About the Author

ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ 1965 ಮೇ 20ರಂದು ಶಿಕ್ಷಕ ಡಿ. ಶ್ರೀನಿವಾಸರಾವ್ ಮತ್ತು ಗಿರಿಜಮ್ಮ ದಂಪತಿಗಳ ಮೊದಲ ಮಗನಾಗಿ ಜನಿಸಿದರು. ತರೀಕೆರೆ, ಭದ್ರಾವತಿ, ಶಿವಮೊಗ್ಗೆಗಳಲ್ಲಿ ವಿದ್ಯಾಭ್ಯಾಸ, ವಾಣಿಜ್ಯದಲ್ಲಿ ಪದವಿ, ಕನ್ನಡ ಎಂಎ, ವಿಮೆ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲಮೋ, ಪ್ರಸ್ತುತ ಭಾರತೀಯ ಜೀವ ವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿದ್ದಾರೆ. 1994ರಿಂದ ಅರಸೀಕೆರೆ ನಿವಾಸಿ.

'ಮರೆತ ಮಾತು' (2002) (ಶಿವಮೊಗ್ಗ ಕರ್ನಾಟಕ ಸಂಘದ ಪ್ರೊ.ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ ಮತ್ತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರೊ.ಡಿ.ಸಿ.ಅನಂತಸ್ವಾಮಿ ಕಾವ್ಯ ಪ್ರಶಸ್ತಿ ಪಡೆದ ಕೃತಿ), 'ಉಳಿದ ಪ್ರತಿಮೆಗಳು (2007) (ಹಸ್ತಪ್ರತಿಗೆ ಕನ್ನಡ ಕಾವ್ಯ ಸಂದರ್ಭದ ಪ್ರತಿಷ್ಠಿತ ಕಾಂತಾವರ ಕನ್ನಡ ಸಂಘದ ಮುದ್ದಣ ಕಾವ್ಯಪ್ರಶಸ್ತಿ 2006), 'ತೆರದರಷ್ಟೇ ಬಾಗಿಲು' (2010) (ಹಸ್ತಪ್ರತಿಗೆ ಧಾರವಾಡದ ವಿಭಾಸಾಹಿತ್ಯ ಪ್ರಶಸ್ತಿ- 2010) ಪ್ರಕಟಿತ ಕವನ ಸಂಕಲನಗಳು.

ಪ್ರಜಾವಾಣಿ ದೀಪಾವಳಿ ಕವನ ಸ್ಪರ್ಧೆ 2004, 2005 ಮತ್ತು 2008, ಕನ್ನಡಪ್ರಭ ಸಂಕ್ರಾಂತಿ ಕಥಾ ಸ್ಪರ್ಧೆ 2010, ಸಂಚಯ ಹಾಗೂ ಸಂಕ್ರಮಣ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನಿತ. - ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಉಡುಪಿ ಮತ್ತು ಗದಗಗಳಲ್ಲಿ ಪ್ರಬಂಧ ಮಂಡನೆ. ಜಿಲ್ಲಾ ಸಾಹಿತ್ಯ ಸಮ್ಮೇಳನ, ದಸರಾ ಕವಿಗೋಷ್ಠಿ, ನುಡಿಸಿರಿಯ ಕವಿ ಸಮಯ-ಕವಿ ನಮನ ಹಾಗೂ ಸಾಹಿತ್ಯ ಅಕಾಡೆಮಿಯ ವಿವಿಧ ಕಾರ್ಯಕ್ರಮಗಳಲ್ಲಿ ಉಪನ್ಯಾಸಕನಾಗಿ ಮತ್ತು ಕವಿಗೋಷ್ಠಿಗಳಲ್ಲಿ ಭಾಗವಹಿದ್ದಾರೆ.

ಕನ್ನಡದ ಬಹುತೇಕ ಪತ್ರಿಕೆಗಳಲ್ಲಿ ಕವಿತೆ, ಕತೆ, ಲೇಖನಗಳ ಪ್ರಕಟಣೆ, ಪ್ರಬಂಧ ಸ್ಪರ್ಧೆಗಳಲ್ಲೂ ಬಹುಮಾನಿತ, ಆಕಾಶವಾಣಿಯ ಹಾಸನ, ಭದ್ರಾವತಿ ಮತ್ತು ಬೆಂಗಳೂರು ಕೇಂದ್ರಗಳಿಂದ ಈವರೆಗೆ ೧೫೦ಕ್ಕೂ ಹೆಚ್ಚು ಚಿಂತನಗಳ ಪ್ರಸಾರ. ದೂರದರ್ಶನದ ಚಂದನ, ಕಸ್ತೂರಿ ಮತ್ತು ಉದಯ ವಾಹಿನಿಗಳ ಟಾಕ್ ಷೋಗಳಲ್ಲಿ ಭಾಗವಹಿಸಿದ ಅನುಭವ. ವಿವಿಧ ಸಂಘ ಸಂಸ್ಥೆಗಳ ಮಾನ-ಸನ್ಮಾನಗಳ ಗೌರವ.

ಕನ್ನಡಪ್ರಭದ ವಿಮರ್ಶೆ ಅಂಕಣವನ್ನು ಡೀಎಸ್ಸಾರ್‌ ಹೆಸರಿನಲ್ಲಿ ನಿರ್ವಹಿಸಿದ ಅವರು ವಿಜಯಕರ್ನಾಟಕ ಪತ್ರಿಕೆಯ ಓಪೆಡ್ ಅಂಕಣಕಾರನಾಗಿ ನಿಯಮಿತವಾಗಿ ಲೇಖನಗಳನ್ನು ಪ್ರಕಟಿಸಿದ್ದಾರೆ. ಅಂತರ್ಜಾಲದ ಪತ್ರಿಕೆಗಳಾದ ಅವಧಿಯಲ್ಲಿ ಅಂಕಣಕಾರರಾಗಿ ಮತ್ತು ಕಂಡಸಂಪಿಗೆಯಲ್ಲಿ ಲೇಖನ, ಕವಿತೆಗಳನ್ನೂ ಪ್ರಕಟಿಸಿದ್ದಾರೆ. ಅರಸೀಕೆರೆ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವವೂ ಅವರಿಗೊಲಿದಿತ್ತು.

ಡಿ.ಎಸ್‍. ರಾಮಸ್ವಾಮಿ

(20 May 1965)