"ಕಾಲ ಬದಲಾದಂತೆಯೆ ಕಲೆಯ ಮತ್ತು ಕಲಾವಿದರ ಮನಃಸ್ಥಿತಿಗಳಾಗಲಿ ವ್ಯವಸ್ಥೆಗಳಾಗಲಿ ಬದಲಾಗಿದೆಯಾದರೂ ಯಕ್ಷಗಾನ ಕಲೆ ಅಂದಿನಂತೆಯೆ ತನ್ನ ಮೂಲ ಸತ್ವವನ್ನು ಉಳಿಸಿಕೊಂಡೆ ಇದೆ. ಅನೇಕ ಬದಲಾವಣೆಗಳಾಗಿಯೂ ಯಕ್ಷಗಾನ ಕಲೆಯು ತನ್ನ ಮೂಲ ಸತ್ವವನ್ನೇನು ಕಳೆದು ಕೊಂಡಿಲ್ಲವೆಂಬುದು ಸಂತಸದ ವಿಷಯ" ಎನ್ನುತ್ತಾರೆ ಲೇಖಕ ಸೃಜನ್ ಗಣೇಶ್ ಹೆಗಡೆ. ಅವರ ‘ಉತ್ಕಟ’ ಕಾದಂಬರಿಗಾಗಿ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ...
ದಕ್ಷಿಣೋತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಮಲೆನಾಡಿನ ಮೂಲೆ ಮೂಲೆಯಲ್ಲಿಯೂ ಅನೇಕ ಜನರ ಬದುಕು ಭಾವಗಳಲ್ಲಿ ರಿಂಗಣಿಸುವ, ಅಂತೆಯೆ ಸದಾ ಚೈತನ್ಯವನ್ನು ಆನಂದಮಯವಾಗಿರಿಸಿರುವ ಕಲೆಯೆಂದರೆ ಯಕ್ಷಗಾನ. ಎಷ್ಟೋ ಕಲಾವಿದರಿಗೆ ಅದೊಂದು ಕಲೆ ಮಾತ್ರವಾಗಿರದೆ ಬದುಕು ಭಾವವೆ ಆಗಿದೆ. ಯಕ್ಷಗಾನ ಕಲೆಯನ್ನು ನಂಬಿಕೊಂಡು ಎಷ್ಟೋ ಕುಟುಂಬಗಳು ಬಾಳ್ಮೆ ಮಾಡುತ್ತಿವೆ. ಆಧುನಿಕ ಮಾಧ್ಯಮಗಳ ಅಲೆಯು ಹೆಚ್ಚಾದಂತೆಯೆ ಕಲೆಯ ನೆಲೆಯ ಪರಿಧಿಯು ಬೆಳೆದಿದೆ.
ಕಾಲ ಬದಲಾದಂತೆಯೆ ಕಲೆಯ ಮತ್ತು ಕಲಾವಿದರ ಮನಃಸ್ಥಿತಿಗಳಾಗಲಿ ವ್ಯವಸ್ಥೆಗಳಾಗಲಿ ಬದಲಾಗಿದೆಯಾದರೂ ಯಕ್ಷಗಾನ ಕಲೆ ಅಂದಿನಂತೆಯೆ ತನ್ನ ಮೂಲ ಸತ್ವವನ್ನು ಉಳಿಸಿಕೊಂಡೆ ಇದೆ. ಅನೇಕ ಬದಲಾವಣೆಗಳಾದಾಗಿಯೂ ಯಕ್ಷಗಾನ ಕಲೆಯು ತನ್ನ ಮೂಲ ಸತ್ವವನ್ನೇನು ಕಳೆದು ಕೊಂಡಿಲ್ಲವೆಂಬುದು ಸಂತಸದ ವಿಷಯ. ಅದರಲ್ಲಿಯೂ ಅಂತರ್ಜಾಲ ಮಾಧ್ಯಮಗಳ ಪರಿಣಾಮಾರ್ಥವಾಗಿ ಯಕ್ಷಗಾನ ಇಂದು ವಿಶ್ವಗಾನವೂ ಆಗಿದೆ ಎನ್ನಬಹುದು.
ಜೀವನದ ನೋವು ನಲಿವುಗಳೆಲ್ಲವನ್ನೂ ಸಮನಾಗಿ ಸ್ವೀಕರಿಸುತ್ತ ಕಲೆಯನ್ನು ಅಪಾರವಾಗಿ ಪೂಜಿಸಿ ಬದುಕುವ ಅದೆಷ್ಟೋ ಕಲಾವಿದರು ಮರೆಯಾಗಿದ್ದಾರೆ. ಅಂತೆಯೆ ಇಂದಿಗೂ ಇದ್ದಾರೆ. -ಯಾವ ಕಲೆಯೂ ಯಾವ ಕಾಲಕ್ಕೂ ಖಾಲಿಯಾಗುವುದಿಲ್ಲ ಉತ್ಕೃಷ್ಟವಾಗಿ ಬೆಳೆಯುತ್ತಲೆ ಸಾಗುತ್ತದೆ- ಎಂಬುದಕ್ಕೆ ಯಕ್ಷಗಾನ ಕಲೆಯೆ ಸಾಕ್ಷಿ. ಒಂದು ಕಾಲದಲ್ಲಿ ತಲೆಯ ಮೇಲೆ ಭಾರವಾದ ಪೆಟ್ಟಿಗೆಗಳನ್ನು ಹೊತ್ತು ದೂರದೂರಿಗೆ ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಸಾಗಿಯೆ ಹುಮ್ಮಸ್ಸಿನಿಂದ ಗೆಜ್ಜೆ ಕಟ್ಟಿ ಪ್ರದರ್ಶನ ಕೊಡುತ್ತಿದ್ದ ಕಲಾವಿದರು ಇಂದು ಗಗನಮಾರ್ಗಿಗಳಾಗಿ ಲೋಹದ ಹಕ್ಕಿಯನ್ನೇರಿ ವಿಶ್ವದ ಬೇರೆ ಬೇರೆ ಕಡೆಗಳಲ್ಲಿಯೂ ಪ್ರದರ್ಶನ ಕೊಡುವಷ್ಟು ಬೆಳೆದಿದ್ದಾರೆಂದರೆ ನಿಜಕ್ಕೂ ಯಕ್ಷಗಾನ ವಿಶ್ವಗಾನವಾಗುತ್ತಿರುವುದಕ್ಕೊಂದು ಉದಾಹರಣೆ.
ಸಾಕಷ್ಟು ಸಂಶೋಧನೆಗಳೂ ಬರಹಗಳೂ ವಿಮರ್ಶೆಗಳೂ ಯಕ್ಷಗಾನದ ಕುರಿತಾದ ಚಿಂತನೆಗಳೂ ಆರಂಭವಾದ ಈ ಕಾಲದಲ್ಲಿ ವಾಟ್ಸಾಪ್ ಫೇಸ್ಬುಕ್ ಯ್ಯೂಟ್ಯೂಬ್ಗಳಂತಹ ಮಾಧ್ಯಮಗಳಲ್ಲಿ ನಿತ್ಯವೂ ಯಕ್ಷಗಾನ ಪ್ರಸಾರಗೊಳ್ಳುತ್ತ ಕರದಲ್ಲಿಯೆ ಯಕ್ಷಗಾನದ ಡೇರೆ ಎದ್ದು ನಿಲ್ಲುವ ಸಮಯ ಬಂದಿದೆ. ಕಲಾವಿದರೊಂದಿಗಿನ ಮಾತುಕತೆ, ಅನುಭವದ ಹಂಚಿಕೆ ಎಲ್ಲವೂ ಅಭಿಮಾನಿಗಳನ್ನು ಇನ್ನೂ ಹೆಚ್ಚಿಸುತ್ತಲೆ ಇದೆ. ಮತ್ತು ಕಲಾವಿದರೂ ಹೆಚ್ಚುತ್ತಿದ್ದಾರೆ. ಹಳೆ ಮತ್ತು ಹೊಸ ಯಕ್ಷಗಾನ ಪ್ರದರ್ಶನಗಳ ಸಂಗ್ರಹ ಮತ್ತು ಹಂಚಿಕೆಯ ಕಾರ್ಯವು ಹೊಸದಾಗಿ ಕಲಿಯುವವರಿಗೂ ಮನರಂಜನೆ ಬಯಸುವವರಿಗೂ ಮನೋವಿಕಾಸಕ್ಕೆ ಮೇವು ಬೇಕೆಂಬುವವರಿಗೂ ವರ್ತಮಾನದ ಜಗತ್ತು ಈ ಮೂಲಕ ಹೊಸ ಅವಕಾಶ ಕಲ್ಪಿಸುತ್ತಿದೆ.
ಒಟ್ಟಾರೆಯಾಗಿ ಒಂದು ಹೆಮ್ಮೆಯ ಕಲೆ ತನ್ನ ಹಿರಿಮೆಯನ್ನು ಸದಾ ಉಳಿಸಿಕೊಂಡು ಬೆಳೆಯುತ್ತಲೆ ಇರುವುದು ಆ ಕಲೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ನನ್ನಂತಹ ಎಲ್ಲ ಕಲಾವಿದರಿಗೂ ಸಂತಸದ ಸಂಗತಿಯೆ ಸರಿ. ಈ ಎಲ್ಲ ಸತ್ತ್ ಪ್ರಯತ್ನಗಳ ನಡುವೆ ನನ್ನ ಈ ಒಂದು ಕಲಾಕೃತಿಯೂ ರೂಪುಗೊಂಡುದು ಸಂತೃಪ್ತಿ ತಂದಿದೆ.
ಪೀಳಿಗೆಯಿಂದ ಪೀಳಿಗೆಗೆ ಉಳಿದು ಬರುವ, ಆ ಮೂಲಕ ಬೆಳೆದಷ್ಟೂ ಬೆಳೆಯುವ ಕಲೆಯ ವಂಶವಾಹಿನಿಯ ಗುಣವು ವಿಶೇಷವಾದುದು. ಆ ನಿಟ್ಟಿನಲ್ಲಿಯೆ ಎಷ್ಟೋ ಕುಟುಂಬಗಳು ‘ಯಕ್ಷ ಕುಟುಂಬ’ಗಳಾಗಿಯೆ ಜನಮನದ ನಡುವೆ ಉಳಿದಿರುವುದನ್ನು ಗಮನಿಸಬಹುದು. ಕಲೆಯ ಮೇಲಿನ ಪ್ರೀತಿ ಅಭಿಮಾನ ವಿಶ್ವಾಸ ಶ್ರದ್ಧೆ ಬದ್ಧತೆ ಎಲ್ಲವೂ ಒಬ್ಬ ಕಲಾವಿದನ ಮನಸ್ಸಿನಲ್ಲಿ ಉತ್ಕಟವಾಗಿದ್ದು, ತನ್ನ ವಂಶದಲ್ಲಿ ಕಲೆಯು ಉಳಿದು ಬೆಳೆಯಬೇಕೆಂಬ ಹಂಬಲ ಹಿರಿದಾಗಿರುತ್ತದೆ.
ಈ ಎಲ್ಲ ಅಂಶಗಳನ್ನು ನನ್ನೊಳಗೆ ಇಳಿಸಿಕೊಂಡು ಈ ಕಾದಂಬರಿಯ ಬರಹ ಒಡಮೂಡಿದೆ. ಬದುಕಿನ ಏಳುಬೀಳುಗಳಲ್ಲಿಯೂ ಕಲೆಯನ್ನು ದೃಢವಾಗಿ ನಂಬುವ ಕಲಾವಿದನೋರ್ವನ ಚಿತ್ರಣದಲ್ಲಿಯೆ ಮಾನಸಿಕ ಒಳ ತುಮುಲಗಳೂ ಮಾನ ಸಮ್ಮಾನ ಮರ್ಯಾದೆಗಳಿಗೆ ಕೊಡಮಾಡುವ ಸ್ಥಾನಗಳೂ ಕನಸುಗಳನ್ನು ಕಟ್ಟಿ ಅದರ ಸಾಕಾರಕ್ಕೆ ಹಪಹಪಿಸುವ ನಡೆಯೂ ಈ ಕಲಾಕೃತಿಯ ಮೊದಲ ಭಾಗವಾದರೆ, ಆ ಕಲಾವಿದನ ಉತ್ಕಟತೆಗೆ ಚಿಗುರಾಗುವ ಭಾಗ ಎರಡನೆಯದು.
"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...
"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...
"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...
©2024 Book Brahma Private Limited.