About the Author

ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು 18-02-1914 ರಂದು ತೀರ್ಥಹಳ್ಳಿಯಲ್ಲಿ ಜನಿಸಿದರು. ತಂದೆ ಸದಾಶಿವರಾಯರು ತೀರ್ಥಹಳ್ಳಿಯ ಸಮೀಪದ ಮಾಳೋರಿನಲ್ಲಿ ಶಾಲಾ ಉಪಾಧ್ಯಾಯರಾಗಿದ್ದರು. ಸದಾಶಿವರಾಯರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಯರಿಗೆ ತಂದೂರಿಗೆ ವರ್ಗವಾದಾಗ ಪರಮೇಶ್ವರರಿಗೆ ಖಾಸಗಿಯಾಗಿ ಪಾಠ ಹೇಳಿ, ಲೋವರ್ ಸೆಕೆಂಡರಿ ಪರೀಕ್ಷೆ ಕಟ್ಟಿಸಿದರು. ತಂದೆಯವರು ಪರಮೇಶ್ವರ ಭಟ್ಟರಿಗೆ ಹಲವಾರು ಪುಸ್ತಕಗಳನ್ನು ಓದಲು ತಂದುಕೊಡುತ್ತಿದ್ದರು. ತಂದೆಯವರಿಗೆ ಯಕ್ಷಗಾನ, ನಾಟಕಗಳಲ್ಲಿ ಆಸಕ್ತಿ, ಹವ್ಯಾಸಗಳಿದ್ದುದರಿಂದ ಮಗನನ್ನು ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರಷ್ಟೇ ಅಲ್ಲದೇ, ಅವನಿಗೂ ಕಾಲಿಗೆ ಗೆಜ್ಜೆ ಕಟ್ಟಿ ಮುಖಕ್ಕೆ ಬಣ್ಣ ಹಚ್ಚಿ ರಂಗ ಪ್ರವೇಶ ಮಾಡಿಸಿ, ಕುಣಿಸಿ ನೋಡಿ ಆನಂದ ಪಡುತ್ತಿದ್ದರು. ಅವನ ಬಾಲ‍ಕೃಷ್ಣ, ಉತ್ತರೆಯ ವೇಷಗಳು ಅವರಿಗೆ ಮೆಚ್ಚುಗೆಯಾಗಿದ್ದವು. ಈ ಎಲ್ಲಾ ಕಾರಣಗಳಿಂದಾಗಿ ಪರಮೇಶ್ವರ ಭಟ್ಟರಿಗೆ ತಂದೆ ಸದಾಶಿವರಾಯರೆ ಮೊದಲ ಗುರು. ಇವರ ಚಿಕ್ಕಪ್ಪ ಪಿಟೀಲು ವಿದ್ವಾಂಸರಾಗಿದ್ದರು. ಅವರ ಮಗ ಲಕ್ಷ್ಮಣ ಶಾಸ್ತ್ರಿ, ವಾಸುದೇವಾಚಾರ್ಯರು ಮತ್ತು ಚೆನ್ನಕೇಶವಯ್ಯನವರಲ್ಲಿ ಸಂಗೀತ ಕಲಿತು, ಸರ್ಕಾರಿ ಶಾಲೆಗಳಲ್ಲಿ ಸಂಗೀತದ ಉಪಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರಿಂದ ಪರಮೇಶಭಟ್ಟರ  ಕುಟುಂಬಕ್ಕೆ ಸಂಗೀತ, ಕಲೆಗಳಲ್ಲಿ ಆಸಕ್ತಿ ಇದ್ದುದು ತಿಳಿದು ಬರುತ್ತದೆ. ಪರಮೇಶ್ವರರು ತೀರ್ಥಹಳ್ಳಿ ಪ್ರೌಢಶಾಲೆಯಲ್ಲಿ ಕಲಿಯುತ್ತಿರುವಾಗ ಪಂಡಿತ ಕಮಕೋಡು ನರಸಿಂಹ ಶಾಸ್ತ್ರಿಗಳು ಗುರುಗಳಾಗಿದ್ದರು. 

ತೀರ್ಥಹಳ್ಳಿಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ಪರಮೇಶ್ವರಭಟ್ಟರು ಬೆಂಗಳೂರಿನಲ್ಲಿ ಎಂ.ಎ.ವರೆಗೆ ಓದಿದರು. ಬಳಿಕ ಮಂಗಳೂರು ವಿಶ್ವವಿದ್ಯಾನಿಲಯ ಕನ್ನಡ ವಿಭಾಗದಲ್ಲಿ ಪ್ರಾಧ್ಯಪಕರಾಗಿ, ವಿಭಾಗದ ಅದ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ . ಅವರ ಪ್ರಮುಖ ಪ್ರಕಟಿತ ಕೃತಿಗಳು- ಉಪ್ಪುಕಡಲು, ಇಂದ್ರಗೋಪ, ಪಾಮರ, ಅಂಚೆಯ ಪೆಟ್ಟಿಗೆ, ಗಗನಚುಕ್ಕಿ, ಅಂಬರ, ಕೃಷ್ಣಮೇಘ, ಜಹನಾರ(ನೀಳ್ಗವನ), ಹಾಗೇ ಅವರ ಮುಕ್ತಕ ಸಂಕಲನಗಳು- ಇಂದ್ರಚಾಪ, ಚಂದ್ರವೀಧಿ, ಸುರಗಿ ಸುರಹೊನ್ನೆ, ತುಂಬೆ ಹೂವು, ಚಿತ್ರಕಥೆ. ಅವರ ಅನುವಾದಗಳು- ಕನ್ನಡ ಕಾಳಿದಾಸ ಮಹಾಸಂಪುಟ, ಕನ್ನಡ ಬುದ್ಧ ಚರಿತೆ, ಕನ್ನಡ ಅಮರು ಶತಕ, ಕನ್ನಡ ಕವಿ ಕೌಮುದಿ, ಕನ್ನಡ ಭಾಸ ಮಹಾಸಂಪುಟ, ಕನ್ನಡ ಗಾಥಾಸಪ್ತಶತಿ, ಕನ್ನಡ ಭರ್ತೃಹರಿಯ ಶತಕತ್ರಯ, ಹಾಗೂ ಕನ್ನಡ ಗೀತ ಗೋವಿಂದ, ಕನ್ನಡ ಹರ್ಷ ಮಹಾಸಂಪುಟ. ಪರಮೇಶ್ವರ ಭಟ್ಟರ ಸಂಪಾದಿತ ಕೃತಿಗಳು- ಮುದ್ದಣನ ಶ್ರೀರಾಮ ಪಟ್ಟಾಭಿಷೇಕಂ, ಅದ್ಭುತ ರಾಮಾಯಣ. ವಿಮರ್ಶಾ ಕೃತಿಗಳು- ರಸಖುಷಿ ಕುವೆಂಪು, ಬದುಕು -ಬೆಳಕು ಸ್ಮೃತಿಗಳು. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ  1970ರಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ, 1997ರಲ್ಲಿ ಚಾವುಂಡರಾಯ ಪ್ರಶಸ್ತಿ, ಕನ್ನಡ ಸಾಹಿತ್. ಪರಿಷತ್ತಿನ ಗೌರವ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ, ಪ್ರಶಸ್ತಿಗಳು ಲಭಿಸಿವೆ. 

ಎಸ್.ವಿ. ಪರಮೇಶ್ವರಭಟ್ಟ

(18 Feb 1914)