About the Author

ಕಾಸರಗೋಡಿನ ಬಾಡೂರು ಗ್ರಾಮದ ಪಳ್ಳದಲ್ಲಿರುವ ಸರ್ಪಂಗಳ ಹರಿಯಪ್ಪ ಭಟ್ ಹಾಗೂ ರಮಾ ಎಚ್. ಭಟ್ ದಂಪತಿಯ ಪುತ್ರಿ ಪ್ರಸನ್ನಾ ವಿ ಚೆಕ್ಕೆಮನೆ 05-01-1979ರಂದು ಜನಿಸಿದರು. ಅವರು ಚೆಕ್ಕೆಮನೆ ವೆಂಕಟಕೃಷ್ಣ ಅವರ ಪತ್ನಿ.

ಕನ್ನಡ, ಮಲೆಯಾಳಂ ಹಾಗೂ ಹವ್ಯಕ ಭಾಷೆಗಳಲ್ಲಿ ಕಥೆ, ಕವನ, ಭಾವಗೀತೆ, ಭಕ್ತಿಗೀತೆ, ಲೇಖನಗಳನ್ನು ಬರೆಯುತ್ತಿರುವ ಇವರ ಒಂದು ಹವ್ಯಕ ಕಾದಂಬರಿ ಸ್ವಯಂವರವು ಒಪ್ಪಣ್ಣ. ಕಾಂ ಎಂಬ ವೆಬ್ ಸೈಟ್ ನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ.

ತುಳಸೀಹಾರ, ಗರಿಕೆಯಂಚಿನ ಹಿಮಬಿಂದು, ಸಿಂಧೂರ ರೇಖೆಯ ಮಿಂಚು, ನಿನಗಾಗಿ ತೆರೆದ ಬಾಗಿಲು, ಯಾವ ಕಾಣಿಕೆ ನೀಡಲಿ ನಿನಗೆ, ನನ್ನೆದೆಯು ಮಿಡಿಯುತಿದೆ ನಿನ್ನ ಹೆಸರು' ಕಾದಂಬರಿಗಳನ್ನು ರಚಿಸಿದ್ದಾರೆ. ಮೊದಲ ಕವನ ಸಂಕಲನ "ಇನಿದನಿ" ಯು 2014 ರಲ್ಲಿ ಕರ್ನಾಟಕ ಪುಸ್ತಕ ಪ್ರಾಧಿಕಾರದಿಂದ ಪ್ರಕಟವಾಯಿತು. "ಮನದ ಮಲ್ಲಿಗೆ, ಕರಿಮಣಿ ಮಾಲೆ ( ಹವ್ಯಕ), ನೀಲಾಂಬರಿ ಎಂಬ ಮೂರು ಕಥಾಸಂಕಲನಗಳು ಚಿಕ್ಕಮಗಳೂರಿನ ಅಪರಂಜಿ ಪ್ರಕಾಶನದ ಮೂಲಕ ಪ್ರಕಟಗೊಂಡಿದೆ.

ಸಿಂಧೂರರೇಖೆಯ ಮಿಂಚು, ತುಳಸೀಹಾರ ಹಾಗೂ ಸ್ವಯಂವರ ಕಾದಂಬರಿಗಳು ಪ್ರಕಟಣೆಯ ಹಂತದಲ್ಲಿವೆ.

ಅಖಿಲ ಭಾರತ ಮಟ್ಟದ ಕೊಡಗಿನ ಗೌರಮ್ಮ ಕಥಾ ಸ್ಪರ್ಧೆಯಲ್ಲಿ ಪ್ರಶಸ್ತಿ, ಒಪ್ಪಣ್ಣ. ಕಾಂ ನಡೆಸುತ್ತಿರುವ ವಿಷು ವಿಶೇಷ ಸ್ಪರ್ಧೆಯ ಕಥೆ, ಲಘು ಬರಹ ವಿಭಾಗಗಳಲ್ಲಿ ಪ್ರಶಸ್ತಿ, ಚುಟುಕು ಸಾಹಿತ್ಯ ಪರಿಷತ್ತು ನಡೆಸಿದ ಕಥಾಸ್ಪರ್ಧೆಯಲ್ಲಿ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳನ್ನು ಗಳಿಸಿದ ಇವರಿಗೆ ತಿರುವನಂತಪುರಂ ನ ಸಂಸ್ಕೃತಂ ಪ್ರತಿಷ್ಠಾನದ ವಿಶೇಷ ಪುರಸ್ಕಾರವು ಗಳಿಸಿದೆ. ಮೈಸೂರಿನ ಸಾಹಿತ್ಯ ಬಳಗ ಏರ್ಪಡಿಸಿದ ಕವನ ಸ್ಪರ್ಧೆಯಲ್ಲಿಯೂ ಬಹುಮಾನ ಗಳಿಸಿದ್ದಾರೆ. ಕೇರಳ ಸರಕಾರದ ಎರಡನೇ ತರಗತಿಯ ಪಠ್ಯಪುಸ್ತಕದಲ್ಲಿ ಇವರ ಕವನವೊಂದು ಪಠ್ಯವಾಗಿ ಸೇರ್ಪಡೆಗೊಂಡಿರುವುದು ಇವರ ಪ್ರತಿಭೆಗೆ ಸಂದ ಗೌರವ.

ಪ್ರಸನ್ನಾ ವಿ. ಚೆಕ್ಕೆಮನೆ

(05 Jan 1979)