About the Author

ರಂಗಭೂಮಿ ಕಲಾವಿದ, ನಾಟಕಕಾರ, ನಿರ್ದೇಶಕರಾಗಿಯೂ ಗುರುತಿಸಿಕೊಂಡಿರುವ ಬಿ. ಸುರೇಶ, 1962ರಲ್ಲಿ ದಾವಣಗೆರೆಯಲ್ಲಿ ಜನಿಸಿದರು. ಹಿರಿಯ ಪತ್ರಕರ್ತೆ ಹಾಗೂ ಲೇಖಕಿ ವಿಜಯಾ ಅವರ ಪುತ್ರ. ಬಿ.ಸುರೇಶ ಅವರು 1973ರಿಂದಲೇ ಬಾಲನಟರಾಗಿ ಹವ್ಯಾಸಿ ರಂಗಭೂಮಿಯಲ್ಲಿ ಕಾಣಿಸಿಕೊಂಡು ಈವರೆಗೂ ಸಕ್ರಿಯ ರಂಗಕರ್ಮಿಯಾಗಿದ್ದಾರೆ. ಅಲ್ಲದೇ, 1976 ರಲ್ಲಿ ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಘಟಶ್ರಾದ್ದ ಚಿತ್ರದಲ್ಲಿ ಬಾಲನಟರಾಗಿ ಕಾಣಿಸಿಕೊಳ್ಳುವ ಮೂಲಕ ಇವರ ಚಿತ್ರರಂಗದ ಬದುಕು ಪ್ರಾರಂಭವಾಯಿತು. 1988 ರಲ್ಲಿ ಮಿಥಿಲೆಯ ಸೀತೆಯರು ನಿರ್ದೇಶನ ಮಾಡಿದ ಅವರು ಚಿತ್ರಕಥೆ, ಸಂಭಾಷಣೆ ಬರೆಯುತ್ತಾ 15 ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಂಭಾಷಣೆ ರಚಿಸಿದ್ದಾರೆ.  ’ಅರ್ಥ’ ಚಿತ್ರಕ್ಕಾಗಿ ಬಿ.ಸುರೇಶ ಅವರಿಗೆ 2002-2003 ನೇ ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆತಿದೆ. 2010 ರಲ್ಲಿ ಇವರು ನಿರ್ದೇಶಿಸಿದ "ಪುಟ್ಟಕ್ಕನ ಹೈವೇ" ಚಿತ್ರವೂ ರಾಷ್ಟ್ರ ಪ್ರಶಸ್ತಿಯನ್ನು ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ ಎಂತಲೂ, ಅತ್ಯುತ್ತಮ ಚಿತ್ರಕತೆ ಎಂಬ ರಾಜ್ಯ ಪ್ರಶಸ್ತಿಯನ್ನೂ ಪಡೆದುಕೊಂಡಿದೆ.

ಸುಮಾರು 20 ಕ್ಕೂ ಹೆಚ್ಚು ಕನ್ನಡ ಧಾರಾವಾಹಿಗಳನ್ನು ರಚಿಸಿ, ನಿರ್ದೇಶಿಸಿರುವ ಹೆಗ್ಗಳಿಕೆ ಇವರದು. ಕೋತಿಕತೆ, ವರದಿಯಾಗದ ಕಥೆ, ಅಪ್ಪಾಲೆ ತಿಪ್ಪಾಲೆ, ಹಸಿರೇ ಉಸಿರು, ಅಹಲ್ಯೆ ನನ್ನ ತಾಯಿ, ಅಯ್ಯೋ ಅಪ್ಪಾ!  ,ಕಾಡುಮಲ್ಲಿಗೆ , ಕುಣಿಯೋಣು ಬಾರಾ, ಅರ್ಥ, ಕತೆ ಕಟ್ಟೋ ಆಟ, ಷಾಪುರದ ಸೀನಿಂಗಿ ಸತ್ಯ, ರೆಕ್ಕೆ ಕಟ್ಟುವಿರಾ?, ಚಂದಿರನ ನೆರಳಲ್ಲಿ, ಕುರುಡಜ್ಜನ ಪೂರ್ಣಚಂದ್ರ, ಗಿರಿಜಾಕಲ್ಯಾಣ, ಬಾಳೂರ ಗುಡಿಕಾರ ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ.

ಇವರ ‘ಷಾಪುರದ ಸೀನಿಂಗಿ ಸತ್ಯ’ ನಾಟಕವು 1997 ರ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದುಕೊಂಡಿದೆ. ಬೆಂಗಳೂರು ದೂರದರ್ಶನಕ್ಕಾಗಿ ಬಿ.ಸುರೇಶ ಅವರು ನಿರ್ದೇಶಿಸಿದ್ದ ದೈನಿಕ ಧಾರಾವಾಹಿ ‘ಸಾಧನೆ’- 2001 ರ ಸಾಲಿನಲ್ಲಿ ಅತ್ಯುತ್ತಮ ಧಾರಾವಾಹಿ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಲೇಖಕ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ‘ಅರ್ಥ’  ಚಿತ್ರಕ್ಕಾಗಿ  2002-03ರ  ಸಾಲಿನ ಪ್ರಥಮ ಅತ್ಯುತ್ತಮ ಚಿತ್ರ ರಾಜ್ಯ ಪ್ರಶಸ್ತಿ ದೊರೆತಿದೆ. ಗುಬ್ಬಚ್ಚಿಗಳು ಚಿತ್ರಕ್ಕೆ 2007 ರ ಅತ್ಯುತ್ತಮ ಮಕ್ಕಳ ಚಿತ್ರ ಸ್ವರ್ಣಕಮಲ ಪದಕ ಹಾಗೂ ನ್ಯೂಯಾರ್ಕ್ ಇಂಡಿಪೆಂಡೆಂಟ್ ಫಿಲ್ಮ್ ಅಂಡ್ ವಿಡಿಯೋ ಫೇಸ್ಟಿವಲ್ ನಿಂದ ‘ಅತ್ಯುತ್ತಮ ಸಂಸಾರಿಕ ಚಿತ್ರ’ ಪ್ರಶಸ್ತಿ ದೊರೆತಿದೆ. 

ಬಿ. ಸುರೇಶ

BY THE AUTHOR