About the Author

ಶ್ರೀನಿವಾಸರಾವ್ ಅವರು ಕನ್ನಡದ ಪ್ರಸಿದ್ದ ಕಾದಂಬರಿಕಾರರು. ಶ್ರೀಪಾದರಾವ್ ಮತ್ತು ನಾಮಗಿರಿಯಮ್ಮನವರ ಪುತ್ರನಾಗಿ ಹೊಸಕೋಟೆ ತಾಲ್ಲೂಕಿನ ಕೊರಟಿ ಎಂಬ ಗ್ರಾಮದಲ್ಲಿ ಅಕ್ಟೋಬರ್ 19, 1925ರಲ್ಲಿ ಜನಿಸಿದರು.

ಹೊಸಕೋಟೆ, ಬೆಂಗಳೂರುಗಳಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಶ್ರೀನಿವಾಸರಾವ್ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ ಮತ್ತು ಬಿ.ಕಾಂ ಪದವಿಗಳನ್ನು ಪಡೆದು 1957ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದರು. ಹೊಸಕೋಟೆ ಪುರಸಭಾ ಪ್ರೌಢಶಾಲಾ ಶಿಕ್ಷಕರಾಗಿ 1952ರಿಂದ ವೃತ್ತಿ ಆರಂಭ ಮಾಡಿದ ಶ್ರೀನಿವಾಸರಾಯರು, ಗಾಂಧೀನಗರದ ಪ್ರೌಢಶಾಲಾ ಶಿಕ್ಷಕರಾಗಿ, ಭಾರತೀಯ ದೂರವಾಣಿ ಕಾರ್ಖಾನೆ, ಬೆಂಗಳೂರಿನ ಲೆಕ್ಕಪತ್ರ ಕಚೇರಿಗಳಲ್ಲಿ ನೌಕರರಾಗಿ, ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ಆವೃತ್ತಿಯ ಉಪಸಂಪಾದಕರಾಗಿ, ಬೆಂಗಳೂರಿನ ಆಚಾರ್ಯ ಪಾಠಶಾಲೆಯ ವಾಣಿಜ್ಯ, ಕಲಾ, ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕರಾಗಿ, ಪ್ರವಾಚಕರಾಗಿ, ಸಂಜೆ ಕಾಲೇಜಿನ ಉಪಪ್ರಾಚಾರ್ಯರಾಗಿ ಹೀಗೆ ವಿವಿಧ ಹಂತಗಳಲ್ಲಿ ಸೇವೆ ಸಲ್ಲಿಸಿದರು.

ಸಾಮಾಜಿಕ ಕಾದಂಬರಿಗಳು: ಕಣ್ಣೀರಿನ ಕಡಲು, ಮಂಗಳ ದೀಪ, ವಿದ್ಯಾಧರೆ, ಗೃಹಿಣಿ, ಮಿಸ್ ಲೀಲಾವತಿ, ಮಮತೆಯ ಸುಳಿ, ಊರು ಕವಲೊಡೆದಾಗ, ಚೈತ್ರಯಾತ್ರೆ, ತೂರಿ ಬಂದ ತಾರೆ

ಐತಿಹಾಸಿಕ ಕಾದಂಬರಿಗಳು: ದೇವಗಿರಿ ಪತನ-2 ಭಾಗ, ಕನ್ನಡಿಗರ ಕಾಳರಾತ್ರಿ, ಬಲಿದಾನ, ರಾಜ್ಯೋದಯ, ರಾಯಪರಾಭವ, ಗಜಬೇಂಟೆಕಾರ, ರಾಜ್ಯಕ್ರಾಂತಿ, ತೌಲವೇಶ್ವರ, ನಾಗಲಾದೇವಿ, ಜಗನ್ಮೋಹಿನಿ, ಶಾಂತಿವಾದಿ, ರಾಜದ್ರೋಹಿ, ಅಮಾತ್ಯರತ್ನ, ಹುಚ್ಚು ದೊರೆ, ರಕ್ಕಸತಂಗಡಿ, ರಘುನಾಥ ವಿಜಯ, ದೇವಿಕೋಟೆ, ಘಾಟಿ ಕಲಹ, ರಾಜ್ಯಕ್ಷಯ ಮುಂತಾದವು ಇವುಗಳಲ್ಲಿ ಸೇರಿವೆ. ಅವರ ಇತರ ಐತಿಹಾಸಿಕ ಕಾದಂಬರಿಗಳೆಂದರೆ ಮೈಸೂರು ಹುಲಿ, ಹುಲಿಯ ಹೆಜ್ಜೆ, ವ್ಯಾಘ್ರನಖ, ಧರ್ಮದೀಕ್ಷೆ, ಉಭಯ ಲೋಕೇಶ್ವರ, ತೇಜಸಿಂಹ, ರಾಣಿ ಚೆನ್ನಮ್ಮಾಜಿ, ಗುಣವಂತಿ, ರಾಜಾ ವೆಂಕಟಪ್ಪನಾಯಕ.

ಧಾರ್ಮಿಕ ಕೃತಿಗಳು: ಶ್ರೀ ತಿರುಪತಿ, ಶ್ರೀ ಮಧ್ವಾಚಾರ್ಯರು, ಜಯತೀರ್ಥರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರ ಸ್ವಾಮಿಗಳು, ಪುರಂದರದಾಸರು, ಶ್ರೀಪಾದರಾಜರು

ಅಮಾತ್ಯ ರತ್ನ ಕೃತಿಗೆ ರಾಜ್ಯ ಸರಕಾರದಿಂದ ಪ್ರಥಮ ಬಹುಮಾನ, ವ್ಯಾಸರಾಯರು ಕೃತಿಗೆ ಸಂಸ್ಕೃತಿ ಇಲಾಖೆಯಿಂದ ಬಹುಮಾನ, ಪೆನುಗೊಂಡೆಯಲ್ಲಿ ನಡೆದ ಕೃಷ್ಣದೇವರಾಯ ವರ್ಧಂತಿ ರಜತೋತ್ಸವದಲ್ಲಿ ಸನ್ಮಾನ, ತಿರುಮಲ ತಿರುಪತಿ ದಾಸ ಸಾಹಿತ್ಯ ಯೋಜನೆಯಡಿಯಲ್ಲಿ ಬೆಂಗಳೂರಿನಲ್ಲಿ ಅದ್ದೂರಿ ಸನ್ಮಾನ ಮುಂತಾದ ಹಲವಾರು ಗೌರವಗಳು ಕೊರಟಿ ಶ್ರೀನಿವಾಸರಾವ್ ಅವರಿಗೆ ಸಂದಿವೆ.

ಕೊರಟಿ ಶ್ರೀನಿವಾಸರಾವ್ ಅವರು ಏಪ್ರಿಲ್ 25, 1983ರಂದು ನಿಧನರಾದರು.

ಕೊರಟಿ ಶ್ರೀನಿವಾಸರಾವ್

(19 Oct 1925-25 Apr 1983)