ಹೆಗಲಿಗೆ ಏರಿಸಿದ ನೇಗಿಲು
ಮುಂಜಾನೆಯಾದೊಡನೆ ತಾನಾಗೆ ಕರೆಯುವ ಮುಗಿಲು
ನಾಳೆಯ ಭರವಸೆಗಳು ಕಣ್ಣಲ್ಲಿ ಕಾಣುತಿರಲು
ಖುಷಿಯಿಂದ ಮೂಡಿವೆ ಕನಸುಗಳ ಸಾಲು
ಮನಸಿನ ಜೋಳಿಗೆಯಿಂದ ಬಿತ್ತನೆಯ ಮಾಡಿ
ಕೈಮುಗಿದು ಹನಿಗಳ ಧಾರೆಗೆ ಬೇಡಿ
ಕಣ್ಣಲ್ಲೆ ಸಸಿಗಳಿಗೆ ಲಾಲಿಯ ಹಾಡಿ
ಅವನ ಖುಷಿಯ ತಾಳಕ್ಕೆ ಕುಣಿಯುತ್ತಿವೆ ಅವುಗಳು ಕೂಡಿ
ಅತಿವೃಷ್ಟಿ ಅನಾವೃಷ್ಟಿ ಹೊಡೆತಗಳ ತಡೆದು
ರೋಗಗಳ ಸಂಚುಗಳಿಗೆ ಬಲಿಯಾಗದೆ ಹಿಡಿದು
ಕೀಟಗಳ ಕಾಟಗಳಿಗೆ ನಲುಗದೆ ಬೆಳೆದು
ಬೆವರ ಹರಿಸಿ ಪೋಷಿಸುವನು ಮುನ್ನಡೆದು
ಎದೆಯ ಎತ್ತರ ಬೆಳೆದು ನಿಂತಾಗ ಮೇರೆಯಿಲ್ಲ ಅವನ ಖುಷಿಗೆ
ಕೃಷಿಯಲ್ಲಿ ಯಜ್ಞ ಮಾಡುವನಿವ ಕಮ್ಮಿಯಲ್ಲ ಯಾವುದೆ ಋಷಿಗೆ
ಎರಡು ಕೈಯಲ್ಲಿ ಪಸಲನ್ನು ಹಿಡಿದು ನಿಂತವನನ್ನೀಗ
ಕರೆಯಬಹುದೆ ಭಗೀರತನೆಂದು ನಮ್ಮ ರೈತನನ್ನಿಗ!
Latest Comments
No comments are available!