About the Author

ಮಕ್ಕಳ ಸಾಹಿತಿ ಪ.ಗು. ಸಿದ್ಧಾಪುರ (ಪರಗೊಂಡ ಗುರುಪಾದಪ್ಪ ಸಿದ್ಧಾಪುರ.) ಅವರು ಹುಟ್ಟಿದ್ದು ವಿಜಾಪುರ ತಾಲೂಕಿನ ಬಸವನ ಬಾಗೇವಾಡಿಯಲ್ಲಿ. ತಂದೆ ಗುರುಪಾದಪ್ಪ, ತಾಯಿ- ಯಮುನಾ ಬಾಯಿ. ಬಾಲ್ಯದಲ್ಲಿಯೇ ತಾಯಿ ಪ್ರೀತಿಯಿಂದ ವಂಚಿತರಾದ ಸಿದ್ಧಾಪುರ ಅವರು ಪ್ರಾರಂಭಿಕ ಶಿಕ್ಷಣವನ್ನು ತಾಯಿಯ ತವರೂರಾದ ದಶಾಳದಲ್ಲಿ,  ಪ್ರೌಢಶಿಕ್ಷಣವನ್ನು ಬಬಲೇಶ್ವರದಲ್ಲಿ ಪೂರ್ಣಗೊಳಿಸಿದರು. ಗದಗದ ವಿಜಯ ಕಲಾಮಂದಿರದಲ್ಲಿ ಕಲೆಯಲ್ಲಿ ಸ್ನಾತಕೋತ್ತರ ಪದವಿ. (ಎಂ.ಎ. ಆರ್ಟ್ ಮಾಸ್ಟರ್) ಹಾಗೂ ಹಂಪಿ ವಿಶ್ವವಿದ್ಯಾಲಯದಿಂದ ಎಂ.ಎ (ಕನ್ನಡ) ಪದವಿ ಪಡೆದರು. ಆನಂತರ ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಗ್ರಾಮದ ಶ್ರೀ ಚನ್ನ ಮಲ್ಲಿಕಾರ್ಜುನ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದರು. ಚಿತ್ರಕಲೆಯಲ್ಲಿ ತಮ್ಮ ಬಣ್ಣಗಳ ಸಂಯೋಜನಾ ಕುಶಲತೆಯಿಂದ ಮುಗ್ಧ ವಿದ್ಯಾರ್ಥಿಗಳ ಮನಗೆದ್ದಂತೆ ಹಲವಾರು ಮಕ್ಕಳ ಪದ್ಯಗಳನ್ನು ರಚಿಸಿ ಚಿಣ್ಣರ ನಾಲಗೆಯಲ್ಲಿ ಸದಾ ಹರಿದಾಡುವಂತೆ ಮಾಡಿದರು. ಇವರು ರಚಿಸಿದ ಇರುಳಿನ ಕೆಸರಲಿ ಅರಳಿದ ತಾವರೆ ಚಂದಿರ ನಗುತಿಹನು ಮಜ್ಜಿಗೆಯೊಳಗಿನ ಬೆಣ್ಣೆಯ ಹಾಗೆ ತೇಲುತ ಬರುತಿಹನು ಲಯಬದ್ಧ, ಸರಳ ಮಾತುಗಳ, ಆಕರ್ಷಕ ಶೈಲಿಯ ಇಂತಹ ಪದ್ಯಗಳನ್ನು ಮಕ್ಕಳು ಹಾಡಿ ಕುಣಿಯುವಂತಹ ಗುಣವನ್ನು ಹೊಂದಿವೆ.  ಹಲವಾರು ಪದ್ಯಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮೊದಲ ಮಕ್ಕಳ ಕವಿತೆಗಳ ಸಂಕಲನ ‘ಬಣ್ಣದ ಚಿಟ್ಟೆ’, ನಂತರ ‘ತಾರಾಲೋಕಕ್ಕೆ ಹಾರುವೆನು’, ‘ಮಳೆರಾಯ’, ‘ಪುಟ್ಟನ ಪ್ರಶ್ನೆ’, ಸಕ್ಕರೆ ತುಪ್ಪ, ಮುತ್ತಿನ ಕುಂಜಿಗೆ’, ‘ಮಂಗನ ಅಂಗಳಕೆ’, ಚಿನ್ನದ ಜಿಂಕೆ’, ನಂದನದಲ್ಲಿ ಚಂದನ’, ಆಯ್ದ ಮಕ್ಕಳ ಕವಿತೆಗಳ ಸಂಕಲನವಾದ ‘ಮಕ್ಕಳ ನೂರಾರು ಕವಿತೆಗಳು’ ಮುಂತಾದ ಕವಿತಾ ಸಂಕಲನಗಳಲ್ಲದೆ, ‘ಹಸಿರು ತೋರಣ’ (ಪರಿಸರ ಗೀತೆ), ‘ಪಣತೊಟ್ಟ ಪ್ರಾಣಿಗಳು’ (ಮಕ್ಕಳ ಕಥೆಗಳು), ‘ಹೊಸ ಹೆಜ್ಜೆ’ (ನವಸಾಕ್ಷರರಿಗಾಗಿ ಕಥೆಗಳು), ‘ಯಾವೂರಾನೆ, ವಿಜಾಪುರದಾನೆ!’ (ಮಕ್ಕಳ ಕಥೆಗಳು), ‘ಕರಡಿ ಹೇಳಿದ ಕಥೆ’ (ಮಕ್ಕಳ ಕಥನ ಕವನ), ‘ಅಥಣಿ ಶಿವಯೋಗಿಗಳು’ (ಮಕ್ಕಳಿಗಾಗಿ ವ್ಯಕ್ತಿ ಪರಿಚಯ), ‘ಬಂಗಾರದ ಬಳೆ’ (ಮಕ್ಕಳ ಕಥೆಗಳು) ಪ್ರಕಟಿಸಿದ್ದಾರೆ. ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯ, ಮಹಾರಾಷ್ಟ್ರ ಸರಕಾರದ ಪಠ್ಯಪುಸ್ತಕ ನಿರ್ಮಿತಿ ಮಂಡಳ, ಕೇರಳ ರಾಜ್ಯ ಪಠ್ಯ ಪುಸ್ತಕ ನಿರ್ದೇಶನಾಲಯದ 3ನೇ ಹಾಗೂ 5ನೆಯ ತರಗತಿ, ಪಠ್ಯಪುಸ್ತಕಗಳಲ್ಲಿ ಮಕ್ಕಳ ಪದ್ಯಗಳು ಸೇರ್ಪಡೆಯಾಗಿವೆ. ನವ ಸಾಕ್ಷರರಿಗಾಗಿ ಬರೆದ ಕಥಾಸಂಕಲನ ‘ಹೊಸ ಹೆಜ್ಜೆಯು’ ಪ್ರಕಟಗೊಂಡಿದೆ. ಕೊರ್ತಿ – ಕೊಲ್ಹಾರದ ನಡುವಿನ ಸೇತುವೆ ನಿರ್ಮಾಣದ ಹಿನ್ನೋಟದ ಬಗ್ಗೆ ಕೃತಿಯೊಂದನ್ನು ರಚಿಸಿದ್ದು ಬಾಗಲಕೋಟೆ – ವಿಜಾಪುರ ಅವಳಿ ಜಿಲ್ಲೆಗಳಿಗೆ ಸಂಬಂಧಿಸಿದ ಕಥಾ ವೃತ್ತಾಂತವನ್ನು ಬಿಡಿಸಿಟ್ಟಿದ್ದಾರೆ. ಇವಲ್ಲದೆ ರಾಜ್ಯ ಚಿತ್ರಕಲಾ ಶಿಕ್ಷಕರ 4ನೇ ಶೈಕ್ಷಣಿಕ ಮಹಾ ಸಮ್ಮೇಳನದ ಸ್ಮರಣ ಸಂಚಿಕೆ ‘ನಿಸರ್ಗ’, ಗೊಳಸಂಗಿ ದಳವಾಯಿ ಪ್ರೌಢಶಾಲಾ ಸ್ಮರಣ ಸಂಚಿಕೆ ‘ಬೆಳ್ಳಿ ಬೆಳಕು’ ಹಾಗೂ ಅಭಿನಂದನಾ ಗ್ರಂಥಗಳಾದ ‘ಹೂವಿನ ಹಂದರ’, ‘ಚಿಂತಾಮಣಿ’, ‘ದಾಂಪತ್ಯ ದೀಪ್ತಿ’, ‘ಮನಗೂಳಿ ಮಾಣಿಕ್ಯ’, ‘ಗೊಳಸಂಗಿ ಗೌರವ’, ‘ಸುವರ್ಣ ಸಂಭ್ರಮ’ ಮುಂತಾದ ಕೃತಿಗಳ ಸಂಪಾದಕರಾಗಿಯೂ ದುಡಿದಿದ್ದಾರೆ.ವಿಜಾಪುರ ಜಿಲ್ಲಾ ಮಕ್ಕಳ ಸಂಗಮದ ಕೋಶಾಧಿಕಾರಿಯಾಗಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು, ಗಮಕ ಕಲಾ ಪರಿಷತ್ತು, ಮುಳವಾಡದ ರೋಟರಿ ಸಂಸ್ಥೆಯಲ್ಲೂ ಸಕ್ರಿಯವಾಗಿದ್ದಾರೆ. ‘ಪಣ ತೊಟ್ಟ ಪ್ರಾಣಿಗಳು’, ಕಥಾಸಂಕಲನಕ್ಕೆ ಚಿಕ್ಕೋಡಿ ತಮ್ಮಣ್ಣಪ್ಪ ಸಾಹಿತ್ಯ ಪುರಸ್ಕಾರ, ‘ತಾರಾ ಲೋಕಕ್ಕೆ ಹಾರುವೆನು’, ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪುಸ್ತಕ ಬಹುಮಾನ, ಮಹಾದೇವಪ್ಪ ಕರ್ಲಟ್ಟಿ ಮಕ್ಕಳ ಸಾಹಿತ್ಯ ಪುರಸ್ಕಾರ, ಕಂಚ್ಯಾಣಿ ಶರಣಪ್ಪ ಮಕ್ಕಳ ಸಾಹಿತ್ಯ ಪುರಸ್ಕಾರಗಳು; ‘ಹುಯ್ಯೋ ಹುಯ್ಯೋ ಮಳೆರಾಯ’ ಕವನ ಸಂಕಲನಕ್ಕೆ ಹುಬ್ಬಳ್ಳಿಯ ಮೂರುಸಾವಿರ ಮಠ ಸಾಹಿತ್ಯ ಪುರಸ್ಕಾರ, ‘ಸಕ್ಕರೆ ತುಪ್ಪ’ ಮಕ್ಕಳ ಕವನ ಸಂಕಲನಕ್ಕೆ ನಾಲತವಾಡ ವಿಜಯ ಪ್ರಕಾಶನದಿಂದ ಮಕ್ಕಳ ರತ್ನ ಪ್ರಶಸ್ತಿ,, ‘ಮಂಗಳನ ಅಂಗಳಕೆ’ ಕವನ ಸಂಕಲನಕ್ಕೆ ಮೂಡುಬಿದಿರೆಯಲ್ಲಿ ನಡೆದ 71ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಹಸ್ತಪ್ರತಿಗೆ ಗೌರವಧನ, ರಾಷ್ಟ್ರಕೂಟ ಸಾಹಿತ್ಯಶ್ರೀ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ನಿಧಿ, ಬಾಲವಿಕಾಸ ಅಕಾಡಮಿ, ಕಲಬುರ್ಗಿಯ ತಪೋವನ ಮಠದಿಂದ ಗೌರವಗಳು ಲಭಿಸಿವೆ. ವಿಜಾಪುರದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಶಿಕ್ಷಕರ ಸಂಘದಿಂದ ಆದರ್ಶ ಶಿಕ್ಷಕ ಪ್ರಶಸ್ತಿ, ರಾಜ್ಯ ಸರಕಾರದ ಶಿಕ್ಷಣ ಇಲಾಖೆಯಿಂದ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿಗಳಿಗೆ  ಪಾತ್ರರಾಗಿದ್ದಾರೆ.

ಪ.ಗು. ಸಿದ್ಧಾಪುರ

(01 Jun 1958)