About the Author

ಪತ್ರಕರ್ತ, ಲೇಖಕ ಶಂಕರ ಪಾಗೋಜಿ ಮೂಲತಃ ಧಾರವಾಡ ಜಿಲ್ಲೆ, ಧಾರವಾಡ ತಾಲೂಕಿನ ದೇವಗಿರಿಯವರು. ಮಲೆನಾಡಿನ ಕೊನೆಯ ಸೆರಗು ಸುಮಾರು 500 ಜನಸಂಖ್ಯೆ ಇರುವ ಸಣ್ಣ ಗ್ರಾಮದಲ್ಲಿ ನಾಲ್ಕನೇ ತರಗತಿಯವರೆಗಿನ ಪ್ರಾಥಮಿಕ ಶಿಕ್ಷಣ ಮುಗಿಸಿ ನಂತರ ಮಲೆನಾಡು ಶಿಕ್ಷಣ ಸಮಿತಿ ನಿಗದಿಯಲ್ಲಿ ಪ್ರೌಢಶಿಕ್ಷಣವನ್ನು ಪೂರ್ಣಗೊಳಿಸಿದರು. ಪಿಯುಸಿಯನ್ನು ಧಾರವಾಡದ ಆಲೂರು ವೆಂಕಟರಾವ್ ಜೂನಿಯರ್ ಕಾಲೇಜಿನಲ್ಲಿ ಓದಿದ ಅವರು ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು. ಬಿ.ಎ. ಪದವಿಯನ್ನು ಧಾರವಾಡದ ಕಿಟಲ್ ಕಾಲೇಜಿನಲ್ಲಿ, ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಆನಂತರದಲ್ಲಿ ಕರ್ನಾಟಕದ ಪ್ರಮುಖ ದಿನ ಪತ್ರಿಕೆಗಳಾದ ವಿಜಯ ಕರ್ನಾಟಕ, ಸೂರ್ಯೋದಯ, ಉಷಾ ಕಿರಣ ಪತ್ರಿಕೆಗಳಲ್ಲಿ ವರದಿಗಾರನಾಗಿ ಕಾರ್ಯನಿರ್ವಹಿಸಿದ ಅವರು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರಗಳಲ್ಲಿ ಕಾರ್ಯ ಚಟುವಟಿಕೆ ಮುಂದುವರೆಸಿ ಕಸ್ತೂರಿ ನ್ಯೂಸ್ ಹಾಗೂ ಸುವರ್ಣ ನ್ಯೂಸ್ ಚಾನೆಲ್ ಗಳಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಉದಯವಾಣಿ ದಿನಪತ್ರಿಕೆಯಲ್ಲಿ ವಿಶೇಷ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ದಿನಗಳಿಂದಲೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಶಂಕರ ಪಾಗೋಜಿ ಅವರು ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಕಾಲೇಜು ದಿನಗಳನ್ನು ಶೋಧ ಎನ್ನುವ ಸ್ವಯಂ ಸೇವಾ ಸಂಸ್ಥೆಯೊಂದಿಗೆ ವಿದ್ಯಾರ್ಥಿ ಸಂಘಟಕರಾಗಿ ಗ್ರಾಮ ಸಭೆಗೆ ಪರಮಾಧಿಕಾರ, ಗ್ರಾಮ ನೈರ್ಮಲ್ಯದ ಕುರಿತು ಬೀದಿ ನಾಟಕಗಳನ್ನು ವಿವಿಧ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅಲ್ಲದೇ ಐಪಿಪಿ9 ಯೋಜನೆಯಲ್ಲಿ ಉತ್ತರ ಕರ್ನಾಟಕದ 9 ಜಿಲ್ಲೆಗಳಲ್ಲಿ ಜನ ಸಂಖ್ಯೆ ನಿಯಂತ್ರಣ ಕುರಿತ ಬೀದಿನಾಟಕದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯಿಕವಾಗಿಯೂ ಗುರುತಿಸಿಕೊಂಡಿರುವ ಶಂಕರ ಪಾಗೋಜಿ ಹಲವು ಕೃತಿಗಳನ್ನು ಪ್ರಕಟಿಸಿದ್ದು, ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರಥಮ ಕೃತಿಗೆ ಪ್ರಶಸ್ತಿಯನ್ನು ಪಡೆದಿದ್ದಾರೆ.

ಶಂಕರ ಪಾಗೋಜಿ

(20 Jun 1980)

Stories/Poems