About the Author

ತಿಪ್ಪೇಸ್ವಾಮಿ ಕೆ. ಟಿ. ಅವರು 4 ಏಪ್ರಿಲ್ 1986ರಲ್ಲಿ ಶಿವಮ್ಮ ಮತ್ತು ತಿಪ್ಪಣ್ಣ ದಂಪತಿ ಮಗನಾಗಿ ಸಿರಾ ತಾಲ್ಲೂಕು ಕಳ್ಳಂಬೆಳ್ಳ ಗ್ರಾಮದಲ್ಲಿ ಜನಿಸಿದರು. ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು. ಬೆಂಗಳೂರಿನ ಭಾರತೀಯ ಮನೋವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ತಮ್ಮ ವೃತ್ತಿ ಜೀವನವನ್ನು ಉಪನ್ಯಾಸಕರಾಗಿ ಮತ್ತು ಸಮಾಲೋಚಕರಾಗಿ ಪ್ರಾರಂಭಿಸಿದರು. ಯುವಜನರ ಸಬಲೀಕರಣ ಕ್ಷೇತ್ರದಲ್ಲಿ ಅತೀವ ಆಸಕ್ತಿ ಇದ್ಯುದು, ಯುವಜನ ಪರ ಹಲವು ಲೇಖನಗಳನ್ನು ಮತ್ತು ಯುವಜನರ ಅಭಿವೃದ್ಧಿಗೆ ಪೂರಕವಾದ ಐದು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಯುವಜನ ಕಾರ್ಯ ಮತ್ತು ಸಮುದಾಯಾಭಿವೃದ್ಧಿ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ನಿರಂತರ ಸೇವೆ ಗುರುತಿಸಿ ಬಸವಜ್ಯೋತಿ ರಾಜ್ಯ ಪ್ರಶಸ್ತಿ, ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ, ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ನೀಡುವ ತುಮಕೂರು ಜಿಲ್ಲಾ ಯುವ ಪ್ರಶಸ್ತಿ ಮತ್ತು 2007ನೇ ಸಾಲಿನ ಕರ್ನಾಟಕ ರಾಜ್ಯ ಸ್ವಾಮಿ ವಿವೇಕಾನಂದ ಯುವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ, ಪುರಸ್ಕಾರ ಮತ್ತು ಸನ್ಮಾನಗಳು ಅರಸಿ ಬಂದಿವೆ.

ಜೀವನ್ಮುಖಿಯಾದ ಅವರ ಚಿಂತನೆಗಳು ನಾಡಿನ ಪ್ರಸ್ತುತ ಸಮಸ್ಯೆಗಳಿಗೆ ಬರೆಹ ಮತ್ತು ಮಾತುಗಳಿಂದ ಮಾತ್ರವಲ್ಲದೆ, ಪ್ರಕೃತಿಯನ್ನು ಉಳಿಸುವ, ಪ್ರಭುತ್ವದ ದಮನಕಾರಿ ನೀತಿಗಳನ್ನು ಪ್ರಶ್ನಿಸುವ ಹೋರಾಟಗಳಲ್ಲಿ ಸದಾ ಸಕ್ರಿಯವಾಗಿವೆ.

ತಿಪ್ಪೇಸ್ವಾಮಿ ಕೆ. ಟಿ.

(04 Apr 1986)