ಯಾವುದೀ ಹೊಸ ಒಗಟು? ಕೃತಿ ಲೋಕಾರ್ಪಣೆ ಸಮಾರಂಭ

Date: 21-01-2024

Location: ಚಿಕ್ಕಮಗಳೂರು


ಚಿಕ್ಕಮಗಳೂರು; ಸುಪ್ರಭಾತ ಮತ್ತು ಕಲ್ಕಟ್ಟೆ ಪುಸ್ತಕ ಮನೆ ಪ್ರಾಯೋಜಕತ್ವದಲ್ಲಿ, ಚಿಕ್ಕಮಗಳೂರು ನಗರದ ಶೃಂಗೇರಿ ಶಂಕರಮಠ ಪ್ರವಚನ ಮಂದಿರದಲ್ಲಿ ದಿನಾಂಕ 21-01-2024 ರಂದು ನಡೆದ ಸಸಿಹಿತ್ಲು ಪಿ ಸುಬ್ರಮಣ್ಯರವರ “ಯಾವುದೀ ಹೊಸ ಒಗಟು?” ಕಾದಂಬರಿಯ ಲೋಕಾರ್ಪಣಾ ಸಮಾರಂಭದಲ್ಲಿ, ಕಲ್ಕಟ್ಟೆ ನಾಗರಾಜರಾವ್‌ ಕೃತಿ ಪರಿಚಯಿಸುತ್ತಾ ಮಲೆನಾಡಿನ ಚಿತ್ರಣ, ಗ್ರಾಮೀಣ ಭಾಷೆಯ ಸೊಗಡನ್ನು ಹೊಂದಿರುವ ಯಾವುದೀ ಹೊಸ ಒಗಟು ಕಾದಂಬರಿ, ನವಿರಾದ ಹಾಸ್ಯದೊಂದಿಗೆ ಸಿನಿಮೀಯ ಗುಣಗಳನ್ನೂ ಹೊಂದಿದ್ದು, ಓದಿ ಮರೆಯಲಾಗದ ಕಥಾಹಂದರ ಕಾಣಬಹುದೆಂದು ಅಭಿಪ್ರಾಯಿಸಿದರು.

ಹೆಣ್ಣಿನ ಸಾಮಾಜಿಕ ತುಮುಲಗಳು, ಕೌಟುಂಬಿಕ ವಿಚಾರಗಗಳಲ್ಲಿ ಆಕೆ ತೋರಿಸುವ ಕಾಳಜಿಯನ್ನು ಲೇಖಕರು ಕುತೂಹಲಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಭಿನ್ನ ವ್ಯಕ್ತಿತ್ವಗಳ ಸಂಘರ್ಷ, ಒಳಿತುಕೆಡಕುಕಳ ಹಾವು ಏಣಿಯಾಟ, ಮಧ್ಯಮ ವರ್ಗದ ಕನಸುಗಳು, ಹೆಣ್ಣಿನ ಮನಸ್ಥಿತಿ ಚಿತ್ರಣ ಮನಮುಟ್ಟುವಂತಿದೆ ಎಂದರು.

ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಡಾ. ಬೆಳವಾಡಿ ಮಂಜುನಾಥರವರು, ದೈನಂದಿನ ಘಟನೆಗಳನ್ನು ಆಧರಿಸಿದ ಕಾದಂಬರಿ ಇದಾಗಿದ್ದು ಪ್ರಸ್ತುತ ಕಾಲಘಟ್ಟದ ಅನೇಕ ಸಮಸ್ಯೆಗಳಿಗೆ ಉತ್ತರವೇನೋ ಎಂಬಂತೆ ಕಥೆಯನ್ನು ಹೆಣೆಯಲಾಗಿದೆ. ಕೃತಿಯ ಕೇಂದ್ರ ಯಾವುದು ಎನ್ನುವುದೇ ಇಲ್ಲಿಯ ಪ್ರಮುಖ ಒಗಟು. ಇಲ್ಲಿರುವ ಹದಿನೆಂಟು ಪಾತ್ರಗಳಲ್ಲಿ ಹದಿನೇಳು ಪಾತ್ರಗಳನ್ನು ಸಮರ್ಥವಾಗಿ ಕೃತಿಕಾರರು ಕಟ್ಟಿಕೊಟ್ಟಿದ್ದಾರೆ ಎಂದರು.

ಹಿರಿಯ ಪತ್ರಕರ್ತ ಸ. ಗಿರಿಜಾಶಂಕರ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾದಂಬರಿಯಲ್ಲಿ ವಸ್ತು, ಧಾಟಿ, ಭಾಷೆ ಚೆನ್ನಾಗಿದೆ. ಬದುಕಿನ ಏರಿಳಿತ ಕಂಡು ಬರೆದಿರುವ ಕಾದಂಬರಿ ಇದು. ಸಂಕೀರ್ಣತೆ ಇದ್ದರೆ ಹಲವು ಕಾಲಘಟ್ಟದಲ್ಲಿ ನಿಲ್ಲುತ್ತದೆ, ಸುಬ್ರಮಾಣ್ಯರವರು ಒಳ್ಳೆಯ ಕಾದಂಬರಿಕಾರರಾಗಿ ಅಜರಾಮರರಾಗಿ ಕನ್ನಡ ಸಾಹಿತ್ಯದಲ್ಲಿ ಉಳಿಯಬೇಕೆಂದು ಹಾರೈಸಿದರು.

ಕೃತಿಕಾರ ಸಸಿಹಿತ್ಲು ಸುಬ್ರಮಣ್ಯ, ಈ ಕಾದಂಬರಿಯಲ್ಲಿ ಹಾಸ್ಯ, ಸಸ್ಪೆನ್ಸ್‌, ಬಾವೋದ್ವೇಗ, ಆದರ್ಶ, ಮಮತೆ, ಕರುಣೆ, ಕ್ರೌರ್ಯ, ವ್ಯಂಗ್ಯ, ವಿಡಂಬನೆ, ಪ್ರೀತಿ, ದ್ವೇಷ, ಮತ್ಸರ ಮುಂತಾದ ಎಲ್ಲಾ ರಸಗಳೂ ಹದವಾದ ಮಿಶ್ರಣ ಹೊಂದಿದ್ದು, ಓದುಗರಿಗೆ ಎಲ್ಲೂ ಭ್ರಮನಿರಸನ ಆಗುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಕಲ್ಕಟ್ಟೆ ಪುಸ್ತಕದಮನೆ ವ್ಯವಸ್ಥಾಪಕಿ ಶಿಕ್ಷಕಿ ರೇಖಾ ನಾಗರಾಜ್‌ ಮಾತನಾಡಿ, ವ್ಯಾಟ್ಸಾಪ್‌, ಮೊಬೈಲ್‌ ಬರಹಗಳನ್ನೇ ಸಾಹಿತ್ಯವೆಂದುಕೊಂಡಿರುವ ಈ ಕಾಲಘಟ್ಟದಲ್ಲಿ, ಮುನ್ನೂರು ಪುಟಗಳ ಕಾದಂಬರಿ ರಚಿಸಿರುವುದು ಸುಬ್ರಮಣ್ಯರವರ ತಾಳ್ಮೆ. ಸೃಜನಶೀಲತೆಯನ್ನು ತೋರಿಸುತ್ತದೆ ಎಂದರು.

ಜಿಲ್ಲಾ ಕ.ಸಾ.ಪ ಅಧ್ಯಕ್ಷ ಸೂರಿ ಶ್ರೀನಿವಾಸ್‌ ಶುಭ ಹಾರೈಸಿದರು. ಯೋಗ ಶಿಕ್ಷಕಿ ಗಾಯತ್ರಿ ಸುಬ್ರಮಣ್ಯ ಸ್ವಾಗತಿಸಿ, ಸತ್ಯನಾರಾಯಣ ನಿರೂಪಿಸಿ, ಸಂದೇಶ್‌ ಕುಮಾರ್‌ ವಂದಿಸಿದರು. ಮಲ್ಲಿಗೆ ಸುಧೀರ್‌, ನಾಗಭೂಷಣ್‌ ಲೇಖಕರ ಕವನಕ್ಕೆ ಧ್ವನಿಯಾದರು. ಅನುಷಾ ಸಂದೇಶ್‌ ಮತ್ತು ಸಂಜನಾ ಸುಬ್ರಮಣ್ಯ ಪ್ರಾರ್ಥಿಸಿದರು. ಮುಖಪುಟ ರಚಿಸಿದ ಗಣೇಶ ಎಸ್‌ ರಾವ್‌ ಸೇರಿದಂತೆ ಮುಖ್ಯ ಅತಿಥಿಗಳನ್ನು ಸನ್ಮಾನಿಸಲಾಯಿತು.

MORE NEWS

'ಸಂಗಮ ಸಿರಿ' ರಾಜ್ಯ ಪ್ರಶಸ್ತಿಗೆ ಕವನ ಸಂಕಲನಗಳ ಆಹ್ವಾನ

26-07-2024 ಬೆಂಗಳೂರು

ಹುಬ್ಬಳ್ಳಿ: ನಾಡಿನ ಹಿರಿಯ ಸಾಹಿತಿ ಡಾ. ಸಂಗಮೇಶ ಹಂಡಿಗಿ ಅವರ ಸ್ಮರಣೆಯಲ್ಲಿ ಪ್ರತಿಷ್ಠಾಪನೆಗೊಂಡ ಡಾ. ಸಂಗಮೇಶ ಹಂಡಿಗಿ ಸ...

ಕನ್ನಡ ಸಂಘದ ಉದ್ಘಾಟನೆ, ಬಹುಮಾನ ವಿತರಣೆ ಮತ್ತು ಪ್ರೊ.ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ಉಪನ್ಯಾಸ

25-07-2024 ಬೆಂಗಳೂರು

ಬೆಂಗಳೂರು: ಜ್ಯೋತಿ ನಿವಾಸ್ ಕಾಲೇಜು ಸ್ವಾಯತ್ತದಿಂದ ಕನ್ನಡ ಗೆಳೆಯರ ಬಳಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಕನ್ನಡ ...

ಬೆರಗು ಪುಸ್ತಕ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

23-07-2024 ಬೆಂಗಳೂರು

ವಿಜಯಪುರ ಜಿಲ್ಲೆಯ ಕಡಣಿ ಗ್ರಾಮದ ಬೆರಗು ಪ್ರಕಾಶನವು ರಾಜ್ಯಮಟ್ಟದ ಪ್ರೊ. ಎಚ್.ಟಿ.ಪೋತೆ ಕಾವ್ಯ, ಕಥಾ ಪ್ರಶಸ್ತಿ ನೀಡಲು...