About the Author

ಬಾಲಸುಬ್ರಹ್ಮಣ್ಯ ಕಂಜರ್ಪಣೆ- ಕಾವ್ಯನಾಮದಿಂದ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿರುವ ಕೆ.ಪಿ.ಬಾಲಸುಬ್ರಮಣ್ಯ ಅವರು, ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಕಂಜರ್ಪಣೆ ಯಲ್ಲಿ (20-05-1954) ಜನಿಸಿದರು. ಕೃಷಿ ಹಿನ್ನೆಲೆಯ ಅವರು ಉತ್ತಮ ಬರಹಗಾರರು. ಪುತ್ತೂರಿನ ಸಂತ ಫಿಲೋಮಿನ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ ಪಡೆದು, ಉಡುಪಿಯ ಲಾ ಕಾಲೇಜಿನಿಂದ ಕಾನೂನು ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡರು. ಮಡಿಕೇರಿಯ ಸರಕಾರಿ ಹಿರಿಯ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದ ಉಪನ್ಯಾಸಕರಾಗಿಯೂ ಅನುಭವವಿದೆ. ಪ್ರಸ್ತುತ ಕೊಡಗಿನ ಮಡಿಕೇರಿಯಲ್ಲಿ ನ್ಯಾಯವಾದಿಯಾಗಿದ್ದಾರೆ.

ಸ್ವಯಂಪ್ರಭೆ, ಒಡೆದ ಪ್ರತಿಮೆಗಳು (ಕವನ ಸಂಕಲನಗಳು), ಅದೃಷ್ಟದ ಹುಡುಗಿ (ಕಥಾ ಸಂಕಲನ) ಹಾಗೂ ಗೋಪಾಲಕೃಷ್ಣ ಅಡಿಗ, ಜಿ.ಎಸ್.ಆಮೂರ ಬದುಕು-ಬರೆಹ ಕುರಿತು ಕೃತಿಗಳನ್ನು ಪ್ರಕಟಿಸಿದ್ದಾರೆ. ಬಿಸಿಲ ಹಂದರ-ವೈಚಾರಿಕ ಲೇಖನಗಳ ಸಂಗ್ರಹ. ತಕ್ಕಡಿಯ ಮುಳ್ಳು ಕೃತಿಯ ಕಾನೂನು ಮತ್ತು ನ್ಯಾಯ ಸಂಬಂಧಿ ಬರೆಹಗಳನ್ನು ಹೊಂದಿದೆ.

‘ಗರೂಡಾವತಾರ’ ಕೃತಿಗೆ 2009ರ ಮುದ್ದಣ ಕಾವ್ಯ ಪುರಸ್ಕಾರ ಲಭಿಸಿದೆ. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಗಾಗಿ ವಿಲ್ ಡ್ಯೂರಂಟಿನ ದಿ ಸ್ಟೋರಿ ಆಫ್ ಸಿವಿಲೈಜೇಷನ್ ಕೃತಿಯ ಮೊದಲ ಸಂಪುಟದ ಎರಡು ಅಧ್ಯಾಯಗಳು ಹಾಗೂ ಕಾವೇರಿ ನ್ಯಾಯಾಧಿಕರಣ ತೀರ್ಪಿನ 5ನೇ ಸಂಪುಟದ ಕನ್ನಡ ಅನುವಾದ ಮಾಡಿದ ಹಿರಿಮೆ ಇವರದು

ಬಾಲಸುಬ್ರಹ್ಮಣ್ಯ ಕಂಜರ್ಪಣೆ

(20 May 1954)