟಿ ಜರ್ನಲ್, ಪ್ರಬುದ್ಧ ಕರ್ನಾಟಕ ಸೇರಿ ಅನೇಕ ನಿಯತಕಾಲಿಕೆಗಳಲ್ಲಿ ಇವರ ಸಂಶೋಧನ ಲೇಖನಗಳು ಪ್ರಕಟಗೊಂಡಿವೆ.

ವಿಜಯನಗರ ಇತಿಹಾಸಕ್ಕೆ ಸಂಬಂಧಿಸಿದಂತೆ ವಿವಿಧ ಭಾಷೆಗಳಲ್ಲಿದ್ದ ಶಾಸನಗಳ ಸಂಶೋಧನಾತ್ಮಕ ಅಧ್ಯಯನದ 6 ಬೃಹತ್ ಸಂಪುಟಗಳನ್ನು ಸಂಪಾದಿಸಿದ್ದಾರೆ. ಇವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿ ರಾಜ್ಯ ಮತ್ತು ರಾಷ್ಟ್ರಮಟ್ಟದ ವಿವಿಧ ಪ್ರಶಸ್ತಿಗಳು ಲಭಿಸಿವೆ. ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್‌ ಶತಮಾನೋತ್ಸವ ಮತ್ತು ಆಲೂರು ವೆಂಕಟರಾವ್‌ ಪ್ರತಿಷ್ಠಾನ ಹಾಗೂ ಟ್ರಸ್ಟ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರು 2018ರ ಆಗಸ್ಟ್ 16ರಂದು ನಿಧನರಾದರು.ಅವರ ಇಚ್ಛೆಯಂತೆ ಎಸ್‌ಡಿಎಂ ಆಸ್ಪತ್ರೆಗೆ ದೇಹ ದಾನ ಮಾಡಲಾಯಿತು.

ಶ್ರೀನಿವಾಸ ರಿತ್ತಿ

(08 Jun 1929-16 Aug 2018)