About the Author

ಬೆಂಗಳೂರಿನ ಕೆನ್ ಕಲಾಶಾಲೆಯಲ್ಲಿ ಡ್ರಾಯಿಂಗ್ ಮತ್ತು ಪೆಯಿಂಟಿಂಗ್‌ನಲ್ಲಿ ಡಿಪ್ಲೊಮಾ ಮಾಡಿದ ರಾಮದಾಸ್ ಅಡ್ಯಂತಾಯ ಸ್ನಾತಕೋತ್ತರ ಡಿಪ್ಲೋಮಾವನ್ನು ಶಾಂತಿನಿಕೇತನದಲ್ಲಿ ಪಡೆದಿದ್ದಾರೆ. ರಾಷ್ಟ್ರದ ಪ್ರಮುಖ ಸ್ಥಳಗಳಲ್ಲಿ ಏಕವ್ಯಕ್ತಿ ಮತ್ತು ಸಮೂಹ ಕಲಾ ಪ್ರದರ್ಶನಗಳನ್ನು ಏರ್ಪಡಿಸಿರುವುದಲ್ಲದೆ ಕೇಂದ್ರ ಮತ್ತು ರಾಜ್ಯ ಅಕಾಡೆಮಿಗಳ ಮೂಲಕ ಕಲಾ ಪ್ರದರ್ಶನಗಳನ್ನು ಏರ್ಪಡಿಸಿದ್ದಾರೆ. ಗ್ರಾಫಿಕ್‌ಕಲೆಯಲ್ಲಿ ಹೆಚ್ಚಿನ ಪರಿಣತಿಯನ್ನು ಪಡೆದಿರುವ ಇವರು ಹಲವಾರು ಗ್ರಾಫಿಕ್ ಶಿಬಿರಗಳಲ್ಲಿ ಭಾಗವಹಿಸಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಅಕಾಡೆಮಿಗಳ ಜೊತೆಗೆ ವಿದೇಶಗಳಲ್ಲೂ ಇವರ ಕೃತಿಗಳು ಸಂಗ್ರಹವಾಗಿವೆ. ಚಿಂತನಶೀಲ ಕಲಾವಿದರಾದ ಅಡ್ಯಂತಾಯ ಅವರು ಅನೇಕ ಕಲಾ ಸಂಸ್ಥೆಗಳ ಸಕ್ರಿಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಎಂ. ರಾಮನರಸಯ್ಯ ಅವರನ್ನು ಕುರಿತು ಬರೆದಿರುವ ವ್ಯಕ್ತಿ ಚಿತ್ರಣದ ಮೂಲಕ ಉತ್ತಮ ಬರಹಗಾರರೆಂಬುದನ್ನು ಇವರು ಸಾಬೀತುಪಡಿಸಿದ್ದಾರೆ. ಅಡ್ಯಂತಾಯ ಅವರು ಪ್ರಸ್ತುತ ಮೈಸೂರಿನ 'ಕಾವಾ'ದಲ್ಲಿ ಚಿತ್ರಕಲಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಮದಾಸ್ ಅಡ್ಯಂತಾಯ