ಅತೀತ ಲೋಕದ ಮಹಾಯಾತ್ರಿಕ

Author : ಲೋಕೇಶ್ ಅಗಸನಕಟ್ಟೆ

Pages 384

₹ 200.00




Year of Publication: 2018
Published by: ಶ್ರೀ ವೀರಪ್ರತಾಪ ಮಡಿಯಾ ಟ್ರಸ್ಟ್
Address: ಶ್ರೀ ವೀರಪ್ರತಾಪ ಮಡಿಯಾ ಟ್ರಸ್ಟ್ ಬೆಲಗೂರು

Synopsys

ಲೇಖಕರಾದ  ಲೋಕೇಶ್ ಅಗಸನಕಟ್ಟೆಯವರು ರಚಿಸಿರುವ ಅತೀತ ಲೋಕದ ಮಹಾಯಾತ್ರಿಕ ಕಾದಂಬರಿಯು ಶ್ರೀ ಬಿಂದುಮಾಧವ ಶರ್ಮ ಸ್ವಾಮೀಜಿಯವರ ಜೀವನಾದಾರಿತ ಕೃತಿ. ದೇವರ ಸಾಮ್ರಾಜ್ಯದ ಸಮಾಜವಾದಿ ಸಂತನ ರೂಪಕಾತ್ಮಕ ಕಾದಂಬರಿಯಾಗಿ ಪುಸ್ತಕ ರೂಪ ಪಡೆದಿದೆ. 

About the Author

ಲೋಕೇಶ್ ಅಗಸನಕಟ್ಟೆ
(07 August 1958)

ಡಾ. ಲೋಕೇಶ್ ಅಗಸನಕಟ್ಟೆ ಅವರು ಕವಿ-ಕತೆಗಾರರು. 1958ರ ಆಗಸ್ಟ್ 7ರಂದು ದಾವಣಗೆರೆ ತಾಲ್ಲೂಕು ಅಗಸನಕಟ್ಟೆ ಗ್ರಾಮದಲ್ಲಿ ಜನಿಸಿದರು. ಅಗಸನಕಟ್ಟೆಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ, ಆನಗೋಡಿನ ಶ್ರೀ ಮರುಳಸಿದ್ಧೇಶ್ವರ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು, ಜಿ.ಚನ್ನಪ್ಪ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಹಾಗೂ ಸಿರಿಗೆರೆಯ ಎಂ.ಬಿ.ಆರ್. ಕಾಲೇಜಿನಲ್ಲಿ ಪದವಿ ಮೈಸೂರಿನ ಕುವೆಂಪು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ, ಪಿಹೆಚ್‍ಡಿ ಸಹ ಪಡೆದಿದ್ದಾರೆ.  1986 ರಿಂದ ಮುಂಜಾನೆ ಪತ್ರಿಕೆಯ ವರದಿಗಾರರಾಗಿ ವೃತ್ತಿ ಜೀವನ ಆರಂಭಿಸಿದ ಅಗಸನಕಟ್ಟೆ,  1984 ರಿಂದ 2017ರವರೆಗೆ ಸರ್ಕಾರಿ ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದು, ಸಾಹಿತ್ಯಿಕ ಬರವಣಿಗೆ, ಅಂಕಣ ಬರಹ, ...

READ MORE

Reviews

’ಅತೀತ’ಗಳ ಒಂದು ಲೋಕ ಕಥನ

ಪುಸ್ತಕವು ಸರಳ ವ್ಯಾಖ್ಯಾನಕ್ಕೆ ಸಿಗಲೊಲ್ಲದ ಬೆಲಗೂರು ಬಿಂದುಮಾಧವ ಶರ್ಮರೆಂಬ ಧರ್ಮಗುರುಗಳೊಬ್ಬರನ್ನು ಕುರಿತ ಕಥನವಾಗಿದೆ. ಇಹಕ್ಕೆ ಬರುವಾಗಲೆ ತಂದೆಯನ್ನು ಪರಲೋಕಕ್ಕೆ ಕಳುಹಿಸಿದವನು ಎಂಬ ನಿಂದೆಗೆ ಒಳಗಾಗುವ ಬಾಲಕ, ಸಮಾಜದ ತಿರಸ್ಕಾರ, ತಾಯಿಯ ಮಮತೆ, ಬಡತನದ ಸಂಕಟ, ಶಾಲಾ ಕಲಿಕೆಯಲ್ಲಿ ನಿರಾಸಕ್ತಿ, ತುಂಟಾಟಗಳು ಅವಮಾನಗಳ ಮಧ್ಯೆ ದುಡಿಯುವ ಮಾರ್ಗಕ್ಕೆ ತೆರಳಿ ಬೇಕರಿ, ದರ್ಜಿ, ಅಡುಗೆ, ಕೊನೆಗೆ ನೇಗಿಲು ಹಿಡಿದು ಕೃಷಿಕನಾಗುತ್ತಾನೆ.

ಬಾಲ್ಯದಿಂದಲೂ ಬಂದ ಸಂಕಟಕ್ಕೆ ಸ್ಪಂದಿಸುವ ಗುಣ ಗಟ್ಟಿಯಾಗುತ್ತಿರುವಾಗಲೆ, ಅಸ್ವಸ್ಥವಾದ ಮಂಗನ ಮರಿಯನ್ನು ಆಂಜನೇಯನ ಕಿರುಗುಡಿಯಲ್ಲಿ ಇರಿಸಿ ಉಪಚರಿಸುತ್ತಾರೆ. ಅದೇ ಮಾರುತಿಯ ಆವಾಹನೆಗೂ ಕಾರಣವಾಗುತ್ತದೆ. ಮುಂದಿನದು ಅಲೌಕಿಕ ಚರಿತೆಯೆ! ಸೋದರ ಕುಟುಂಬವನ್ನು ಸಲುಹಿ, ಊರಿಗೆ ಗುರುಗಳಾಗಿ ಆಂಜನೇಯ ರಾಯರ ಸಾಂಸ್ಥಿಕಗಳಿಗೆ ಧರ್ಮಗುರುಗಳಾಗುವ ಚರಿತ್ರೆ !

ವೈದಿಕ ಮಠದ ಗುರುಗಳಾದರೂ, ಅಲ್ಲಿ ಆಂಜನೇಯನ ಜಯಂತಿಯೇ ಆಕರ್ಷಣೆ. ಅಲ್ಲಿ ಕ್ರೈಸ್ತರು, ಮುಸ್ಲಿಮರು, ದಲಿತರು, ಶ್ರೀಮಂತರು- ಬಡವರೆನ್ನದೆ ಇಲ್ಲಿನ ಅತೀತ ಸಂಗತಿಗಳು ಚಮತ್ಕಾರ, ಅಸಾಧು ಎಂಬ ಭಾವನೆ ಕೆಲವರಿಗೆ ಇದ್ದರೂ, ಅತೀತ ಕಥನಗಳು ನನ್ನನ್ನು ವಿಸ್ಮಯಗೊಳಿಸುತ್ತವೆ. ನಾನು ಇವುಗಳನ್ನು ನಿರಾಕರಿಸಲಾರೆ... ಇವು ನಮಗೆ ನಿರಾಕರಿಸುವುದನ್ನು ಕಲಿಸಿವೆಯೇ ಹೊರತು ಸ್ವೀಕರಿಸಿ ವಿಶ್ಲೇಶಿಸುವುದನ್ನು ಕಲಿಸಿಲ್ಲ' ಎಂಬ ಲೇಖಕರ ನಿಲುವಿನ ಪ್ರತಿಪಾದನೆಯೊಂದಿಗೆ ಬಿಂದು ಮಾಧವರೆಂಬ ಈ ಪವಾಡ ಪುರುಷನ ಕಥನ ಮುವ್ವತ್ತು ಅಧ್ಯಾಯಗಳಲ್ಲಿ ವಿಸ್ತರಿಸಿ ನಿರೂಪಣೆಗೊಂಡಿದೆ. ಎಲ್ಲರೂ ಒಳಗೊಳ್ಳುತ್ತಾರೆ. ಹಿತ ಕಾಣುತ್ತಾರೆ. ಅವರು ಕಟ್ಟಿದ ಅತೀತಗಳನ್ನು ಅಂದರೆ ಪವಾಡಗಳ ಕಥಾನಕವನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ. ಇದಕ್ಕೆ ಈ ಸಮರ್ಥನೆಯಾಗಿ ಲೇಖಕರು ಈ 'ಅತೀತ' ವಿದ್ಯಮಾನ ಕುರಿತ ಪೂರ್ವ-ಪಶ್ಚಿಮಗಳ ಚಿಂತನೆಯ ಒಂದು ಹಿನ್ನೆಲೆ ನೀಡಿ ಚೈತನ್ಯ ಪರಮಹಂಸ, ಬುದ್ಧ, ಬಸವಣ್ಣ ಮುಂತಾದವರಲ್ಲದೆ ಶಿರಡಿ, ತರಳಬಾಳು, ಸಾಯಿಬಾಬಾರ ಜೀವನ ಕಥನಗಳ ತುಣುಕುಗಳನ್ನು ತಮ್ಮ ನಿರೂಪಣೆಯೊಂದಿಗೆ ಜೋಡಿಸಿದ್ದಾರೆ.

ಇಲ್ಲಿನ ಅತೀತ ಸಂಗತಿಗಳು ಚಮತ್ಕಾರ, ಅಸಾಧು ಎಂಬ ಭಾವನೆ ಕೆಲವರಿಗೆ ಇದ್ದರೂ, ಅತೀತ ಕಥನಗಳು ನನ್ನನ್ನು ವಿಸ್ಮಯಗೊಳಿಸುತ್ತವೆ. ನಾನು ಇವುಗಳನ್ನು ನಿರಾಕರಿಸಲಾರೆ... ಇವು ನಮಗೆ ನಿರಾಕರಿಸುವುದನ್ನು ಕಲಿಸಿವೆಯೇ ಹೊರತು ಸ್ವೀಕರಿಸಿ ವಿಶ್ಲೇಶಿಸುವುದನ್ನು ಕಲಿಸಿಲ್ಲ' ಎಂಬ ಲೇಖಕರ ನಿಲುವಿನ ಪ್ರತಿಪಾದನೆಯೊಂದಿಗೆ ಬಿಂದು ಮಾಧವರೆಂಬ ಈ ಪವಾಡ ಪುರುಷನ ಕಥನ ಮೂವತ್ತು ಅಧ್ಯಾಯಗಳಲ್ಲಿ ವಿಸ್ತರಿಸಿ ನಿರೂಪಣೆಗೊಂಡಿದೆ.

ವಿಶ್ಲೇಷಣೆಗಿಂತ ಸಂಗತಿಗಳ ಸ್ವಾರಸ್ಯಕರ ಕಥನವೇ ಪ್ರಧಾನವಾಗಿದೆ. ನನ್ನ ಓದಿಗೂ ಒಲಿಯದ ಸಂಗತಿಗಳೂ ಇಲ್ಲಿ ಹಲವಿವೆ. ಈ ಗುರುವರ್ಯರು ಒಂದು ಕಡೆ ಅನ್ನದಾನಿಯಾಗಿ, ಸಿರಿವಂತರ-ಬುದ್ದಿವಂತರ ಮನ ಗೆಲ್ಲುತ್ತಾ ಸಮುದಾಯಗಳಿಗೆ ಹತ್ತಿರವಾಗಿ ದುಃಖನಿವಾರಕರಾಗಿ ಕಂಡರೆ, ಇನ್ನೊಂದೆಡೆ ಎದೆಯಲ್ಲಿನ ಜಾರಿದ ಸ್ಟಂಟನ್ನು ಸರಿಪಡಿಸುವ, ಚಲಿಸಲಾರದೆ ನಿಂತ ವಾಹನವನ್ನು ಚಲಿಸುವಂತೆ ಮಾಡುವ, ನವವಧೂವರರ ಮೇಲೆ ಬೀಳುತ್ತಲಿದ್ದ ಅರಳಿಮರವನ್ನು ಭಸ್ತವಾಗಿಸುವ ಸಂಗತಿಗಳು ಇವರ ಸುತ್ತ ಇಲ್ಲಿ ಕಟ್ಟಲ್ಪಟ್ಟಿವೆ. ಇವೆಲ್ಲ ಮಾನಸಿಕ ದೈಹಿಕವಾಗಿ ದುರ್ಬಲರಾದ ಜನಸಮುದಾಯ ಕಟ್ಟಿದವು! ಗಾಂಧಿ ಕೂಡ ಇಲ್ಲಿ ಲೇವಡಿಗೆ ಒಳಗಾಗುತ್ತಾರೆ. ಮುಟ್ಟಾಗಿರುವರೆಂದು ಅನುಮಾನಿಸಲ್ಪಟ್ಟ ಮಹಿಳೆಗೆ ಪ್ರವೇಶ ನಿಷೇಧಿತವಾಗುತ್ತದೆ. ಆದರೂ ಲೇಖಕರ ಪ್ರಕಾರ ಇಲ್ಲಿನ ಕಥಾ ನಾಯಕ ಸಮಾಜವಾದಿ ಸಂತ ಸಮಾಜವಾದಿ ಎಂಬ ಶಬ್ದ ಇಷ್ಟು ಸಡಿಲವಾಗಿ ಬಳಕೆಯಾಗಬಾರದಲ್ಲವೆ?

ಇಬ್ಬರು ಮಠಾಧೀಶರಿಗೆ ಹತ್ತಿರದವರಾದ ಈ ಲೇಖಕರು ಆಕಸ್ಮಿಕವೆಂಬಂತೆ ಬಿಂದು ಮಾಧವರ ವಲಯ ಪ್ರವೇಶಿಸಿ, ಅವರ ಕಥನವನ್ನು ಬರೆದು ಧರ್ಮಗುರುಗಳ ಸಂಗ, ನಿರೂಪಣೆ ಸಲ್ಲದು ಎಂಬ ಆಧುನಿಕ ವೈಚಾರಿಕತೆ'ಯನ್ನು ಮೀರಿ ಎರಡರ ನಡುವೆ ಒಂದು ಸೇತುವೆ ಕಟ್ಟುವ ಪ್ರಯತ್ನವನ್ನು ಇಲ್ಲಿ ಮಾಡಿದ್ದಾರೆ. ಭಾರತದ ಆತ್ಮದಂತಿರುವ ಧರ್ಮದ ಒಳಗಿರುವವರ ಚಿತ್ರಣ ಇಲ್ಲಿ ನಿರರ್ಗಳವಾಗಿ ನಿರೂಪಿತವಾಗಿದೆ.

ಕಡುಬಡವರು, ಸಿರಿವಂತರು, ದುರ್ಬಲರು, ಕಳ್ಳರು-ಸುಳ್ಳರು ಎಲ್ಲರೂ ನಿರಂತರವಾಗಿ ಎಡತಾಕುವ ಕ್ಷೇತ್ರಗಳು, ಗುರುಗಳು ನೀಡುವ ’ಒಂದು ತುತ್ತು ಅನ್ನ' ಅನೇಕ 'ಅತೀತ' ಕತೆಗಳ ಉತ್ಪಾದನೆಗೆ ಕಾರಣವಾಗಬಹುದು. ಈ ಬಗ್ಗೆ ಬರೆಯುವುದೆಂದರೆ ಜೇನುಗೂಡಿಗೆ ಕೈಹಾಕಿದಂತೆ. ಓದುಗರು ಕುಶಲರಾಗಿರದಿದ್ದರೆ ಜೇನಿಗಿಂತ ಹುಳುಗಳಿಂದ ಕಚ್ಚಿಸಿಕೊಳ್ಳುವುದೇ ಹೆಚ್ಚಾಗಬಹುದು.

-ಡಾ. ಎಚ್.ಟಿ.ಕೃಷ್ಣಮೂರ್ತಿ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಜುಲೈ 2019)

..................................................................................................................................................................................................

ವ್ಯಕ್ತಿ ಪೂಜೆಯತ್ತ ತುಡಿಯುವ 'ಕಾದಂಬರಿ

ದೇವರು, ಭೌತಿಕ ಜಗತ್ತು ಮತ್ತು ಜೀವಿಗಳ ಸಂಬಂಧದ ಕುರಿತಾದ ಪ್ರಶ್ನೆ ಅನಾದಿಕಾಲದಿಂದಲೂ ಮನುಷ್ಯನನ್ನು ಕಾಡಿದೆ, ‘ಸೃಷ್ಟಿಗೆ ಕಾರಣವಾದ ಕರ್ತೃ ಇರುವನೋ ಇಲ್ಲವೊ' ಎಂಬ ಶಂಕೆ ಋಗ್ವೇದದಲ್ಲಿಯೇ ವ್ಯಕ್ತವಾಗಿದೆ. ವಿಶ್ವದ ಉಗಮಕ್ಕೆ ಕಾರಣವಾದ ಶಕ್ತಿಯೊಂದು ಇದೆಯೆಂದು ನನಗನಿಸುವುದಿಲ್ಲ' ಎಂದು ವಿಜ್ಞಾನಿ ಐನ್ ಸ್ಟೈನ್ ಅಭಿಪ್ರಾಯಪಡುತ್ತಾರೆ. ಆದರೆ ಸೃಷ್ಟಿಯ ರಹಸ್ಯವು ವಿಜ್ಞಾನಕ್ಕೆ ಮೀರಿದ ಸತ್ಯವೆಂಬುದು ಒಂದು ವರ್ಗದ ಬಲವಾದ ನಂಬಿಕೆ. ಸಕಲ ಜೀವರಾಶಿಗಳೂ ಸೃಷ್ಟಿಯ ಒಂದಂಶವೇ ಆಗಿದ್ದು ನಿರಂತರ ಯೋಗ, ಧ್ಯಾನದ ಮೂಲಕ ಆ ಸೃಷ್ಠಿ ಮೂಲಶಕ್ತಿಯನ್ನು  ಸಂಪರ್ಕಿಸಲು ಸಾಧ್ಯವೆಂದು ಅನೇಕರು ಅನುಭವದಿಂದ ಕಂಡು ಕೊಂಡಿದ್ದಾರೆ. ಲೋಕೇಶ ಅಗಸನಕಟ್ಟೆಯವರ 'ಅತೀತಲೋಕದ ಮಹಾಯಾತ್ರಿಕ ವಸ್ತುವನ್ನು ಹೊಂದಿದ ಮಹತ್ವಾಕಾಂಕ್ಷೆಯ ಕಾದಂಬರಿ.

ದೈವೀಶಕ್ತಿ ಅವಾಹನೆಯಾಗುವ ಬಿಂದುಮಾಧವ ಈ ಕಾದಂಬರಿಯ ನಾಯಕ. ಈಗಲೂ ಬದುಕಿರುವ ಇವರ ಕುರಿತು 'ನಾನು ದೇವರೂ ಅಲ. ನವನೂ ಅಲ್ಲ' ಎಂಬ ಜೀವನ ಚರಿತ್ರೆಯನ್ನು ಇದೇ ಲೇಖಕರು ‘ಆಧುನಿಕರಾಗುವುದೆಂದರೆ ಸಸ್ವಾರ್ಥಿಯೂ, ಲೋಭಿಯೂ, ಮೋಹಿಯೂ ಆದಂತೆ, ಪ್ರಾಚೀನನಾದರೆ ಇವೆಲ್ಲವನ್ನು ಮೀರಿದ ಮನುಷ್ಯತ್ವಕ್ಕಾಗಿ ಬಾಳಬಹುದು. ಇದು ದೇವಸ್ಥಾನದ ಕೈಂಕರ್ಯಗಳಿಗೆ ಬದ್ದನಾಗುವ ಬಿಂದುವಿನ ತಾತ್ತಿಕ ನಿಲುವು. ಬ್ರಹ್ಮಚಾರಿಯಾಗಿ ಉಳಿದರೂ ಬಂಧು ಮನೆ ಮಠ ತೊರೆದು ಹಿಮಾಲಯಕ್ಕೆ ಹೋಗುವುದಿಲ್ಲ. ಆದರೆ ಸಾಮಾಜಿಕರಿಗೆ ಧಾರ್ಮಿಕ ಅನುಭೂತಿಯನ್ನು ನೀಡುವ ಸದುದ್ದೇಶದಿಂದಲೇ ಆಸ್ತಿತ್ವದಲ್ಲಿರುವ ಸಾವಿರಾರು ಮಠ ಮಂದಿರಗಳು ಶೋಷಣೆಯನ್ನೂ ಮಾಡಿವೆ. ಆ ಮೂಲಕ ಭ್ರಷ್ಠತೆ ಅನೈತಿಕತೆಗೆ ಅಭಯ ಹಸ್ತ ನೀಡಿದೆ.

'ದೇವರನ್ನು ಒಲಿಸಿಕೊಳ್ಳಲು ಅದರದ್ದೇ ಆದ ಶಾಸ್ತ್ರೋಕ್ತ ಮಾರ್ಗವಿದೆಯಲ್ಲಾ, ಅದರ ಬಗ್ಗೆ ಬಿಂದುವಿಗೆ ಅಪಾರ ಶ್ರದ್ದೆ. ಅದು ಹೇಗೆ ಆಗಬೇಕೊ ಹಾಗೆಯೇ ಆಗಬೇಕು. ಋಕ್ಕುಗಳಲ್ಲಿ ಅಡಗಿರುವ ದೇವರುಗಳನ್ನು ಋಕ್ಕುಗಳಿಂದಲೇ ಒಲಿಸಿಕೊಳ್ಳಬೇಕು. ಈ ಬಗ್ಗೆ ಅವನದ್ದು ಶ್ರದ್ಧಾವಂತ ನಡೆ' - ಈ ಮಾತುಗಳು ಅಂಧ ಶ್ರದ್ದೆಯ ಆಚರಣೆಗಳಿಗೆ ಸಮರ್ಥನೆಯಂತಿವೆ.

'ದೇವರು ಸಾಮ್ರಾಜ್ಯದ ಸಮಾಜವಾದಿ ಸಂತನ ರೂಪಾತ್ಮಕ ಕಾದಂಬರಿ' ಎಂದು ಕೃತಿಯ ಬಗ್ಗೆ ಹೇಳಿಕೊಳ್ಳಲಾಗಿದೆ. ಶ್ರೀಮಂತ ಭಕ್ತರ ದೇಣಿಗೆಯಿಂದ ಒಂದಾದ ಮೇಲೊಂದು ಕಟ್ಟಡಗಳನ್ನು ಕಟ್ಟುತ್ತಾ ಹೋಮ, ಹವನ, ಸಮಾರಾಧನೆಯ ಮೂಲಕ ಭಕ್ತರಿಗೆ ಅನ್ನಸಂತರ್ಪಣೆ ಮಾಡುವುದು ಸಮಾಜವಾದವಾಗಲು ಸಾಧ್ಯವೇ? ಹರಿಜನ ಯುವಕರನ್ನು ಹತ್ತಿರ ಕೂರಿಸಿಕೊಳ್ಳುವುದು ಸ್ವತಃ ಸಸ್ಯಾಹಾರಿಯಾದರೂ ಮಾಂಸಹಾರಿಗಳಿಗೆ ಬಾಡೂಟದ ವ್ಯವಸ್ಥೆ ಮಾಡುವುದು, ದೇವಸ್ಥಾನದ ದತ್ತಿ ಜಮೀನನ್ನು ಸ್ವತಃ ಉಳುಮೆ ಮಾಡುವುದು ಇವೆಲ್ಲ ಜಡ್ಡುಗಟ್ಟಿದ ಸಮಾಜದಲ್ಲಿ ಕ್ರಾಂತಿಕಾರಕವಾಗಿ ಕಾಣುತ್ತವೆ ನಿಜ. ಆದರೆ ಕಾದಂಬರಿಯಲ್ಲಿ ಇವು ಕ್ವಚಿತ್ತಾದ ಪ್ರಸಂಗಳೇ ಹೊರತು ಸಹಜ ಜೀವನ ಶೈಲಿಯಾಗಿಲ್ಲ.

ಕಾದಂಬರಿ ಸುಂದರವಾದ ಬರವಣಿಗೆ ಶೈಲಿಯಲ್ಲಿದ್ದರೂ ಉದ್ದಕ್ಕೂ ಅತಿಮಾನವ ಶಕ್ತಿಯನ್ನು ವೈಭವೀಕರಿಸುತ ವ್ಯಕ್ತಿ ಪೂಜೆಗಿಳಿಯುವುದು ಕಾದಂಬರಿಯಲ್ಲಿ ಎದ್ದು ಕಾಣುವ ದೌರ್ಬಲ್ಯ. ಗಂಭೀರವಾದ ಮುನ್ನುಡಿಯನ್ನು ಬರೆದಿರುವ ಬಿದರಹಳ್ಳಿ ನರಸಿಂಹಮೂರ್ತಿಯವರು ಇದನ್ನು 'ಗತಿಸ್ಥಿತಿ', 'ಸಂಸ್ಕಾರ' ಕಾದಂಬರಿಗಳು ಎತ್ತುವ ಪ್ರಶ್ನೆಗಳಿಗೆ ಉತ್ತರ ಎಂದಿರುವುದು ಆಶಯವನ್ನು ಮಾತ್ರ ಮುನ್ನೆಲೆಗೆ ತಂದು ಕೃತಿಗಳ ಶಿಲ್ಪ ಮತ್ತು ಸಾಹಿತ್ಯಕ ಮೌಲ್ಯವನ್ನು ಬದಿಗೆ ಸರಿಸಿದಂತಿದೆ.

-ಎನ್.ಎಂ. ಕುಲಕರ್ಣಿ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಸೆಪ್ಟೆಂಬರ್‌ 2019)

Related Books