ಅಂಬೇಡ್ಕರ್‌ ಪ್ರಸಕ್ತ ಸಮಾಜ, ರಾಜಕೀಯಕ್ಕೆ ಬಹು ಮುಖ್ಯ: ದೀಪಾ ಭಾಸ್ತಿ


ಗುಲ್ಬರ್ಗಾ: ಸಪ್ನ ಬುಕ್ ಹೌಸ್, ಬೆಂಗಳೂರು ಮತ್ತು ಕುಟುಂಬ ಪ್ರಕಾಶನ, ಕಲಬುರಗಿ ವತಿಯಿಂದ ಪ್ರೊ. ಎಚ್ ಟಿ ಪೋತೆ ಅವರ ಡಾ ಬಿ. ಆರ್ ಅಂಬೇಡ್ಕರ್ ಜೀವನ ಕಥನ ಕುರಿತಾದ 'ಮಹಾಯಾನ' ಕಾದಂಬರಿ ಲೋಕಾರ್ಪಣೆ ಸಮಾರಂಭವು 2025 ಡಿ 09 ಭಾನುವಾರದಂದು ಗುಲ್ಬರ್ಗಾದಲ್ಲಿ ನಡೆಯಿತು.

ಬೂಕರ ಪ್ರಶಸ್ತಿ ವಿಜೇತ ಲೇಖಕಿ, ಅನುವಾದಕಿ ದೀಪಾ ಭಾಸ್ತಿ ಅವರು ಕೃತಿಯನ್ನು ಲೋಕಾರ್ಪಣೆಗೊಳಿಸಿದರು.

ನಂತರದಲ್ಲಿ ಮಾತನಾಡಿದ ಅವರು, "ಬಾಬಾ ಸಾಹೇಬ್‌ ಅಂಬೇಡ್ಕರ್‌ ನಮ್ಮ ದೇಶಕ್ಕೆ, ನಮ್ಮ ಸಮಾಜಕ್ಕೆ ಹಾಗೂ ಪ್ರಸ್ತುತ ಸಮಾಜದ ರಾಜಕೀಯ ಹಾಗೂ ಕಾಲಘಟಕ್ಕೆ ಬಹು ಮುಖ್ಯ. ಕಾರಣ ಅವರ ಸಿದ್ಧಾಂತ. ನನಗೆ ಬಹಳ ಮುಖ್ಯವೆನ್ನಿಸುವ ವಿಚಾರ ಅಂಬೇಡ್ಕರ್‌ ಅವರಿಗಿದ್ದ ಮಹಿಳೆಯರ ಬಗೆಗಿನ ದೂರದೃಷ್ಟಿ. ಸಂವಿಧಾನವನ್ನ ಕಟ್ಟುವಾಗಲೇ ಮಹಿಳೆಯರ ಸಮಾನತೆ, ಸ್ತ್ರೀ ಸ್ವಾತಂತ್ರ್ಯ , ರಾಜಕೀಯ, ಸಾಮಾಜಿಕ, ಆಸ್ತಿ ಹಕ್ಕು ಇವೆಲ್ಲವನ್ನು ಯೋಚಿಸಿ ಯೋಜನೆಯನ್ನ ರೂಪಿಸಿದ್ದರು. ನಾವೆಲ್ಲ ಮುಖ್ಯವಾಹಿನಿಗಳಲ್ಲಿ ಮಾತನಾಡುವಾಗ ಅವರು ಸಂವಿಧಾನ, ದಲಿತ ಸಮುದಾಯಕ್ಕೆ ನೀಡಿದ ಕೊಡುಗೆಯನ್ನ ಮಾತಾಡುತ್ತೇವೆ. ಆದರ ಹೊರತಾಗಿ ಮಹಿಳೆಯರಿಗೆ ನೀಡಿದ ಅವಕಾಶ ಮತ್ತು ಸವಲತ್ತನ್ನು ನಾವು ಪರಿಗಣಿಸುವುದಿಲ್ಲ. ಮುಖ್ಯವಾಗಿ ಅವುಗಳ ಬಗ್ಗೆಯೂ ನಮ್ಮ ಚರ್ಚೆ ಅತ್ಯಗತ್ಯ. ಪ್ರಸಕ್ತ ಸಮಾಜದಲ್ಲಿ ಇಂತಹ ವಿಚಾರಗಳು ಬಹಳಷ್ಟು ಪರಿಣಾಮವನ್ನು ಬೀರಲು ಸಾಧ್ಯವಾಗಬಹುದು," ಎಂದು ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು.

ಕೃತಿಯ ಕುರಿತು ವಿಮರ್ಶಕ, ಸಾಹಿತಿ ಎಸ್.ಆರ್.‌ ವಿಜಯಶಂಕರ ಮಾತನಾಡಿ, "ಇಡೀ ರಾಜ್ಯಕ್ಕೆ ದಾರಿದೀಪವಾಗಬಲ್ಲ ರಾಷ್ಟ್ರೀಯ ಸೆಮಿನಾರ್‌ ಈ ವಿಶ್ವವಿದ್ಯಾಲಯದಲ್ಲಾಗಬೇಕು. 'ಮಹಾಯಾನ' ಕೃತಿಯು ಅಂಬೇಡ್ಕರ್‌ ರವರ ಜೀವನದ ಯಾನವು ಹೌದು ಆತ್ಮಕಥೆಯು ಹೌದು. ಒಂದು ಕೃತಿಯ ಹುಟ್ಟಿಗೆ ಬಹು ತಯಾರಿ ಮುಖ್ಯ. ವಿಶ್ಲೇಷನಾತ್ಮಕ ಮನಸ್ಥಿತಿ ಇದ್ದವರು ಮಾತ್ರ ಒಂದು ಒಳ್ಳೆಯ ಕೃತಿಯನ್ನ ಹೊರತರಲು ಸಾಧ್ಯ. ಈ ಕೃತಿಯ ಪುಟ ಹರವಿದ್ದಂತೆ ಭಾರತೀಯ ಸಾಮಾಜಿಕ, ಸ್ವಾತಂತ್ರ್ಯ ಹೋರಾಟದ ಚರಿತ್ರೆ, ಅಂಬೇಡ್ಕರ್‌ ಕಥನವನ್ನ ನಾವಿಲ್ಲಿ ತಿಳಿಯಬಹುದು. ಒಂದರ್ಥದಲ್ಲಿ ಇದು ಭಾರತೀಯ ನಿಮ್ನ ವರ್ಗಗಳ ಹೋರಾಟವು ಹೌದು. ಭಾರತೀಯರ ಬೆಳವಣಿಗೆಯ ಸಂದರ್ಭದಲ್ಲಿ ಕಾಣಿಸಿಕ್ಕ ವರ್ಗ ಮತ್ತು ವರ್ಣದ ಕುರಿತ ಹಲವು ವಿಚಾರ, ಚರ್ಚೆಗಳು ಇಲ್ಲಿವೆ," ಎಂದು ತಿಳಿಸಿದರು.

ವೇದಿಕೆಯಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಶಶಿಕಾಂತ ಎಸ್ ಉಡಿಕೇರಿ, ಮಾನವಿಕ ಮತ್ತು ಭಾಷಾನಿಕಾಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಡೀನ್‌ ವಿಕ್ರಮ ವಿಸಾಜಿ, ಕಲಾನಿಕಾಯ ಹಾಗೂ ನಿರ್ದೇಶಕರು ಕನ್ನಡ ಅಧ್ಯಯನ ಸಂಸ್ಥೆ, ಗುಲಬರ್ಗಾ ವಿಶ್ವವಿದ್ಯಾಲಯ ಡೀನ್‌ ಪ್ರೊ. ಎಚ್ ಟಿ ಪೋತೆ, ಕುಟುಂಬ ಪ್ರಕಾಶನ ಕಲಬುರಗಿಯ ರಮೇಶ್ ಟಿ ಪೋತೆ, ಬೆಂಗಳೂರು ಸಪ್ನ ಬುಕ್ ಹೌಸ್ ನ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಉಪಸ್ಥಿತರಿದ್ದರು.

 

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...