About the Author

ದೂರದರ್ಶನ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಎಚ್‌.ಎನ್‌. ಆರತಿ ಅವರು ಕವಿ, ಪತ್ರಕರ್ತೆ. ಅವರು 1966ರ ನವೆಂಬರ್ 13 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಖ್ಯಾತ ಸಂಶೋಧಕ ಹಂಪ ನಾಗರಾಜಯ್ಯ, ತಾಯಿ ಲೇಖಕಿ ಕಮಲಾ ಹಂಪನಾ.  ಬೆಂಗಳೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದ ಅವರು 2 ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪೂರೈಸಿದರು. ದೂರದರ್ಶನದಲ್ಲಿ ಜನಪ್ರಿಯವಾಗಿರುವ ‘ಥಟ್ ಅಂತ ಹೇಳಿ!?’ ರಸಪ್ರಶ್ನೆ ಕಾರ್ಯಕ್ರಮವನ್ನು ಆರಂಭಿಸಿ, 2500 ಸಂಚಿಕೆಗಳನ್ನು ನಿರ್ದೇಶಿಸಿದ ಕೀರ್ತಿ ಆರತಿ ಅವರಿಗೆ ಸಲ್ಲುತ್ತದೆ.

ಸಮಕಾಲೀನಕ್ಕೆ ತಮ್ಮ ಕಾವ್ಯದ ಮೂಲಕ ಸ್ಪಂದಿಸುವ ಇವರು ಅನುವಾದಕ್ಕೂ ಆಗಾಗ ಭೇಟಿ ನೀಡುತ್ತಾರೆ. ಪ್ರವಾಸ, ನಾಟಕ ಅವರ ಮತ್ತಷ್ಟು ಆಸಕ್ತಿಯ ವಿಸ್ತಾರಗಳು. ಸಾಹಿತ್ಯ, ವೃತ್ತಿಯ ಹಾದಿಯಲ್ಲಿ ಏಳು ಕೃತಿಗಳನ್ನು ಹೊರತಂದಿದ್ದಾರೆ. ‘ಓಕುಳಿ, ಬಾ ಹೇಳಿಕಳಿಸೋಣ ಹಗಲಿಗೆ, ಸ್ಮೋಕಿಂಗ್ ಝೋನ್’ ಅವರ ಕವನ ಸಂಕಲನ. ‘ಬೆಟ್ಟದಡಿಯ ಬಿದಿರ ಹೂ’ - ಪ್ರವಾಸ ಕಥನ. ಅವರ ಹಲವಾರು ಕವನಗಳು ಇಂಗ್ಲಿಷ್, ಸ್ಲೊವೆನಿಯನ್ ಒಳಗೊಂಡಂತೆ ಇತರ 6 ಭಾಷೆಗಳಿಗೆ ಅನುವಾದಗೊಂಡಿವೆ. 

‘ಓಕುಳಿ’ ಕವನ ಸಂಕಲನಕ್ಕೆ ಲೇಖಕಿಯರ ಪರಿಷತ್ತಿನ ರಾಜ್ಯಮಟ್ಟದ ಪ್ರಶಸ್ತಿ, ‘ಬಾ ಹೇಳಿಕಳಿಸೋಣ ಹಗಲಿಗೆ’ ಕರ್ನಾಟಕ ಲೇಖಕಿಯರ ಸಂಘದ 1997ರ ‘ಅತ್ಯುತ್ತಮ ಕೃತಿ’ ಪ್ರಶಸ್ತಿ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ಮಾತ್ರವಲ್ಲದೆ ಆರತಿ ಅವರು ಅಂತರರಾಷ್ಟ್ರೀಯ ಮಟ್ಟದ ಕವಿ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ್ಧರು. 

ಎಚ್. ಎನ್. ಆರತಿ

(13 Nov 1966)

Awards