"ಸಾಹಿತ್ಯ ಲೋಕದ ಯಾವ ಗುಂಪುಗಾರಿಕೆಗೂ ಸೇರದ ಜಿ.ಎಸ್.ಸಿದ್ದಲಿಂಗಯ್ಯ ಒಬ್ಬಂಟಿಯಾಗಿಯೇ ಸಾಗಿದರು. ಅವರಿಗಿಂತ ಕಿರಿಯರಿಗೆ ಸಮ್ಮೇಳನಾಧ್ಯಕ್ಷತೆ, ಪಂಪ ಪ್ರಶಸ್ತಿ, ನೃಪತುಂಗ, ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಎಲ್ಲವೂ ಬಂದವು. ಇವರಿಗೆ ಯಾವುದೂ ಬರಲಿಲ್ಲ ಎನ್ನುವುದು ನಮ್ಮ ಕಾಲದ ವ್ಯಂಗ್ಯ ಕೂಡ ಹೌದು!!," ಎನ್ನುತ್ತಾರೆ ಎನ್.ಎಸ್.ಶ್ರೀಧರ ಮೂರ್ತಿ. ಅವರು ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ ಅವರಿಗೆ ಸಲ್ಲಿಸಿದ ನುಡಿ ನಮನ.
ಇಂದು ನಮ್ಮನ್ನು ಅಗಲಿದ ಪ್ರೊ.ಜಿ.ಎಸ್.ಸಿದ್ದಲಿಂಗಯ್ಯ. ಕನ್ನಡದ ಅಪರೂಪದ ಚಿಂತಕರು. ಹಳೆಗನ್ನಡ, ನಡುಗನ್ನಡ, ಹೊಸಗನ್ನಡ ಯಾವುದೇ ಇರಲಿ. ಅಪಾರವಾದ ಜ್ಞಾಪಕಶಕ್ತಿ ಅವರದು. ಪಂಪ, ಕುಮಾರ ವ್ಯಾಸ, ಲಕ್ಷ್ಮೀಶರಿಂದ ಹಿಡಿದು ಬೇಂದ್ರೆ, ಕುವೆಂಪು, ಮಾಸ್ತಿ, ಅನಂತ ಮೂರ್ತಿ, ತೇಜಸ್ವಿ, ಹೀಗೆ ಹೊಸಗನ್ನಡದ ಅಂಚಿನವರೆಗೂ ಯಾವುದೇ ವಿಷಯವನ್ನು ಕುರಿತಾದರೂ ಅದ್ಭುತಾಗಿ ಮಾತನಾಡುತ್ತಿದ್ದರು, ಇನ್ನು ವಚನ ಸಾಹಿತ್ಯಕ್ಕೆ ಸಂಬಂಧಪಟ್ಟಂತೂ ಅವರದು ಅಧಿಕೃತ ಎನ್ನಿಸ ಬಲ್ಲ ಚಿಂತನೆಗಳು.
**
ನಾನು ಸಿದ್ದಲಿಂಗಯ್ಯನವರದ್ದು ನೋಡಿದ್ದು ಬಹುಷ: 1995ರಲ್ಲಿ ಇರಬೇಕು. ‘ಸಂಚಯ’ ಪತ್ರಿಕೆಯ ಹತ್ತನೆಯ ವರ್ಷದ ಕಾರ್ಯಕ್ರಮದಲ್ಲಿ, ನಾನು ಮತ್ತು ಪ್ರಹ್ಲಾದ್ ಅವರ ಮನೆಗೆ ಕರೆಯಲು ಹೋಗಿದ್ದೆವು. ಪ್ರೀತಿಯಿಂದಲೇ ಬಂದು ಬಹಳ ಮನೋಜ್ಞವಾದ ಮಾತುಗಳನ್ನು ಆಡಿದ್ದರು. ಅವರದು ವಿನೋದಮಯ ಶೈಲಿ.. ಆದರೆ ಗಂಭೀರ ಒಳನೋಟಗಳನ್ನು ಬಿಟ್ಟು ಕೊಟ್ಟವರಲ್ಲ. ಈಗ ಎರಡು ವರ್ಷಗಳ ಹಿಂದೆ ಮಾಸ್ತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾಸ್ತಿಯವರ ಕುರಿತೇ ಸಾಕಷ್ಟು ಮಾತನಾಡಿದ್ದರು. ‘ಸರ್.. ಇದೇಕೆ?’ ಎಂದರೆ ಜನ ‘ಮಾಸ್ತಿಯವರನ್ನೂ ಮರೆತು ಬಿಟ್ಟಿದ್ದಾರೆ ನೆನಪು ಮಾಡ ಬೇಕಲ್ಲಪ್ಪ’ ಎಂದಿದ್ದರು.
**
ಸಿದ್ದಲಿಂಗಯ್ಯನವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದು ಬಿಕ್ಕಟ್ಟಿನ ಕಾಲದಲ್ಲಿ, ಇಬ್ಬಿಬ್ಬರು ಆಡಳಿತಾಧಿಕಾರಿಗಳನ್ನು ನೋಡಿ ಪರಿಷತ್ತು ಮೊದಲಿನಂತೆ ಆಗುತ್ತದೆಯೇ ಎನ್ನುವ ಅನುಮಾನಗಳು ಮೂಡಿದ್ದವು. ‘ನಾನು ಶುದ್ಧ ಹಸ್ತನೆಂದು ಹೆಸರು ಪಡೆದಿದ್ದೇನೆ, ಆ ದೇವರೇ ಬಂದರೂ ನನ್ನನ್ನು ಭ್ರಷ್ಟನನ್ನಾಗಿಸಲಾರ’ ಎಂದು ತಮ್ಮ ಅಧಿಕಾರ ಸ್ವೀಕಾರದ ಭಾಷಣದಲ್ಲಿಯೇ ಹೇಳಿ ಅದರಂತೆ ನಡೆದು ಕೊಂಡರು. ಅವರ ಅಧಿಕಾರಾವಧಿ ಎಂದರೆ ಪುಸ್ತಕಗಳ ಸುಗ್ಗಿ, ‘ಜನ ಸಾಮಾನ್ಯರ ಪುಸ್ತಕ ಮಾಲೆ’ ಶೀರ್ಷಿಕೆಯಡಿ ಹಲವು ಕೃತಿಗಳು ಬಂದವು. ಉತ್ತಮ ಪಿ.ಎಚ್.ಡಿ ಪ್ರಬಂಧಗಳು ಜನರಿಗೆ ತಲುಪಲಿ ಎಂದು ‘ಅಮೂಲ್ಯ ಪುಸ್ತಕ’ ಎಂಬ ಮಾಲಿಕೆ ಆರಂಭಿಸಿದ್ದರು. ‘ಇಲ್ಲದಿದ್ದರೆ ನನ್ನ ಪಿ.ಎಸ್.ಡಿ ಪ್ರಬಂಧ ಖಂಡಿತಾ ಪ್ರಕಟವಾಗುತ್ತಿರಲಿಲ್ಲ.’ ಎಂದು ತೀರಾ ಇತ್ತೀಚೆಗೆ ವಿವೇಕ ರೈ ನೆನಪು ಮಾಡಿ ಕೊಂಡಿದ್ದರು. ಪರಿಷತ್ತಿಗೆ ತನ್ನದೇ ಆದ ಧ್ವಜ ಇರಲಿ ಎಂದು ರೂಪಿಸಿ ಅದು ಸಮ್ಮೇಳನಗಳಲ್ಲಿ ಹಾರಾಡುವಂತೆ ಮಾಡಿದ್ದವರೂ ಅವರೇ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬಂಡಾಯ ಸಾಹಿತ್ಯ ದೂರವೇ ಉಳಿದಿತ್ತು. ಪರಿಷತ್ತು ಎಲ್ಲರನ್ನೂ ಒಳಗೊಳ್ಳ ಬೇಕು ಎಂದು ಅವರನ್ನು ಕರೆದು ಎರಡು ದಿನಗಳ ಬಂಡಾಯ ಸಾಹಿತ್ಯ ಸಮ್ಮೇಳನವನ್ನು ನಡೆಸಿದ್ದರು. ಸ್ವತ: ಕವಿಯಾಗಿದ್ದ ಅವರು ಕನ್ನಡ ಸಾಹಿತ್ಯ ಪರಿಷತ್ತಿಗೆ ಯುಗಾದಿ ಕವಿಗೋಷ್ಟಿಯನ್ನು ತಂದರು. ಪ್ರತಿವಾರವೂ ಕಾರ್ಯಕ್ರಮಗಳನ್ನು ರೂಪಿಸಿದರು. ಪರಿಷತ್ತಿಗೆ ತಮಗೆ ಸಿಕ್ಕ ಅವಧಿಯಲ್ಲಿ ಘನತೆ ಗೌರವಗಳನ್ನು ತುಂಬಿದರು.
**’
1990 ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕೆ.ಎಸ್.ನರಸಿಂಹ ಸ್ವಾಮಿ ಅಧ್ಯಕ್ಷರು. ಕೊನೆಯ ದಿನ ಸಚಿವ ಅಜಿತ್ ಸೇಠ್ ಬಂದು ದೊಡ್ಡ ಗದ್ದಲವಿದ್ದಿತು. ಕನ್ನಡ ವಿರೋಧಿಯನ್ನು ಕಳುಹಿಸಿ ಎಂಬ ಗಲಭೆ ಪ್ರಾರಂಭವಾಯಿತು. ಪರಿಷತ್ತಿನ ಅಧ್ಯಕ್ಷರಾದ ಜಿ.ಎಸ್.ಸಿದ್ದಲಿಂಗಯ್ಯ ತತ್ತರಿಸಿ ಹೋದರು. ಹಾ.ಮಾ.ನಾಯಕರು ಅದ್ಭುತ ಎನ್ನಿಸುವ ರೀತಿಯಲ್ಲಿ ಅದನ್ನು ನಿರ್ವಹಿಸಿದರು. ಇದು ಬಹಳ ದಿನ ಅವರನ್ನು ಕಾಡುತ್ತಿತ್ತು.
**
ಉತ್ತಮ ವಾಗ್ಮಿಯಾದ ಜಿ.ಎಸ್.ಸಿದ್ದಲಿಂಗಯ್ಯ ಉತ್ತಮ ಕವಿಗಳೂ ಕೂಡ ಹೌದು. ರಸಗಂಗೆ, ಋಷ್ಯಶೃಂಗ, ಐವತ್ತರ ನೆರಳು, ಬಿಂದು, ಮುಖಾಮುಖಿ, ಮಣ್ಣಿಗಿಳಿದ ಆಕಾಶ ಹೀಗೆ ಒಂಬತ್ತು ಕವನ ಸಂಕಲನಗಳನ್ನು ತಂದಿದ್ದಾರೆ. ಲಕ್ಷ್ಮೀಶ, ರತ್ನಾಕರವರ್ಣಿ, ಶೂನ್ಯ ಸಂಪಾದನೆಯಿಂದ ಹಿಡಿದು ನವ್ಯಕಾವ್ಯದವರೆಗೆ ಇಪ್ಪತ್ತೈದು ವಿಮರ್ಶಾ ಸಂಕಲನಗಳನ್ನು ತಂದಿದ್ದಾರೆ. ‘ಮಿಥಿಲೆಗಿಲ್ಲಿಂದಲೇ ಮಾರ್ಗವೇನು ಗುರು’’ಐವತ್ತರ ನೆರಳು’ ‘ಗಾಂಧಿ ಮತ್ತು ನಾನು’ ಪಠ್ಯಗಳಾದ ಕಾರಣ ಜನರ ಗಮನ ಸೆಳೆದಿವೆ. ಉಳಿದಂತೆ ಅವರ ಕಾವ್ಯದ ಬಗ್ಗೆ ಚರ್ಚೆಯೇ ನಡೆದಿಲ್ಲ. ‘ಸರ್ ನಿಮ್ಮ ಕಾವ್ಯ ಸರಳವಾಯಿತಲ್ಲ’ ಎಂದು ನಾನು ಒಂದು ಸಲ ಕೇಳಿದ್ದಕ್ಕೆ ‘ಕನಿಷ್ಟ ನನಗಾದರೂ ಅರ್ಥವಾಗ ಬೇಕಲ್ಲಪ್ಪ’ ಎಂದು ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ಉತ್ತರಿಸಿದ್ದರು. ನನ್ನ ಅಲ್ಲಮನ ತಂತ್ರ ಮಾರ್ಗದ ಕುರಿತ ಲೇಖನದ ಕುರಿತು ಅವರು ದೊಡ್ಡ ಜಗಳವನ್ನೇ ಮಾಡಿದ್ದರು. ‘ನೀನು ಮತ್ತು ನಿನ್ನ ಗುರುಗಳು (ಎಸ್.ಕೆ.ರಾಮಚಂದ್ರ ರಾಯರು) ಸರಳವಾದ ಅಲ್ಲಮನನ್ನು ಸಂಕೀರ್ಣವಾಗಿಸಿದ್ದೀರಿ’ ಎಂದು ಅಪಾದಿಸಿದ್ದರು. ಎಲ್ಲರಿಗೂ ಅರ್ಥವಾಗ ಬೇಕು ಎನ್ನುವುದು ಅವರ ನಂಬಿಕೆ ಮಾತ್ರವಲ್ಲ ಜೀವನ ಶೈಲಿಯೇ ಆಗಿತ್ತು.
**
ಕಳೆದ ವರ್ಷ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ‘ಕನ್ನಡ ಶಾಲೆಗಳ ಉಳಿಸುವ’ ಕುರಿತು ದುಂಡು ಮೇಜಿನ ಸಭೆ ನಡೆದಾಗ ನಿಮ್ಮ ಭಾಷಣ ಕಳುಹಿಸಿ ಸಾಕು ಎಂದರೂ ಒಪ್ಪದೆ ತಮ್ಮ ಅನಾರೋಗ್ಯದ ನಡುವೆಯೂ ಬಂದಿದ್ದರು. ‘ಕನ್ನಡ ಶಾಲೆಗಳು ಹೀಗೆ ಮುಚ್ಚುತ್ತಿದ್ದರೆ ನಾನು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ’ ಎಂದು ತಮ್ಮ 94ನೆಯ ವಯಸ್ಸಿನಲ್ಲಿ ಗುಡುಗಿದ್ದರು. ಅವರ ಧ್ವನಿಯಲ್ಲಿ ಭಾವಾವೇಶವಿರಲಿಲ್ಲ. ದೃಡತೆ ಇತ್ತು.
**
ಸಾಹಿತ್ಯ ಲೋಕದ ಯಾವ ಗುಂಪುಗಾರಿಕೆಗೂ ಸೇರದ ಜಿ.ಎಸ್.ಸಿದ್ದಲಿಂಗಯ್ಯ ಒಬ್ಬಂಟಿಯಾಗಿಯೇ ಸಾಗಿದರು. ಅವರಿಗಿಂತ ಕಿರಿಯರಿಗೆ ಸಮ್ಮೇಳನಾಧ್ಯಕ್ಷತೆ, ಪಂಪ ಪ್ರಶಸ್ತಿ, ನೃಪತುಂಗ, ಕೇಂದ್ರ ಸಾಹಿತ್ಯ ಅಕಾಡಮಿ ಗೌರವ ಎಲ್ಲವೂ ಬಂದವು. ಇವರಿಗೆ ಯಾವುದೂ ಬರಲಿಲ್ಲ ಎನ್ನುವುದು ನಮ್ಮ ಕಾಲದ ವ್ಯಂಗ್ಯ ಕೂಡ ಹೌದು!!
**
ಇವತ್ತು ಕೊನೆಯ ಸಲ ಜಿ.ಎಸ್.ಸಿದ್ದಲಿಂಗಯ್ಯ ಕನ್ನಡ ಸಾಹಿತ್ಯ ಪರಿಷತ್ತಿಗೆ ಬಂದಿದ್ದರು. ನಾವೆಲ್ಲರೂ ಭಾರವಾದ ಹೃದಯದಿಂದ ಅವರನ್ನು ಬೀಳ್ಕೊಟ್ಟೆವು.
ಅರುಂಧತಿ ರಾಯ್, 1997ರ ಬೂಕರ್ ಪ್ರಶಸ್ತಿ ಸಮಾರಂಭದಲ್ಲಿ. 2006 ರಲ್ಲಿ ಪ್ರಶಸ್ತಿ ಪಡೆದ ಕಿರಣ್ ದೇಸಾಯ್. ...
ಲಂಡನ್: ದಕ್ಷಿಣ ಭಾರತ ಭಾಷಾ ಸಾಹಿತ್ಯ ಲೋಕದ ಪಾಲಿಗೆ ಇಂದು ಅತ್ಯಂತ ಮಹತ್ವದ ದಿನ. ಕನ್ನಡದ ಲೇಖಕಿಯೊಬ್ಬರು ಈ ಪ್ರತಿಷ್ಠಿತ...
"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ...
©2025 Book Brahma Private Limited.