About the Author

ಡಾ. ಎಸ್. ಶ್ರೀಕಂಠ ಶಾಸ್ತ್ರೀ ( ಸೊಂಡೆಕೊಪ್ಪ ಶ್ರೀಕಂಠ ಶಾಸ್ತ್ರೀ) ಮೂಲತಃ ನಂಜನಗೂಡಿನವರು. ಆದರೆ, ಇವರ ಪೂರ್ವಜರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಬಳಿಯ ಸೊಂಡೆಕೊಪ್ಪದವರು. 1904ರ ನವೆಂರ್ 4 ರಂದು ಜನನ. ಸಿಡುಬು ರೋಗಕ್ಕೆ ತುತ್ತಾಗಿ ಎಡಗಣ್ಣು, ಎಡಗಿವಿಯ ಶಕ್ತಿ ಕಳೆದುಕೊಂಡಿದ್ದರು.  ಕೋಲಾರದಲ್ಲಿ ಪ್ರೌಢಶಾಲೆವರೆಗೂ ಶಿಕ್ಷಣದ ನಂತರ ಮೈಸೂರಿನಲ್ಲಿ ಓದು ಆರಂಭ. 1935 ರಲ್ಲಿ ಮೈಸೂರು ವಿ.ವಿ. ಇತಿಹಾಸ ವಿಭಾಗದಲ್ಲಿ ಅಧ್ಯಾಪಕರಾಗಿ ಸೇರಿ 32 ವರ್ಷದ ನಂತರ ನಿವೃತ್ತಿ. 

ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲಿಷ್‌ ಮಾತ್ರವಲ್ಲದೆ, ಜರ್ಮನ್, ಫ್ರೆಂಚ್  ಕಲಿತಿದ್ದರು. ಇತಿಹಾಸ ತಜ್ಞರೆಂದೇ ಖ್ಯಾತಿ ಪಡೆದಿದ್ದರು. ಎಂ.ಎ. ಅಧ್ಯಯನ ಮಾಡುತ್ತಿರುವಾಗಲೇ ಲಂಡನ್ ನ ಪ್ರತಿಷ್ಠಿತ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. 1949 ರಲ್ಲಿ ಅವರು ಡಿ.ಲಿಟ್ ಪದವಿಗಾಗಿ ಬರೆದ ‘ಸೋರ್ಸಸೆ ಆಫ್ ಕರ್ನಾಟಕ ಹಿಸ್ಟರಿ’  ಸಂಶೋಧನಾ ಗ್ರಂಥ. ಭಾರತೀಯ ಸಂಸ್ಕೃತಿ-ಇದು ಅವರ ಪ್ರಮುಖ ಕೃತಿ. ‘ರೋಮನ್ ಚಕ್ರಾಧಿಪತ್ಯದ ಇತಿಹಾಸ’, ‘ಪ್ರಪಂಚ ಚರಿತ್ರೆಯ ರೂಪರೇಖೆಗಳು’, ‘ಪುರಾತತ್ವ ಶೋಧನೆ’, ‘ಹೊಯ್ಸಳ ವಾಸ್ತುಶಿಲ್ಪ’ - ಅವರ ಪ್ರಮುಖ ಕನ್ನಡ ಕೃತಿಗಳು. ‘ಪ್ರೊಟೊ ಇಂಡಿಕ್ ರಿಲಿಜಿಯನ್’, ‘ಐಕನಾಗ್ರಫಿ ಆಫ್ ವಿದ್ಯಾರ್ಣವತಂತ್ರ’, ‘ಅರ್ಲಿ ಗಂಗಾಸ್ ಆಫ್ ತಲಕಾಡ್’, ‘ಎವಲ್ಯೂಷನ್ ಆಫ್ ಗಂಡಬೇರುಂಢ’- ಇವು ಪ್ರಮುಖ ಇಂಗ್ಲಿಷ್ ಕೃತಿಗಳು. 

ಡಾ.ಬಾ.ರಾ. ಗೋಪಾಲ್ ಮತ್ತು ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರ ಸಂಪಾದಕತ್ವದಲ್ಲಿ ಮೈಸೂರು ವಿ.ವಿ. (1975) ಡಾ. ಎಸ್. ಶ್ರೀಕಂಠ ಶಾಸ್ತ್ರೀ ಅವರು ಬರೆದ ಕನ್ನಡದ 112 ಲೇಖನಗಳ ಸಂಗ್ರಹ ಕೃತಿ ಪ್ರಕಟವಾಗಿದೆ. ಅವರ ಇಂಗ್ಲಿಷ್ ಪ್ರಬಂಧಗಳು ವಿಥಿಕ್ ಸೊಸೈಟಿಯಿಂದ ಪ್ರಕಟಗೊಂಡಿವೆ. 

ಶ್ರೀಕಂಠರಿಕಾ-ಎಂಬುದು ಅವರಿಗೆ ಸಲ್ಲಿಸಿದ ಅಭಿನಂದನಾ ಗ್ರಂಥ. ಅವರು ಬೆಂಗಳೂರಿನಲ್ಲಿ 10 ಮೇ 1974 ರಲ್ಲಿ ನಿಧನರಾದರು. 

ಎಸ್. ಶ್ರೀಕಂಠಶಾಸ್ತ್ರೀ

(04 Nov 1904-10 May 1974)