ಬದುಕಿಗೆ ಭರವಸೆ ತುಂಬುವ ಕೋಲುದಾರಿ...


ಅಂಧತ್ವವನ್ನು ಬದುಕಿನ ಹೋರಾಟದ ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಯಶ ಕಂಡಿರುವ ಸಿದ್ದೇಶ್ ಕೆ ಅವರಿಗೆ ಗೌರವಪೂರ್ವಕ ನಮನಗಳು. ಕಣ್ಣಿದ್ದು ಕುರುಡಾಗಿರುವ, ಕಣ್ಣಿದ್ದು ಅಸಮರ್ಥ ಭಾವದಿಂದ ದಿನದೂಡುವ ಅನೇಕ ಜನರಿಗೆ "ಕೋಲುದಾರಿ" ಪ್ರೇರಣೆ ನೀಡುವ ಪುಸ್ತಕಗಳ ಪಟ್ಟಿಯ ಸಾಲಿನಲ್ಲಿ ಜಾಗ ಪಡೆಯುತ್ತದೆ'. ಎನ್ನುತ್ತಾರೆ ಲೇಖಕಿ ಅಚಲ ಬಿ ಹೆನ್ಲಿ. ಅವರು ಪ್ರಾಧ್ಯಾಪಕ, ಲೇಖಕ ಸಿದ್ದೇಶ್ ಕೆ ಬರೆದ ಆತ್ಮ ಕಥೆ "ಕೋಲುದಾರಿ"ಗೆ ಬರೆದ ಅನಿಸಿಕೆ ಹೀಗಿದೆ...

ಛಂದ ಪ್ರಕಾಶನದಿಂದ ಪ್ರಕಟವಾಗಿರುವ ಹೊಸ ಪುಸ್ತಕ ಸಿದ್ದೇಶ್ ಕೆ ಅವರ ಆತ್ಮಕಥೆಯಾದ "ಕೋಲುದಾರಿ". ಹುಟ್ಟುವಾಗಲೇ ಅಂಧರಾಗಿ ಹುಟ್ಟುವುದು ಒಂದು ತೆರೆನಾದ ಕಷ್ಟವಾದರೆ, ಹದಿನೆಂಟು ವರ್ಷಗಳ ಕಾಲ ಕಣ್ಣಿದ್ದು, ನಂತರ ಅಂಧರಾಗುವುದು ವಿವರಿಸಲಾಗದ ಮತ್ತೊಂದು ಬಗೆಯ ಕಷ್ಟ. ಹೇಳಬೇಕೆಂದರೆ ಮಾನವನ ಐದು ಇಂದ್ರಿಯಗಳಲ್ಲಿ ಕಣ್ಣು ಬಹಳ ಮುಖ್ಯ. ಆದರೆ ಒಂದಷ್ಟು ವರ್ಷಗಳು ಕಣ್ಣಿದ್ದು, ನಂತರ ಅಂಧರಾಗಿ, ತದ ನಂತರ ಬದುಕಲ್ಲಿ ಗೆದ್ದವರೊಬ್ಬರ ಧನಾತ್ಮಕ ಕಥೆಯಿದು.

ಅಂಧತ್ವವನ್ನು ಬದುಕಿನ ಹೋರಾಟದ ಮೆಟ್ಟಿಲಾಗಿ ಪರಿವರ್ತಿಸಿಕೊಂಡು ಯಶ ಕಂಡಿರುವ ಸಿದ್ದೇಶ್ ಕೆ ಅವರಿಗೆ ಗೌರವಪೂರ್ವಕ ನಮನಗಳು. ಕಣ್ಣಿದ್ದು ಕುರುಡಾಗಿರುವ, ಕಣ್ಣಿದ್ದು ಅಸಮರ್ಥ ಭಾವದಿಂದ ದಿನದೂಡುವ ಅನೇಕ ಜನರಿಗೆ "ಕೋಲುದಾರಿ" ಪ್ರೇರಣೆ ನೀಡುವ ಪುಸ್ತಕಗಳ ಪಟ್ಟಿಯ ಸಾಲಿನಲ್ಲಿ ಜಾಗ ಪಡೆಯುತ್ತದೆ.

ಈ ಪುಸ್ತಕ ಓದಲು ಪ್ರಾರಂಭಿಸಿದಾಗ ನಾನೂ ಕೆಲವು ಸಲ ಕಣ್ಣು ಮುಚ್ಚಿ ಕತ್ತಲ ಪ್ರಪಂಚ ಹೇಗಿರಬಹುದು ಎಂಬ ವಿಫಲ ಪ್ರಯತ್ನ ನಡೆಸಿದೆ. ಸಿದ್ದೇಶ್ ರವರು ನೋಡುವ ಪ್ರಪಂಚದಿಂದ ನೋಡದೇ ಇರುವ ಪ್ರಪಂಚಕ್ಕೆ ಕಾಲಿಟ್ಟು, ನಂತರ ತಮ್ಮ ಆತ್ಮಸ್ಥೈರ್ಯ, ಸತತ ಪ್ರಯತ್ನ, ಕುಟುಂಬ- ಸ್ನೇಹಿತರ ಬೆಂಬಲ, ಎಲ್ಲಕ್ಕೂ ಮಿಗಿಲಾಗಿ ಅವರ ತಂದೆಗೆ ಹೇಳಿದ "ತಾನು ಜೀವನದಲ್ಲಿ ಎಂದಿಗೂ ಹೊರೆಯಾಗುವುದಿಲ್ಲವೆಂಬ" ಅಚಲವಾದ ಮಾತು ಅವರನ್ನು ಎಲ್ಲ ಕಷ್ಟಗಳನ್ನು ಎದುರಿಸಲು ಧೈರ್ಯ ತಂದುಕೊಟ್ಟಿದೆ.

"ಕೋಲುದಾರಿ" ಪುಸ್ತಕದಲ್ಲಿ ಜಗತ್ತು ಅದೆಷ್ಟು ವರ್ಣರಂಜಿತವಾಗಿದೆ ಎನಿಸುವ ಪ್ರಾಯವಾದ ಹದಿನೆಂಟರಲ್ಲಿ ಅನಾರೋಗ್ಯದ ಕಾರಣ ಕಣ್ಣು ಕಳೆದುಕೊಳ್ಳುವ ಯುವಕನಿಂದ ಪ್ರಾರಂಭಗೊಂಡು, ನಂತರ ಓದು-ಪದವಿ-ಕೆಲಸ, ಮಾತ್ರವಲ್ಲದೇ ಅಂಧರು ಕಣ್ಣಿಲ್ಲದೆಯೂ ಹೇಗೆ ಎಲ್ಲ ಜನರಂತೆ ತಮ್ಮ ಬಿಳಿ ಕೋಲಿನ ಸಹಾಯದಿಂದ ಓಡಾಡಬೇಕು, ಅಂಧರು ಹೇಗೆ ಸ್ವಾವಲಂಬಿಯಾಗಿ ಎಲ್ಲ ಕೆಲಸಗಳನ್ನು ಮಾಡಲು ಕಲಿಯುತ್ತಾರೆ, ಪ್ರತಿ ಹೆಜ್ಜೆಯಲ್ಲೂ ಅವರಿಗೆ ಎದುರಾಗುವ ಸವಾಲುಗಳೇನು ಎಂಬ ಎಲ್ಲ ರೀತಿಯ ಮಾಹಿತಿಗಳನ್ನು ಕಲೆ ಹಾಕುತ್ತಾ ಹೋಗುತ್ತದೆ.

ಮಧ್ಯದಲ್ಲಿ ಶ್ರೀದೇವಿಯವರೊಂದಿಗೆ ಅರಳುವ ಪ್ರೀತಿ, ಸರಕಾರಿ ಕೆಲಸಕ್ಕೆ ಸಿದ್ದೇಶ್ ರವರು ನಡೆಸುವ ಕಠಿಣ ತರಬೇತಿ, ಇವೆಲ್ಲ ಓದುಗನಿಗೆ ಚಿತ್ರ ನೋಡಿದಂತೆ ಭಾಸವಾಗುತ್ತದೆ. ಅನೇಕ ಸಲ ಕಣ್ಣು ಮಂಜಾದರೆ, ಹಲವು ಸಲ ಎಲ್ಲ ಸರಿಯಿದ್ದು ನಾವು ಮಾಡಿದ ಸಾಧನೆಯಾದರೂ ಏನು ಎಂಬ ಪ್ರಶ್ನೆಯನ್ನು ಹುಟ್ಟು ಹಾಕುತ್ತದೆ. 

ತಮ್ಮ ನಿರಂತರ ಪ್ರಯತ್ನಕ್ಕೆ ಉತ್ತರವಾಗಿ ಸರಕಾರಿ ಕಾಲೇಜಿನ ಪ್ರಾಧ್ಯಾಪಕರಾದ ಖುಷಿಯ ಜೊತೆಗೆ "ನನ್ನ ಮಗನಿಗೆ ಏನಾಗಿದೆ ಎಂದು ಹೀಗೆ ಕೂತಿದ್ದೀರಾ? ಅವನಿಗೆ ಏನೂ ಆಗಲ್ಲ..!" ಎಂದು ದೃಷ್ಟಿ ಕಳೆದುಕೊಂಡಾಗಲೂ ಧೈರ್ಯದ ಮಾತುಗಳನ್ನಾಡಿದ ಲೇಖಕರ ತಾಯಿಯ ಅಗಲಿಕೆಯೊಂದಿಗೆ ಪುಸ್ತಕದ ಓದು ಓದುಗನ ಮನಸ್ಸನ್ನು ನಾಟುತ್ತದೆ.

ಪುಸ್ತಕದ ಹೆಸರು: ಕೋಲುದಾರಿ
ಲೇಖಕರು: ಸಿದ್ದೇಶ್ ಕೆ
ಪ್ರಕಾಶಕರು: ಛಂದ ಪುಸ್ತಕ
ಪುಟಗಳು: 140
ಬೆಲೆ: 160

 

MORE FEATURES

ಅಂಬೇಡ್ಕರ್ ವಿದ್ಯಾವಂತ ಜನರ ಕೈಯಲ್ಲಿ ಮೋಜಿನ ವಸ್ತುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ..

07-12-2025 ಬೆಂಗಳೂರು

"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...

BlrLitFest 2025: ಸಾಹಿತ್ಯಾಸಕ್ತರ ಮಹಾಸಂಗಮ!

06-12-2025 ಬೆಂಗಳೂರು

ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...

ಮತ್ತೆ ಮತ್ತೆ ಕಾಡುವ ಕಥೆಗಳು

06-12-2025 ಬೆಂಗಳೂರು

ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...