About the Author

ಅನನ್ಯ ತುಷಿರಾ (ಸವಿತಾ ಆರ್.ಇನಾಮದಾರ್) ಮೂಲತಃ ಬಿಜಾಪುರ (ವಿಜಯಪುರ) ಜಿಲ್ಲೆ ತಾಳೀಕೋಟೆಯವರು. ತಂದೆ ಶ್ರೀ ರಾಜಪ್ಪ ಇನಾಮದಾರ ಮತ್ತು ತಾಯಿ ಶ್ರೀಮತಿ ಅನಸೂಯಾ ಇನಾಮದಾರ. ತನ್ನದೇ ಪುಟ್ಟ ಅಕ್ಷರ ಜಗತ್ತಿನಲ್ಲಿ 'ಅನನ್ಯ ತುಷಿರಾ'. ಜೀವ-ಭಾವದ ಸಂಗಾತಿ ಕಿರಣ್ ಬಿರಾದಾರ್. ಹಾಗಾಗಿ ಇವರು 'saki’ ಕೂಡ. ಮಡಿಲ ಬೆಳಕು ಅಶ್ಮಯು ನಿನಾದ. ಬಹುತೇಕ ಓದು ತಾಳಿಕೋಟೆಯಲ್ಲಿ. ನಂತರ ಧಾರವಾಡದಲ್ಲಿ. ಸದ್ಯ ಬೆಂಗಳೂರು ವಾಸಿ.

ಮೊದಲ ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ. ಪ್ರಸ್ತುತ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ. ಅಕ್ಷರ ಪ್ರೀತಿ ಅಪಾರ. ಆಗೀಗ ಅನುಭೂತಿಗೆ ನಿಲುಕಿದ್ದು ಅಕ್ಷರವಾಗುವ ಹವ್ಯಾಸ. ಮೊದಲ ಕವನ ಸಂಕಲನ 'ಅನನ್ಯ ನಿನಾದ'. ಅದಕ್ಕೂ ಹೆಚ್ಚು ಖುಷಿಯಿರುವುದು ಓದಿನಲ್ಲಿ. ಸಾಹಿತ್ಯ, ಸಂಗೀತ ಇವುಗಳ ಒಡನಾಟದಲ್ಲಿ ಆತ್ಮತೃಪ್ತಿ. ಬಂಧ-ಭರವಸೆಗಳು ಹೆಜ್ಜೆ ಹಾದಿಗುಂಟ ನೆರಳಾಗಿವೆ. ಸುಮ್ಮನೆ ಹೊರಟು ಬಿಡುವ ಪ್ರವಾಸ, ಪ್ರಕೃತಿಯ ಮಡಿಲು ಎರಡೂ ಮನಸ್ಸಿಗೆ ಮುದ ಕೊಡುವ ಸಂಗತಿಗಳು. ವೃತ್ತಿ ಪ್ರವೃತ್ತಿಗಳಲ್ಲಿ ಸಾಮ್ಯತೆ ತೆಳುವಾದರೂ ಅವುಗಳಷ್ಟಕ್ಕೆ ಅವು ಪೂರಕ. ಪಡೆದು ಬಂದ ತೃಪ್ತಿ, ಅರಿವಿನ ಹಂಬಲ, ಅನಿರೀಕ್ಷಿತತೆಗಳೊಂದಿಗೆ ಅನುಸಂಧಾನ, ಹೊಸದುದರೆಡೆಗಿನ ತುಡಿತ.. ಇವುಗಳ ಮಧ್ಯ ಪಯಣ ಜಾರಿಯಲ್ಲಿದೆ.

ಅನನ್ಯ ತುಷಿರಾ

BY THE AUTHOR