About the Author

ಖ್ಯಾತ ಜಿನಭಜನಾ ಸಾಹಿತಿಯಾಗಿರುವ ವೀಣಾ ಬಿ.ಆರ್. ಶೆಟ್ಟಿ ಮೂಡುಬಿದಿರೆಯ ನೆಲ್ಲಿಕಾರು ಗ್ರಾಮದವರು. ನೆಲ್ಲಿಕಾರಿನ ದೊಡ್ಡಮನೆ ಚಂದ್ರರಾಜ ಬಲ್ಲಾಳ್ ಹಾಗೂ ಪ್ರಭಾವತಿ ದಂಪತಿಗಳ ಪುತ್ರಿ. ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ಪೂರೈಸಿರುವ ಇವರು ನಂತರ ಮೂಡುಬಿದಿರೆಯ ಪ್ರಸಿದ್ಧ ಬೆಟ್ಕೇರಿ ಮನೆತನದ ರಘುಚಂದ್ರ ಶೆಟ್ಟಿಯವರನ್ನು ವಿವಾಹವಾದರು.

ಗೃಹಸ್ಥ ಜೀವನದಲ್ಲಿ ಶ್ರಾವಕ ಕರ್ತವ್ಯದಲ್ಲಿ ನಿರತರಾದವರು. ದೇವ ಪೂಜೆ ಗುರುಪಾಸ್ತಿ ಹಾಗೂ ಶಾಸ್ತ್ರಗಳ ಅಧ್ಯಯನ, ಜಿನ ಭಜನಾ ಸಾಹಿತ್ಯದ ರಚನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಹಾಗೆಯೇ ಮೂಡುಬಿದಿರೆ ಪೂಜ್ಯ ಭಟ್ಟಾರಕರ ಆದೇಶದಂತೆ ತ್ಯಾಗಿವೃಂದದ ಸೇವೆಯಲ್ಲಿ ಮುಂಚೂಣಿಯಲ್ಲಿ ನಿಂತು ಸಾರ್ಥಕ್ಯವನ್ನು ಹೊಂದುತ್ತ, ಜೊತೆಗೆ ಶ್ರೀಮಠದ ಸೇವೆಯಲ್ಲೂ ನಿಸ್ವಾರ್ಥ ಮನೋಭಾವದಿಂದ ಪಾಲ್ಗೊಳ್ಳುತ್ತಿದ್ದಾರೆ. ಜೈನ ಧರ್ಮದ ಸಾಮಾಜಿಕ ಸಂಘಟನೆಗಳಲ್ಲೂ ವೀಣಾ ಬಿ.ಆರ್. ಶೆಟ್ಟಿಯವರ ಪಾತ್ರ ಹಿರಿದಾಗಿದೆ. ಮೂಡುಬಿದಿರೆಯ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು `ಭೈರಾದೇವಿ’ ಎಂಬ ಪುರಸ್ಕಾರವನ್ನಿತ್ತಿದ್ದಾರೆ. `ಜಿನವಾಣಿ’ ಪುರಸ್ಕಾರವನ್ನಿತ್ತು ಗೌರವಿಸಿದ್ದಾರೆ.

ಕೃತಿಗಳು: ಭಕ್ತಿ ಸಾಹಿತ್ಯದ ಸಂಕಲನಗಳು ಶಾಂತಿಧಾರಾ, ಭಕ್ತಿಮಾಲಾ, ವೃಷಭಜಿನ ಸ್ತುತಿಮಾಲಾ ಹಾಗೂ ಶ್ರೀ ಆದಿನಾಥ ವೈಭವ ಪುಸ್ತಕಗಳು

ವೀಣಾ ರಘುಚಂದ್ರ ಶೆಟ್ಟಿ