Date: 06-02-2020
Location: ಕಲಬುರಗಿ
ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ):
ಕನ್ನಡಕ್ಕೆ ಬಹುಬೇಡಿಕೆಯ ಶಾಸ್ತ್ರೀಯ ಸ್ಥಾನಮಾನ ದೊರೆತರೂ ಅದರ ಅನುಷ್ಠಾನ ಹಾಗೂ ನಿರ್ವಹಣೆಗೆ ಸಂಬಂಧಿಸಿದ ಸಂಸ್ಥೆಯನ್ನು ಆರಂಭಿಸುವ ಅಗತ್ಯವಿದೆ ಎಂದು ಹಿರಿಯ ಇತಿಹಾಸಕಾರ-ಲೇಖಕ ಎಸ್. ಶೆಟ್ಟರ್ ಅವರು ಅಗ್ರಹಿಸಿದರು.
ಕನ್ನಡ ಉಳಿಸಿ ಬೆಳೆಸುವ ಬಗೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು ’ಸತತ ಪ್ರಯತ್ನದ ಫಲವಾಗಿ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯಿತು. ಆದರೆ, ಅದರ ಸಮರ್ಪಕ ನಿರ್ವಹಣೆ ಸಾಧ್ಯವಾಗಿಲ್ಲ. ಆಗಿರುವ ಕೆಲಸ ಏನೇನೂ ಸಾಲದು. ನಿರ್ವಹಣೆಗೆ ಸಂಸ್ಥೆಯೊಂದನ್ನು ಆರಂಭಿಸುವುದು ಸಾಧ್ಯವಾಗಿಲ್ಲ’ ಎಂದು ಅಭಿಪ್ರಾಯಪಟ್ಟರು.
ಶಾಸ್ತ್ರೀಯ ಸ್ಥಾನ ಪಡೆದ ನಂತರ ನಿರೀಕ್ಷಿತ ಕೆಲಸಗಳು ಆಗಿಲ್ಲ. ಸರ್ಕಾರ ಹಣ ಬಿಡುಗಡೆ ಮಾಡಿ ಕೈ ತೊಳೆದುಕೊಂಡಿದೆ. ಅದು ಸಮರ್ಪಕ ಬಳಕೆ ಆಗಿಲ್ಲ. ಸಂಶೋಧನೆಯು ಗುಣಮಟ್ಟದ್ದಾಗಿಲ್ಲ. ಅದನ್ನು ನಿಯಂತ್ರಿಸಲು ಸಂಸ್ಥೆಯೊಂದನ್ನು ಆರಂಭಿಸಬೇಕು ಎಂದರು.
ಕನ್ನಡದ ಬಗ್ಗೆ ಅಭಿಮಾನ ಇರಲಿ ಆರಾಧನೆ ಬೇಡ. ಭಾಷೆಯ ಬಳಕೆಯ ಬಗ್ಗೆ ಮಡಿವಂತಿಕೆಯ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಗ್ರಾಮೀಣದ ಪ್ರದೇಶದಲ್ಲಿ ಕನ್ನಡ ಮಾತನಾಡುವವರು ಇರುವವರೆಗೆ ಕನ್ನಡಕ್ಕೆ ಯಾವುದೇ ಆತಂಕ ಇಲ್ಲ. ಮಾತಾಗಿ ಇರುವವರೆಗೆ ಕನ್ನಡದ ಅಸ್ಮಿತೆ ಇದ್ದೇ ಇರುತ್ತದೆ. ಇಂಗ್ಲಿಷ್ ಪದಗಳು ಬೆರೆತ ಕನ್ನಡದ ಬಗ್ಗೆ ಕೆಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಬೇರೆ ಭಾಷೆಯ ಪದಗಳ ಸೇರ್ಪಡೆ-ಬಳಕೆಯಿಂದ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯೇನೂ ಉಂಟಾಗುವುದಿಲ್ಲ. ಹಾಗಂತ ಸುಮ್ಮನಿರಬೇಕಿಲ್ಲ ಕನ್ನಡಕ್ಕೆ ಇರುವ ಆತಂಕಗಳನ್ನು ಅರಿತು ಅದಕ್ಕೆ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದರು.
ಕನ್ನಡವು ಈಗ ಇಂಗ್ಲಿಷಿನಿಂದ ಆತಂಕ ಎದಿರುಸುತ್ತಿದೆ ಎಂಬಂತೆ ಭಾಸವಾಗುತ್ತಿರುವುದು ಹೊಸದೇನಲ್ಲ. ಕನ್ನಡವು ಇಂತಹ ಹಲವು ಆತಂಕಗಳನ್ನು ಎದುರಿಸಿ ಮೆಟ್ಟಿ ನಿಂತಿದೆ. ಹಿಂದೆ ಸಂಸ್ಕೃತ, ಪ್ರಾಕೃತ ಹಾಗೂ ಪಾರಸಿ ಭಾಷೆಗಳಿಂದ ಇಂತಹುದೇ ಸವಾಲು ಎದುರಿಸಿತ್ತು. ಅವುಗಳಿಂದ ಹೊರಬಂದು ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆದಿದೆ ಎಂದರು.
ಅನ್ಯಭಾಷೆಯ ಪದಗಳ ಬಳಕೆಗೆ ಸಂಬಂಧಿಸಿದಂತೆ ಮಡಿವಂತಿಕೆ ಮಾಡುವುದು ಸರಿಯಲ್ಲ. ಎಲ್ಲ ಭಾಷೆಯ ಪದಗಳನ್ನು ಬಳಸಿ ನಮ್ಮದಾಗಿಸಿ, ಕನ್ನಡೀಕರಣಗೊಳಿಸಿ ಬೆಳೆಸಬೇಕು ಎಂದು ಸೂಚಿಸಿದರು.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೆಳನಕ್ಕೆ ಹಾವೇರಿ ಸಜ್ಜಾಗಿದೆ. ಮೂರು ವರ್ಷಗಳ ನಂತರ ನಡೆಯುತ್ತಿರುವ ಮೂರು&n...
ಕಲಬುರಗಿ (ಶ್ರೀವಿಜಯ ಪ್ರಧಾನ ವೇದಿಕೆ) ಭಾರತವನ್ನು ಎರಡಾಗಿ ಒಡೆಯದೆ ಅಖಂಡವಾಗಿ ಉಳಿಸುವುದು ಎಲ್ಲರ ಕರ್ತವ್ಯ ಎಂದು ಸಮ...
ಕಲಬುರಗಿ: ಹಾವೇರಿಯಲ್ಲಿ ಅಖಿಲ ಭಾರತ 86ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸ...
©2024 Book Brahma Private Limited.