Date: 30-12-2025
Location: ಚಿಕ್ಕಮಗಳೂರು
ಚಿಕ್ಕಮಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ವತಿಯಿಂದ ಇತ್ತೀಚೆಗೆ ನಗರದ ಹೇಮಾಂಗಣದಲ್ಲಿ ಮನೆಗೊಂದು ಗ್ರಂಥಾಲಯ ಯೋಜನೆಯ ಕರ ಪತ್ರ ಬಿಡುಗಡೆ ಹಾಗೂ ಜಿಲ್ಲಾ ಜಾಗೃತ ಸಮಿತಿ ನೇಮಕಾತಿ ಆದೇಶ ಪತ್ರ ವಿತರಣಾ ಸಮಾರಂಭ ಜರುಗಿದ್ದು, ಸಮಾರಂಭದ ಉದ್ಘಾಟನೆಯನ್ನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಮಾನಸ ಅವರು ಮಾಡಿದರು.
ನಂತರದಲ್ಲಿ ಮಾತನಾಡಿದ ಅವರು, "ನಾಗರಿಕತೆಯ ಉತ್ಕೃಷ್ಟ ವಿಕಾಸಕ್ಕೆ ಪುಸ್ತಕಗಳ ಕೊಡುಗೆ ಅನುಪಮವಾದದ್ದು, ನಮ್ಮ ಬದುಕು ಜ್ಞಾನದ ನೆಲೆಗಟ್ಟಿನೊಂದಿಗೆ ಗಟ್ಟಿಯಾಗಬೇಕು, ಉತ್ತಮವಾದ ಪುಸ್ತಕದ ಓದಿನಿಂದ ವ್ಯಕ್ತಿ ಮತ್ತು ಸಮಾಜದ ಬದಲಾವಣೆ ಸಾಧ್ಯವಿದೆ. ಈಗಿನ ಧಾವಂತದ ಬದುಕಿನಲ್ಲಿ ಪುಸ್ತಕ ಓದಲು ನಮಗೆ ಸಮಯವಿಲ್ಲ, ಆದರೆ ಪುಸ್ತಕಗಳನ್ನು ನಿತ್ಯ ನೋಡುವುದರಿಂದ, ಪ್ರೀತಿಯಿಂದ ಮುಟ್ಟುವುದರಿಂದ ಮನಸ್ಸಿಗೆ ಆಗುವ ಆನಂದಕ್ಕೆ ಅದರಿಂದ ಸಿಕ್ಕುವ ನೆಮ್ಮದಿಗೆ ಬೆಲೆಕಟ್ಟಲಾಗುವುದಿಲ್ಲ, ರಾಜ್ಯದಲ್ಲಿರುವ ಸುಮಾರು ಮೂರು ಕೋಟಿ ಮನೆಗಳಿವೆ, ಈ ಮೂರು ಕೋಟಿ ಮನೆಗಳಲ್ಲಿ ಕನಿಷ್ಠ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯಗಳನ್ನು ತೆರೆದು ಅನುಷ್ಠಾನ ಮಾಡುವ ಬಗ್ಗೆ ಕನ್ನಡ ಪುಸ್ತಕ ಪ್ರಾಧಿಕಾರ ಯೋಜನೆಯೊಂದನ್ನು ಹಾಕಿಕೊಂಡಿದೆ, ಈ ಯೋಜನೆಗೆ ರಾಜ್ಯದ ಜನರ ಸಹಕಾರ, ಜಿಲ್ಲೆಯ ಜನರ ಭಾಗವಹಿಸುವಿಕೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ," ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ರವೀಶ್ ಕ್ಯಾತನಬೀಡು, ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎನ್.ರಾಜು ಅವರು ವಹಿಸಿದ್ದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಜಾಗೃತ ಸಮಿತಿಯ ಸಂಚಾಲಕರು ಮತ್ತು ಸದಸ್ಯರಿಗೆ ಅರ್ಹತಾ ಪತ್ರ ನೀಡಿ ಗೌರವಿಸಲಾಯಿತು ಹಾಗೂ ಲೇಖಕಿ ನಳಿನಾ ಡಿ ಅವರ ಮನೋಮಂತರ ಪುಸ್ತಕವನ್ನು ಮರು ಲೋಕಾರ್ಪಣೆಗೊಳಿಸಲಾಯಿತು.
ಸಭೆಯಲ್ಲಿ ರೈತ ಮುಖಂಡರಾದ ಗುರುಶಾಂತಪ್ಪ, ಬರಹಗಾರ ಡಿ.ಎಂ ಮಂಜುನಾಥಸ್ವಾಮಿ, ಕವಿಯತ್ರಿ ನಳಿನಾ ಡಿ, ಜಾನಪದ ಅಕಾಡೆಮಿಯ ಮಾಜಿ ಸದಸ್ಯೆ ಮುಗಳಿ ಲಕ್ಷ್ಮಿದೇವಮ್ಮ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಂ,ಆರ್ ಪ್ರಕಾಶ್ ಮಾತನಾಡಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಶ್ರೀನಿವಾಸ್ ಕರಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಶ್ರೀನಿವಾಸ್,ನವದೀಪ್, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಉಪನ್ಯಾಸಕ ಡಾ. ಕೆ ಎನ್ ಲಕ್ಷ್ಮಿಕಾಂತ್, ನಿ. ಶಿಕ್ಷಕ ಜಾವಳಿ ಚಂದ್ರಯ್ಯ, ನಾಟಕಕಾರ ಸತೀಶ್ ಜೆ, ಲೇಖಕಿ ಸೌಭಾಗ್ಯ ಮಹಾಂತೇಶ್. ಮುಂತಾದವರು ಉಪಸ್ಥಿತರಿದ್ದರು.
ರಾಂಚಿಯ ಜಿಲ್ಲಾ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುಸ್ತಕ ಮೇಳವು ಓದುಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿ...
ಚಿತ್ರದುರ್ಗ: ಆಶುಕವನಗಳಲ್ಲಿ ತತ್ಕ್ಷಣಕ್ಕೆ ಹೊಳೆಯುವ ವಿಚಾರಗಳನ್ನು ಅಭಿವ್ಯಕ್ತಿಸುವ ಕಲೆ ವಿರಳವಾದುದು. ಕವಿ ತಿಪ...
ಶಿರಹಟ್ಟಿ: "ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ. ಅವರ ಸಾಹಿತ್ಯಿಕ ಸಾಧನೆಯನ್ನು ಕ...
©2025 Book Brahma Private Limited.