ಸ್ತ್ರೀಪಾತ್ರ ಕೇಂದ್ರಿತ ಕಥನಗಳ ಗುಚ್ಛ `ಋತು ಸಂಕ್ರಮಣ’


"ಇಲ್ಲಿ ಕ್ರಿಯಾಶೀಲ ಲೌಕಿಕ ಬದುಕಿನ ಅಂತ್ಯದ ಬಳಿಕ ಜೀವನದ ಉತ್ತರಾರ್ಧದಲ್ಲಿ ಮನುಷ್ಯನನ್ನು ಕಾಡುವ ಏಕಾಂಗಿತನ ಹಾಗೂ ಚಡಪಡಿಕೆಯ ಅಶಾಂತ ಮನೋಧರ್ಮಕ್ಕೆ ಪರಿಹಾರಾತ್ಮಕವಾಗಿ ವಾನಪ್ರಸ್ಥ ಕೈಗೊಳ್ಳುವ ಯಾಜ್ಞವಲ್ಕರ ನಿರ್ಧಾರ ಮತ್ತು ವಿರಕ್ತಿಯೇ ಮೂರ್ತೀಭವಿಸಿದಂತಿರುವ ಗೊಮ್ಮಟೇಶ್ವರನ ಪ್ರತಿಮೆಯ ಸನ್ನಿಧಿಯನ್ನು ಬಹಳ ಉತ್ತಮ ರೀತಿಯಿಂದ ವಿವರಿಸಲಾಗಿದೆ," ಎನ್ನುತ್ತಾರೆ ಲೇಖಕಿ ಗೀತಾ ಶೆಣೈ. ಅವರು ಗೋಕುಲದಾಸ ಪ್ರಭು ಅವರ ಕೊಂಕಣಿ ಮೂಲ ‘ಋತು ಸಂಕ್ರಮಣ ಮತ್ತು ಇತರ ಕಥೆಗಳು’ ಕೃತಿಗೆ ಬರೆದ ಲೇಖಕರ ನುಡಿ.

ಗೋಕುಲದಾಸ ಪ್ರಭು ಕೊಂಕಣಿಯ ಮಹತ್ವದ ಲೇಖಕರು. ನಿರಂತರವಾಗಿ ಭಾಷಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲರು. ಪ್ರಸ್ತುತ ಗ್ರಂಥದಲ್ಲಿ ಅವರ ಆಯ್ದ ಹನ್ನೆರಡು ಬಿಡಿ ಕಥೆಗಳ ಅನುವಾದವಿದೆ.

ಸಮಾಜದ ಅತಿಸಾಮಾನ್ಯ ಮಹಿಳೆಯರ ಬವಣೆಯ ಬದುಕನ್ನು ವಾಸ್ತವ ವಿವರಗಳೊಂದಿಗೆ ಚಿತ್ರಿಸುವ ಗೋಕುಲದಾಸ ಪ್ರಭು ಸ್ತ್ರೀಸಂವೇದನಾಶೀಲ ಲೇಖಕರು. ಈ ಸಂಕಲನದ ಬಹುಪಾಲು ಕಥೆಗಳು ಸ್ತ್ರೀಪಾತ್ರ ಕೇಂದ್ರಿತವಾಗಿವೆ. ಈ ಕಥೆಗಳಲ್ಲಿ ಎಲ್ಲ ವಯೋಮಾನದ, ಎಲ್ಲ ವರ್ಗಗಳ ಮಹಿಳೆಯರಿದ್ದಾರೆ. ಶಾಲಾ ವಿದ್ಯಾರ್ಥಿನಿ, ಶಿಕ್ಷಕಿ, ಎಳೆತಾಯಿ, ಮುದಿತಾಯಿ, ಶೋಕಭರಿತ ತಾಯಿ, ಹೆಣ್ಣಾಳು, ಪರಿತ್ಯಕ್ಕೆ, ಆದರ್ಶ ಸೋದರಿ, ಆದರ್ಶ ಪತ್ನಿ ಹೀಗೆ. ಈ ಹೆಣ್ಣುಗಳ ಮಾನಸಿಕ ತುಮುಲವನ್ನು, ದೈಹಿಕ ನೋವನ್ನು ಅನಾವರಣಗೊಳಿಸಿ ಅದಕ್ಕೆ ಕಾರಣವಾದಂತಹ ಸಾಮಾಜಿಕ ಮತ್ತು ಕೌಟುಂಬಿಕ ಪರಿಸ್ಥಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸುವ ಈ ಲೇಖಕ ಇಲ್ಲಿ ಯಾವುದು ಸರಿ, ಯಾವುದು ತಪ್ಪು ಎನ್ನುವ ತೀರ್ಮಾನ ಕೈಗೊಳ್ಳುವ ಜವಾಬ್ದಾರಿಯನ್ನು ಓದುಗರಿಗೇ ಬಿಟ್ಟು ಕೊಡುತ್ತಾರೆ. ಸೂರ್ಯನಷ್ಟೇ ನಿಖರವಾದ ದಿನಚರಿಯನ್ನು ಹೊಂದಿದ ಕಾಯಕನಿರತೆ ಮುಂಡಿಗೆ, ಆಸರೆ ಬೇಡುತ್ತಾ ಮನೆಮನೆ ಅಲೆಯುವ ವ್ಯಾಧಿಗ್ರಸ್ತೆ ದುರಪದಳಿಗೆ ಮತ್ತು ಬಾರದ ಗಂಡನ ನಿರೀಕ್ಷೆಯಲ್ಲಿ ಸುದೀರ್ಘ ಕಾಲ ಕಳೆದ ಸಾವತ್ರಕ್ಕನಿಗೆ ಒದಗಿ ಬರುವ ಆಘಾತಕಾರಿ ಅಂತ್ಯಕ್ಕೆ ಹೊಣೆ ಯಾರು ಎನ್ನುವುದು ಇಲ್ಲಿ ಮಹತ್ವದ ಪ್ರಶ್ನೆಯಾಗುತ್ತದೆ. ಯಾರೋ ಮಾಡಿದ ತಪ್ಪಿಗೆ ಯಾರೋ ತಲೆ ಕೊಡಬೇಕಾದ ದುರಂತ ಕಾಣಿಸಿಕೊಂಡಾಗ, ಅಪರಾಧಿ ಮನೋಭಾವ ಕಾಡುವುದು ಬಲಿಪಶುಗಳಲ್ಲಿಯೇ ವಿನಾ ತಪ್ಪಿತಸ್ಥರಲ್ಲಿ ಅಲ್ಲ ಎನ್ನುವುದನ್ನು 'ಏಕಾಂಗಿ ಸಂಜೆ' ಮತ್ತು 'ಗಾಯ' ಕಥೆಗಳು ನಿರೂಪಿಸುತ್ತವೆ. ಅತ್ತಿಗೆ-ಮೈದುನ, ಅಕ್ಕ-ತಮ್ಮನ ನಡುವಿನ ನಿಷ್ಕಲ್ಮಷ ಮತ್ತು ನಿಸ್ವಾರ್ಥದ ಸಂಬಂಧವನ್ನು ಈ ಲೇಖಕ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಇಲ್ಲಿ ಕ್ರಿಯಾಶೀಲ ಲೌಕಿಕ ಬದುಕಿನ ಅಂತ್ಯದ ಬಳಿಕ ಜೀವನದ ಉತ್ತರಾರ್ಧದಲ್ಲಿ ಮನುಷ್ಯನನ್ನು ಕಾಡುವ ಏಕಾಂಗಿತನ ಹಾಗೂ ಚಡಪಡಿಕೆಯ ಅಶಾಂತ ಮನೋಧರ್ಮಕ್ಕೆ ಪರಿಹಾರಾತ್ಮಕವಾಗಿ ವಾನಪ್ರಸ್ಥ ಕೈಗೊಳ್ಳುವ ಯಾಜ್ಞವಲ್ಕರ ನಿರ್ಧಾರ ಮತ್ತು ವಿರಕ್ತಿಯೇ ಮೂರ್ತೀಭವಿಸಿದಂತಿರುವ ಗೊಮ್ಮಟೇಶ್ವರನ ಪ್ರತಿಮೆಯ ಸನ್ನಿಧಿಯನ್ನು ಬಹಳ ಉತ್ತಮ ರೀತಿಯಿಂದ ವಿವರಿಸಲಾಗಿದೆ.

ದಿನನಿತ್ಯದ ಬಳಕೆಯಲ್ಲಿರುವ ಕೊಂಕಣಿ ಆಡುಭಾಷೆಯ ಮಾಧುರ್ಯವನ್ನು ಸವಿಯಬೇಕಾದರೆ ಗೋಕುಲದಾಸ ಪ್ರಭು ಅವರ ಮೂಲ ಕಥೆಗಳನ್ನು ಓದಬೇಕು. ಸಂಭಾಷಣೆ ಪ್ರಧಾನವಾಗಿರುವ ಈ ಕಥೆಗಳಲ್ಲಿ ಅದಕ್ಕೆ ಹೆಚ್ಚಿನ ಅವಕಾಶ ದೊರೆತಿದೆ. ಆಯಾಮಿ' ಸಂಕಲನದ ಕಥೆಗಳಲ್ಲಿ ಗೋಕುಲದಾಸ ಪ್ರಭು ಅವರ ಅಂತರ ನಾನು ಈ ಸಂಕಲನವನ್ನು ಕನ್ನಡಕ್ಕೆ ನವ್ಯಪ್ರಜ್ಞೆಯನ್ನು ಗುರುತಿಸಲಾಗಿದೆ. ಅನುವಾದಿಸಿದ್ದೇನೆ. ಇದರ ಪ್ರಕಾಶಕರು ಕೇಂದ್ರ ಸಾಹಿತ್ಯ ಅಕಾದೆಮಿ.

`ಋತು ಸಂಕ್ರಮಣ' ಕಥಾಸಂಕಲನದ ಮೊದಲ ಮುದ್ರಣದ ಪ್ರಕಾಶಕರು ಮಂಗಳೂರಿನ 'ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನ' ಸಂಸ್ಥೆ, ಇದೀಗ ಎರಡನೆಯ ಮುದ್ರಣವನ್ನು ಪ್ರಕಟಿಸುತ್ತಿರುವ ಕರ್ನಾಟಕದ ಪ್ರತಿಷ್ಠಿತ 'ನವಕರ್ನಾಟಕ ಪ್ರಕಾಶನ ಸಂಸ್ಥೆ'ಗೆ ನಾನು ಆಭಾರಿಯಾಗಿದ್ದೇನೆ. ಕಥೆಗಳ ಅನುವಾದ ಮತ್ತು ಪ್ರಕಟಣೆಗೆ ಒಪ್ಪಿಗೆ ನೀಡಿದ ಮೂಲ ಲೇಖಕರಾದ ಗೋಕುಲದಾಸ ಪ್ರಭು ಅವರಿಗೆ ಹೃತೂರ್ವಕ ಕೃತಜ್ಞತೆಗಳು, ಡಿಟಿಪಿ ಮತ್ತು ಮುದ್ರಣ ಕಾರ್ಯದಲ್ಲಿ ಸಹಕರಿಸಿದ ನವಕರ್ನಾಟಕ ಬಂಧುಗಳಿಗೆ ಮತ್ತು ಸುಂದರ ಮುಖಪುಟ ವಿನ್ಯಾಸ ಮಾಡಿರುವ ಕಮಲಂ ಅರಸು ಅವರಿಗೆ ನನ್ನ ಅನಂತ ವಂದನೆಗಳು,

- ಡಾ. ಗೀತಾ ಶೆಣೈ

MORE FEATURES

'ಹೆಗಲು': ತ್ಯಾಗ, ನಿಸ್ವಾರ್ಥತೆಯ ಅಪರೂಪದ ಜೀವನಗಾಥೆ

14-12-2025 Bengaluru

"ಹೆಗಲು" ಲೇಖಕರು : ಭಾರತಿ ಹೆಗಡೆ ಪ್ರಕಾಶಕರು : ಬೆನಕ ಬುಕ್ಸ ಬ್ಯಾಂಕ್. ಪುಟಗಳು : 142 ಬೆಲೆ: ₹180/-...

ಅನುಕ್ಷಣ ಅನುಭವಿಸಿ: ಸಮಯ ನಿರ್ವಹಣೆಯ ಮಾರ್ಗದರ್ಶಿ

14-12-2025 BENGALURU

ಪುಸ್ತಕದ ಸಾರಾಂಶ "ಬದುಕು ದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು" ಎನ್ನುವ ನಿಟ್ಟಿನಲ್ಲಿ ಸಮಯ ನಿರ್ವಹ...

ಮಕ್ಕಳ ಕಥಾಸಾಹಿತ್ಯ ಸಂವೇದನೆಯ ಹೊಸ ಹೆಜ್ಜೆಗಳು.......

13-12-2025 ಬೆಂಗಳೂರು

"ಇಲ್ಲಿನ ಯಾವ ಕತೆಗಳಲ್ಲೂ ಮಾನವ ಪಾತ್ರಗಳು ಇಣುಕುವುದಿಲ್ಲ, ಆದರೆ ಮನುಷ್ಯನ ಗುಣ-ಸ್ವಭಾವ, ನಡತೆ, ನಿಯತ್ತು, ನೀಚತನ...