'ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ. ಹುಲ್ಲು ಮೇಯುತ್ತ ಎಲ್ಲೆಲ್ಲೋ ಹೋಗುತ್ತದೆ' ಎನ್ನುತ್ತಾರೆ ಲೇಖಕ ಹರೀಶ್ ಕೇರ ಅವರು ಅಮೂಲ್ಯ ಪುಸ್ತಕ ಪ್ರಕಟಿಸಿರುವ ಡಾ. ಲಕ್ಷ್ಮಣ ವಿ.ಎ. ಅವರ 'ಮಿಲ್ಟ್ರಿ ಟ್ರಂಕು' ಕೃತಿಗೆ ಬರೆದಿರುವ ಟಿಪ್ಪಣಿ ನಿಮ್ಮ ಓದಿಗಾಗಿ.
ಪ್ರಿಯ ಲಕ್ಷ್ಮಣ,
ಬಾಲ್ಯದ ನೆನಪುಗಳು ನಮ್ಮ ಬರಹದಲ್ಲಿ ತಳುಕು ಹಾಕಿಕೊಂಡು ಬಂದಾಗ ನಾವು ನಮಗೇ ಅರಿವಿಲ್ಲದಂತೆ ಅವುಗಳನ್ನು ಮರುಜೀವಿಸುವುದಕ್ಕೆ ಬಯಸುತ್ತಿರುತ್ತೇವಲ್ಲದೇ, ಅವುಗಳಿಂದ ದೂರ ಓಡಲೂ ಇಚ್ಛಿಸುತ್ತಿರುತ್ತೇವೆ. ನಿಮ್ಮ ಈ ಪ್ರಬಂಧ ಕೃತಿಯಲ್ಲಿ ಇಂಥ ಎರಡೂ ಬಗೆಯ ನೆನಪುಗಳು ಜೋಡಿಸಿಕೊಂಡು ವಿಶಿಷ್ಟ ರಂಗೋಲಿಯನ್ನು ಬರೆದಿವೆ. ಲಲಿತ ಪ್ರಬಂಧಗಳಲ್ಲಿ ನಾವು ಹೀಗೆ ಬಾಲ್ಯಕ್ಕೆ ಮರಳುವುದು ಹೆಚ್ಚು. ಯಾಕೆಂದರೆ ಲಲಿತ ಪ್ರಬಂಧಗಳ ಸ್ವರೂಪ ಕಟ್ಟಿಹಾಕದ ದನದ ಹಾಗೆ. ಹುಲ್ಲು ಮೇಯುತ್ತ ಎಲ್ಲೆಲ್ಲೋ ಹೋಗುತ್ತದೆ. ನಿಮ್ಮ ಬರಹಗಳಲ್ಲಿ ಹೊಳೆ ಎಂದರೆ ಏನು ಎಂದು ಕೇಳುವ ಬಾಲಕ, ನೀರಾ ಕುಡಿಯಲು ಮುಂಜಾನೆ ನಾಲ್ಕು ಮೈಲು ನಡೆದುಹೋಗುವ ಡಾಕ್ಟರು, ಊರ ಆತ್ಮವೇ ಹೋದಂತೆ ಕಳವಾಗುವ ಉತ್ಸವಮೂರ್ತಿ, ಅಳುವ ಅಮ್ಮ ಮತ್ತು ಕಾಣೆಯಾದ ಅಪ್ಪನನ್ನು ಬಾವಿಯಲ್ಲಿ ಹುಡುಕುವ ಮಕ್ಕಳು, ಊರಿಗೆ ಬಂದ ಚಿರತೆ ಸೃಷ್ಟಿಸುವ ಬಗೆಹರಿಯದ ಪ್ರಶ್ನೆ, ಅನ್ಯರ ಹೊಲದ ಬೆಳೆ ತಿಂದುಹಾಕಿದ ಆಡುಗಳು ಸೃಷ್ಟಿಸಿದ ಗೋಕುಲ ನಿರ್ಗಮನ, ಗುಬ್ಬಿ ಕಾಯುತ್ತಾ ಗುಬ್ಬಿಗಳಷ್ಟೇ ಹಸಿದ ಹೊಟ್ಟೆಯ ಚಿಣ್ಣರು- ಇಂತವೆಲ್ಲವೂ ಒಂದಾದ ಮೇಲೊಂದರಂತೆ ಸಿನೆಮಾಸ್ಕೋಪ್ ಸರಿದು ಮನಸ್ಸನ್ನು ಕಲಕಿದವು. ಸವಿನೆನಪುಗಳು ಯಾತನೆಯನ್ನೂ ಯಾತನೆಯ ನೆನಪುಗಳು ನಿಟ್ಟುಸಿರನ್ನೂ ಹುಟ್ಟಿಸುವ ಈ ಬರಹದ ಚೋದ್ಯವನ್ನು ಏನೆಂದು ಹೇಳುವುದು? ಅಂಥ ಚೋದ್ಯದ ಹಾದಿಯಲ್ಲಿ ನೀವು ಬಹುದೂರ ಸಾಗಿದ್ದೀರಿ. ಸುಡುಬಿಸಿಲ ಬಯಲಿನ ಒಂದೇ ಒಂದು ತಂಪು ಮರದಂತೆ ನಿಮ್ಮ ಪ್ರಬಂಧಗಳು ನನಗೆ ಮುದ ಕೊಟ್ಟವು ಎಂದರೆ ಅತಿಶಯೋಕ್ತಿಯಲ್ಲ.
-ಹರೀಶ್ ಕೇರ
‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...
ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...
'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...
©2024 Book Brahma Private Limited.