About the Author

ಅಡಿಗರ ಕವಿತೆಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಚಲನಶೀಲವಾಗಿಟ್ಟುಕೊಂಡಿರುವ ಧೀಮಂತರು ಕೆದಿಲಾಯರವರು. ಉಡುಪಿ ತಾಲೂಕಿನ ಬಾಳೆಕುದ್ರು ಗ್ರಾಮದಲ್ಲಿ ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ 1937ರಲ್ಲಿ ಜನಿಸಿದ ಕೆದಿಲಾಯ ಇವರು ವಿದ್ಯಾರ್ಥಿದೆಸೆಯಿಂದಲೇ ಕನ್ನಡ, ಸಂಸ್ಕೃತ, ಇಂಗ್ಲಿಷ್ ಸಾಹಿತ್ಯಗಳ ಅಧ್ಯಯನ, ಪತ್ರಿಕೆಗೆ ಬರೆಯುವ ಹವ್ಯಾಸ (ಎಂ.ಜಿ.ಎಂ ಕಾಲೇಜು ಮತ್ತು ಕರ್ನಾಟಕ ವಿ.ವಿ ಗಳಲ್ಲಿ ಶಿಕ್ಷಣ) ರೂಢಿಸಿಕೊಂಡರು.
 ಭಾರತೀಯ ಜೀವವಿಮಾ ನಿಗಮ ದಲ್ಲಿ ಉದ್ಯೋಗಿಯಾಗಿ, ಹಿರಿಯ ಅಧಿಕಾರಿಯಾಗಿ, ಸ್ಟಾಫ್ ಟ್ರೈನಿಂಗ್ ಕಾಲೇಜಿನ ಪ್ರಾಂಶುಪಾಲರಾಗಿ ದುಡಿದು 1995ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದ ಅಧ್ಯಯನ, ಕನ್ನಡದಲ್ಲಿ ಲೇಖನ ವ್ಯವಸಾಯ ಮಾಡಿ 7 ಸ್ವತಂತ್ರ ಪುಸ್ತಕಗಳನ್ನೂ, ನೂರಾರು ಲೇಖನಗಳನ್ನೂ ಬರೆದಿದ್ದು ಅವು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
 ಕನ್ನಡದ ನವ್ಯ ಕಾವ್ಯದ ಪ್ರವರ್ತಕ ಕವಿ ಗೋಪಾಲಕೃಷ್ಣ ಅಡಿಗರ ಕಾವ್ಯದ ಕುರಿತು ಅನೇಕ ವರ್ಷಗಳ ಕಾಲ ಅಧ್ಯಯನ ಮಾಡಿ ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯವಲ್ಲದೆ, ಸಂಗೀತ, ಯಕ್ಷಗಾನ, ವೇದಾಂತಗಳಲ್ಲೂ ಆಸಕ್ತಿ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನ ಶಿವರಾಮ ಕಾರಂತ ವೇದಿಕೆ ಪ್ರಕಟಿಸುತ್ತಿರುವ ಹಣತೆ ಎಂಬ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ದಿನವೂ ಅಡಿಗರ ಕವಿತೆಗಳನ್ನು ನೆನಪಿಸಿಕೊಳ್ಳದೆ ಕೆದಿಲಾಯರು. ಬಹುತೇಕ ಅಡಿಗರ ಪದ್ಯಗಳು ಅವರ ಬಾಯಲ್ಲಿ ಲಾಲಿತ್ಯವಾಡುತ್ತವೆ. ಅಡಿಗರ ಸಾಂಗತ್ಯದಲ್ಲಿ ಮಿಂದಿರುವ ಹಚ್ಚ ಹಸಿರು ನೆನಪುಗಳನ್ನು “ಅಡಿಗ ನೆನಪು ಅಡಿಗಡಿಗೆ”ಯಲ್ಲಿ ದಾಖಲಿಸಿ, ಕನ್ನಡ ಸಾಹಿತ್ಯಲೋಕದಲ್ಲಿ ಒಂದು ಮೌಲ್ಯಯುತ ಕೃತಿಯನ್ನು ಕೊಡುಗೆಯಾಗಿ ನೀಡಿದ್ದಾರೆ. ಸಂಗೀತ, ರಂಗಭೂಮಿ, ಯಕ್ಷಗಾನ, ತತ್ವಜ್ಞಾನ ಎಲ್ಲದರಲ್ಲೂ ತಮ್ಮ ಅಭಿರುಚಿ ಹೊಂದಿದ್ದಾರೆ.

2017ರ ಪ್ರೊ. ವಿ.ಎಂ ಇನಾಂದಾರ್  ಪ್ರಶಸ್ತಿಗೆ ಹಿರಿಯ ಲೇಖಕ ಕೆದಿಲಾಯ ಇವರ ಅಡಿಗ ನೆನಪು ಅಡಿಗಡಿಗೆ ಪುಸ್ತಕ ಪಾತ್ರವಾಗಿದೆ.

ಬಿ.ವಿ. ಕೆದಿಲಾಯ