About the Author

ಕವಯತ್ರಿ ಶಶಿಕಲಾ ವಸ್ತ್ರದ 1948 ಜನವರಿ 23ರಂದು ಜನಿಸಿದರು. ವಿಜಯಪುರ ಜಿಲ್ಲೆ ಸಿಂದಗಿ ಇವರ ಹುಟ್ಟೂರು. ತಾಯಿ ಅನ್ನಪೂರ್ಣದೇವಿ. ತಂದೆ ಸಿದ್ದಲಿಂಗಯ್ಯ. ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಉಪನ್ಯಾಸಕಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೀದರ್‌ನಲ್ಲಿ ನೆಲೆಸಿದ್ದಾರೆ. 

ಕಥೆ, ಕವನ ರಚನೆ ಹಾಗೂ ಸಂಪಾದನೆಯಲ್ಲಿ ತೊಡಗಿಸಿಕೊಂಡಿರುವ ಇವರ ಪ್ರಮುಖ ಕೃತಿಗಳೆಂದರೆ ಗುಬ್ಬಿಮನೆ, ಪ್ರಶ್ನೆ, ಜೀವ ಸಾವುಗಳ ನಡುವೆ, ಹೆಂಗ ಹೇಳಲಿ ಗೆಳತಿ (ಕವನ ಸಂಕಲನ) ಶ್ರೀ ಗುರುಸಿದ್ದೇಶ್ವರ ಚರಿತ್ರೆ (ಜೀವನ ಚರಿತ್ರೆ), ಅಪ್ಪ ಮತ್ತು ಮಣ್ಣು (ಅನುಭವ ಕಥನ), ಸಂವೇದನೆ, ಪ್ರಣಯಿನಿ, ಸಮೂಹ(ಸಂಪಾದನೆ), ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಇವರು ಬರೆದ ಹಲವು ಕವಿತೆಗಳು ಇಂಗ್ಲಿಷ್‌ ಹಾಗೂ ಉರ್ದು ಭಾಷೆಗೆ ಅನುವಾದಗೊಂಡಿವೆ. ಉರ್ದು ಭಾಷೆಯ ಹಲವು ಕವಿತೆಗಳನ್ನು ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. 

ಕನ್ನಡ ಸಾಹಿತ್ಯಕ್ಕೆ ಇವರು ನೀಡಿದ ಕೊಡುಗೆಗೆ ಸರೋಜಾದೇವಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ದಾನ ಚಿಂತಾಮಣಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.

ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾಗಿ, ದೂರದರ್ಶನ ಆಉಕೆ ಸಮಿತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಪದವಿಪೂರ್ವ ಶಿಕ್ಷಣ ಸಮಿತಿ ಮಂಡಳಿಗಳ ಸದಸ್ಯರಾಗಿದ್ದರು.

ಶಶಿಕಲಾ ವಸ್ತ್ರದ

(23 Jan 1948)

Stories/Poems