ಓದು ನನ್ನ ಅಂತರಂಗಕ್ಕೆ ಅಂಟಿಕೊಂಡಿರುವ ಒಂದು ದಿವ್ಯ ವ್ಯಸನ


"ಓದುತ್ತ ಓದುತ್ತ ಬರೆಯಬೇಕು ಅಂದುಕೊಂಡವನ ಮುಂದೆ ಮೊದಲು ಕಂಡಿದ್ದು ಸಿನಿಮಾ. ಬರೆಯುತ್ತ ಬರೆಯುತ್ತ ಒಂದಿಷ್ಟು ವಿಚಾರಗಳು ಒಂದಿಷ್ಟು ಕಥೆಗಳು ನನ್ನೊಳಗೆ ಅವಿತಿರುವ ಸೂಚನೆ ಬಂದಾಗ ಪುಸ್ತಕ ಬರೆಯುವ ಆಸೆ ಬೆರಳಂಚಿನಲ್ಲಿ ಬಂದು ನಿಂತಿತ್ತು," ಎನ್ನುತ್ತಾರೆ ಪ್ರಮೋದ್‌ ಮರವಂತೆ. ಅವರು ತಮ್ಮ ʻತೊಂಡೆ ಚಪ್ಪರʼ ಕೃತಿಗೆ ಬರೆದ ಲೇಖಕರ ಮಾತು.

ಬಾಲ್ಯದಲ್ಲಿ "ಬಾಲಮಂಗಳ", "ತುಂತುರು", "ಚಂಪಕ"ದಂತ ಬಣ್ಣಬಣ್ಣದ ಪುಸ್ತಕಗಳನ್ನು ಅಂಗೈ ಮೇಲಿರಿಸಿಕೊಂಡಾಗ ಮನದಾಳದಲ್ಲಿ ಹುಟ್ಟಿದ ರೋಮಾಂಚನ ಮುಂದೆ ಬಿಡದೆ ಓದಿನತ್ತ ಸೆಳೆಯುತ್ತಲೆ ಸಾಗಿತು. ಕೆಲವು ವರ್ಷಗಳ ಕಾಲ ಪಠ್ಯಪುಸ್ತಕಗಳ ಒಳಗೆ ಬಂಧಿಯಾದ ನಾನು ಮತ್ತೆ ಕಣ್ಣರಳಿಸಿ ಅರಸಿದ್ದೆ ಕಥೆ, ಕಾದಂಬರಿ ಪುಸ್ತಕಗಳನ್ನು.

ಓದು ನನ್ನ ಅಂತರಂಗಕ್ಕೆ ಅಂಟಿಕೊಂಡಿರುವ ಒಂದು ದಿವ್ಯ ವ್ಯಸನವಾಗಿ ಸದಾ ನನ್ನನ್ನು ಕೈಹಿಡಿದು ಬರವಣಿಗೆಯ ಕ್ಷೇತ್ರಕ್ಕೆ "ದುಬಕ್" ಎಂದು ಧುಮುಕುವಂತೆ ಮಾಡಿತು. ಓದುತ್ತ ಓದುತ್ತ ಬರೆಯಬೇಕು ಅಂದುಕೊಂಡವನ ಮುಂದೆ ಮೊದಲು ಕಂಡಿದ್ದು ಸಿನಿಮಾ. ಬರೆಯುತ್ತ ಬರೆಯುತ್ತ ಒಂದಿಷ್ಟು ವಿಚಾರಗಳು ಒಂದಿಷ್ಟು ಕಥೆಗಳು ನನ್ನೊಳಗೆ ಅವಿತಿರುವ ಸೂಚನೆ ಬಂದಾಗ ಪುಸ್ತಕ ಬರೆಯುವ ಆಸೆ ಬೆರಳಂಚಿನಲ್ಲಿ ಬಂದು ನಿಂತಿತ್ತು. ಆಗಾಗ ಕಥೆಗಳನ್ನು ಬರೆಯಲು ಪೆನ್ನು ಹಿಡಿದಿದ್ದರು ಅದೇನೊ ಗೊತ್ತಿಲ್ಲ ಯಾವುದು ಮುಂದುವರಿಯುವಷ್ಟು ಮಜ ಕೊಟ್ಟಿರಲಿಲ್ಲ. ಆ ಸಂದರ್ಭದಲ್ಲಿ ನನ್ನ ಕೈಹಿಡಿದು ತಾನಾಗೆ ಬರೆಸಿಕೊಂಡ ಕಾದಂಬರಿ "ತೊಂಡೆ ಚಪ್ಪರ".

ನನ್ನ ಬದುಕಿನ ಅನುಭವಗಳು ನನ್ನ ಕಲ್ಪನಾ ಲಹರಿಯ ಜೊತೆಯಾಗಿ ಬಂದು ಬಿಳಿ ಹಾಳೆಯನ್ನು ಅಲಂಕರಿಸಿವೆ. ಈ ಹಾದಿಯಲ್ಲಿ ನನಗೆ ಬೆನ್ನೆಲುಬಾಗಿ ನಿಂತಿದ್ದು "ಸಸಿ" ಪ್ರಕಾಶನ. ಇದರ ರೂವಾರಿಗಳಾದ ಜಯರಾಮಚಾರಿ ಮತ್ತು ಸಾತ್ವಿಕ್ ಸಿದ್ದಯ್ಯನವರಿಗೆ ಆಭಾರಿ. ಪುಸ್ತಕವನ್ನು ತಿದ್ದಿದ ಹಾಗು ಪ್ರತಿ ಹಂತದಲ್ಲು ಸಲಹೆಗಳನ್ನು ನೀಡುತ್ತ ಬಂದ ಗೆಳೆಯ ಪ್ರಶಾಂತ್ ಸಾಗರ್ ಅವರಿಗೆ ಹಾಗು ಬಿ.ಉಲ್ಲಾಸ್ ನಾವಡ ಇವರಿಗೆ ಧನ್ಯವಾದ. ಸಲಹೆಗಳನ್ನು ನೀಡಿದ ಪೂರ್ಣಿಮಾ ಮಾಳಗಿಮನಿ, ಮಧು ವೈ.ಎನ್, ನಿತೇಶ್ ಕುಂಟಾಡಿಯವರಿಗೆ ಧನ್ಯವಾದ. ಗಮನಸೆಳೆಯುವ ಮುಖಪುಟ ರಚಿಸಿದ ಮದನ್ ಸಿ.ಪಿ ಅವರಿಗೆ ಹಾಗು ಪುಸ್ತಕದ ಪುಟವಿನ್ಯಾಸ ಮಾಡಿದ ಅರುಣ್ ಅಂಚೆ ಅವರಿಗೆ ವಿಶೇಷ ಧನ್ಯವಾದ.

ಬದುಕಿನ ಎಲ್ಲಾ ಮಜಲುಗಳಲ್ಲಿ ನನ್ನ ಜೊತೆ ನಿಂತಿರುವ ನನ್ನ ಅಪ್ಪ ಅಮ್ಮ, ಅಕ್ಕ ಬಾವ, ಅಣ್ಣಂದಿರಿಗೆ ಅತ್ತಿಗೆಯಂದರರಿಗೆ ಮತ್ತು ಸದಾ ನನ್ನ ಕೈಮೇಲೆ ಕೈಯಿಟ್ಟು ಭರವಸೆಯ ನೋಟ ಬೀರುವ ಮಡದಿ ಸುಚೇತಾಳಿಗೆ ನಲ್ಮೆಯ ಧನ್ಯವಾದ. ನನ್ನ ಬರವಣಿಗೆಯ ನಂಬಿ ಕೈ ಹಿಡಿದು ನಡೆಸುತ್ತಿರುವ ಕನ್ನಡ ಸಿನಿಮಾ ರಂಗಕ್ಕೆ ಧನ್ಯವಾದ. ಪುಸ್ತಕದ ಮೊದಲ ಹೆಜ್ಜೆಗೆ ದಾರಿ ಮಾಡಿಕೊಟ್ಟ "ಕುಂದಾಪ್ರ ಕನ್ನಡ ಪ್ರತಿಷ್ಠಾನ"ಕ್ಕೆ ಹಾರ್ದಿಕ ಧನ್ಯವಾದ. ಪುಸ್ತಕವನ್ನು ಕೊಂಡು ಓದುತ್ತಿರುವ ನಿಮಗಿದೊ ನನ್ನ ಹೃದಯಾಳದಿಂದ ಧನ್ಯವಾದ.

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...