About the Author

ಡಾ. ಲೋಕೇಶ್ ಅಗಸನಕಟ್ಟೆ ಅವರು ಕವಿ-ಕತೆಗಾರರು. 1958ರ ಆಗಸ್ಟ್ 7ರಂದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಜನಿಸಿದರು. ಅಗಸನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಆನಗೋಡಿನ ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಜಿ.ಚನ್ನಪ್ಪ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಪದವಿ ಮೈಸೂರಿನ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ, ಪಿಹೆಚ್‍ಡಿ ಸಹ ಪಡೆದಿದ್ದಾರೆ. 

1986 ರಿಂದ ಮುಂಜಾನೆ ಪತ್ರಿಕೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಅಗಸನಕಟ್ಟೆ,  1984 ರಿಂದ 2017ರವರೆಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸಾಹಿತ್ಯಿಕ ಬರವಣಿಗೆ, ಅಂಕಣ ಬರಹ, ಸಂಪನ್ಮೂಲ ವ್ಯಕ್ತಿಯಾಗಿ ಪ್ರವೃತ್ತಿಯನ್ನು ಬೆಳೆಸಿಕೊಂಡಿರುವ ಇವರು ಮತ್ತೆ ಸೂರ್ಯ ಬರುತ್ತಾನೆ, ಮನೆಯಂಗಳದ ಮರ, ಧರಣಿಯ ಧ್ಯಾನ ಕೃತಿಗಳನ್ನು ರಚಿಸಿರುವುದಲ್ಲದೇ, ಅಭಿಮುಖ, ಸಾಹಿತ್ಯ-ಸಮಾಜ, ನೀರೊಳಗಣ ಕಿಚ್ಚು, ಒಳಗಿನ ಬೆಳಗು, ಸಾಂದರ್ಭಿಕ, ಕುಂವಿ ಸಾಹಿತ್ಯ ಕಥನಗಳ ವಿಮರ್ಶಾ ಕೃತಿಗಳನ್ನು ಸಹ ಪ್ರಕಟಿಸಿದ್ದಾರೆ. 

 ‘ನಮ್ಮೆಲ್ಲರ ಬುದ್ಧ’ ನಾಟಕವು ಸಾಣೇಹಳ್ಳಿ ಶಿವಸಂಚಾರದಿಂದ 100 ಪ್ರಯೋಗಗೊಂಡಿದೆ. ಈ ಕೃತಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದೆ. . ಹಟ್ಟಿಯೆಂಬ ಭೂಮಿಯ ತುಣುಕು (ಛಂದ ಪ್ರಶಸ್ತಿ ಪಡೆದ ಕೃತಿ), ಮೀಸೆ ಹೆಂಗಸು ಕಥಾ ಸಂಕಲನ, ಅತೀತ ಲೋಕದ ಮಹಾಯಾತ್ರಿಕ, ಅನುಭಾವ, ನಾನು ದೇವರು ಅಲ್ಲ, ದೇವಮಾನವನೂ ಅಲ್ಲ ಕಾದಂಬರಿಗಳನ್ನು ರಚಿಸಿದ್ದು, ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಜೆ ಮಂಗೇಶರಾಯ ಪ್ರಶಸ್ತಿ, ವೈ.ಕೆ. ರಾಮಯ್ಯ ಕಥಾ ಪ್ರಶಸ್ತಿ, ಛಂದಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮುಂಬರುವ ಜನವರಿ 30 ಹಾಗೂ 31 ರಂದು ಬೆಂಗಳೂರಿನ ಕುವೆಂಪು ಕನ್ನಡಭವನದಲ್ಲಿ ನಡೆಯಲಿರುವ 9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಲೋಕೇಶ್ ಅಗಸನಕಟ್ಟೆ ಅವರನ್ನು ಆಯ್ಕೆ ಮಾಡಲಾಗಿದೆ.

ಲೋಕೇಶ್ ಅಗಸನಕಟ್ಟೆ

(07 Aug 1958)