ಕನ್ನಡ ಪುಸ್ತಕೋದ್ಯಮವನ್ನು ಜನಪರವಾಗಿ ರೂಪಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ 1993ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವನ್ನು ಸ್ಥಾಪಿಸಿತು. ಕನ್ನಡದ ಲೇಖಕ-ಪ್ರಕಾಶಕ-ಮಾರಾಟಗಾರ ಮತ್ತು ಓದುಗರ ನಡುವೆ ಸೇತುವೆಯಾಗುವುದು, ಸಾರ್ವಜನಿಕರಲ್ಲಿ ಉತ್ತಮ ವಾಚನಾಭಿರುಚಿ ಬೆಳೆಸುವುದು, ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭದ ಬೆಲೆಯಲ್ಲಿ ದೊರಕುವಂತೆ ಮಾಡುವುದು, ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿಸಿ ರಾಜ್ಯಾದ್ಯಂತ ಓದುಗರಿಗೆ ತಲುಪಿಸುವುದು, ಕನ್ನಡ ಭಾಷೆ, ಸಾಹಿತ್ಯ ಹಾಗೂ ವಿವಿಧ ಜ್ಞಾನಶಿಸ್ತುಗಳ ಪುಸ್ತಕಗಳನ್ನು ಪ್ರಕಟಿಸುವುದು, ರಾಜ್ಯಾದ್ಯಂತ ಕನ್ನಡ ಪುಸ್ತಕ ಮಳಿಗೆಗಳನ್ನು ಸ್ಥಾಪಿಸುವುದು -ಇವು ಪುಸ್ತಕ ಪ್ರಾಧಿಕಾರದ ಮುಖ್ಯ ಉದ್ದೇಶಗಳು.
ಪ್ರೊ.ಎಲ್.ಎಸ್ ಶೇಷಗಿರಿರಾವ್, ನೆಲಮನೆ ದೇವೇಗೌಡ, ಪ್ರೊ.ಎಚ್.ಜೆ. ಲಕ್ಕಪ್ಪಗೌಡ, ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ, ಡಾ.ಸಿದ್ದಲಿಂಗಯ್ಯ, ಡಾ.ಬಂಜಗೆರೆ ಜಯಪ್ರಕಾಶ, ಡಾ.ವಸುಂಧರಾ ಭೂಪತಿ, ಡಾ. ಎಂ. ಎನ್. ನಂದೀಶ್ ಹಂಚೆ ಪುಸ್ತಕ ಪ್ರಾಧಿಕಾರದ ಈವರೆಗಿನ ಅಧ್ಯಕ್ಷರುಗಳು.
ಅಲೆಮಾರಿ ಸಂಸ್ಕೃತಿ, ವೈದ್ಯ ವಿಜ್ಞಾನ ಮಾಲೆ, ಕನ್ನಡ ನಾಡು-ನುಡಿಗೆ ಹೋರಾಡಿದ ಚೇತನಗಳ ಜೀವನಚರಿತ್ರೆ ಮಾಲಿಕೆಗಳಲ್ಲದೆ, ಇನ್ನೂ ವಿವಿಧ ಯೋಜನೆಗಳಡಿ ಮೌಲಿಕ ಪುಸ್ತಕಗಳನ್ನು ಪ್ರಾಧಿಕಾರ ಪ್ರಕಟಿಸಿದೆ. ಪುಸ್ತಕಲೋಕ ತ್ರೈಮಾಸಿಕದ ಸಂಪುಟಗಳನ್ನೂ ಮುದ್ರಿಸಿದೆ.
©2022 Book Brahma Private Limited.