About the Author

ಅನುಪಮಾ ಪ್ರಸಾದ್ ಅವರು ಅಕ್ಟೋಬರ್ 7-1971 ರಲ್ಲಿ ಉತ್ತರಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿ ಜನಿಸಿದರು. ತಂದೆ ರಾಮಚಂದ್ರ ಹೆಗಡೆ, ತಾಯಿ ಶ್ರೀಲಕ್ಷ್ಮೀ ಹೆಗಡೆ. ಕಾಸರಗೋಡು ತಾಲೂಕಿನ ಬದಿಯಡ್ಕ ಸಮೀಪದ ನೀರ್ಚಾಲಿನ ಡಾ. ರಾಮಕೃಷ್ಣ ಪ್ರಸಾದ್ ಜೊತೆ ಇವರ ವಿವಾಹವಾಯಿತು. ತಮ್ಮ ವಿದ್ಯಾಭ್ಯಾಸವನ್ನುಉಜಿರೆಯಲ್ಲಿ ಪಡೆದುಕೊಂಡರು. ಕನ್ನಡದಲ್ಲಿ ಎಮ್.ಎ. ಪದವಿಯನ್ನು ಪಡೆದಿರುವ ಅನುಪಮಾ ಪ್ರಸಾದ್ ಅವರು ಕನ್ನಡದ ಗಮನಾರ್ಹ ಬರಹಗಾರ್ತಿ. ಇವರು ಕಥಾಸಂಕಲನ, ನಾಟಕ ಹಾಗೂ ಜೀವನ ಕಥಾನಕಗಳನ್ನು ಬರೆದಿದ್ದಾರೆ.

ಅವರ ಕಥಾಸಂಕಲನಗಳು ಚೇತನ, ಕರವೀರದ ಗಿಡ, ದೂರತೀರ, ಜೋಗತಿ ಜೋಳಿಗೆ. ಅರ್ಧ ಕಥಾನಕ-ಕಾಸರಗೋಡಿನ ಖ್ಯಾತ ಕಥೆಗಾರ ಎಮ್. ವ್ಯಾಸರ ಕುರಿತು ಅವರ ಮಗ ತೇಜಸ್ವಿ ವ್ಯಾಸರ ನುಡಿಗಳ ಕಥನ ನಿರೂಪಣೆ, ಜೊತೆಗೆ ಕೆನ್ನೀರು ಎಂಬ ಹೆಸರಿನ ರೇಡಿಯೋ ನಾಟಕ ಮತ್ತು ಮನಸ್ಸು ಮಾಯೆಯ ಹಿಂದೆ ಎಂಬ ನಾಟಕಗಳನ್ನು ರಚಿಸಿದ್ದಾರೆ. ಇವರ ‘ಕರವೀರದ ಗಿಡ’ ಕಥಾಸಂಕಲನದ ಹಸ್ತಪ್ರತಿಗೆ 2009ನೇ ಸಾಲಿನ (ರಂಗಕರ್ಮಿ ಸದಾನಂದ ಸುವರ್ಣ) ಮುಂಬೆಳಕು ಸಾಹಿತ್ಯ ಪ್ರಶಸ್ತಿ, 2011 ರಲ್ಲಿ ಬೇಂದ್ರೆ ಪುಸ್ತಕ ಬಹುಮಾನ, ಹಾಗೂ ಇದೇ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ. ದೂರತೀರ ಕಥಾಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘ ಬೆಂಗಳೂರು ತ್ರಿವೇಣಿ ಕಥಾ ಪ್ರಶಸ್ತಿ ನೀಡಿ ಗೌರವಿಸಿದೆ, ಜೊತೆಗೆ  ಇದೇ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ,"ವಸುದೇವ ಭೂಪಾಲಂ" ದತ್ತಿ ಕಥಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಅನುಪಮಾ ಅವರ ಬರಹಗಳು ದಮನಿಸಲ್ಪಟ್ಟ ಮನಸುಗಳ ಆಕ್ರಂದನಕ್ಕೆ, ಶೋಷಿತರ ಒಳ ಬಂಡಾಯಕ್ಕೆ ದನಿಯಾಗಿವೆ.

ಅನುಪಮಾ ಪ್ರಸಾದ್

(07 Oct 1971)

Awards

BY THE AUTHOR