ಅಪರೂಪದ ಬಹುಹವ್ಯಾಸಿ ವ್ಯಕ್ತಿ ಎಂ.ರೇಚಣ್ಣ

Date: 13-11-2022

Location: ಬೆಂಗಳೂರು


'ಬೀಜ ಸಂರಕ್ಷಣೆಗೆ ಮೊದಲು ಭತ್ತವನ್ನು ಯಾವುದೇ ಖಾಯಿಲೆ ಬಂದಿರದ, ತೆನೆ ಚೆನ್ನಾಗಿರುವ, ಹುಲ್ಲು ಚೆನ್ನಾಗಿ ಬೆಳೆದಿರುವುದನ್ನು ಗುರುತಿಸಿ ಅದಕ್ಕೆ ಟ್ಯಾಗ್ ಕಟ್ಟುತ್ತೇವೆ. ತೆನೆ ಸಮೇತ ಅದನ್ನು ಸಂಗ್ರಹಿಸಿ ಅದನ್ನು ಬಿತ್ತನೆ ಬೀಜವಾಗಿ ಸಂಗ್ರಹಣೆ ಮಾಡುತ್ತೇವೆ. ಅವರು ತಮ್ಮ ಹೆಜ್ಜೆಯ ಜಾಡು ಹಿಡಿದು ಅಂಕಣದಲ್ಲಿ ‘ರೈತ ಎಂ.ರೇಚಣ್ಣ’ ಅವರ ವೃತ್ತಿ ಮತ್ತು ಹವ್ಯಾಸಗಳ ಬಗ್ಗೆ ಇವರಾಡಿದ ಮಾತುಗಳನ್ನು ಇಲ್ಲಿ ತೆರೆದಿಟ್ಟಿದ್ದಾರೆ.

ಇವರೊಬ್ಬ ಅಪರೂಪದ ಬಹುಹವ್ಯಾಸಿ ವ್ಯಕ್ತಿ. ಬೀಜ ಸಂರಕ್ಷಣೆ, ಸಾವಯವ ಕೃಷಿ, ಬರವಣಿಗೆ, ಹಳೆಯ ನಾಣ್ಯಗಳು ಮತ್ತು ಕೃಷಿ ಸಲಕರಣೆಗಳ ಸಂಗ್ರಹದಂತಹ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಇವರು ಪ್ರಸ್ತುತ ಸಮಾಜದ ಸಂಪನ್ಮೂಲ ವ್ಯಕ್ತಿ.

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಹೊಸಮಾಲಂಗಿ ಗ್ರಾಮದವರಾದ ಇವರು ರತ್ನಚೂಡಿ, ದೊಡ್ಡ ಭೈರನೆಲ್ಲು, ಕೆಂಪು ರಾಜಭೋಗ, ಗಂಧಸಾಲೆ, ಆನಂದಿ, ಕರಿಯಕ್ಕಶಾಲಿ, ರಾಜಮುಡಿ, ಕಾಗಿಸಾಲೆ, ಬಾಸುಮತಿ, ನಾರಿಕೇಳ, ಸೇಲಂಸಣ್ಣ, ಗಿಣಿಸಾಲ, ಇಂದ್ರಾಣಿ, ಕೆನೆಪುಂಕ, ಷಷ್ಠಿಕಶಾಲಿ, ಬಂಗಾರಗೋವಿ, ಕರಿ ಮುಂಡಗ, ಚೌಗುರು ಇತ್ಯಾದಿ ಮುನ್ನೂರು ವಿವಿಧ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ್ದಾರೆ. ತಾವು ಸಂಗ್ರಹಣೆ ಮಾಡಿರುವ 'ಅಷ್ಟೂ ತಳಿಗಳು ನನ್ನದಲ್ಲ, ಇಡೀ ರೈತ ಸಮುದಾಯದ್ದು' ಎನ್ನುತ್ತಾರೆ ಎಂ.ರೇಚಣ್ಣನವರು.

'ನಮ್ಮ ಹತ್ತಿರ ಇರುವ ದೇಶೀಯ ಬೀಜಗಳನ್ನು ಬೇರೆ ರೈತರಿಗೆ ವಿತರಣೆ ಮಾಡಿ ಅವರಿಂದ ಪುನಃ ಬೇರೆ ಭತ್ತದ ತಳಿ ಭತ್ತಗಳನ್ನು ನಾವು ಪಡೆಯುವುದು. ಹಾಗೆ ಪಡೆದುಕೊಂಡ ಬೀಜಗಳನ್ನು ಸಂಗ್ರಹ ಮಾಡಿ ಸ್ವಲ್ಪ ಸ್ವಲ್ಪ ಜಾಗದಲ್ಲಿ ಅಂದರೆ ಮೂರು ಅಡಿ, ಐದು ಗುಂಟೆ, ಹತ್ತು ಗುಂಟೆ ಅಷ್ಟರಲ್ಲೇ ಬೆಳೆದು 2014ರ ಹೊತ್ತಿಗೆ ಸುಮಾರು ಇನ್ನೂರು ಭತ್ತದ ತಳಿಗಳನ್ನು ಸಂಗ್ರಹ ಮಾಡಿದ್ದೆವು. ಅಕ್ಕಿಗಾಗಿ ಎರಡು ಎಕರೆಯಲ್ಲಿ ಬೆಳೆದರೆ, ಬೀಜ ಸಂಗ್ರಹಣೆಗೆ ಅಂತ 100 ಗ್ರಾಂ, 50ಗ್ರಾಂ, 10ಗ್ರಾಂ ಬೀಜಗಳನ್ನು ಹಾಕುತ್ತಿದ್ದೆವು. ಬಿತ್ತನೆ ಬೀಜಗಳನ್ನು ಗೊನೆ ಸಮೇತವಾಗಿ ಹಾಗೆ ಎತ್ತಿಡುತ್ತೇವೆ. ಹಾಗೆ ಗೊನೆ ಸಮೇತವಾಗಿ ಎತ್ತಿಟ್ಟ ತೆನೆಗಳಿಂದ ಬಾಗಿಲಿಗೆ ಹಾಕುವ ತೋರಣ, ಕುಚ್ಚು, ಹೃದಯದ ಆಕೃತಿಯಲ್ಲಿ ಗೋಡೆಗೆ ಹಾಕುವ ಅಲಂಕಾರಿಕ ವಿನ್ಯಾಸಗಳನ್ನು ಮಾಡುತ್ತೇವೆ. ಮುಂದಿನ ವರ್ಷ ಅದನ್ನು ಬಿತ್ತನೆಗೂ ಬಳಸಬಹುದು. ಹಾಳೆಗಳಲ್ಲಿ, ಗಾಜಿನ ಬಾಟಲಿಯಲ್ಲಿ, ಗೋಣಿಚೀಲದಲ್ಲಿ ಭತ್ತವನ್ನು ಶೇಖರಣೆ ಮಾಡಿದರೆ ಹುಳು ಬರುವುದಿಲ್ಲ. ಭತ್ತದ ತಳಿಗಳ ಸಂಗ್ರಹಣೆ ಅಷ್ಟೆ ಅಲ್ಲದೆಯೂ ಔಷಧೀಯ ಸಸ್ಯಗಳಾದ ಹೊರಮುನಿ, ಒಳಮುನಿ, ಆಡು ಸೋಗೆ, ಲಕ್ಕಿ ಸೊಪ್ಪು, ಅಮೃತಬಳ್ಳಿ, ಅಪ್ಪೆಮಿಡಿ, ರಾಯಲ್ ಸ್ಪೆಷಲ್, ಕೇಸರ್ ಬಾದಾಮ್, ಮಲ್ಲಿಕಾ, ಇಮಾಮ್ ಪಸಂದ್, ಮಲಗೋಬ, ಬಾಗೇನ್ ಪಲ್ಲಿ ಸೇರಿದಂತೆ ಹನ್ನೆರಡು ತಳಿಯ ಮಾವುಗಳನ್ನು ಬೆಳೆಸಿದ್ದೇವೆ. ಕಪ್ಪು ಸೀಬೆ, ಸಪೋಟ, ನೇರಳೆ, ಬಿದಿರು ಇತ್ಯಾದಿಯಾಗಿ ಹಲವು ಪ್ರಭೇದದ ಕಾಡು ಜಾತಿಯ ಸಸ್ಯಗಳನ್ನು ಎರಡು ಎಕರೆ ಭೂಮಿಯಲ್ಲಿ ಬೆಳೆಸಿದ್ದೇವೆ. ಮೈಸೂರು, ದೆಹಲಿ, ಒರಿಸ್ಸಾ, ಬಿಹಾರ್, ಹೈದರಾಬಾದ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಹಲವಾರು ಅಂತಾರಾಷ್ಟ್ರೀಯ ಬೀಜಮೇಳದಲ್ಲಿ ನಾನು ನನ್ನ ಇಬ್ಬರು ಮಕ್ಕಳಾದ ಅಭಿಷೇಕ್, ಯೋಗೀಶ್ ಭಾಗವಹಿಸಿದ್ದೇವೆ. ಕೃಷಿ ಪಂಡಿತ, ಕೃಷಿ ರತ್ನ, ಅಂತಾರಾಷ್ಟ್ರೀಯ ಕೃಷಿ ರೈತ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನರಸಿ ಬಂದಿವೆ '.

'ಬೀಜ ಸಂರಕ್ಷಣೆಗೆ ಮೊದಲು ಭತ್ತವನ್ನು ಯಾವುದೇ ಖಾಯಿಲೆ ಬಂದಿರದ, ತೆನೆ ಚೆನ್ನಾಗಿರುವ, ಹುಲ್ಲು ಚೆನ್ನಾಗಿ ಬೆಳೆದಿರುವುದನ್ನು ಗುರುತಿಸಿ ಅದಕ್ಕೆ ಟ್ಯಾಗ್ ಕಟ್ಟುತ್ತೇವೆ. ತೆನೆ ಸಮೇತ ಅದನ್ನು ಸಂಗ್ರಹಿಸಿ ಅದನ್ನು ಬಿತ್ತನೆ ಬೀಜವಾಗಿ ಸಂಗ್ರಹಣೆ ಮಾಡುತ್ತೇವೆ. ಹೀಗೆ ರಾಗಿ, ತರಕಾರಿ ಬೀಜಗಳು, ಹೂವಿನ ಬೀಜಗಳನ್ನು ಸಂಗ್ರಹಣೆ ಮಾಡುತ್ತೇವೆ. ನಮ್ಮ ಭತ್ತಕ್ಕೆ 5000 ವರ್ಷಗಳ ಇತಿಹಾಸವಿದೆ. ಮೊದಲು ಬೀಜದಿಂದಲೇ ಎಲ್ಲವೂ ಉತ್ಪತ್ತಿಯಾಗಿರುವುದು. ಭಗವಂತ ಎಲ್ಲವನ್ನು ಸೃಷ್ಟಿಮಾಡಿ ಆಮೇಲೆ ನಮ್ಮನ್ನು ಸೃಷ್ಟಿ ಮಾಡಿದ ತಿನ್ನೋದಕ್ಕೆ. ಆಗ ಉಡುಗೆ ಇಲ್ಲ. ಕಾಡಿನಲ್ಲಿ ಅಲೆಮಾರಿಗಳಂತೆ ಬದುಕು ಸಾಗಿಸುತ್ತಿದ್ದರು. ಪುರುಷ ದುಡಿಯುತ್ತಿದ್ದ, ತಿನ್ನುತ್ತಿದ್ದ, ತಂದು ಹಾಕುತ್ತಿದ್ದ. ಬೀಜಗಳ ಸಂರಕ್ಷಣೆ ಆದದ್ದೆಲ್ಲ ಬೀಜ ಮಾತೆಯರಿಂದ. ಇದು ಬೀಜಕ್ಕಾಗತ್ತೆ, ಬಿತ್ತನೆಗೆ ಆಗುತ್ತದೆ ಎಂದು ಬಿತ್ತೋದು, ಬೆಳೆಯೋದು ಮಾಡುವುದು ಎಲ್ಲವೂ ಈ ಸಮಾಜಕ್ಕೆ ತಾಯಿಯಿಂದ ಬಂದ ಬಳುವಳಿ' ಎನ್ನುತ್ತಾರೆ 65 ವರ್ಷದ ರೇಚಪ್ಪ.

'ಎಲ್ಲಾ ಬೀಜಗಳಲ್ಲೂ ಹಿಂದೆ ಅಂಕುರ ಶಕ್ತಿ ಇತ್ತು. ಅಂಕುರ ಎಂದರೆ ಗರ್ಭ ಕಟ್ಟುವುದು. ಬೀಜ ಮೊಳಕೆ ಬರುವ ಶಕ್ತಿ. ಬೀಜ ಭೂಮಿಗೆ ಬಿದ್ದಾಗ ಭೂಮಿಯಲ್ಲಿರುವ ಮಣ್ಣು, ಗಾಳಿ, ಸಾವಯವ ಗೊಬ್ಬರವನ್ನು ಬಳಸಿಕೊಂಡು ಮೊಳಕೆ ಬರುತ್ತದೆ. ಕೆಲವು ಆಹಾರ ಬಳಕೆಗೆ ಉಪಯುಕ್ತವಾಗಿದೆ. ಕೆಲವು ಔಷಧಿಯ ಅಕ್ಕಿಗಳು. ಇನ್ನೂ ಕೆಲವು ಸುವಾಸನೆಯ ಅಕ್ಕಿಗಳು. ಆಹಾರದಲ್ಲಿ ಎರಡು ವಿಧ. ಮೊದಲನೆಯದಾಗಿ ಸೂರ್ಯನಿಂದ ತಯಾರಾಗುವ ಆಹಾರವನ್ನು ನಿರಗ್ನಿ ಆಹಾರ ಎನ್ನುತ್ತಾರೆ. ಈ ನಿರಗ್ನಿ ಆಹಾರ ಮಾನವನಿಗೆ ಭಗವಂತ ಸೃಷ್ಟಿ ಮಾಡಿರುವ ಆಹಾರ. ಯಾವುವೆಂದರೆ ಕ್ಯಾರಟ್, ಮೂಲಂಗಿ, ಬೀಟ್ರೂಟ್, ತೆಂಗಿನಕಾಯಿ, ಬೇಳೆ ಕಾಳುಗಳಲ್ಲಿ ಹೆಸರುಕಾಳು ನೆನೆಸಿ ಮೊಳಕೆ ಬರಿಸಿದರೆ ನಿಂಬೆರಸ, ಕಾಯಿತುರಿ ಹಾಕಿ ಹಾಗೆ ತಿನ್ನಬಹುದು. ಸೊಪ್ಪುಗಳು ಪುದೀನ, ಕೊತ್ತಂಬರಿ, ಕರಿಬೇವು. ಇನ್ನು ಹಣ್ಣುಗಳು ಮಾವು, ಸೀಬೆ, ಸಪೋಟ, ಪರಂಗಿ, ದ್ರಾಕ್ಷಿ ಇತ್ಯಾದಿ. ನಾವೆಲ್ಲರೂ ವಾರಕ್ಕೊಮ್ಮೆ ನಿರಗ್ನಿ ಆಹಾರವನ್ನು ಸೇವಿಸಬೇಕು. ಮತ್ತೊಂದು ಅಗ್ನಿ ಆಹಾರ. ನಾವು ಬೇಯಿಸಿ ತಿನ್ನುವ ಆಹಾರವನ್ನು ಅಗ್ನಿ ಆಹಾರ ಎನ್ನುತ್ತೇವೆ'.

'ನಮ್ಮ ತಂದೆ ತಾಯಿಯ ಎಂಟು ಮಕ್ಕಳಲ್ಲಿ ಆರನೇ ಮಗುವಾಗಿ ಹುಟ್ಟಿದವನು ನಾನು. ನನ್ನ ತಂದೆ ಕೆ. ಮಲ್ಲೆದೇವರು ಸಮಾಜದ ಆಗು ಹೋಗುಗಳ ಬಗ್ಗೆ, ಜೀವನ, ವಚನಗಳ ಬಗ್ಗೆ, ಆತ್ಮ ಸಾಕ್ಷಾತ್ಕಾರದ ಬಗ್ಗೆ ಆಗಾಗ ಮನೆಯಲ್ಲಿ ಚರ್ಚೆ ಮಾಡುತ್ತಿದ್ದರು. ಅದನ್ನೆಲ್ಲ ಕೇಳಿಸಿಕೊಂಡು ಬೆಳೆದೆ. ನನ್ನ ತಂದೆ ನಾಟಕದಲ್ಲಿ ಪಾತ್ರಗಳನ್ನು ಮಾಡುತ್ತಿದ್ದರು ಹಾಡುತ್ತಿದ್ದರು ರಾಜಶೇಖರ ವಿಳಾಸ, ನಿಜಗುಣ ಶಿವಯೋಗಿಗಳ ಗ್ರಂಥಗಳು ಷಡಕ್ಷರಿ ಅವರ ಗ್ರಂಥಗಳು ಬಾಯಿಪಾಠವಾಗಿದ್ದು ಸರಾಗವಾಗಿ ಹೇಳುತ್ತಿದ್ದರು. ಹತ್ತನೇ ತರಗತಿ ಮುಗಿಯುವ ಹೊತ್ತಿಗೆ ತುರ್ತು ಪರಿಸ್ಥಿತಿ ಜಾರಿಯಾಯ್ತು. ಮನೆಯಲ್ಲಿದ್ದ ಕೃಷಿ ಕಾರ್ಮಿಕರು ಹೊರಟು ಹೋದರು. ಆಗ ಕೃಷಿ ಮಾಡಲು ನಾನು ಉಳಿದುಕೊಂಡೆ. ಅವರ ಪ್ರಭಾವದಿಂದ ನಾನು ಒಂದಿಷ್ಟು ಬರವಣಿಗೆ ರೂಢಿಸಿಕೊಂಡೆ.'

'ನನ್ನ ಮೂವತ್ತನೇ ವಯಸ್ಸಿನಿಂದೀಚೆಗೆ ಬರೆಯಲು ಶುರು ಮಾಡಿದೆ. ಅದಕ್ಕೂ ಮೊದಲು ಬರೆಯುತ್ತಿದ್ದೆ. ನಂತರ ಬಸವಣ್ಣ, ಅಲ್ಲಮಪ್ರಭು ಇವರೆಲ್ಲ ಇಷ್ಟು ಚೆನ್ನಾಗಿ ಬರೆದಿದ್ದಾರೆ ಇದರಲ್ಲಿ ನನ್ನದೇನು ಇಲ್ಲ ಅಂತ ನಾನು ಬರೆದದನ್ನು ಹರಿದು ಬಿಸಾಕುತ್ತಿದ್ದೆ. ಒಮ್ಮೆ ಕನ್ನಡ ಸಾಹಿತ್ಯ ಪರಿಷತ್ತಿನವರು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದರು. ಸಣ್ಣ ಮಕ್ಕಳೆಲ್ಲ ಮೂರು ನಾಲ್ಕು ಸಾಲು ಬರೆದಿರುತ್ತಿದ್ದರು. ಅವರಿಗೆಲ್ಲ ಒಂದು ಸರ್ಟಿಫಿಕೇಟ್ ಕೊಡುವುದನ್ನು ನೋಡಿದೆ. ಆಗ ನನಗನ್ನಿಸಿದ್ದು ಅರೆ ನಾನು ಇಷ್ಟು ಬರೆಯುತ್ತಿದ್ದೇನೆ ಯಾಕೆ ಬರೆದಿಡಬಾರದು ಅಂತ ಅಲ್ಲಿಂದೀಚೆಗೆ ಬರೆದದ್ದನ್ನ ಹರಿಯುವುದನ್ನು ನಿಲ್ಲಿಸಿದೆ. ಬರೆದದ್ದನ್ನೆಲ್ಲ ದಾಖಲು ಮಾಡಲು ಪ್ರಾರಂಭಿಸಿದೆ. ನನ್ನ ಗುರುಗಳು ಕರಿಬಸವಲಿಂಗನವರು. ಹಾಗಾಗಿ ಕರಿಬಸವಲಿಂಗ ಎಂಬ ಅಂಕಿತದಿಂದಲೇ ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದೇನೆ. ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ದೇವರದಾಸಿಮಯ್ಯ, ಮುಪ್ಪಿನ ಷಡಕ್ಷರಿ, ಚನ್ನಬಸವ ಎಲ್ಲರ ವಚನಗಳನ್ನು ಅಧ್ಯಯನ ಮಾಡಿದ್ದೇನೆ'.

'ಪ್ರೊ. ನಂಜುಂಡಸ್ವಾಮಿಯವರು ಮೂರು ತಿಂಗಳಿಗೊಮ್ಮೆ ಬೀಜ ಸಂರಕ್ಷಣೆಯ ಬಗ್ಗೆ ಮಾತನಾಡುತ್ತಿದ್ದರು. ಸೆಮಿನಾರುಗಳನ್ನು ಮಾಡುತ್ತಿದ್ದರು. ಅಧ್ಯಯನ ಶಿಬಿರಗಳಲ್ಲಿ ಬೀಜ ಸ್ವಾತಂತ್ರ್ಯದ ಬಗ್ಗೆ, ರೈತ ಹೋರಾಟಗಳ ಬಗ್ಗೆ ಎಲ್ಲವನ್ನು ಹೇಳಿಕೊಡುತ್ತಿದ್ದರು. ಅಲ್ಲಿಯವರೆಗೂ ನನಗೆ ಅಷ್ಟು ಮಾಹಿತಿ ಗೊತ್ತಿರಲಿಲ್ಲ. ನಂಜುಂಡಸ್ವಾಮಿ ಅವರ ಪ್ರಭಾವದಿಂದ ದೇಶೀಯ ಬೀಜಗಳ ಹುಡುಕಾಟಕ್ಕೆ ನನ್ನ ಹೆಂಡತಿ ರಾಜೇಶ್ವರಿ ಸೇರಿದಂತೆ ನಮ್ಮ ಇಡೀ ಕುಟುಂಬ ತೊಡಗಿಸಿಕೊಂಡೆವು'.

'ರಾಜಮುಡಿ ಅಕ್ಕಿ ಮೈಸೂರು ಮಹಾರಾಜರ ಮನಗೆದ್ದ ಭತ್ತ. ಅದಕ್ಕೆ ಅದನ್ನು ರಾಜಮುಡಿ ಎನ್ನುತ್ತಾರೆ. ಆಗ ರಾಜರಿಗೆ ಮುಡುಪಾಗಿ ರೈತರು ಬೆಳೆದು ಕೊಡುತ್ತಿದ್ದರು. ಈ ಅಕ್ಕಿಯಲ್ಲಿ ಅನ್ನ ಮಾಡಿ ತಿಂದರೆ ಸಾಮರ್ಥ್ಯ, ಬುದ್ಧಿವಂತಿಕೆ, ಧೈರ್ಯ ಬರುತ್ತದೆ. ಈ ಅಕ್ಕಿಯಲ್ಲಿ ಅನ್ನ ಮಾಡಿದರೆ ಅದರಷ್ಟು ಅಗುಳು ಬೇರಾವ ಅಕ್ಕಿಯಿಂದಲೂ ಆಗುವುದಿಲ್ಲ. ಅದರ ಬಗ್ಗೆ ಸಂಶೋಧನೆ ನಡೆಯುತ್ತಿದೆ. ರಕ್ತಚೂಡಿ ಅಕ್ಕಿಯಿಂದ ಅನ್ನ ಮಾಡಿದರೆ 24 ಗಂಟೆ ಇಟ್ಟರೂ ಹಳಸುವುದಿಲ್ಲ. ನಮ್ಮಲ್ಲಿ ಇತ್ತೀಚೆಗೆ ಆಹಾರ ಸಾರ್ವಭೌಮತೆ ಇಲ್ಲವಾಗಿದೆ. ಬೀಜ ವೈವಿಧ್ಯತೆ ಇಲ್ಲ. ನಮಗೆ ಏನು ಬೇಕು, ಏನು ಬೇಡ ಗೊತ್ತಿಲ್ಲವಾಗಿದೆ' ಎಂದು ಅವರು ಬೆಳೆದ ಭತ್ತದ ತಳಿಗಳ ಮಹತ್ವವನ್ನು ಹೇಳಿದರು.

ಹತ್ತನೇ ತರಗತಿಯವರೆಗೆ ಓದಿರುವ ಇವರಿಗೆ ವಚನ ಸಾಹಿತ್ಯದಲ್ಲಿ ಹೆಚ್ಚಿನ ಆಸಕ್ತಿ ಇದ್ದು ಕರಿ ಬಸವಲಿಂಗ ಎಂಬ ಅಂಕಿತ ನಾಮದಿಂದ ಸಾವಿರಕ್ಕೂ ಹೆಚ್ಚು ವಚನಗಳನ್ನು ರಚಿಸಿದ್ದಾರೆ ಮತ್ತು ಹಾಡುತ್ತಾರೆ. ಹಾಗೂ ಹಳೆಯ ಕಾಲದ ನಾಣ್ಯಗಳು, ವಿದೇಶಿ ನೋಟುಗಳು, ಅಪರೂಪದ ಕೃಷಿ ಸಲಕರಣೆಗಳನ್ನು ಸಂಗ್ರಹಣೆ ಮಾಡಿದ್ದಾರೆ. ಮುಂದೆ ವಸ್ತು ಸಂಗ್ರಹಾಲಯ ಮಾಡುವ ಮಹದಾಸೆಯನ್ನು ವ್ಯಕ್ತಪಡಿಸುತ್ತಾರೆ.
ರೇಚಣ್ಣನವರು ಹೇಳಿದಂತೆ ನಮ್ಮ ಬೇಕು ಬೇಡಗಳ ಬಗ್ಗೆ ತಿಳುವಳಿಕೆ ಕಡಿಮೆಯಾಗಿದೆ. ಫಾಸ್ಟ್ ಫುಡ್, ಜಂಕ್ ಫುಡ್ ಗಳಿಗೆ ಮಾರುಹೋಗಿ ನಮ್ಮ ದೇಹಾರೋಗ್ಯವನ್ನು ನಮಗೇ ಗೊತ್ತಿಲ್ಲದಂತೆ ನಾವೇ ಹಾಳು ಮಾಡಿಕೊಳ್ಳುವಲ್ಲಿ, ಹಣ ಕೊಟ್ಟು ರೋಗ ಕೊಂಡುಕೊಳ್ಳುವಲ್ಲಿ ಮುಂದಾಗಿದ್ದೇವೆ. ನಲ್ಲತಂಬಿ ಎಂಬ ಕವಿ ಹೇಳುವಂತೆ 'ನಾವು ಬಣ್ಣಕ್ಕಾಗಿ ರುಚಿ ಕಳೆದುಕೊಂಡವರು'. ಇವತ್ತು ಬಹುತೇಕ ವಿಷವನ್ನು ಬಿತ್ತಿ ವಿಷವನ್ನು ಬೆಳೆದು ವಿಷವನ್ನೇ ತಿನ್ನುತ್ತಿದ್ದೇವೆ. ಸಾವಯವ ಧಾನ್ಯಗಳ ಬಗ್ಗೆ ಅರಿವು ಇಲ್ಲದಾಗಿದೆ. ಸಾವಯವ ಬೆಳೆಗಳು ಸ್ವಚ್ಛ ಆಹಾರ ಪದ್ಧತಿ ಕಾಣಸಿಗುವುದು ವಿರಳವಾಗಿದೆ. ಸ್ವಲ್ಪ ದುಬಾರಿಯಾಗಬಹುದು (ಆಸ್ಪತ್ರೆಯ ಬಿಲ್ಲಿಗಿಂತ ದುಬಾರಿಯೇನಲ್ಲ) ಆದರೆ ಸಾವಯವ ಆಹಾರಗಳನ್ನು ಸಿರಿಧಾನ್ಯಗಳನ್ನು ಬಳಸಬೇಕು. ಉತ್ತಮ ಆಹಾರ ಪದ್ಧತಿಯ ಬಗ್ಗೆ ನಾವು ತಿಳಿದುಕೊಂಡು ನಮ್ಮ ಮುಂದಿನ ತಲೆಮಾರುಗಳಿಗೆ ತಿಳಿಸಿಕೊಡುವುದು ಇಂದಿನ ಪ್ರಮುಖ ಅಗತ್ಯತೆಗಳಲ್ಲೊಂದು. ಸ್ವಚ್ಛ ಆಹಾರ ಸ್ವಸ್ಥ ಆರೋಗ್ಯ ಎಲ್ಲರ ಆದ್ಯತೆಯಾಗಲಿ.

ಧನ್ಯವಾದಗಳೊಂದಿಗೆ..
ನಿರೂಪಣೆ : ಜ್ಯೋತಿ. ಎಸ್

ಈ ಅಂಕಣದ ಹಿಂದಿನ ಅಂಕಣಗಳು ನಿಮ್ಮ ಓದಿಗಾಗಿ:
ಎಲೆಮರೆಯ ಕಲಾವಿದ ರಾಘವೇಂದ್ರ ಮೊಘವೀರ
ಚಾರಣಿಗರಿಗೆ ಪ್ರಕೃತಿ ಸೌಂದರ್ಯ ಸವಿಯುವ ಶುದ್ಧ ಮನಸಿರಬೇಕು...
ಗೋಳೂರು ಹಾಡಿಯ ಜೇನುಕುರುಬರ ಹಾಡು-ಪಾಡು
ಆಯುರ್ವೇದ ಜ್ಞಾನದ ಲಕ್ಷ್ಮಿ ನಾರಾಯಣ ಸಿದ್ದಿ
ಕಂಗೊಳಿಸುವ ಕಲೆಗಾರಿಕೆಯ ಹಿಂದಿನ ಬದುಕು
ಬದುಕಿಗೆ ಹೊಳಪು ಕೊಡುವ ಯತ್ನದಲ್ಲಿ ತಾಮ್ರ ಆಭರಣ ವ್ಯಾಪಾರಿ ಸುನಂದಮ್ಮ
ಸಮುದಾಯದ ಏಳಿಗೆಗಾಗಿ ದುಡಿಯುತ್ತಿರುವ ರಾಜೇಶ್ವರಿ ಸಿದ್ದಿ
ಮಣ್ಣಿಗೂ ಜೀವ ನೀಡುವ ಅದ್ಭುತ ಜೀವ ಮಂಜುನಾಥ್ ಹಿರೇಮಠ

ಎದೆ ತುಂಬಿ ಹಾಡುವ ಜಾನಪದ ಪ್ರತಿಭೆ ಹರಾಳು ಕಾಳಮ್ಮ
ಮರಗಳೊಡನೆ ಮಾತನಾಡುವ ಮಾಧವ ಉಲ್ಲಾಳರು
ನೆಲೆಯಲ್ಲದ ನೂರಾರು ಮಂದಿಗೆ ಆಸರೆಯಾದ 73ರ ಕುಮುದ ಜೆ. ಕುಡ್ವ
ಎಲ್ಲಿ ನೋಡಿದರೂ ಅಪಾಯ, ಅಪಾಯ, ಅಪಾಯ - ಚೇತನ್‌ಕುಮಾರ್ ಮಾತುಗಳಲ್ಲಿದೆ ಕಟು ಸತ್ಯ

MORE NEWS

ಸಮಕಾಲೀನ ಭಾಷಿಕ ಅಗತ್ಯಕ್ಕೆ ಸ್ಪಂದಿಸುವ: ‘ಸರಿಗನ್ನಡಂ ಗೆಲ್ಗೆ’

27-04-2024 ಬೆಂಗಳೂರು

"ಯಾವುದೇ ಭಾಷಾ ವಲಯ ಯಾವ ಕಾಲಕ್ಕೂ ಎದುರಿಸುವ ಈ ಸರಿ-ತಪ್ಪು, ಶುದ್ಧ-ಅಶುದ್ಧಗಳ ನುಡಿಬಳಕೆಯ ಸಮಸ್ಯೆಯನ್ನು ಚರ್ಚಿಸು...

ಕನ್ನಡಕ್ಕೊದಗಿದ ಮೊದಮೊದಲ ಬಾಶಾಸಂರ‍್ಕ ಯಾವುವು?

26-04-2024 ಬೆಂಗಳೂರು

"ಕನ್ನಡವು ದ್ರಾವಿಡ ಬಾಶೆಗಳ ಕುಲಕ್ಕೆ ಸೇರುವಂತದ್ದಾಗಿದ್ದು, ಇದೆ ಕುಲಕ್ಕೆ ಸೇರುವ ತುಳು, ಕೊಡವ, ಕೊರಚ, ಕುರುಬ, ತ...

ಕಲಬುರ್ಗಿ ಜಿಲ್ಲಾ ಪ್ರಥಮ ತತ್ವಪದ ಸಾಹಿತ್ಯ ಸಮ್ಮೇಳನ

24-04-2024 ಬೆಂಗಳೂರು

"ಕಡಕೋಳ ಮಠಾಧೀಶರು ಮತ್ತು ತತ್ವಪದಗಳ ಮಹಾ ಪೋಷಕರಾದ ಷ. ಬ್ರ. ಡಾ. ರುದ್ರಮುನಿ ಶಿವಾಚಾರ್ಯರು ಸಮ್ಮೇಳನದ ಸರ್ವಾಧ್ಯಕ...