About the Author

ಕೆ.ಎಲ್. ಗೋಪಾಲಕೃಷ್ಣರಾವ್ ಅವರು ಮೂಲತಃ ಬೆಂಗಳೂರಿನವರು. ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ ವ್ಯಾಸಂಗ ಮಾಡಿದ್ದರು. ಹಿರಿಯ ಸಾಹಿತಿ ಯು.ಆರ್. ಅನಂತಮೂರ್ತಿ, ನೀನಾಸಂ ಸಂಸ್ಥಾಪಕ ಕೆ.ವಿ.ಸುಬ್ಬಣ್ಣ ಅವರ ಸಹಪಾಠಿಯೂ ಆಗಿದ್ದರು. ಕಲಾವಿದ ಆರ್.ಎಸ್. ನಾಯ್ಡು ಹಾಗೂ ಲೇಖಕ ನಿರಂಜನ ಅವರ ನಿಕಟ ಸಂಪರ್ಕವೂ ಇವರಿಗಿತ್ತು.

ರಷ್ಯಾದ ರಾಜಧಾನಿ ಮಾಸ್ಕೊದ ರಾದುಗ ಪ್ರಕಾಶನ ಸಂಸ್ಥೆಯಲ್ಲಿ ಕನ್ನಡ ಅನುವಾದಕರಾಗಿ 17ವರ್ಷ ಕರ್ತವ್ಯ ನಿರ್ವಹಿಸಿದ್ದರು. ಪ್ರಪಂಚದ ಪ್ರಮುಖ ವಿದ್ಯಮಾನಗಳ ಕುರಿತು ವಿಶ್ವದರ್ಶನ ಶೀರ್ಷಿಕೆಯಡಿ ಪ್ರಜಾವಾಣಿಗೆ ಅಂಕಣ ಬರೆಯುತ್ತಿದ್ದರು.

1950ರ ದಶಕದಲ್ಲಿ ಸೋವಿಯತ್ ದೇಶ ಪತ್ರಿಕೆಯಲ್ಲೂ ಕೆಲವು ಕಾಲ ಕರ್ತವ್ಯ ನಿರ್ವಹಿಸಿದ್ದರು. ನವಕರ್ನಾಟಕ ಪ್ರಕಾಶನ ಸಂಸ್ಥೆ ಹೊರತಂದ ಜ್ಞಾನ-ವಿಜ್ಞಾನ ಕೋಶ, ವಿಜ್ಞಾನ ಪದ ವಿವರಣಾ ಕೋಶ, ವಿಜ್ಞಾನ ತಂತ್ರಜ್ಞಾನ ಪದ ಸಂಪದ ಕೃತಿಗಳ ಸಂಪಾದಕರಲ್ಲಿ ಒಬ್ಬರಾಗಿದ್ದರು.

ರಷ್ಯನ್ ಭಾಷೆಯ ಕೃತಿಗಳನ್ನು ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ ರಾವ್ ಅವರಿಗೆ 2011 ನೇ ಸಾಲಿನಲ್ಲಿ ಕುವೆಂಪು ಭಾಷಾ ಭಾರತಿ ಪ್ರಶಸ್ತಿ ಲಭಿಸಿತ್ತು. ಭಾರತೀಯ ಪ್ರಕಾಶಕರ ಸಂಘ ನೀಡುವ ಅತ್ಯುತ್ತಮ ಸಂಪಾದಕ ಪ್ರಶಸ್ತಿಗೂ ಭಾಜನರಾಗಿದ್ದರು. ಅಮೆರಿಕಾದಲ್ಲಿ ನೆಲೆಸಿದ್ದ ರಾವ್ 2012, ಜುಲೈ11ರಂದು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

ಕೆ.ಎಲ್. ಗೋಪಾಲಕೃಷ್ಣ ರಾವ್