ಇಲ್ಲಿಯ ನಿರೂಪಣೆಯ ಸೊಬಗು, ಸಂಭಾಷಣೆಯ ಹರಿವು ಚೇತೋಹಾರಿಯಾಗಿದೆ


"ಈ ಮುನ್ನುಡಿಯ ಆರಂಭದಲ್ಲೇ ಸೂಚಿಸಿದಂತೆ ಮ ಸ್ವಾಮಿ ಕಪ್ಪಸೋಗೆ ಅವರಿಗೆ ಕತೆ ಹೇಳುವ ಕಲೆ ಗೊತ್ತಿದೆ. ಸುಲಲಿತವಾಗಿ ನಿರೂಪಣೆಯನ್ನು ಸಾಗಿಸಿಕೊಂಡು ಹೋಗುತ್ತಾರೆ; ಸಂಭಾಷಣೆಯನ್ನು ಹೆಣೆಯುವುದರಲ್ಲೂ ಅವರಿಗೆ ನೈಪುಣ್ಯತೆ ಇದೆ. ಜೊತೆಗೆ ವೆಂಕು-ಪಲ್ಲುವಿನ ವೃತ್ತಾಂತದೊಳಗೆ ಹಲವಾರು ಪಾತ್ರಗಳನ್ನು ವೃತ್ತಾಂತವನ್ನು ತಂದಿದ್ದಾರೆ," ಎನ್ನುತ್ತಾರೆ ಸಿ. ನಾಗಣ್ಣ. ಅವರು ಮ. ಸ್ವಾಮಿ ಕಪ್ಪಸೋಗೆ ಅವರ ‘ಸೇರುವ ದಾರಿ’ ಕೃತಿಗೆ ಬರೆದ ಮುನ್ನುಡಿ.

'ಸೇರುವ ದಾರಿ' ಎಂಬುದು ಮ ಸ್ವಾಮಿ ಕಪ್ಪಸೋಗೆ ಅವರ ಚೊಚ್ಚಲ ಕಾದಂಬರಿ ಸ್ವಯಂ ಯವಕರಾದ ಮ ಸ್ವಾಮಿಯವರು ಯುವಜನರಿಗೆ ಸಂಬಂಧಿಸಿದ ಕಥೆಯನ್ನು ಬಹುಎಚ್ಚರಿಕೆಯಿಂದ, ಲವಲವಿಕೆಯಿಂದ ಹೆಣೆದಿದ್ದಾರೆ. ಇಲ್ಲಿಯ ನಿರೂಪಣೆಯ ಸೊಬಗು, ಸಂಭಾಷಣೆಯ ಹರಿವು ಚೇತೋಹಾರಿಯಾಗಿದೆ. ತಮ್ಮ ಚೊಚ್ಚಲ ಕೃತಿಯಲ್ಲೇ ಮ ಸ್ವಾಮಿ.. ಸಿಕ್ಸರ್.. ಬಾರಿಸಿದ್ದಾರೆ ಎನ್ನಬಹುದು.

ಕಾದಂಬರಿಯನ್ನು ಈ ಮುಂದಿನಂತೆ ಸಂಗ್ರಹವಾಗಿ ಹೇಳಬಹುದು; ವೆಂಕಟೇಶ್ ಒಂದರ್ಥದಲ್ಲಿ ಕಾದಂಬರಿಯ ನಾಯಕ. ಉದ್ದಕ್ಕೂ ಇವನನ್ನು 'ವೆಂಕು' ಎಂದು ಕರೆಯಲಾಗುತ್ತದೆ. ಪಲ್ಲವಿ ಇವನಿಗೆ ಇಷ್ಟವಾದವಳು ಇವಳಿನ್ನೂ ಹೈಸ್ಕೂಲ್ ಓದುತ್ತಿರುವ ಬಾಲಕಿ, ಆದರೂ ವೆಂಕುಗೆ ಇವಳ ಮೇಲೆ ಇಷ್ಟ. ಕಾದಂಬರಿಕಾರರು ಆರಂಭದಲ್ಲೇ ಓದುಗರಿಗೆ ಪರಿಚಯಿಸುವಂತೆ ವೆಂಕು ಒಬ್ಬ ವೈಚಾರಿಕ ಪ್ರಜ್ಞೆ ಇರುವ ಹುಡುಗ, ಪಲ್ಲವಿ ಕಾದಂಬರಿಯ ಉದ್ದಕ್ಕೂ 'ಪಲ್ಲು' ಎಂದು ಕರೆಯಲ್ಪಡುತ್ತಾಳೆ. ಇವಳಿಗೆ ಓದುವುದೆಂದರೆ ಬಹಳ ಇಷ್ಟ. ಹಾಗಾಗಿ ಹತ್ತನೇ ತರಗತಿಯಲ್ಲಿ ಅತಿಹೆಚ್ಚು ಅಂಕಗಳಿಸಿ ಮೊದಲನೇ ಸ್ಥಾನದಲ್ಲಿ ತೇರ್ಗಡೆಯಾಗಿದ್ದಳು. ಹಾಗಾಗಿ ಅವಳ ತಂದೆ-ತಾಯಿ, ನಿಂಗಯ್ಯ ಮತ್ತು ಸಾಕಮ್ಮ, ದಿನಗೂಲಿ ಮಾಡುವವರಾದರೂ ಅವಳನ್ನು ಪಿಯು ಕಾಲೇಜಿಗೆ ಸೇರಿಸುತ್ತಾರೆ. ವೆಂಕು ತಂದೆ ನಂಜಯ್ಯ, ತಾಯಿ ರೇವಮ್ಮ, ವೆಂಕು ತಂದೆಯನ್ನು ಯಾವಾಗಲೂ ವಿರೋಧಿಸುತ್ತಿದ್ದ ಕಾರಣ ಅವರಿಬ್ಬರ ನಡುವೆ ಹೆಚ್ಚು ಮಾತುಕತೆ ಇರಲಿಲ್ಲ.

ಆದರೆ ವೆಂಕು ದುಡಿದು ಅಪ್ಪ-ಅಮ್ಮನನ್ನು ಚೆನ್ನಾಗಿ ಸಾಕುತ್ತಿದ್ದ, ಪಲ್ಲವಿಯನ್ನು ತನ್ನ ಬಾಳಸಂಗಾತಿಯಾಗಿ ಪಡೆಯಬೇಕೆಂದು ಪಟ್ಟು ಹಾಕಿದವನು ವೆಂಕು. ಮೊದಲನೆಯ ಪಿಯುವಿನಲ್ಲೂ ಪಲ್ಲು ಚೆನ್ನಾಗಿ ಅಂಕ ತೆಗೆಯುತ್ತಾಳೆ. ಆದರೆ ಆಕೆ ವೆಂಕುವಿನ ಸಹವಾಸಕ್ಕೆ ಬಿದ್ದಿರುವುದರಿಂದ ಜನಕ್ಕೆ ಹೆದರಿ ಪಲ್ಲುವಿನ ಊಟದಲ್ಲಿ ವಿಷಬೆರೆಸಿ ಇಡುವ ಮಟ್ಟಕ್ಕೆ ತಾಯಿ ಸಾಕಮ್ಮ ಹೋಗುತ್ತಾಳೆ. ತಂದೆ ತಾಯಿಯರ ವಿರೋಧದ ನಡುವೆಯೂ ಪಲ್ಲು ವೆಂಕುವಿನ ಜೊತೆ ಓಡಿ ಹೋಗಿ ದೇವಸ್ಥಾನದಲ್ಲಿ ಮದುವೆಯಾಗುತ್ತಾರೆ. ಮಗಳ ತೀರ್ಮಾನದಿಂದ ನಲುಗಿದ ನಿಂಗಯ್ಯ ಮತ್ತು ಸಾಕಮ್ಮ ವೆಂಕುವಿನ ತಂದೆ ತಾಯಿಯಾದ ನಂಜಯ್ಯ ಮತ್ತು ರೇವಮರಿಗೆ ಹಿಡಿಹಿಡಿ ಶಾಪ ಹಾಕುತ್ತಾರೆ. ಈ ನಡುವೆ ಎರಡನೇ ಪಿಯು ಫಲಿತಾಂಶ ಬರುತ್ತದೆ; ಪಲ್ಲು ಅದರಲ್ಲೂ ಉನ್ನತ ಶ್ರೇಣಿಯಲ್ಲಿ ಪಾಸಾಗಿರುತ್ತಾಳೆ. ಪೊಲೀಸರಿಗೆ ದೂರು ಕೊಟ್ಟಾಗ ಅವರು ಪಲಾಯನವಾದ ಜೋಡಿಯನ್ನು ಪತ್ತೆ ಹಚ್ಚುತ್ತಾರೆ. ಪಲ್ಲುವನ್ನು ಇನ್ನೂ ಹದಿನೆಂಟು ತುಂಬದ ಕಾರಣ ಮನೆಗೆ ಕಳುಹಿಸುತ್ತಾರೆ. ವೆಂಕುವನ್ನು ಸ್ವಲ್ಪ ದಿನ ಇರಿಸಿಕೊಳ್ಳುತ್ತಾರೆ. ಅಂತೂ ವೆಂಕುವಿನ ಬಿಡುಗಡೆಯಾಗುತ್ತದೆ; ಬಳಿಕ ಎರಡೂ ಮನೆಯವರು ಸೇರಿ ಸರಳವಾಗಿ ವಿವಾಹ ಮಾಡುತ್ತಾರೆ.

ಪಲ್ಲು ಅವಳಿ-ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡುತ್ತಾಳೆ; ಅವಕ್ಕೆ ಕಲಾ, ನಿರ್ಮಲಾ ಎಂದು ನಾಮಕರಣವಾಗುತ್ತದೆ. ವೆಂಕು ವಿಚಾರವಾದಿ ಎಂಬ ಸಂಗತಿ ಆರಂಭದಲ್ಲೇ ನಮಗೆ ಗೊತ್ತಾಗುತ್ತದೆ. ಆದರೆ ಪಲ್ಲು ಮಾತ್ರ ಅದಕ್ಕೆ ತದ್ವಿರುದ್ಧ; ಕೂತರೆ ನಿಂತರೆ ಶಾಸ್ತ್ರವನ್ನು ಕೇಳುವ ಮನೋಭಾವದವಳು. ಆ ಧೋರಣೆ ಅವಳ ತಾಯಿಯಿಂದಲೇ ಅವಳಿಗೆ ಬಳುವಳಿಯಾಗಿ ಬಂದಿರುತ್ತದೆ. ಅವಳ ತಾಯಿಯಾದರೋ ಅವಿದ್ಯಾವಂತೆ; ಉದ್ದಕ್ಕೂ ಮೆರಿಟ್‌ನಲ್ಲಿ ಪಾಸಾಗುವ ಈ ಹುಡುಗಿ ಆಚಾಳಿಗೆ ತಗುಲಿಕೊಂಡದ್ದು ಆಶ್ಚರ್ಯ. ಹಾಗಾಗಿ ಅವಳ ವೆಂಕುವಿನ ನಿರ್ಧಾರಗಳಿಗೆ ವಿರೋಧ ವ್ಯಕ್ತಪಡಿಸುತ್ತ ತನ್ನ ಮೂಢನಂಬಿಕೆಗಳನ್ನು ಮುಂದುವರೆಸುತ್ತಾ ಸಾಗುತ್ತಾಳೆ. ಓದಿನಲ್ಲಿ ಅಷ್ಟು ಮುಂದಿದ್ದ ಈ ಹುಡುಗಿ ಮಕ್ಕಳು ಸ್ವಲ್ಪ ದೊಡ್ಡವಾಗುತ್ತಿದ್ದ ಹಾಗೆಯೇ ಅವುಗಳನ್ನು ಅಂಗನವಾಡಿಗೆ ಸೇರಿಸಿ ಮನೆಕೆಲಸ ಮುಗಿಸಿ ಧಾರಾವಾಹಿ ನೋಡುವ ಸೋಮಾರಿಯಾಗಿ ಬಿಡುತ್ತಾಳೆ. ಕಲಾ ಎಂಬ ಕೂಸಿಗೆ ಜ್ವರ ಬಂದಿದ್ದರಿಂದ ಪಲ್ಲು ತಾಯಿತ ಕಟ್ಟಿಸಿಕೊಂಡು ಬರುತ್ತಾಳೆ. ವೆಂಕು ಅದೇ ದಿನ ಬಾಡು ತಿಂದು ಬಂದಿರ್ತಾನೆ ಇದು ಪಲ್ಲುವಿಗೆ ಹಿಡಿಸುವುದಿಲ್ಲ. ಪಲ್ಲು ಮುಟ್ಟಾದ ಮೇಲೆ ಮೂರು ದಿನ ಅಲಾಯಿದವಾಗಿರಲು ಹಟ ಮಾಡುತ್ತಾಳೆ. ಜೊತೆಗೆ ಅವಳ ಎಡಭುಜದ ಮೇಲೆ ಹಲ್ಲಿ ಬಿದ್ದ ಕಾರಣ ಆಕೆ ಜೋಯಿಸರನ್ನು ಭೇಟಿ ಮಾಡಿ ಪರಿಹಾರೋಪಾಯಕ್ಕೆ ಅಣಿಯಾಗುತ್ತಾಳೆ. ಹೂವು ಮಾರುವ ಗಂಗಮ್ಮನ ಮಗ ನಾಗನ ಶವ ಸಂಸ್ಕಾರಕ್ಕೆ ಹೋಗಿದ್ದು ವೆಂಕು ಮನೆಗೆ ಬಂದಾಗ ಆತನಿಗೆ ಸಗಣಿ ನೀರಿನ ಸ್ನಾನವಾಗಬೇಕೆಂದು ಪಲ್ಲು ಪಟ್ಟು ಹಿಡಿಯುತ್ತಾಳೆ. ಇದು ಪಲ್ಲುವಿನ ಮೂಢನಂಬಿಕೆಯ ಇನ್ನೊಂದು ಆಯಾಮವಾಗಿ ವೆಂಕುವಿಗೆ ಗೋಚರವಾಗುತ್ತದೆ.

ವೆಂಕು ಹಾವಿನ ಬಾಲದ ಮೇಲೆ ಗಾಡಿ ಹರಿಸಿದ್ದರಿಂದ ಅದು ಅರೆಜೀವವಾಗಿ ಬದುಕಿಕೊಂಡಿದೆ. ಮತ್ತೆ ಪಲ್ಲುವಿಗೆ ಪರಿಹಾರದ ಚಿಂತೆ, ಹಾಗಾಗಿ ಪಲ್ಲು ತನ್ನ ತಾಯಿಯ ಜೊತೆಗೂಡಿ ಅನ್ನೋರ ಹತ್ತಿರ ಹೋಗುತ್ತಾಳೆ. ಅಯ್ಯೋರು ದೇವರ ಗುಡ್ಡಪ್ಪನ ಹತ್ತಿರ ಕಳುಹಿಸುತ್ತಾನೆ. ಆ ದೇವರ ಗುಡ್ಡ ಸಿದ್ಧ; ಪೂರ್ವ ಇತಿಹಾಸ ಉಳ್ಳವನು. ನಡೆದ ಒಂದು ಘಟನೆಯಿಂದ ಗುಡ್ಡಪ್ಪ ದೈವಪುರುಷನಂತೆ ಊರವರ ಕಣ್ಣಲ್ಲಿ ಗೋಚರಿಸುತ್ತಾನೆ. ಊರ ಹೊರಗೆ ಅವನು ವಾಸಿಸುವ ದೇವಸ್ಥಾನದ ಹಿಂಭಾಗದಲ್ಲಿ ಗಾಂಜಾ ಗಿಡ ಬೆಳೆಸುವ ಕಾಯಕದಲ್ಲಿ ತೊಡಗುತ್ತಾನೆ. ಮಕ್ಕಳಿಲ್ಲದ ಹೆಂಗಸರಿಗೆ ಮಕ್ಕಳ ಫಲ ಕೊಡುವುದಾಗಿ ನಂಬಿಸಿ ಅವರನ್ನು ಕೂಡುತ್ತಾನೆ. ಆದರೆ ಒಬ್ಬ ಹೆಂಗಸು ಆತನ ಆಷಾಢ ಭೂತಿತನವನ್ನು ಬಯಲಿಗೆಳೆಯುತ್ತಾಳೆ. ಪೊಲೀಸರು ಗಾಂಜಾ ಗಿಡ ಬೆಳೆದ ಕಾರಣಕ್ಕೆ ಆತನನ್ನು ಬಂಧಿಸುತ್ತಾರೆ. ಸ್ವಲ್ಪ ಕಾಲದ ನಂತರ ಬಿಡುಗಡೆಯಾಗುತ್ತಾನೆ. ಊರ ಪಟೇಲ ಆತನನ್ನು ದೊಡ್ಡ ಮನುಷ್ಯನೆಂದು ಡಂಗೂರ ಹಾಕಿಸಿದ ಮೇಲೆ ಜನರು ಮತ್ತೆ ದೇವಸ್ಥಾನಕ್ಕೆ ಹೋಗಲು ಶುರು ಮಾಡುತ್ತಾರೆ.

ಈ ನಡುವೆ ನಮ್ಮ ಕಥಾನಾಯಕಿ ಪಲ್ಲು ತನ್ನ ಮೂಢನಂಬಿಕೆಯನ್ನು ಮುಂದುವರೆಸುತ್ತಾಳೆ. ಕಥಾನಾಯಕ ದೂರಾಗುತ್ತಾ ಹೋಗುತ್ತಾನೆ. ಆದರೆ ಮಕ್ಕಳ ಲಾಲನೆ-ಪಾಲನೆಯನ್ನು ಮಾತ್ರ ಆತ ಕಡೆಗಣಿಸುವುದಿಲ್ಲ. ಪಲ್ಲು ಟಿ.ವಿ ಧಾರಾವಾಹಿ ನೋಡಿಕೊಂಡು ಕಾಲಹರಣ ಮಾಡುವುದನ್ನು ಗಮನಿಸಿದ ನೆರೆಮನೆಯ ಗೌರಕ್ಕೆ ಹೊಲಿಗೆ ತರಬೇತಿ ಸೇರಿಕೊಳ್ಳುವಂತೆ ಪ್ರೇರಿಸುತ್ತಾಳೆ. ವೆಂಕು ಮನಸ್ಸಿಲ್ಲದ ಮನಸ್ಸಿನಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸುತ್ತಾನೆ. ಆದರೆ ಅವಳ ತಂದೆ-ತಾಯಿ ನಿಂಗಯ್ಯ ಮತ್ತು ಸಾಕಮ್ಮ ಬೇಡವೆನ್ನುತ್ತಾರೆ. ಕೊರೋನ ಮಾರಿಯ ಕಾರಣದಿಂದ ಹೊಲಿಗೆ ತರಬೇತುದಾರ ಶಂಕರ ತನ್ನ ಅಂಗಡಿಯನ್ನು ಮುಚ್ಚಬೇಕಾಗುತ್ತದೆ.

ಕೊನೆಗೆ ಪಲ್ಲು ನರ್ಸಿಂಗ್ ತರಬೇತಿ ಪಡೆಯುವುದು ಸೂಕ್ತವೆಂದು ಆಕೆಯ ಪ್ರತಿಭೆಯನ್ನು ಗುರುತಿಸಿದ್ದ ಮೇಷ್ಟ್ರು ಸಲಹೆ ನೀಡುತ್ತಾರೆ. ಅದರಂತೆ ಪಲ್ಲು ನರ್ಸಿಂಗ್‌ ತರಬೇತಿಗೆ ಸೇರಿಕೊಳ್ಳುತ್ತಾಳೆ. ಅಲ್ಲಿ ಸಹಪಾಠಿ ಸಂಪತ್ ಕುಮಾರ್ ಎಂಬುವವನ ಪರಿಚಯವಾಗುತ್ತದೆ; ಪರಿಚಯ ಗಾಢಸ್ನೇಹ ಬೆಳೆದು; ಸ್ನೇಹ ಪ್ರೇಮವಾಗಿ ಅವರಿಬ್ಬರೂ ಮದುವೆಯಾಗಲು ನಿಶ್ಚಯಿಸಿ ಮುಂದುವರೆಯುತ್ತಾರೆ. ಪಲ್ಲವಿ ತಾನು ಎರಡು ಹೆಣ್ಣು ಮಕ್ಕಳ ತಾಯಿ ಎಂಬುದನ್ನೂ ಲಕ್ಷಕ್ಕೆ ತೆಗೆದುಕೊಳ್ಳದ ಪ್ರೇಮಕ್ಕೆ ಮರುಳಾಗಿ ಸಂಪತ್‌ನೊಡನೆ ದಾಂಪತ್ಯಕ್ಕೆ ಮುಂದಾಗುತ್ತಾಳೆ. ಈ ದುರಂತ ಸಂಗತಿಯನ್ನು ತಿಳಿದ ವೆಂಕು ತನ್ನ ಎರಡು ಮಕ್ಕಳನ್ನು ಎಷ್ಟೊಂಡು ಹಟ್ಟಿ ಕಡೆ ನಡೆದನು ಎಂಬಲ್ಲಿ ಕಾದಂಬರಿ ಮುಕ್ತಾಯವಾಗುತ್ತದೆ.

ಈ ತಾತ್ಪರ್ಯ ವ್ಯಕ್ತವಾಗುವಂತೆ ಇದು ಸುಖಾಂತ್ಯ ಕಾದಂಬರಿ ಅಲ್ಲ; ದುಃಖಾಂತ್ಯ ಕಾದಂಬರಿ, ಆರಂಭದಲ್ಲಿ ಪಲ್ಲು ಒಳ್ಳೆಯ ಸಾಧಕಿಯಾಗಿ ವಿಕಾಸವಾಗಬಲ್ಲಳೆಂಬ ಆಶಾವಾದ ಹುಟ್ಟಿ ಹಾಕಿದ್ದಳು. ಆದರೆ ವೆಂಕುವಿನ ವೈಚಾರಿಕತೆಯನ್ನು ಅರ್ಥಮಾಡಿಕೊಳ್ಳಲಾರದೆ ತನ್ನ ಮೂಢನಂಬಿಕೆಗಳಿಗೆ ಆಕೆ ಬಲವಾಗಿ ಅಂಟಿಕೊಳ್ಳುವುದರಿಂದ ಅವರಿಬ್ಬರ ನಡುವಿನ ಬಿರುಕು ದೊಡ್ಡದಾಗುತ್ತಾ ಹೋಗುತ್ತದೆ. ವೆಂಕುವಿನ ವಿಚಾರಗಳಿಗೆ ಸ್ಪಂದಿಸಬಲ್ಲಳು ಎಂದು ನಾವು ನಿರೀಕ್ಷಿಸುತ್ತಿರುವಾಗಲೇ ಪಲ್ಲು ತನ್ನ ಅಮ್ಮನ ನಂಬಿಕೆಗಳನ್ನು ಅನುಸರಿಸುವುದು ಚೋದ್ಯವಾಗಿ ತೋರುತ್ತದೆ. ವೆಂಕು ಶ್ರಮಜೀವಿ; ದುಡಿದು ತಂದೆತಾಯಿಯರನ್ನು ಸಾಕುವುದರಲ್ಲಿ ನಿರತನಾದವನು. ಅವನ ಶ್ರಮದ ದುಡಿಮೆಗೂ ಪಲ್ಲುವಿನ ಧಾರಾವಾಹಿ ನೋಡಿಕೊಂಡು ಕಾಲಕಳೆಯುವುದಕ್ಕು ಇರುವ ವೈಷಮ್ಯ ಒಡೆದು ಕಾಣುತ್ತದೆ. ಓದುವ ಸುಖವನ್ನು ಬಲ್ಲ, ಉತ್ತಮ ಫಲಿತಾಂಶದಲ್ಲಿ ಎಸ್.ಎಸ್. ಎಲ್.ಸಿ ಮತ್ತು ಪಿ.ಯು.ಸಿ ತೇರ್ಗಡೆ ಹೊಂದಿದ್ದ ಪಲ್ಲು ಧಾರಾವಾಹಿಗಳಲ್ಲಿ ಮೈ ಮರೆಯುವುದು ಆಶ್ಚರ್ಯವೆನಿಸುತ್ತದೆ. ವಿದ್ಯಾವಂತರಾದ ಹೆಣ್ಣು ಮಕ್ಕಳು ಹೊರಗೆ ದುಡಿಯಲು ಹೋಗಬೇಕಾದ್ದು ಸಹಜ; ಆದರೆ ಕೌಟುಂಬಿಕವಾದ ಸೌಹಾರ್ದಕ್ಕೆ ಎರವಾಗಿ ಪರಪುರುಷರ ಆಕರ್ಷಣೆಗೆ ಒಳಗಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ.

ಕಾದಂಬರಿಯ ಉದ್ದಕ್ಕೂ ಪಲ್ಲು-ವೆಂಕುವಿನ ದಾಂಪತ್ಯ ಗೆಲ್ಲುವ ದಾಂಪತ್ಯವೆಂಬ ಸೂಚನೆಗಳು ಕಂಡುಬರುತ್ತವೆ. ಆದರೆ ಪಲ್ಲು ಮೂಢನಂಬಿಕೆಗಳನ್ನು ಮುಂದುವರೆಸಿದಾಗ ಅವರ ನಡುವಿನ ಬಿರುಕು ದೊಡ್ಡದಾಗಬಹುದೆಂಬ ಊಹೆ ನಿಜವಾಗ ತೊಡಗುತ್ತದೆ. ನಮ್ಮ ನಿರೀಕ್ಷೆ ಏನೆಂದರೆ? ಪಲ್ಲು ಎರಡು ಅವಳಿ ಜವಳಿ ಹೆಣ್ಣು ಮಕ್ಕಳಿಗೆ ಜನ್ಮ ನೀಡಿರುವವಳು. ಅವುಗಳ ಭವಿಷ್ಯವನ್ನು ಮರೆತು ಪರಪುರುಷನೊಬ್ಬನ ಜೊತೆ ಹೋಗಲಾರಳು ಎಂದು. ವೆಂಕು ಸ್ವಲ್ಪ ಚೌಕಾಸಿ ಮಾಡಿ ತನ್ನ ತಂದೆ ತಾಯಿಯರನ್ನು ಒಪ್ಪಿಸುತ್ತಾನೆ ಶುಶೂಷಕಿ ತರಬೇತಿಗೆ, ಹಾಗೆ ನೋಡಿದರೆ ಪಲ್ಲುವಿನ ತಂದೆ ತಾಯಿಯೇ ಒಪ್ಪಿರುವುದಿಲ್ಲ. ಸಂಪತ್‌ ತನ್ನ ಅಕ್ಕನ ಮಗಳ ಹುಟ್ಟು ಹಬ್ಬಕ್ಕೆ ಕರೆದಿರುವುದಾಗಿ ಪಲ್ಲು ತನ್ನ ಗಂಡನಿಗೆ ತಿಳಿಸಿದಾಗ ವೆಂಕು “ಅದೆಲ್ಲ ಸರಿಯಿರಲ್ಲ, ಬೇಡ' ಎಂದರೂ ಕೇಳದೆ ಆಕೆ ಆತನಿಗೆ ಸಮಜಾಯಿಷಿ ನೀಡುತ್ತಾಳೆ. ರಾತ್ರಿ ಪಲ್ಲು ಸಂಪತ್‌ ಮನೆಯಲ್ಲೇ ತಂಗುವಾಗ ನಾವು ನಿರೀಕ್ಷಿಸದ ಘಟನೆ ನಡೆದೇ ಹೋಗುತ್ತದೆ. ಸಂಪತ್ತು ಆಕೆಯ ಬದುಕಿಗೆ ಆಪತ್ತು ತಂದೊಡ್ಡುತ್ತಾನೆ. ಅವರಿಬ್ಬರೂ ಎಲ್ಲರಿಂದ ದೂರವಾಗಿ ಮದುವೆಯಾಗಲು ನಿರ್ಧರಿಸುತ್ತಾರೆ.

ಈ ಮುನ್ನುಡಿಯ ಆರಂಭದಲ್ಲೇ ಸೂಚಿಸಿದಂತೆ ಮ ಸ್ವಾಮಿ ಕಪ್ಪಸೋಗೆ ಅವರಿಗೆ ಕತೆ ಹೇಳುವ ಕಲೆ ಗೊತ್ತಿದೆ. ಸುಲಲಿತವಾಗಿ ನಿರೂಪಣೆಯನ್ನು ಸಾಗಿಸಿಕೊಂಡು ಹೋಗುತ್ತಾರೆ; ಸಂಭಾಷಣೆಯನ್ನು ಹೆಣೆಯುವುದರಲ್ಲೂ ಅವರಿಗೆ ನೈಪುಣ್ಯತೆ ಇದೆ. ಜೊತೆಗೆ ವೆಂಕು-ಪಲ್ಲುವಿನ ವೃತ್ತಾಂತದೊಳಗೆ ಹಲವಾರು ಪಾತ್ರಗಳನ್ನು ವೃತ್ತಾಂತವನ್ನು ತಂದಿದ್ದಾರೆ. ಆರಂಭದಲ್ಲಿ ವೆಂಕು-ಪಲ್ಲುವಿನ ಪ್ರೇಮ ಪಲ್ಲವಿಸಲು ಮಧ್ಯವರ್ತಿಯಾಗಿ ಬರುವವನು ಭೈರ. ಭೈರ ಊರಿನಲ್ಲಿ ಇಂತಹ ಸಂಬಂಧಗಳ ಸೂತ್ರಧಾರ. “ಊರಿನಲ್ಲಿ ಎಲ್ಲಾ ಪ್ರೇಮ, ಕಾಮದ ವಿದ್ಯುತ್ ತಂತಿಗಳು ಇವನ ಮೂಲಕವೇ ಹಾದು ಹೋಗುತ್ತಿದ್ದವು. ಭೈರಸಲಿಂಗಕಾಮಿ ಬೇರೆ, ಅದೇ ಊರಿನ ಮಾಜಿ ಗ್ರಾಮಪಂಚಾಯಿತಿ ಸದಸ್ಯನ ಮಗ ಸೀನನ ಜೊತೆ ಭೈರನ ಸಂಬಂಧ. ಊರಿನ ಪೋಲಿ ಹುಡುಗರು ಭೈರನನ್ನು ಚುಡಾಯಿಸುತ್ತಿದ್ದ ರೀತಿ ಇದು; ಸೀನನಿಗೆ ಹೆಂಗಿದ್ರು ಹೆಂಡ್ತಿ ಇಲ್ಲ; ಅವು ಏನಾದ್ರು ಸತ್ತೆ ಈ ಭೈರವನಿಗೆ ಸೀರೆ ಉಡ್ಡಿ, ಬಳೆತೊಡ್ಲಿ, ಸಮಾಧಿ ಮುಂದೆ ಬಳೆ ಹೊಡಿಸ್ಟೇಕು?. ಇದೇ ಭೈರಪಲ್ಲು-ವೆಂಕು ಓಡಿ ಹೋಗಲು ಒದಗಿಬರುತ್ತಾನೆ.

ಪಲ್ಲುವಿನ ತಂದೆ ತಾಯಿ ನಿಂಗಯ್ಯ ಮತ್ತು ಸಾಕಮ್ಮ, ಹಾಗೆಯೇ ವೆಂಕುನ ತಂದೆ ತಾಯಿ ನಂಜಯ್ಯ ಮತ್ತು ರೇವಮ್ಮ ಗಾಂಭೀರ್ಯದಿಂದ ಬದುಕುವಂತ ದಂಪತಿಗಳು, ಹೊಸ ತಲೆಮಾರಿನವರು ಹದ್ದು ಮೀರಿ ನಡೆದು ಅವರ ಬದುಕು ಎಲ್ಲಾದರೂ ಆಯ ತಪ್ಪಬಹುದು ಎಂಬ ದಿಗಿಲಿನಿಂದ ಬುದ್ಧಿ ಹೇಳುತ್ತಾರೆ; ಅವರ ದಿಗಿಲು ನಿಜವಾದಾಗ ದುಃಖ ಪಡುತ್ತಾರೆ. ವೆಂಕು-ಪಲ್ಲು ಮನೆ ಬಿಟ್ಟು ಹೋಗಿ ವಾಪಸ್ಸು ಬಂದ ಮೇಲೆ ಸರಳವಾಗಿ ಅವರೇ ವಿವಾಹವೇರ್ಪಡಿಸಿ ಘನತೆ ಮೆರೆದರು.

ಈಗಾಗಲೇ ಸೂಚಿಸಿದಂತೆ ಈ ಕಾದಂಬರಿಯಲ್ಲಿ ಬರುವ ಹಲವು ಪೋಷಕ ಪಾತ್ರಗಳಂತೆ ಗಂಗಮ್ಮನ ಪಾತ್ರವೂ ಬರುತ್ತದೆ. ಆಕೆ ಹೂ ಮಾರುವವಳು. ಅವಳ ಮಗ ನಾಗ ಕುಡುಕನಾಗಿದ್ದಾನೆ. ಆಕೆ ದುಡಿದದ್ದೆಲ್ಲ ಮಗನ ಕುಡಿತಕ್ಕೆ ಆಗುತ್ತಿತ್ತು. ಕುಡಿತದ ಚಟದಿಂದ ಆತನನ್ನು ಪಾರು ಮಾಡಲು ಶಿಬಿರಕ್ಕೆ ಸೇರಿಸುವ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅಂತೆಯೇ ಶಿಬಿರದಿಂದ ವಾಪಸ್ಸು ಬರುವಾಗ ಅಪಘಾತಕ್ಕೆ ಈಡಾಗಿ ಆತ ಪ್ರಾಣ ಕಳೆದುಕೊಳ್ಳುತ್ತಾನೆ. ಅಪಘಾತದಲ್ಲಿ ನಾಗ ಮಡಿದಿದ್ದ ಕಾರಣ ಗಂಗಮ್ಮನಿಗೆ ಸರ್ಕಾರದವರು ಪರಿಹಾರವನ್ನೇನೋ ನೀಡಿದರು; ಆದರೆ ಆತನನ್ನು ಸರಿದಾರಿಗೆ ತಂದು ನಾಲ್ಕು ಜನರ ಸಮಕ್ಕೆ ಆತನನ್ನು ಮನುಷ್ಯನನ್ನಾಗಿ ಮಾಡಬೇಕೆಂಬ ಆ ತಾಯಿಯ ಕನಸು ನನಸಾಗಲಿಲ್ಲ.

ಪುಟ್ಟಮ್ಮನ ಪ್ರಸಂಗವೂ ಕಾದಂಬರಿಯಲ್ಲಿ ಹದವಾಗಿ ಬೆಸೆದುಕೊಂಡಿದೆ. ಗಾಡಿಯಿಂದ ಬಿದ್ದು ವೆಂಕು ನೋವು ಮಾಡಿಕೊಂಡಾಗ ಆ ನೋವನ್ನು ವಾಸಿ ಮಾಡುವ ಸಲುವಾಗಿ ಪಲ್ಲು ಆತನನ್ನು ಪುಟ್ಟಮ್ಮನ ಹತ್ತಿರ ಕರೆದುಕೊಂಡು ಹೋಗುತ್ತಾಳೆ ಪುಟ್ಟಮ್ಮ ಉಳುಕು ತೆಗೆಯುವುದರಲ್ಲಿ ನಿಪುಣೆ, ಆಕೆಯ ಗಂಡ ತೋಪಯ್ಯ ಶೋಕಿ ಮನುಷ್ಯ, ತನ್ನ ವೃದ್ಧಾಪ್ಯ ವೇತನವನ್ನು ಹೆಂಡತಿಗೆ ಕೊಡದೆ ಹೆಂಡ ಕುಡಿದು, ಮೀನು ತಿಂದು ಮಜಾ ಮಾಡುವ ಪ್ರವೃತ್ತಿಯ ಮನುಷ್ಯ ಆತ. ಪುಟ್ಟಮ್ಮನಿಗೆ ಎರಡು ಗಂಡು, ಒಂದು ಹೆಣ್ಣು, ಬೆಟ್ಟಯ್ಯ ದೊಡ್ಡಮಗ, ಗೋಪಾಲ ಎರಡನೆಯವನು. ಬೆಟ್ಟಯ್ಯ ಕುಡಿಯುವವನಲ್ಲವಾದರು ಜಂಬಕೊಚ್ಚಿಕೊಳ್ಳುವುದರಲ್ಲಿ ಮತ್ತು ಕೋಪಮಾಡಿಕೊಳ್ಳುವುದರಲ್ಲಿ ನಿಸ್ಸಿಮ್. ಗೋಪಾಲ ಊರಿನಲ್ಲಿ ಇರುವುದೇ ಅಪರೂಪ. ಮಗಳು ನೀಲ, ಅವಳ ಎರಡು ಮಕ್ಕಳನ್ನು ಪುಟ್ಟಮ್ಮ ಬಾಣಂತನ ಮಾಡಿ ಸಾಕಿದ್ದಳು. ಪುಟ್ಟಮ್ಮ ಉಳುಕು ತೀಡುವುದನ್ನು ತನ್ನ ಅಜ್ಜಿಯಿಂದ ಕಲಿತಿದ್ದಳು.

ಸಂಕ್ರಾಂತಿ ಸಮಯ ಅಂದರೆ ಶಬರಿ ಮಲೆ ಅಯ್ಯಪ್ಪನ ಪರ್ವ ಎಂದೇ ಅರ್ಥ. ಹಾಗಾಗಿ ಈ ಊರಿನಲ್ಲಿ ಆ ಸಡಗರವನ್ನು ಕಾಣುತ್ತೇವೆ. ಒಂದರ್ಥದಲ್ಲಿ ಕಾದಂಬರಿಯ ನಿರೂಪಕ ವೈಚಾರಿಕತೆಯ ಮೂಲಕ ಎಲ್ಲವನ್ನೂ ಅಂದಾಜು ಮಾಡುತ್ತಿರುವುದರಿಂದ ಅಯ್ಯಪ್ಪ ಸ್ವಾಮಿಯ ಶ್ರದ್ದೆಯು ಅದೇ ರೀತಿ ಅಂದಾಜಿಗೆ ಒಳಗಾಗಿದೆ. ವೆಂಕುವಿನ ಅಪ್ಪ ನಂಜಯ್ಯನೇ ವೆಂಕು ಮಾಲೆ ಹಾಕಿಸಿಕೊಳ್ಳಲಿ ಇಚ್ಛೆಯನ್ನು ಪ್ರಕಟಿಸಿದಾಗ ವೆಂಕು ಅದನ್ನು ನಯವಾಗಿ ತಳ್ಳಿ ಹಾಕುತ್ತಾನೆ. ಪಲ್ಲುವಿನ ತಂದೆ ತಾಯಿಯು ವೆಂಕು ಹೋಗಿ ಬರಲೆಂದು ತಮ್ಮ ಇಚ್ಛೆ ಪ್ರಕಟಿಸುತ್ತಾರೆ.

ಈ ಸಂಕ್ರಾಂತಿ ಸಮಯದಲ್ಲಿ ಶಬರಿಮಲೆ ಸಡಗರದಲ್ಲೇ ನಮಗೆ ಮಲ್ಲಮ್ಮ ಎಂಬ ಪಾತ್ರ ಪರಿಚಯವಾಗುತ್ತದೆ. ಆಕೆ ಧೈರ್ಯದಲ್ಲಿ ಯಾವ ಗಂಡಸಿಗೂ ಕಡಿಮೆ ಇಲ್ಲ ಎಂದೇ ಖ್ಯಾತಳಾಗಿದ್ದಳು. ತೇರಿನ ವಿಷಯದಲ್ಲಿ ಪಕ್ಕದ ಊರಿನವರಿಗೂ ಜಗಳವಾದಾಗ ಕಚ್ಚೆ ಕಟ್ಟಿ ಧೈರ್ಯವಾಗಿ ನಿಂತಳು ಈ ಮಲ್ಲಮ್ಮ, ಗಂಡ ಕುಡಿದು ಕುಡಿದು ಸೇದಿ ಹೋಗಿದ್ದರಿಂದ ಅವನಿಂದ ಇವಳಿಗೆ ದೈಹಿಕವಾಗಿ ಯಾವುದೇ ಸುಖ ಸಿಕ್ಕುತ್ತಿರಲಿಲ್ಲ; ಹಾಗಾಗಿ ಗಂಡನ ತಮ್ಮ ನಾಗ ತನ್ನ ಮೈದುನನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಷಯ ಊರಿನಲೆಲ್ಲ ಹರಡುತ್ತದೆ. ಒಂದು ಊರು ಅಂದ ಮೇಲೆ ಅದೊಂದು ಸಣ್ಣ ಪ್ರಪಂಚ ಹಾಗಾಗಿ ಅಲ್ಲಿ ಏನೇ ನಡೆದರೂ ಊರಿಗೆಲ್ಲ ಸುದ್ದಿ ಮುಟ್ಟುತ್ತದೆ. ಅದರಲ್ಲೂ ಹೆಣ್ಣು ಗಂಡಿನ ಸಂಬಂಧವಂತು ಹತ್ತೂ ದಿಕ್ಕಿಗೆ ಹಬ್ಬಿಬಿಡುತ್ತದೆ.

ಮಲ್ಲಮ್ಮ ನಿಜವಾಗಿಯೂ ಗಟ್ಟಿಗಿತ್ತಿ. ಹೆಂಗಸರೂ ಮಾಲೆ ಹಾಕಿಸಿಕೊಳ್ಳಬಹುದು ಎಂದು ಕೋರ್ಟಿನ ಮೂಲಕ ತೀರ್ಮಾನವಾಗಿರುವ ಸಂಗತಿಯನ್ನು ತಿಳಿದು ಅವಳೂ ಮಾಲೆ ಹಾಕಿಸಿಕೊಳ್ಳುತ್ತಾಳೆ. ವೆಂಕು ಹಾಕಿಸಿಕೊಳ್ಳಲಾರೆ ನೀನು ಬೇಕಾದರೆ ಹಾಕಿಸಿಕೋ ಎಂದು ಹೇಳಿದ ಮೇಲೆ ಆತನ ತಂದೆ ನಂಜಯ್ಯನೇ ಮಾಲೆ ಹಾಕಿಸಿಕೊಳ್ತಾನೆ. ಪಲ್ಲುನೂ ಮಾಲೆ ಹಾಕಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಆದರೆ ವೆಂಕು ಅದು ಸಾಧ್ಯವಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಡುತ್ತಾನೆ. ಮಲ್ಲಮ್ಮ ಮತ್ತು ಆಕೆಯ ಮೈದುನ (ಅವನೂ ಮಾಲೆ ಹಾಕಿಸಿಕೊಂಡಿದ್ದ) ಇಬ್ಬರೂ ದೇವಸ್ಥಾನದಲ್ಲಿ ಕೂಡುತ್ತಾರೆ. ಆ ಸಮಯಕ್ಕೆ ಅಲ್ಲಿಗೆ ಬಂದ ಪೂಜಾರಿ ಇದರ ಬಗ್ಗೆ ಪುಕಾರು ಎಬ್ಬಿಸುತ್ತಾನೆ. ಮುಂದೆ ನ್ಯಾಯ ಪಂಚಾಯಿತಿ ಆಗಿ ಅವಳ ಮೈದುನನಿಗೆ ದಂಡ ಹಾಕುತ್ತಾರೆ. ಸಾರಾಯಿ ಪೊಟ್ಟಣ ತಂದ ಹೆಂಡತಿ ಮಲ್ಲಮ್ಮನನ್ನು ವಿಚಾರಿಸುವ ಪ್ರಮೇಯ ಆಕೆಯ ಗಂಡನಿಗೆ ಒದಗುವುದೇ ಇಲ್ಲ.

ಅಯ್ಯಪ್ಪ ಸ್ವಾಮಿಗೆ ನಡೆದುಕೊಳ್ಳುವವರ ವಿಚಾರದಲ್ಲಿ ವೆಂಕುನ ಅಭಿಪ್ರಾಯ ಸ್ಪಷ್ಟವಾಗಿಯೇ ಇದೆ 'ಮೈ ಬಗ್ಗಿಸಿ ದುಡಿಯದೆ ಹಳ್ಳಿಕಟ್ಟೆ ಮೇಲೆ ಕೂತು ಕೆಲಸವಿಲ್ಲದ ಮಾತಾಡಿ ಬೇರೆಯವರ ಮನೆಹಾಳು ಮಾಡುವವರು, ಯಾವ ದೇವರಿಗೆ ಹೋಗಿ ಏನ್ ಪ್ರಯೋಜನ' ಎಂದುಕೊಂಡಿದ್ದರಿಂದ ವೆಂಕು ಪಾದ ಪೂಜೆ ಮಾಡಲಿಲ್ಲ.

ಕೊರೋನ ಮಹಾಮಾರಿಯ ಹಿನ್ನೆಲೆಯಲ್ಲಿ ಸಿಂಪಿಗ ಶಂಕರನಿಗೆ ಕೆಲಸ ಕಮ್ಮಿಯಾಗಿ ಆತನ ಸ್ನೇಹಿತರು ಶುಂಠಿ ಕೆಲಸಕ್ಕೆ ಆತನನ್ನು ಮನವೊಲಿಸಿ ಕರೆದುಕೊಂಡು ಹೋಗುತ್ತಾರೆ. ಆದರೆ ಅವನಿಗೆ ಆ ಕೆಲಸ ಒಗ್ಗುವುದಿಲ್ಲ; ಬಹಳ ಶ್ರಮದ ಕೆಲಸ; ಹಾಗಾಗಿ ವಾಪಸ್ಸು ಬಂದು ಬಿಡುತ್ತಾನೆ. ಆ ಮೇಲೆಯೇ ಅವನು ಹೊಲಿಗೆ ತರಬೇತಿ ಕೇಂದ್ರವನ್ನು ತೆರೆಯುವುದು. ಹೊಲಿಗೆ ತರಬೇತಿಗೆ ಪಲ್ಲುವನ್ನು ಕಳುಹಿಸುವ ವಿಷಯವನ್ನು ತನ್ನ ತಂದೆ ನಂಜಯ್ಯನಿಗೆ ತಿಳಿಸಲು ವೆಂಕು ಹೋದಾಗ ನಂಜಯ್ಯ ಮಗನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ. ಅವನಾಡುವ ಮಾತುಗಳು ಹಳೆಯ ಕಾಲದ ಒಬ್ಬ ವ್ಯಕ್ತಿ ಆಡುವ ಮಾತಿನಂತೆಯೂ ಅದು ಈ ಕಾಲಕ್ಕೆ ಸಲ್ಲದ ನುಡಿ ಹಾಗೂ ನಡವಳಿಕೆಯಂತೆಯೂ ಕೇಳಿಸುತ್ತದೆ. ಆದರೆ ಮುಂದೆ ಶುಶೂಷಕಿಯ ತರಬೇತಿಗೆ ಪಲ್ಲು ಹೋದಾಗ ನಂಜಯ್ಯನ ದಿಗಿಲು ದಿಟವಾದಂತೆ ಭಾಸವಾಗುತ್ತದೆ. ಎರಡು ಮಕ್ಕಳ ತಾಯಿಯಾದ ಸಹಪಾಠಿ ಪಲ್ಲುವನ್ನು ಸಂಪತ್ ಬಾಳ ಸಂಗಾತಿಯಾಗಿ ಕರೆದೊಯ್ದು ಬಿಡುತ್ತಾನೆ.

ಗುಡ್ಡಪ್ಪ ಮತ್ತು ಅನ್ನೋರು ಸಮಾಜದಲ್ಲಿ ಜನರನ್ನು ನಂಬಿಸಿ ಮೋಸ ಮಾಡುವವರು. ಜನರು ಕೊಡುವ ಗೌರವವನ್ನೇ ಬಂಡವಾಳ ಮಾಡಿಕೊಂಡು ಜನರ ಮಾರ್ಗದರ್ಶಕರಾಗುವ ಬದಲು ಅವರನ್ನು ದಿಕ್ಕು ತಪ್ಪಿಸುವ ಕಾರ್ಯದಲ್ಲಿ ತೊಡುಗುತ್ತಾರೆ. ಇಂಥವರ ಬಗ್ಗೆ ಜಾಗರೂಕರಾಗಿರಿ ಎಂಬ ಎಚ್ಚರಿಕೆಯನ್ನು ಕಾದಂಬರಿಕಾರರು ನೀಡುತ್ತಾರೆ. ಹೊಲಿಗೆ ತರಬೇತಿಗೆ ಸೇರಿಕೊಳ್ಳಲು ಗೌರಕ್ಕ ಪ್ರೇರೇಪಿಸಿದರೆ ಅಕಸ್ಮಾತಾಗಿ ಆ ತರಬೇತಿ ಕೇಂದ್ರದ ಬಳಿ ಸಿಕ್ಕುವ ಪಲ್ಲುವಿನ ಮೇಷ್ಟ್ರು ಆಕೆಯನ್ನು ಶುಶೂಷಕರ ತರಬೇತಿಗೆ ಸೇರಿಕೊಳ್ಳಲು ಪ್ರೇರೇಪಿಸುತ್ತಾರೆ. ಓದುವಾಗ ಆಕೆಗೆ ಇದ್ದ ಪ್ರತಿಭೆಗೂ ಅವಳು ಪಡೆಯುತ್ತಿದ್ದ ಹೊಲಿಗೆ ತರಬೇತಿಗೂ ಆರ್ಥಾತ್ಸಂಬಂಧವಿಲ್ಲವೆಂದು ಆ ಗುರುಗಳು ವಿಷಾದ ಪಟ್ಟರು. ಆದರೆ ಶುಶೂಷಕರ ತರಬೇತಿಯಲ್ಲಿ ತನ್ನ ಹಾದಿಯನ್ನು ಬದಲಾಯಿಸಿಕೊಂಡು ತನ್ನ ಸಂಸಾರ ಜೀವನಕ್ಕೆ ವಿಮುಖಳಾಗುತ್ತಾಳೆ ಎಂದು ಗುರುಗಳು ಎಣಿಸಿರಲಿಲ್ಲ. ಅವರು ಪಲ್ಲುವಿನ ವಿಷಯದಲ್ಲಿ ಬಯಸಿದ್ದೆ ಒಂದು ಆದದ್ದೇ ಒಂದು.

ವೆಂಕುಮಾತಿನಲ್ಲಿ ಒರಟ ನಿಜ; ಆದರೆ ತಂದೆ-ತಾಯಿಯರನ್ನು ಸಾಕುವುದರಲ್ಲಿ, ಮಕ್ಕಳಪಾಲನೆ ಪೋಷಣೆಯಲ್ಲಿ, ಪಲ್ಲುವನ್ನು ರಮಿಸುವುದರಲ್ಲಿ ಆತ ಹಿಂದೆ ಬಿದ್ದಿರಲಿಲ್ಲ. ತನ್ನ ದಾಂಪತ್ಯವನ್ನು ನಿರಂತರವಾಗಿ ಪೋಷಿಸುತ್ತಲೇ ಸಾಗಿದ್ದವನು.

ಆದರೆ ಸಂಪತ್ ಕ್ಷಿತಿಜದ ಮೇಲೆ ಕಾಣಿಸಿಕೊಂಡ ತರುಣದಲ್ಲಿ ಆ ದಾಂಪತ್ಯ ವೃಕ್ಷ ಚಂಡಮಾರುತಕ್ಕೆ ಸಿಕ್ಕಂತೆ ಒಮ್ಮೆಲೇ ಧರೆಗುರುಳಿ ಬೀಳುತ್ತದೆ. ಅದನ್ನು ಗಮನಿಸುವಾಗ ಅದು ಆಳವಾಗಿ ಬೇರೂರಿರಲಿಲ್ಲವೆಂದು ಭಾಸವಾಗುತ್ತದೆ. ವೆಂಕು ಮೂಢನಂಬಿಕೆಗಳ ವಿರೋಧಿ ವಿಚಾರವಾದಿ; ಪಲ್ಲು ಹಳೆಸಂಪ್ರದಾಯಕ್ಕೆ ಕಟ್ಟುಬಿದ್ದಳು. ವೆಂಕುವಿನ ಮನಸ್ಸನ್ನರಿಯಲು ಕೊಂಚವೂ ಪ್ರಯತ್ನಿಸದವಳು. ಹಾಗಾಗಿ ಸಂಪತ್ ಕಾಣಿಸಿಕೊಂಡಾಗಲೇ ಆಕೆಗೆ ಸುಖ ನೀಡುವ ಪರ್ಯಾಯ ಪ್ರಪಂಚವೊಂದು ಸಿಕ್ಕಂತಾಗುತ್ತದೆ. ಹಡೆದ ಹಸುಳೆಗಳನ್ನು ಕಡೆಗಣಿಸಿ ಏಕಾಏಕಿ ನಡೆದು ಬಿಡು ಆಕೆಯನ್ನು ನೋಡಿದರೆ ಭವಿಷ್ಯ ಎಂಬುದು ಯಾವುದೇ ಅರೆಕೊರೆಗಳಿಲ್ಲದ ಒಂದು ಆದರ್ಶಲೋಕ ಎಂಬಂತೆ ಅವಳು ಕಲ್ಪಿಸಿಕೊಂಡಳೇನೋ ಎನ್ನಿಸುತ್ತದೆ. ವರ್ತಮಾನದ ಅವಳ ದಾಂಪತ್ಯ ಮತ್ತು ಸಂತಾನ ಇದನೆಲ್ಲ ಗಮನಿಸಿದ ನಮಗೆ ಅವಳ ಗತಿ ಮುಂದೇನು ಎಂದು ಮರುಗುವಂತಾಗುತ್ತದೆ.

ಇಂಥ ಸಂಗತಿಗಳು ನಿತ್ಯವೂ ನಮ್ಮ ಸುತ್ತ ಮುತ್ತ ಜರುಗುತ್ತಿರುತ್ತವೆ. ಇದನ್ನು ನೋಡಿಯೇ ಮಸ್ವಾಮಿ ಕಪ್ಪಸೋಗೆ ಅವರು “ಸೇರುವ ದಾರಿ' ಎಂಬ ಅರ್ಥಪೂರ್ಣವಾದ ಕಾದಂಬರಿಯನ್ನು ಬರೆದಿದ್ದಾರೆ. ಎಲ್ಲೆಲ್ಲಿಯೂ ನಡೆಯಬಹುದಾದ ಕತೆ ಇದಾದ್ದರಿಂದ ಸ್ಥಳನಾಮಗಳ ಬಗ್ಗೆ ಹೆಚ್ಚು ಮಹತ್ವ ನೀಡಿಲ್ಲ? ಒಂದಾನೊಂದು ಊರಿನಲ್ಲಿ,,,,,,,,? ಎಂದು ನಾವು ಹೇಳಬಹುದಾದಂಥ ಕತೆಯಿದು. ಗ್ರಾಮಜೀವನದಲ್ಲಿ ಕಂಡುಬರುವ ಕರ್ಮವನ್ನು ಪಡಿಮೂಡಿಸುವಲ್ಲಿ ಮಸ್ವಾಮಿ ಕಪ್ಪಸೋಗೆ ಅವರು ಸಫಲರಾಗಿದ್ದಾರೆ. ಗಾಂಧೀಜಿ ಗ್ರಾಮಭಾರತವನ್ನು ಬೇರೆಯಾಗಿಯೇ ಕಲ್ಪಿಸಿಕೊಂಡಿದ್ದರು. ಗ್ರಾಮವೊಂದು ಸರ್ವಸ್ವಾಸ್ಥ್ಯಾದ ಒಂದು ನೆಲೆಯಾಗಬೇಕು; ಅದು ಎಚ್ಚೆತ್ತ ಜೀವಿಗಳ ಆಡಂಬೊಲವಾಗಬೇಕು; ರೋಗರುಜಿನಗಳಿಂದ, ಆಂತಃಶೈತನ್ಯವನ್ನು ಕುಗ್ಗಿಸುವ ಚಟಗಳಿಂದ ಮುಕ್ತವಾದ ಆಶ್ರಮ ಸದೃಶ ಪ್ರದೇಶವಾಗಬೇಕೆಂದು ಕನಸು ಕಂಡಿದ್ದರು. ಆ ಕನಸು ಕನಸಾಗಿಯೇ ಉಳಿದಿದೆ. ಗ್ರಾಮಭಾರತ ಕುರುಡು ಗಲ್ಲಿಯಲ್ಲಿ ಎಡವುತ್ತ, ಮುಗ್ಗರಿಸುತ್ತ ಸಾಗಿರುವ ಸತ್ಯವನ್ನು ಮಸ್ವಾಮಿ ಕಪ್ಪಸೋಗೆ ಅವರು ಬಿಚ್ಚಿಟ್ಟಿದ್ದಾರೆ. ಸಾಂಸ್ಕೃತಿಕ ಸಮೃದ್ಧಿಯನ್ನು ಶ್ರೀಮಂತಗೊಳಿಸಬೇಕಾದ ತೇರುಗಳನ್ನು ಇದು ಹೆಣ್ಣು ಇದು ಗಂಡು ತೇರು ಎಂದು ವಿಭಜಿಸಿ ಜಗಳದಲ್ಲಿ ತೊಡಗುವ ಮನುಷ್ಯರ ಬುದ್ಧಿಯನ್ನು ಹೇಗೆ ಅರ್ಥಮಾಡಿಕೊಳ್ಳಬೇಕೋ ತಿಳಿಯದು.

ಅನಂತಮೂರ್ತಿಯವರು ಪ್ರಾಣೇಶಾಚಾರ್ಯರನ್ನು ಚಂದ್ರಿಯನ್ನು ದೇವಸ್ಥಾನದಲ್ಲಿ ಕೂಡಿಸಿ ಬಿಡುತ್ತಾರೆ. 'ಸಂಸ್ಕಾರ' ಕಾದಂಬರಿಯಲ್ಲಿ ಪ್ರಸ್ತುತ ಕಾದಂಬರಿಯಲ್ಲಿ ಮಸ್ವಾಮಿ ಕಪ್ಪಸೋಗೆ ಅವರು ಮಲ್ಲಮ್ಮ ಮತ್ತು ಆಕೆಯ ಮೈದುನ ದೇವಸ್ಥಾನದಲ್ಲೇ ಕೂಡಿದರು ಎಂದು ಬಣ್ಣಿಸಿದ್ದಾರೆ. ಉಬ್ಬಸ ರೋಗದಿಂದ ಬಳಲುತ್ತಿದ್ದ ಒಬ್ಬ ಮುದುಕ ಸತ್ತಾಗ ಆತನ ಶವಸಂಸ್ಕಾರದಲ್ಲಿ ಅಯ್ಯಪ್ಪನ ಭಕ್ತರಾದ ಗ್ರಾಮದ ಜನ ತೊಡಗಿರುವಾಗ ಇವರೀರ್ವರೂ ದೇವಸ್ಥಾನದಲ್ಲಿ ಸಂಭೋಗದಲ್ಲಿ ತೊಡಗಿದ್ದರು ಎಂದು ತಿಳಿಯುತ್ತದೆ. ಒಟ್ಟಿನಲ್ಲಿ ಗ್ರಾಮಜೀವನ ಹಳಿ ತಪ್ಪಿರುವುದು ಇಲ್ಲಿ ಸ್ಪಷ್ಟವಾಗಿ ತೋರುತ್ತದೆ. ಭಾರತ ದೇಶದಲ್ಲಿ ಐದು ಲಕ್ಷ ಹಳ್ಳಿಗಳಿವೆ. ಈ ಹಳ್ಳಿಗಳನ್ನು ಯಾರು ಉದ್ಧಾರ ಮಾಡುತ್ತಾರೊ ಕಾಯ್ದು ನೋಡಬೇಕು. ಅಂಚಿನಲ್ಲಿರುವವರ, ದನಿಯಿಲ್ಲದವರ, ಗ್ರಾಮೀಣ ಜನರ ಉದ್ಧಾರಕ್ಕೆ ಬಾಬಾ ಸಾಹೇಬ್ ಅಂಬೇಡ್ಕರರು ತಮ್ಮ ಉಸಿರಿರುವವರೆಗೂ ಹೋರಾಡಿದರು. ಆ ಸ್ಮರಣೆಯಾದರೂ ಮಂದಿಯನ್ನು ಋಜುವಾಗಿ ಬದುಕುವಂತೆ ಪ್ರೇರೇಪಿಸಬೇಕಾಗಿದೆ. ಆ ಧ್ವನಿ ಈ ಕಾದಂಬರಿಯಲ್ಲಿದೆ. ಅದಕ್ಕಾಗಿ ಮ ಸ್ವಾಮಿ ಕಪ್ಪಸೋಗೆ ಅವರಿಗೆ ಎಲ್ಲಾ ಶುಭಗಳನ್ನು ಕೋರುತ್ತೇವೆ.

MORE FEATURES

ಬೂಕರ್‌ ಅಂಗಳದಲ್ಲಿ ಭಾರತ; ಗೀತಾಂಜಲಿಶ್ರೀ ದಾರಿಯಲ್ಲಿ ಬಾನು ಮುಷ್ತಾಕ್

20-05-2025 ಬೆಂಗಳೂರು

ಅರುಂಧತಿ ರಾಯ್, 1997ರ ಬೂಕರ್‍ ಪ್ರಶಸ್ತಿ ಸಮಾರಂಭದಲ್ಲಿ. 2006 ರಲ್ಲಿ ಪ್ರಶಸ್ತಿ ಪಡೆದ ಕಿರಣ್ ದೇಸಾಯ್. ...

ಲಂಡನ್- ಇಂದು ಬೂಕರ್‌ ಪ್ರಶಸ್ತಿ ಘೋಷಣೆ ; ಪ್ರಶಸ್ತಿ ಕಿರು ಪಟ್ಟಿಯಲ್ಲಿ ಕನ್ನಡದ `ಹೃದಯ ದೀಪ' ಬಾನು ಮುಷ್ತಾಕ್

20-05-2025 ಲಂಡನ್‌

ಲಂಡನ್: ದಕ್ಷಿಣ ಭಾರತ ಭಾಷಾ ಸಾಹಿತ್ಯ ಲೋಕದ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕನ್ನಡದ ಲೇಖಕಿಯೊಬ್ಬರು ಈ ಪ್ರತಿಷ್ಠಿತ...

ನಿತ್ಯ ಬದುಕಿನ ವ್ಯವಹಾರದೊಂದಿಗಿನ ಕೌಟುಂಬಿಕ ಚಿತ್ರಣವನ್ನು ಇಲ್ಲಿ ಕಾಣಬಹುದು

18-05-2025 ಬೆಂಗಳೂರು

"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...