ಕರ್ನಾಟಕ ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುವ ಎನ್. ಜಗನ್ನಾಥ ಪ್ರಕಾಶ್ ಅವರು ಮೂಲತಃ ಕೋಲಾರದವರು. ಅವರು 1955ರ ಮೇ 25ರಂದು ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಕಾಂ. ಪದವಿ ಪಡೆದ ಅವರು ನಂತರ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವೀಧರರಾದರು.
ಪತ್ರಿಕೋದ್ಯಮದಲ್ಲಿ ವೃತ್ತಿ ಆರಂಭಿಸಿದ ಪ್ರಕಾಶ್ ಅವರು ಮುಂಜಾನೆ ಮತ್ತು ಕೋಲಾರ ಪತ್ರಿಕೆಗಳಲ್ಲಿ ಕೆಲಸ ಮಾಡಿದರು. ವಾರ್ತಾ ಇಲಾಖೆಯಲ್ಲಿ ಇನ್ಫಾಮೇಶನ್ ಅಸಿಸ್ಟೆಂಟ್ ಎಂದು ಕೆಲಸಕ್ಕೆ ಸೇರಿದ ಅವರು ನಂತರ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಕೆಲಕಾಲ ಮಾಧ್ಯಮ ಅಕಾಡೆಮಿಯ ಕಾರ್ಯದರ್ಶಿ ಆಗಿದ್ದ ಜಗನ್ನಾಥ ಪ್ರಕಾಶ್ ಅವರು ’ಕೋಲಾರ ಸಿರಿಸಂಪುಟ’, ’ನಂದಿಬೆಟ್ಟ’, ’ಶಿವಾರಪಟ್ಟಣ ಶಿಲ್ಪಿಗಳು’, ’ವಿಧಾನಸೌಧ ಶಿಲಾಕಾವ್ಯ’ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.