ನಿತ್ಯ ಬದುಕಿನ ವ್ಯವಹಾರದೊಂದಿಗಿನ ಕೌಟುಂಬಿಕ ಚಿತ್ರಣವನ್ನು ಇಲ್ಲಿ ಕಾಣಬಹುದು


"ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ. ಭಾರತೀಯ ಸಂಸ್ಕೃತಿಯು ಜಡ, ಚಲನಶೀಲವಲ್ಲ ನಿಂತ ನೀರು‌ ಎಂಬ Orientalist's ರ ತಪ್ಪು ಗ್ರಹಿಕೆಗಳಿಗೆ ಉತ್ತರಿಸುವಂತೆ ಈ ಸಮಾಜೊ ಸಾಂಸ್ಕೃತಿಕ ರಾಜಕೀಯ ಸಂಕಥನ ಎದುರಾಗುತ್ತದೆ. ಸೈದ್ ನ ಪೌರಸ್ತ್ಯ ಚಿಂತನೆಯ ಹುಸಿಗಳನ್ನು ಭಂಗಿಸುವಂತೆ ಈ ಮಹತ್ ಕಾದಂಬರಿ ಮುಖಾಮುಖಿಯಾಗುತ್ತದೆ," ಎನ್ನುತ್ತಾರೆ ಉದಯಕುಮಾರ್ ಹಬ್ಬು. ಅವರು ಶ್ರೀನಿವಾಸ ವೈದ್ಯ ಅವರ ‘ಹಳ್ಳ ಬಂತು ಹಳ್ಳ’ ಕೃತಿ ಕುರಿತು ಬರೆದ ವಿಮರ್ಶೆ.

ನಡೆದ ಸಿಪಾಯಿ ದಂಗೆಯ ಭಾಗವಾದ ನರಗುಂದದಲ್ಲಿ ನಾನಾಸಾಹೇಬರ ನೇತೃತ್ವದಲ್ಲಿ ನಡೆದ ನರಗುಂದದ ಬಂಡಾಯ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ ತೀವ್ರವಾಗಿ ನಡೆದ ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಒಂದು ಕಾಲಘಟ್ಟದಿಂದ ಪ್ರಾರಂಭಗೊಂಡು 42ರ ಕ್ವಿಟ್ ಇಂಡಿಯಾ ಚಳುವಳಿ, ಉಪ್ಪಿನ‌ ಸತ್ಯಾಗ್ರಹ, ಅಂತಿಮವಾಗಿ ಸ್ವಾತಂತ್ರ್ಯ ಸಿಕ್ಕು ಗಾಂಧಿಜಿಯ ಹತ್ಯದವರೆಗಿನ ಕಾಲಮಾನದ ನರಗುಂದ ಸಮೀಪದ ನವಲಗುಂದ ಎಂಬ ಪುಟ್ಟ ಹಳ್ಳಿಯ ಸಮಾಜವು, ಅಲ್ಲಿನ ಶ್ರೀಸಾಮಾನ್ಯರು ಅನುಭವಿಸಿಕೊಂಡು ಬಂದ ಬದುಕಿನ ತಲ್ಲಣಗಳನ್ನು, ನವಲಗುಂದ ಮತ್ತು ಅಂತೆಯೆ ಇಡೀ ಭಾರತದ ರಾಜಕೀಯ ಸಂಕಥನವನ್ನು‌ ಆ ಹಳ್ಳಿಯ ದೇಸಗತಿಯಾದ ಕಮಲಾಚಾರ್ಯ ಮತ್ತು ಸಾವಿತ್ರಿ ಎಂಬ ಮಾಧ್ವ ದೇಶಸ್ಥ ಬ್ರಾಹ್ಮಣ ಕುಟುಂಬದ ತಲ್ಲಣ ಮತ್ತು‌ ಪಲ್ಲಟಗಳೊಂದಿಗೆ ತಳಕು ಹಾಕಿಕೊಂಡು ಅತ್ಯಂತ ಸಂಕೀರ್ಣ ವಿಷಯವನ್ನು ಅಸಕ್ತಿ ಮೂಡಿಸುವಂತೆ ನಿರೂಪಕ ನಿರೂಪಿಸುತ್ತಾರೆ.

ಕಂಪನಿ ಸರಕಾರ ಈ ನರಗುಂದ ದಂಗೆಯನ್ನು ಎಷ್ಟು ನಿರ್ದಯವಾಗಿ ಹೊಸಕಿ ಹಾಕಿತು ಎನ್ನುವುದರ ಬರ್ಬರ ಹಿಂಸೆಯ ಚಿತ್ರಣವಿದೆ. ಭಾರತೀಯ ಸಂಸ್ಕೃತಿಯು ಜಡ, ಚಲನಶೀಲವಲ್ಲ ನಿಂತ ನೀರು‌ ಎಂಬ Orientalist's ರ ತಪ್ಪು ಗ್ರಹಿಕೆಗಳಿಗೆ ಉತ್ತರಿಸುವಂತೆ ಈ ಸಮಾಜೊ ಸಾಂಸ್ಕೃತಿಕ ರಾಜಕೀಯ ಸಂಕಥನ ಎದುರಾಗುತ್ತದೆ. ಸೈದ್ ನ ಪೌರಸ್ತ್ಯ ಚಿಂತನೆಯ ಹುಸಿಗಳನ್ನು ಭಂಗಿಸುವಂತೆ ಈ ಮಹತ್ ಕಾದಂಬರಿ ಮುಖಾಮುಖಿಯಾಗುತ್ತದೆ.

ನರಗುಂದದ ಬಂಡಾಯದ ನಾಯಕನಾದ ನಾನಾಸಾಹೇಬನಿಗೆ ಉತ್ತರ ಭಾರತದಿಂದ ಇಬ್ಬರು ಬ್ರಾಹ್ಮಣ ದೂತರು ರಹಸ್ಯ ರಾಯಸವನ್ನು ತಂದು ಒಪ್ಪಿಸಲೆಂದು ಹೊರಟಾಗ ನವಲಗುಂದದ ದೇಸಗತಿಯ ರಕ್ಷಕ ಸಿಬ್ಬಂದಿಗೆ ಸಿಕ್ಕಿಬಿದ್ದು ಬಂಧನಕ್ಕೊಳಗಾಗುತ್ತಾರೆ. ಆ ಇಬ್ಬರಲ್ಲಿ ಒಬ್ಬ ಕಾವಲು ಸಿಬ್ಬಂದಿಯ‌ ಕಣ್ಣು ತಪ್ಪಿಸಿ ಪರಾರಿಯಾಗುತ್ತಾನೆ. ಅವನು ನರಗುಂದಕ್ಕೆ ಹೋದರೂ ಕಂಪನಿಯು ಅವನನ್ನು ಗಲ್ಲಿಗೇರಿಸದೆ ಬಿಡದು ಎಂದು ಗೊತ್ತಾದ ಯಜಮಾನರು ಇದ್ದೊಬ್ಬ ವ್ಯಕ್ತಿಯ ರಕ್ಚಣೆ ಮಾಡುತ್ತಾರೆ. ಅವರೆ ಕಮಲಾ ಪಂಥ ಎಂಬ ಖನೋಜದ ಬ್ರಾಹ್ಮಣ. ಅವನನ್ನು ನವಲಗುಂದದಲ್ಲಿಯೆ ಉಳಿಸಿಕೊಳ್ಳಬೇಕೆಂದು ಊರಿನ ಯಂಕಣ್ಣಾಚಾರ್ಯ ತನ್ನ ಮಗಳು‌ ಸಾವಿತ್ರಿಯನ್ನು ಕಮಲ ಪಂಥನಿಗೆ ವಿವಾಹ ಮಾಡಿಕೊಟ್ಟು ಅಲ್ಲಿ ಕಮಲ ಪಂಥನು ಮಡದಿ‌ ಸಾವಿತ್ರಿ ಯು ಮಧ್ವಮತದ ಪರಿಚಯವನ್ನು ಮಾಡಿ ಅವನನ್ನು ಪಕ್ಕಾ ಮಾಧ್ವನನ್ನಾಗಿ ಮಾಡುತ್ತಾಳೆ. ಈ ಕಮಲ ಪಂಥರು ಮುಂದೆ ಕಮಲಾಚಾರ್ಯ ಎಂಬ ಬಿರುದಿನಿಂದ ನಾಮಾಂಕಿತರಾಗುತ್ತಾರೆ. ಕಮಲಾಚಾರ್ಯ ದಂಪತಿಗಳ ವಂಶಾವಳಿಯು ಬೆಳೆದು ಮುಂದಿನ ಆರು ತಲೆಮಾರಿನವರೆಗೆ ಕಾದಂಬರಿಯ ವಿಸ್ತಾರ ಇದೆ. ಕಮಲಾಚಾರ್ಯರು‌ ಅಯುರ್ವೇದ ಪಂಡಿತರಾದ್ದರಿಂದ ಅವರು‌ ಊರವರಿಗೆ ಆಯುರ್ವೈದಿಕ ಔಷಧ ಕೊಟ್ಡು ಉತ್ತಮ ವೈದ್ಯರೆಂದು ಹೆಸರು ಪಡೆಯುತ್ತಾರೆ. ಅವರಿಗೆ ವಾಸುದೇವಾಚಾರ್ಯ ಎಂಬ ಮಗನಲ್ಲದೆ ಒಂದಿಬ್ಬರು ಹುಡುಗರೂ ಒಮದಿಬ್ಬರು‌ ಹುಡುಗಿಯರೂ ಹುಟ್ಡುತ್ತಾರೆ.

ಮಕ್ಕಳಲ್ಲಿ‌‌ ಹಿರಿಯನಾದ ಬೋಧಾಚಾರ್ಯ ಅಪ್ಪನಿಗೆ ತಕ್ಕ ಮಗನಾಗದೆ ಹೋಗುತ್ತಾನೆ. ವಾಸುದೇವಾಚಾರ್ಯರ ಸಹೋದರ ವೆಂಕಡಾಚಾರ್ಯನೂ ಹೆಂಡತಿ ಸರಸ್ವತಿಗೆ ಕಾಟ ಕೊಡುತ್ತ ಊರ ಮುಸಲ್ಮಾನ ಹೆಣ್ಣಿನೊಟ್ಟಿಗೆ ಇದ್ದು ಕೆಲವು ಮಕ್ಕಳ ತಂದೆಯಾಗುತ್ತಾನೆ. ಮನೆಯ ಮಕ್ಕಳು ಹೆಚ್ಚಾದಂತೆ ವಾಸುದೇವಾಚಾರ್ಯರ ಜವಾಬ್ದಾರಿ ಹೆಚ್ಚಾಗುತ್ತದೆ. ಮನೆಯಲ್ಲಿ ಅವರ ತಂಗಿ ಬಾಲವಿಧವೆಯಾದ ಅಂಬಾಬಾಯಿ, ಹತ್ತಿರದ ಊರಿನ ಇವರ ಸಂಪರ್ಕದಲ್ಲಿರುವ ಗಂಡ ಹೆಂಡತಿ ಸತ್ತಾಗ ಅವರ‌‌‌ ಮಗಳು‌ ರುಕುಮಾಬಾಯಿ ಈ ದೇಸಗತಿಯ ಮನೆಯ ಆಶ್ರಯಕ್ಕೆ ಬರುತ್ತಾಳೆ. ಮತ್ತು ಇನ್ನೋರ್ವ ಅನಾಥ ಹುಡುಗ ನಾರಾಯಣ, ಅವನು ನಿಯೋಗ ಪುತ್ರ ಎಂಬ ಖ್ಯಾತಿಗೊಳಗಾಗಿರುತ್ತಾನೆ.

ಬ್ರಾಹ್ಮಣ ಯಜಮಾನರು ರೈತರಿಗೆ ತಮ್ಮ ಜಮೀನನ್ನು‌ ಗೇಣಿಗೆ ಕೊಟ್ಟು ಅವರು ಕೊಡುವ ಗೇಣಿಯಿಂದ ಜೀವನ‌ ನಡೆಸಬೇಕಾಗಿರುವಾಗ ರೈತರು ಮೊದಲಿನಂತೆ ಗೇಣಿ ಕೊಡಲು ಹಿಂದೇಟು ಹಾಕುತ್ತಾರೆ. ಇದರಿಂದ ಆಚಾರ್ಯರ ಕಿರಾಣಿ ಅಂಗಡಿಯಲ್ಲಿ ಉದ್ರಿ ಸಾಲ ಬೆಳೆಯುತ್ತದೆ. ಹೆಂಡತಿಯ ಚಿನ್ನ ಮಾರಿ ಸಾಲ ತೀರಿಸುತ್ತಾರೆ. ಇದರಿಂದ ರೋಸೆದ್ದು ಹುಡುಗರಿಗೆ ಹೆಚ್ಚಿನ ಶಿಕ್ಷಣ ಕೊಟ್ಟು ಅವರು‌ ನೌಕರಿ ಹಿಡಿದು ಮನೆತನ ನಡೆಸಲು ಸಹಾಯಕವಾದಾರೆಂದು ಹುಡುಗರನ್ನು ಧಾರವಾಡಕ್ಕೆ ಕಳಿಸುತ್ತಾರೆ.

ಆಗ ಕಾಂಗ್ರೆಸ್ ಪಕ್ಷದ ಹೋರಾಟ ಪ್ರಾರಂಭಗೊಂಡು ಇವರ ಮಗ ರಾಮ ಗಾಂಧಿಜಿಯವರ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಹೋರಾಟಗಾರನಾಗಿ ಸೇರುತ್ತಾನೆ. ಮುಂದೆ ಉಪ್ಪಿನ ಸತ್ಯಾಗ್ರಹದಲ್ಲಿ ಭೂಗತನಾಗಿ ಪತ್ರಿಕೆಗಳನ್ನು ಹಂಚುತ್ತಾನೆ. ಪೋಲಿಸರು ಆಚಾರ್ ಅವರ ಮನೆಬಾಗಿಲಿಗೆ ಬಂದು ಕೂತು ರಾಮನಿಗೆ ಹೊಂಚು ಹಾಕಿ ಕಾಯುತ್ತಾರೆ. ಆಚಾರರನ್ನು ವಿಚಾರಣೆಗೆಂದು ಠಾಣೆಗೆ ಕರೆಸಲಾಗುತ್ತದೆ. ಅಲ್ಲಿ ಆಚಾರ್ಯರು ಆವಾಜ್ ಹಾಕಿದಾಗ ಪೋಲಿಸ್ ಅದಿಕಾರಿ ನರ್ವಸ್ ಆಗುತ್ತಾನೆ‌ ಹಿರಿಯ ಮಗ ಲಾಯರ್ ಆಗುತ್ತಾನೆ. ಮುಂಬೈ ಗೆ ಹೋಗಿ ನೆಲೆಸುತ್ತಾನೆ. ಇನ್ನೊಬ್ಬ ಬಿ ಏ ಮುಗಿಸಿ ಕಾರಕೂನನಾಗುತ್ತಾನೆ. ಕೇಶವನ ಮಗ ಮುಂಬಯಿಯ ಓರ್ವ ಹುಡುಗಿಯನ್ನು ಪ್ರೀತಿಸುತ್ತಾನೆ. ಆದರೆ ಅವರು ಮಾಂಸ ತಿನ್ನುವವರು. ಆದರೂ ಹುಡುಗ ಅವಳನ್ನೆ ಮದುವೆಯಾಗುತ್ತಾನೆ. ಆಚಾರ್ಯರಿಗೆ ಆಘಾತವಾಗುತ್ತದೆ.

ಮುಂದೆ ಕೆಲ ವರ್ಷಗಳ ನಂತರ ಆಚಾರ್ಯರು ಗಂಟಲು ಕ್ಯಾನ್ಸರ್ ಗೆ ಒಳಗಾಗುತ್ತಾರೆ. ಮುಂಬಯಿ ಆಸ್ಪತ್ರೆಯಲ್ಲಿ ಇದು ತುಂಬ ಹೆಚ್ಚಾಗಿದೆ. ಶಸ್ತ್ರಕ್ರಿಯೆ ನಡೆಸಲು ಅಸಾಧ್ಯ ಎನ್ನುತ್ತಾರೆ‌ ವೈದ್ಯರು. ‌ ಹೀಗೆ ಇವರ ಅಂತ್ಯಕಾಲದಲ್ಲಿ‌ ಮುಂಬಯಿಯಿಂದ ಹೋಗಲು‌‌ ಅಂದಿನ‌ ಪರಿಸ್ಥಿತಿ ಬಿಡುವುದಿಲ್ಲ. ಗಾಂಧಿಯವರನ್ನು ಒಬ್ಬ ಬ್ರಾಹ್ಮಣ ಕೊಂದದ್ದರಿಂದ ಎಲ್ಲೆಡೆ ಬ್ರಾಹ್ಮಣರ ಮಾರಣಹೋಮ ಪ್ರಾರಂಭಗೊಂಡು ಹೇಗೋ ಇನ್ನೊಬ್ಬರು ತಮ್ಮ‌ ಕಾರಿನಲ್ಲಿ ಮೀರಜ್ ವರೆಗೆ ಕರೆದುಕೊಂಡು ಹೋಗಿ ಅಲ್ಲಿಂದಲೇ ಆಚಾರ್ಯರು ಧಾರವಾಡ ಕ್ಕೆ ಬಂದು‌ ಮುಟ್ಟುತ್ತಾರೆ. ಅಲ್ಲಿ‌ ಹೆಚ್ಚು ದಿನ‌‌ ನಿಲ್ಲದೆ‌‌ ನವಲಗುಂದಕ್ಕೆ ಬಂದು ಅಲ್ಲಿ ಪ್ರಾಣ ತ್ಯಾಗ ಮಾಡುತ್ತಾರೆ. ಈ ಕಾದಂಬರಿಯಲ್ಲಿ ಚಿತ್ರಿತಗೊಳ್ಳುವ ಐತಿಹಾಸಿಕ‌ ಸಂಕಥನಗಳು ಕೌಟುಂಬಿಕ ನಿತ್ಯದ ಬದುಕಿನ‌ ವ್ಯವಹಾರಗಳೊಂದಿಗೆ ತಳಕು ಹಾಕಿಕೊಂಡು‌ ಬರುವುದು ಕಾದಂಬರಿಕಾರನ ಹೆಗ್ಗಳಿಕೆ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...