About the Author

ಲೇಖಕ, ಅನುವಾದಕ ಪ್ರಧಾನ್ ಗುರುದತ್‌ ಅವರು ಹುಟ್ಟಿದ್ದು 30-05-1938ರಂದು ಚಿಕ್ಕಬಳ್ಳಾಪುರದಲ್ಲಿ.  ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಅವರು ಕನ್ನಡದಲ್ಲಿ ಎಂ.ಎ.ಆನರ್ಸ್, ಅನುವಾದದಲ್ಲಿ ಎಂ.ಎ., ಜೊತೆಗೆ ಪ್ರೊ.ವೆಂಕಟರಾಮಪ್ಪನವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಗಳಿಸಿದ್ದಾರೆ. ಪಿಎಚ್.ಡಿ ವಿಷಯವಾಗಿ ಕೃಷ್ಣ ಕಥೆಯ ಉಗಮ ಮತ್ತು ವಿಕಾಸ. ತುಮಕೂರು ವಿಶ್ವವಿದ್ಯಾಲಯದಿಂದ ಡಿ.ಲಿಟ್. ಪದವಿ ಪಡೆದಿದ್ದಾರೆ. ಪಿ.ಎಚ್.ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಡಾ. ಕುವೆಂಪು ಕನ್ನಡ ಅಧ್ಯಯನಪೀಠದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ 1998ರಲ್ಲಿ ನಿವೃತ್ತರಾಗಿದ್ದಾರೆ. ಬಹುಮುಖ ಪ್ರತಿಭೆ, ಅಪರೂಪದ ಪ್ರಾಧ್ಯಾಪಕರು, ಬಹುಭಾಷಾಪಂಡಿತರು ಆಗಿರುವ ಪ್ರಧಾನ್ ಗುರುದತ್ತರು 150ಕ್ಕೂ ಮಿಗಿಲಾದ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಸುಮಾರು 250 ಸಂಶೋಧನ ಲೇಖನಗಳು ಹಾಗೂ ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸದಲ್ಲಿ ಸದಾ ಸಕ್ರಿಯರಾಗಿದ್ದರು. 

ಅನುಶೀಲನಾ (ವಿಮರ್ಶೆ), ದಾಟು ಕಾದಂಬರಿಯನ್ನು ಇಂಗ್ಲಿಷಿಗೆ ಅನುವಾದಿಸಿರುವ ಅವರು ಸಾಕ್ಷಿ ಸಾರ್ಥ ಆವರಣ, ಕಾವಲು, ಯಾನ, ಉತ್ತರಾಕಾಂಡ, ಮಂದ್ರ ಕಾದಂಬರಿಗಳನ್ನು ಹಿಂದಿಗೆ ಅನುವಾದಿಸಿದ್ದಾರೆ. ಭೈರಪ್ಪನವರ ಆತ್ಮಕತೆ ಭಿತ್ತಿಯನ್ನು ಹಿಂದಿಗೆ ಭಾಷಾಂತರಿಸಿ ಪ್ರಕಟಿಸಿದ್ದಾರೆ.

ತಮಿಳು ಶಾಸ್ತ್ರೀಯ ಗ್ರಂಥ ’ತಿರುಕ್ಕುರಳ್’, ಶ್ರೀಪಾದ ಜೋಶಿಯವರ ಮರಾಠಿಕೃತಿ, 'ಮೀ ಪಾಹಿಲೆಲ್ ಗಾಂಧಿ', ಕನ್ನಡಕ್ಕೆ ಅನುವಾದಿದ್ದಾರೆ. 'ನವ ಕರ್ನಾಟಕ ಸಾಹಿತ್ಯ ಸಂಪದ' ಎಂಬ ಪುಸ್ತಕ ಮಾಲಿಕೆಯನ್ನು ಡಾ. ಹಾ.ಮ.ನಾಯಕ ಹಾಗೂ ಡಾ.ಪ್ರಧಾನ್ ಗುರುದತ್ತರು ನಿರ್ವಹಿಸುತ್ತಿದ್ದರು. ಸಾಹಿತ್ಯ ಕ್ಷೇತ್ರದ ಕೃಷಿಗಾಗಿ 1994  ರಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ, 2005ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಹಾಗೂ ಆರ್ಯಭಟ್ಟ, ಮತ್ತು ದೇಜಗೌ ಪ್ರಶಸ್ತಿಗಳು ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಸಂದಿವೆ. 

ಪ್ರಧಾನ್ ಗುರುದತ್ತ

(30 May 1938)