ಗಾಂಧಿ ಶಾಂತಿ ಪ್ರತಿಷ್ಠಾನದಿಂದ ಗಾಂಧಿವಾದಿ ಡಬ್ಲ್ಯೂ. ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸ

Date: 19-12-2023

Location: ಬೆಂಗಳೂರು


ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು ಸಹಯೋಗದಲ್ಲಿ ಬ್ರಹ್ಮ ಸಮಾಜದ ಮುಖಂಡ ಮತ್ತು ಹಿರಿಯ ಗಾಂಧಿವಾದಿ ಡಬ್ಲ್ಯೂ ಹೆಚ್. ಹನುಮಂತಪ್ಪ ಸ್ಮಾರಕ ದತ್ತಿ ಉಪನ್ಯಾಸವನ್ನು ನಗರದ ಗಾಂಧಿಭವನದ ಶ್ರೀ ಮೈಲಾರ ಮಹಾದೇವ ಸಭಾಂಗಣದಲ್ಲಿ ಡಿಸೆಂಬರ್ 20 ಬುಧವಾರ, ಸಂಜೆ 4-30ಕ್ಕೆ ಆಯೋಜಿಸಲಾಗಿದೆ.

‘ಗಾಂಧೀಜಿ ಮತ್ತು ಅಂಬೇಡ್ಕರ್ ಪ್ರಸ್ತುತತೆ’ ವಿಷಯದ ಕುರಿತು ದತ್ತಿ ಉಪನ್ಯಾಸವನ್ನು ಹಿರಿಯ ವಿದ್ವಾಂಸ ಮತ್ತು ಕಲಬುರ್ಗಿಯ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಚ್.ಟಿ.ಪೋತೆ ನೀಡಲಿದ್ದಾರೆ. ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಮತ್ತು ಗಾಂಧಿ ಶಾಂತಿ ಪ್ರತಿಷ್ಠಾನ ಅಧ್ಯಕ್ಷ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಹಿರಿಯ ಶಿಕ್ಷಣ ತಜ್ಞ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ, ನಾಡೋಜ ಡಾ. ವೂಡೇ.ಪಿ. ಕೃಷ್ಣ, ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಗೌರವ ಕಾರ್ಯದರ್ಶಿ ಎಂ.ಸಿ ನರೇಂದ್ರ , ದತ್ತಿ ದಾನಿಗಳ ಪ್ರತಿನಿಧಿ ಡಬ್ಲೂ ಡಿ.ಅಶೋಕ್, ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸತ್ಯಮಂಗಲ ಮಹಾದೇವ ಹಾಗೂ ಶೇಷಾದ್ರಿಪುರಂ ಸಂಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್ ಉಪಸ್ಥಿತರಿರಲಿದ್ದಾರೆ.

ಬ್ರಹ್ಮ ಸಮಾಜದ ನಾಯಕ ಮತ್ತು ಗಾಂಧಿವಾದಿ ಡಬ್ಲ್ಯೂ.ಎಚ್. ಹನುಮಂತಪ್ಪ (24.12.1885 - 30.12.1977)

ರಾಜಾರಾಮಮೋಹನ್‌ರಾಯ್ ಹಾಗೂ ಮಹಾತ್ಮ ಗಾಂಧಿಯವರ ಜೀವನ ಮತ್ತು ಬೋಧನೆಗಳಿಂದ ಪ್ರೇರಿತರಾಗಿದ್ದ ಶ್ರೀ ಹನುಮಂತಪ್ಪ ಅವರು ಹಿಂದಿನ ಮೈಸೂರುರಾಜ್ಯದ ಮುಂಚೂಣಿ ರಾಷ್ಟ್ರೀಯ ನಾಯಕರಾಗಿದ್ದರು. ಅವರು 1920ರಲ್ಲಿ ಬೆಂಗಳೂರು ಸಿಟಿ ಮುನ್ಸಿಪಲ್‌ಕೌನ್ಸಿಲ್‌ನ ಕೌನ್ಸಿಲರ್ ಆಗಿ ತಮ್ಮ ಸಾರ್ವಜನಿಕ ಜೀವನವನ್ನು ಪ್ರಾರಂಭಿಸಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ನಗರದ ಮುನ್ಸಿಪಲ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ ವಿಶಿಷ್ಟ ಹಿರಿಮೆ ಅವರದು. ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರು ಮೈಸೂರು ಕಾಂಗ್ರೆಸ್‌ನ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು ಮತ್ತು ಸ್ವಾತಂತ್ರ್ಯ ಪೂರ್ವದ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕಾಂಗ್ರೆಸ್ ಚಟುವಟಿಕೆಗಳ ಹಿಂದೆ ಚಲಿಸುವ ಸ್ಪೂರ್ತಿಯಾಗಿದ್ದರು. ಅವರು 1941 ರಲ್ಲಿ ಬೆಂಗಳೂರು ನಗರ ಪುರಸಭೆಯ ಮೊದಲ ಚುನಾಯಿತ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಮತ್ತು ಮೈಸೂರು ಪ್ರತಿನಿಧಿ ಸಭೆ (1923-1948), ಮೈಸೂರು ಸಂವಿಧಾನ ಸಭೆ (1949) ಮತ್ತು ವಿಧಾನಸಭೆಯ ಸದಸ್ಯರಾಗಿದ್ದರು. ಗಾಂಧೀವಾದಿಯಾದ ಶ್ರೀಯುತರು ರಚನಾತ್ಮಕ ಕೆಲಸದಲ್ಲಿ ದೃಢವಾದ ನಂಬಿಕೆಯುಳ್ಳವರಾಗಿದ್ದರು. ಮೈಸೂರು ರಾಜ್ಯ ವಯಸ್ಕ ಶಿಕ್ಷಣ ಪರಿಷತ್ತು, ಠಕ್ಕರ್‌ಬಾಪಾ ಹರಿಜನ ಬಾಲಕಿಯರ ಹಾಸ್ಟೆಲ್ ಮತ್ತು ಗಾಂಧಿ ಸಾಹಿತ್ಯ ಸಂಘ, ಮಲ್ಲೇಶ್ವರಂ, ಈ ಪ್ರಮುಖ ಸಂಸ್ಥೆಗಳ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದರು. ದೂರದೃಷ್ಟಿಯ ಶಿಕ್ಷಣತಜ್ಞರಾಗಿ ಬೆಂಗಳೂರಿನ ಆರ್ಯವಿದ್ಯಾ ಶಾಲೆ, ಗಾಂಧಿನಗರ ಹೈಸ್ಕೂಲ್, ಎಂ.ಇ.ಎಸ್.ಕಾಲೇಜು ಮತ್ತು ಬ್ರಹ್ಮಸಮಾಜ ಬಾಲಕಿಯರ ಸ್ಕೂಲ್‌ನಂತಹ ಅನೇಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಬೆಂಬಲಿಸಿದ್ದರು. ಅವರು ಬ್ರಹ್ಮಸಮಾಜದ ತತ್ತ್ವಗಳು ಮತ್ತು ಜೀವನ ಸಂದೇಶವನ್ನು ಜನರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಕರ್ನಾಟಕದಲ್ಲಿ ಬ್ರಹ್ಮಸಮಾಜದ ಬೆಂಗಳೂರಿನ ಅಧ್ಯಕ್ಷರಾಗಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆಯನ್ನು ಸಲ್ಲಿಸಿದ್ದಾರೆ.

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...