About the Author

ಜಾನಪದ ತಜ್ಞ, ಸಂಶೋಧಕ ವೀರಣ್ಣ ದಂಡೆಯವರು ಹುಟ್ಟಿದ್ದು ಕಲಬುರ್ಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಸಲಗರ ಗ್ರಾಮದಲ್ಲಿ. ತಂದೆ ಶರಣಪ್ಪ ದಂಡೆ, ತಾಯಿ ಬಂಡಮ್ಮ. ಪ್ರಾರಂಭಿಕ ಶಿಕ್ಷಣ ಸಲಗರ. ಬಿ.ಎ, ಎಂ.ಎ. ಪದವಿ ಕಲಬುರ್ಗಿ. “ಕಲಬುರ್ಗಿ ಜಿಲ್ಲೆಯ ಜನಪದ ಕಥೆಗಳ ಆಶಯ ಮತ್ತು ಮಾದರಿಗಳು” ಮಹಾಪ್ರಬಂಧ ಮಂಡಿಸಿ ಕಲಬುರ್ಗಿ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿ ಪಡೆದರು. 1984ರಲ್ಲಿ ಉದ್ಯೋಗಕ್ಕಾಗಿ ಸೇರಿದ್ದು ಬೋಧನಾವೃತ್ತಿ. ಅಧ್ಯಾಪಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಣೆ. ಸಹಾಯ ಸಂಶೋಧಕರಾಗಿ ಉತ್ತರ ಕನ್ನಡದ ಏಳು ಜಿಲ್ಲೆಗಳ ಪ್ರವಾಸ. ಜಾನಪದ ವೈದ್ಯಕೋಶ ಸಂಶೋಧನಾ ಯೋಜನೆಯಡಿ ಕ್ಷೇತ್ರ ಸಹಾಯಕರ ಕಾರ್ಯ. ನಾಲ್ಕು ವಿದ್ಯಾರ್ಥಿಗಳು ಪಿಎಚ್.ಡಿ, ಹತ್ತು ವಿದ್ಯಾರ್ಥಿಗಳು ಎಂ.ಫಿಲ್. ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪಡೆದಿದ್ದಾರೆ.

ಹಲವಾರು ಅಂತಾರಾಷ್ಟ್ರೀಯ ಕಮ್ಮಟಗಳಲ್ಲಿ, ವಿಮರ್ಶಾ ಕಮ್ಮಟ, ನವರಾತ್ರಿ ಜಾನಪದ ರಂಗೋತ್ಸವ, ಭಾಷಾವಿಜ್ಞಾನ ತರಬೇತಿ, ಆಡಳಿತದಲ್ಲಿ ಕನ್ನಡ ಬಳಕೆ ಶಿಬಿರ ಮುಂತಾದುವುಗಳಲ್ಲಿ ಭಾಗಿ. ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ, ಸರಕಾರಿ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ, ಅವಲೋಕನ, ಪಠ್ಯಪುಸ್ತಕ ರಚನಾ ಸಮಿತಿ ಮುಂತಾದುವುಗಳಲ್ಲಿ ಸದಸ್ಯರಾಗಿ ಸೇವೆ. ಸಾಹಿತ್ಯಕ ತ್ರೈಮಾಸಿಕ ಪತ್ರಿಕೆ ‘ಕವಿಮಾರ್ಗ’, ಜಾನಪದ ಅಕಾಡಮಿಯ ‘ಜಾನಪದ ಗಂಗೋತ್ರಿ’ ಸಂಪಾದಕತ್ವ. ‘ಕಲಬುರ್ಗಿ ಕಲರವ,’ ಪ್ರಜಾವಾಣಿ ಪತ್ರಿಕೆಗೆ ಅಂಕಣ ಬರಹಗಳ ಜವಾಬ್ದಾರಿ. ಪ್ರಕಟಿತ ಕೃತಿಗಳು, ಜಾನಪದ-ಜನಪದ ಕಥೆ ವಸ್ತು ಮತ್ತು ತಂತ್ರ (ಸಂಶೋಧನಾತ್ಮಕ), ಜನಪದ ಕಾವ್ಯ ಮೀಮಾಂಸೆ, ಕನ್ನಡ ಜಾನಪದ ಪ್ರಜ್ಞೆ, ಜನಪದ ಕಾವ್ಯ, ಜನಪದ ಸಾಹಿತ್ಯ ಸಿದ್ಧಾಂತ, ಹಾಲು ಮತ ಪುರಾಣ ಮೊದಲಾದುವು. ಸಂಪಾದಿತ-ಆಯ್ದಗಾದೆಗಳು ಹಾಗೂ ಒಗಟುಗಳು, ಕನ್ನಡ ಗಾದೆಗಳ ಸೂಚಿ, ಬೀದಿ ಬಯಲಾಟಗಳು, ಅಷ್ಟಾವರಣ ತಿಲಕ, ದೇಸೀ ದೃಷ್ಟಿ. ವ್ಯಕ್ತಿಚಿತ್ರ-ಚಿಂತನಶೀಲ ಪ್ರಾಧ್ಯಾಪಕ ಬಿ.ಬಿ. ಹಂಡಿ, ಹುಕ್ಕೇರಿ ಬಾಳಪ್ಪ ಮುಂತಾದುವು. ಒಟ್ಟು 30ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ.

ಸಂದ ಪ್ರಶಸ್ತಿ ಗೌರವಗಳು-ದೇವರಾಜ ಬಹದ್ದೂರ್ ಪ್ರಶಸ್ತಿ, ರಾಜ್ಯ ಜಾನಪದ ಅಕಾಡಮಿ ಬಹುಮಾನ, ಕಾವ್ಯಾನಂದ ಪ್ರಶಸ್ತಿ, ಸಿಂಧೂರ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಜಾನಪದ ಪ್ರಶಸ್ತಿ, ಜಾನಪದಶ್ರೀ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ ಸೇರಿದಂತೆ ಹಲವಾರು ಗೌರವ ಪ್ರಶಸ್ತಿಗಳು ಲಭಿಸಿವೆ.

ವೀರಣ್ಣ ದಂಡೆ

(02 Nov 1951)

BY THE AUTHOR