About the Author

ಕೇಂದ್ರ ವಾರ್ತಾ ಸಚಿವರೂ, ಜನಪ್ರತಿನಿಧಿಗಳೂ, ಏಕೀಕರಣದ ನೇತಾರರೂ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದ ರಂಗರಾವ್ ರಾಮಚಂದ್ರ ದಿವಾಕರ್, ಕರ್ನಾಟಕದ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಜೀವನದ ಪ್ರಮುಖರು. ಧಾರವಾಡದಲ್ಲಿ 1894ರ ಸೆಪ್ಟೆಂಬರ್ 30ರಂದು ಜನಿಸಿದ ರಂ.ರಾ. ದಿವಾಕರ, ಧಾರವಾಡ, ಬೆಳಗಾವಿ, ಪುಣೆ, ಹುಬ್ಬಳ್ಳಿ, ಮುಂಬಯಿಗಳಲ್ಲಿ ವ್ಯಾಸಂಗ ಮಾಡಿದರು. ತಂದೆ ರಾಮಚಂದ್ರರಾವ್, ತಾಯಿ ಸೀತಮ್ಮ. ಎಲ್ಎಲ್ ಬಿ ಪದವಿ (1919, ನಂತರ 1920ರಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. 

ಕರ್ಮವೀರ (1921) ವಾರಪತ್ರಿಕೆ ಪ್ರಾರಂಭಿಸಿ, ಅನಂತರ ಸಂಯುಕ್ತ ಕರ್ನಾಟಕ ದಿನಪತ್ರಿಕೆ ಆರಂಭಿಸಿದರು. ಭಾರತದ ಸಂವಿಧಾನ ರಚನೆಯಲ್ಲಿ ಘಟನಾ ಸಮಿತಿಯ ಸದಸ್ಯರಾಗಿದ್ದರು.  1948-52ರ ವರೆಗೆ ಕೇಂದ್ರ ಸರ್ಕಾರದಲ್ಲಿ ವಾರ್ತಾ ಇಲಾಖೆ ಸಚಿವರಾದರು. 1952- 57ರ ವರೆಗೆ ಬಿಹಾರದ ರಾಜ್ಯಪಾಲರಾಗಿದ್ದರು. 1962-68 ವರೆಗೆ ರಾಜ್ಯಸಭಾ ಸದಸ್ಯರಾಗಿ ಸೇವೆಯಲ್ಲಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿತ್ತು. ಬಳ್ಳಾರಿಯಲ್ಲಿ ನಡೆದ 23ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ (1938) ಅಧ್ಯಕ್ಷರಾಗಿದ್ದರು. ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಗಳಲ್ಲಿ ವಿಷಯ ವಸ್ತು ವೈವಿಧ್ಯತೆಯಿಂದ ಕೂಡಿದ ಅನೇಕ ಕೃತಿಗಳನ್ನು ಬರೆದಿದ್ದಾರೆ. 

ಮುಖ್ಯ ಕೃತಿಗಳು- ಉಪನಿಷತ್ಪ್ರಕಾಶ ಭಾಗ1-2, ಉಪನಿಷತ್ತಿನ ಕಥಾವಲಿ, ಗೀತೆಯ ಗುಟ್ಟು, ಕರ್ಮಯೋಗ ವಚನಶಾಸ್ತ್ರ ರಹಸ್ಯವು, ಹರಿಭಕ್ತಿ ಸುಧೆ, ಮಹಾತ್ಮರ ಮನೋರಂಗ, ಎಂ.ಆರ್.ಶ್ರೀ ಅವರ ‘ನಾಗರಿಕ’ (ಹಿಂದಿಗೆ ಅನುವಾದ), ಮಹಾಯೋಗಿ (ಇಂಗ್ಲಿಷ್), ಬಿಹಾರ್ ಥ್ರೂ ದಿ ಏಜಸ್ (ಇಂಗ್ಲಿಷ್), ಕರ್ನಾಟಕ ಥ್ರೂ ದಿ ಏಜಸ್ (ಇಂಗ್ಲಿಷ್). 1990ರ ಜನವರಿ 15ರಂದು ನಿಧನರಾದರು. 

ರಂಗನಾಥ ದಿವಾಕರ

(30 Sep 1894-15 Jan 1990)