ರಸ್ತೆಯನ್ನು ಸಾಂಕೇತಿಕವಾಗಿ ಇಟ್ಟುಕೊಂಡು ಇಡೀ ಸಮಾಜದ ದುಸ್ತರ ವ್ಯವಸ್ಥೆಯನ್ನು ಚಿತ್ರಿಸುವ ತಿರುಪತಿ ಭಂಗಿ ಅವರ ಕೃತಿ ‘ಕೆಂಪರೋಡ್’. ಇತ್ತಿಚೆಗೆ ಬಿಡುಗಡೆಯಾದ ಈ ಕೃತಿಗೆ ಸೊಗಸಾಗಿ ಬರೆದ ಶ್ರೀಧರ ಬನವಾಸಿ ಅವರ ಬೆನ್ನುಡಿ ಇಲ್ಲಿದೆ.
ಒಂದು ಕೆಟ್ಟ ವ್ಯವಸ್ಥೆ ತಾನು ಮಾಡಬೇಕಾದ ಜವಾಬ್ದಾರಿಯನ್ನು ಮರೆತು ಕುಳಿತಾಗ ಅದರಿಂದಾಗುವ ಅನಾಹುತಗಳೆ ಅದರ ಕನ್ನಡಿಯಾಗಿರುತ್ತದೆ. ಈ ಮಾತಿಗೆ ಕೆಂಪರೋಡ್ ಕಥೆ ಒಂದು ನಿದರ್ಶನವಾಗುತ್ತದೆ. ಈ ಕಥೆಯ ಮುಖ್ಯ ಪಾತ್ರದಾರಿಯೇ ಕೆಂಪರೋಡ್.
ಇಲ್ಲಿ ಕಥೆಗಾರು ತಾವು ಆಯ್ಕೆ ಮಾಡಿಕೊಂಡ ಹಳ್ಳಿಯ ಹದಗೆಟ್ಟ ಕೆಂಪು ರಸ್ತೆಯನ್ನೇ ಮುಖ್ಯಪ್ರಧಾನ ಭೂಮಿಕೆಯಲ್ಲಿಟ್ಟುಕೊಂಡು, ಆರಂಭದಲ್ಲಿ ಪ್ರಭಾ ಹಾಗೂ ಕೊನೆಯಲ್ಲಿ ಬರುವ ಬಸಪ್ಪನ ಸಾವಿನ ಎರಡು ಎಳೆಗಳ ನಡುವೆ, ಒಂದು ಕೆಟ್ಟ ವ್ಯವಸ್ಥೆಯನ್ನು ಚಿತ್ರಿಸಿದ ರೀತಿ, ಅದರ ಹಿಂದಿನ ಪಾತ್ರಗಳ ಕಥೆ-ವ್ಯಥೆ, ಹಳ್ಳಿಯ ಅರಾಜಕತೆ, ವನರಾಜಕೀಯ, ಎರಡು ಧರ್ಮಗಳ ನಡುವಿನ ಬಾಂಧವ್ಯ, ಗುಡಿ ಮಸೀದಿಗಳ ನಡುವಿನ ನಂಬಿಕೆ, ಅಜ್ಞಾನ, ಇದರ ನಡುವೆ ಕಥೆಯ ನಿರೂಪಕ ಕೆಂಪು ರಸ್ತೆಯಲ್ಲಿ ಆಗುತ್ತಿರುವ ಅಪಘಾತಗಳನ್ನು ತಪ್ಪಿಸಲು ಮತ್ತೂ ಸರಿಪಡಿಸಲು ಮಾಡುವ ಪ್ರಯತ್ನಗಳು, ಆತನ ಕಾಳಜಿ, ಸ್ನೇಹ ಸಂಬಂಧ, ಹೀಗೆ ಇಡೀ ಕಥೆಯು ಇಂತಹ ಹಲವು ವಿಚಾರಗಳಿಂದ ಕೂಡಿ ಸಮೃದ್ಧವಾಗಿದೆ. ಒಂದು ರಸ್ತೆಯ ಸುತ್ತಲೂ ಇಂತಹ ಅವ್ಯವಸ್ಥಿತ ವಾತಾವರಣ ಕುರಿತಾದ ಈ ಕಥೆಯು ಇಷ್ಟವಾಗುತ್ತದೆ. ಇಲ್ಲಿ ಕೆಂಪರೋಡ ಜೀವಂತ ಪಾತ್ರವಾಗಿ, ನಿರಂತರವಾಗಿ ಜನರ ಪ್ರಾಣಗಳನ್ನು ಬಲಿ ತೆಗೆದುಕೊಳ್ಳುತ್ತಿದೆ ಅನ್ನುವಷ್ಟು ರೀತಿ ಅದರ ಪಾತ್ರ ನಮಗೆ ಕಾಡುತ್ತದೆ. ಕಥೆಯ ನಿರೂಪಕ ಕೆಂಪುರಸ್ತೆಯ ಜೊತೆಗೆ ಎಲ್ಲ ಪಾತ್ರಗಳನ್ನು ಸಮಾನವಾಗಿ ತನ್ನ ಜೊತೆ ತೆಗೆದುಕೊಂಡು ಕಥೆಯ ದಡವನ್ನು ಸುಲಭವಾಗಿ ಮುಟ್ಟಿಸಿದ್ದಾರೆ. ಕಥೆಯ ಅಂತ್ಯ ಸುಖಾಂತವಾದರು ಅದು ತನ್ನ ಓಘದಲ್ಲಿ ಅನೇಕ ವಿಚಾರಗಳನ್ನು ಟಿಸಿಲುಗಳಾಗಿ ಹೇಳುತ್ತಾ, ಕಥಾ ಹಂದರದ ವಿಷಯವನ್ನು ನಮ್ಮೊಳಗೆ ಮಂಥನವನ್ನು ಮಾಡಿಸುತ್ತದೆ.
ತಿರುಪತಿ ಭಂಗಿಯವರ ಈ ಹಿಂದಿನ ಕಥೆಗಳನ್ನು ನಾನು ಓದಿಕೊಂಡಂತೆ. ಅವರ ಕಥೆಗಳು ತಾವು ನೆಲೆಸಿರುವ ಪ್ರಾಂತ್ಯದ ಸೊಗಡಿನ ಭಾಷೆಯನ್ನು ಕೇವಲ ಪಾತ್ರಗಳ ಅಭಿವ್ಯಕ್ತಿಯ ಮಾತನ್ನಾಗಿಸದೇ ಇಡೀ ಕಥೆಯ ನಿರೂಪಣೆಯ ಭಾಷೆಯನ್ನಾಗಿಸಿಕೊಂಡಿದೆ. ಹಾಗಾಗಿ ಅವರ ಕಥೆಗಳು ಅಲ್ಲಿನ ಅಪ್ಪಟ ಕಥೆಗಳು ಅನ್ನುವಷ್ಟು ನಮಗೆ ಇಷ್ಟವಾಗುತ್ತವೆ. ಅವರ ಕಥನ ಶಕ್ತಿ ಅಡಗಿರುವುದು ಕೂಡಾ ಅವರ ಗ್ರಾಮೀಣ ಶೈಲಿಯ ಗಟ್ಟಿ ನಿರೂಪಣೆಯಲ್ಲಿ, ಕೆಂಪರೋಡ್ ನಮ್ಮ ಇಂದಿನ ಗ್ರಾಮೀಣ ಜಗತ್ತಿನ ಒಂದು ಕೆಟ್ಟ ವ್ಯವಸ್ಥೆಯ ಒಂದು ಮುಖವನ್ನು ತೋರಿಸುವ ಕಥೆಯಾಗಿದೆ. ಅಂತಹ ಗಟ್ಟಿತನ ಇದರಲ್ಲಿದೆ. ಅವರ ಉಳಿದ ಕಥೆಗಳು ಇದೇ ಧಾಟಿಯಲ್ಲಿ ನಿರೂಪಿಸಲ್ಪಟ್ಟು ತಮ್ಮತನವನ್ನು ಎತ್ತಿ ಹಿಡಿಯುತ್ತಿವೆ.
- ಶ್ರೀಧರ ಬನವಾಸಿ
ಕೃತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ : ಕೆಂಪರೋಡ್
"ಒಂದು ದಶಕಗಳ ಅವಧಿಯಲ್ಲಿ ಜೀವ ತಳೆದ "ಮಹಾಪತನ" ಸಂತೋಷಕುಮಾರ ಮೆಹೆಂದಳೆಯವರ ಒಂದು ಮಹಾಕಥನ. ಮಹಾಭಾರತ, ...
"ಪುರುಷನ ಅಹಂಕಾರಕ್ಕೆ ವಿಷಾದಿಸುವ ‘ಹಾದರದ ಕೂಸು’, ಭೂಮಿ ಮತ್ತು ಮನುಷ್ಯ ಸಂಬಂಧಗಳ ನಡುವೆ ಉಂಟಾಗಿರು...
"ತಂದೆ ಹೇಳಿಕೊಟ್ಟ ಪ್ರಕೃತಿಯ ಪಾಠಗಳೇ ಮುಂದೆ ಪೂಚಂತೆ ಅವರಿಗೆ ನಿಸರ್ಗದ ಮಡಿಲಲ್ಲಿಯೇ ತಾನು ಜೀವಿಸಬೇಕೆಂಬಲ್ಲಿಗೆ ತ...
©2024 Book Brahma Private Limited.