About the Author

ಗೀತಾ ಡಿ.ಸಿ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಹೆಜ್ಜಾಜಿ ಗ್ರಾಮದವರು. ಸದ್ಯ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ, ಹಾಗೂ ಪಿಎಚ್ ಡಿ ಪದವಿಯನ್ನು 'ಕರ್ನಾಟಕದಲ್ಲಿ ಮಹಿಳಾ ಚಳುವಳಿಗಳು ಮತ್ತು ಸಾಹಿತ್ಯ ಪ್ರತಿಭೆ' ವಿಷಯದಲ್ಲಿ ಪಡೆದಿರುತ್ತಾರೆ. ಅವರ ಕಥೆ, ಕವಿತೆ, ಲೇಖನ, ಪುಸ್ತಕ ಪರಿಚಯ, ಸಂದರ್ಶನಗಳು ಕನ್ನಡ ಪ್ರಭ, ಪ್ರಜಾವಾಣಿ, ಉದಯವಾಣಿ, ವಿಜಯ ಕರ್ನಾಟಕ, ಸಂಚಯ, ಸಂಕ್ರಮಣ, ಗಾಂಧಿ ಬಜಾರ್, ಅಚಲ, ಮಾನಸ, ಕೆಂಡಸಂಪಿಗೆ, ಅವಧಿ, ಸಂಗಾತಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಾಹಿತ್ಯ ಪರಿಷತ್ತಿನ 'ರತ್ನ', 'ಜಾಣ' ಪರೀಕ್ಷೆಗಳಿಗೆ ಹಾಗೂ ಬೆಂ.ವಿಶ್ವವಿದ್ಯಾಲಯದ. ಬಿಕಾಂ, ಬಿಬಿಎಂ, ಬಿಎಸ್ಸಿ ಪದವಿ ತರಗತಿಗಳಿಗೆ ಪಠ್ಯಗಳ ಸಂಪಾದನೆ ಮಾಡಿರುತ್ತಾರೆ. ಪ್ರಸ್ತುತ ಬೆಂಗಳೂರಿನ ಯಲಹಂಕದಲ್ಲಿರುವ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಕಟಿತ ಕೃತಿಗಳು: ಉತ್ತರವಿರದ ಪ್ರಶ್ನೆಗಳು, ಸಾಹಿತ್ಯ ಅಕಾಡೆಮಿಯ ಕಮ್ಮಟವೊಂದರ ನೆಪದಲ್ಲಿ ಬರೆದ ಮಹಾಭಾರತದ ಮಹಿಳಾ ಪಾತ್ರಗಳ ಸ್ವಗದಂತಿರುವ ನಾಟಕ: ನಕ್ಷತ್ರಗಳ ಮಹಾಕತ್ತಲಿನಲ್ಲಿ, ಕವಿ ಜಿ.ಎಸ್ ಶ್ರೀನಿವಾಸರಾಜು ಅವರಿಗೆ ಅಭಿನಂದನಾ ಗ್ರಂಥ ಸಂಪಾದನೆ,  ರಾಷ್ಟ್ರೀಯ ಸಂತ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಫೆಲೋಶಿಪ್ ನ 'ಕನ್ನಡ ಸಂಸ್ಕೃತಿ ಅಧ್ಯಯನದ ಆಕರವಾಗಿ ಕನಕದಾಸರ ಕೃತಿಗಳ ಅಧ್ಯಯನ' ಪ್ರಕಟಿತ ಸಂಶೋಧನಾ ಕೃತಿ, ಜಿ.ಎಸ್. ಶಿವರುದ್ರಪ್ಪನವರ ಸಂಪಾದಕತ್ವದಲ್ಲಿ ಚಿ. ಶ್ರೀನಿವಾಸರಾಜು ಅವರಿಗೆ ಅಭಿನಂಧನಾ ಗ್ರಂಥ ಸಂಪಾದನೆ.

ಪ್ರಶಸ್ತಿಗಳು: 1996 ರಲ್ಲಿ ಮತ್ತು 1997 ರಲ್ಲಿ 'ಸಂಚಯ' ಕಾವ್ಯ ಬಹುಮಾನ, 1997ರ 'ಸಂಕ್ರಮಣ' ಕಾವ್ಯ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದ ಗುಡಿಬಂಡೆ ಪೂರ್ಣಿಮಾ ದತ್ತಿ ಪ್ರಶಸ್ತಿ, ಕವನ ಸಂಕಲನಕ್ಕೆ ಬಿಎಂಶ್ರೀ ಕಾವ್ಯ ಪ್ರಶಸ್ತಿ-2008.

ಗೀತಾ ಡಿ.ಸಿ.