Date: 19-04-2021
Location: ಬೆಂಗಳೂರು
ಅನುಭವ, ಸಂವೇದನೆ ಹಾಗೂ ಭಾಷೆಯ ಸೊಗಡಿನಿಂದ ಕಾವ್ಯ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಎ.ಎಸ್.ಎನ್. ಹೆಬ್ಬಾರ ಅವರು ಅಭಿಪ್ರಾಯಪಟ್ಟರು.
ನಾಯ್ಕನಕಟ್ಟೆಯ ಶ್ರೀಮತಿ ಲಕ್ಷ್ಮೀ ಶ್ರೀ ನಾಗಪ್ಪಯ್ಯ ನಾಯಕ್ ಸದ್ಭಾವನಾ ವೇದಿಕೆ, ಬೀದರನ ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಬೆಂಗಳೂರಿನ ಗೋಪಾಲಕೃಷ್ಣ ಅಡಿಗ ಶತಮಾನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಉಪ್ಪುಂದದ ರೈತರ ಸಹಕಾರಿ ಸೇವಾ ಸಂಘದ ‘ರೈತಸಿರಿ’ ಸಭಾಭವನದಲ್ಲಿ ಜರುಗಿದ ‘ನಮ್ಮೂರ ಅಭಿಮಾನ : ವಿಶ್ವ ಸಂಸ್ಕೃತಿ ದಿನ’ ಕಾರ್ಯಕ್ರಮ ಹಾಗೂ ಕೆ. ಪುಂಡಲೀಕ ನಾಯಕ್ ಅವರ ‘ಬದುಕು ಬಣ್ಣದ ಬುಗುರಿ’ ಕವನ ಸಂಕಲನ ಹಾಗೂ ‘ಕಾವ್ಯ ಸಂಜೀವಿನಿ’ ಹನಿಕವನಗಳ ಸಂಕಲನ ಬಿಡುಗಡೆ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಕಾವ್ಯದ ಸೃಷ್ಟಿ ಒಂದು ಅಪೂರ್ವ ಅನುಭವ, ಸೂಕ್ಷ್ಮ ಸಂವೇದನೆಗಳ ಒತ್ತಡ ಹಾಗೂ ಭಾಷೆಯ ಸೊಗಡು ಮೇಳೈಸಿದರೆ ಕಾವ್ಯ ರೂಪುಗೊಳ್ಳುತ್ತದೆ. ಅಧ್ಯಯನದ ಮೆರಗು ಸಹ ಅಗತ್ಯ ಎಂದು ಅವರು ಹೇಳಿದರು.
ಖಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶಚಂದ್ರಶೆಟ್ಟಿ ಅವರು ಉದ್ಘಾಟಿಸಿದ ಸಮಾರಂಭದಲ್ಲಿ ಹಿರಿಯ ಸಾಹಿತಿಗಳಾದ ಡಾ. ಎಂ.ಜಿ. ದೇಶಪಾಂಡೆ ಹಾಗೂ ಡಾ. ಪಾರ್ವತಿ ಜಿ. ಐತಾಳ್ ಅವರು ಕವಿ ಪುಂಡಲೀಕ ನಾಯಕ್ ಅವರ ‘ಬದುಕು ಬಣ್ಣದ ಬುಗುರಿ’ ಕವನ ಸಂಕಲನ ಹಾಗೂ ‘ಕಾವ್ಯ ಸಂಜೀವಿನಿ’ ಹನಿಕವನಗಳ ಸಂಕಲನ ಲೋಕಾರ್ಪಣೆಗೊಳಿಸಿದರು. ಸಾಹಿತಿ ಬೆಳಗೋಡು ರಮೇಶ್ ಭಟ್ ಅವರು ಕೃತಿಗಳನ್ನು ಪರಿಚಯಿಸಿದರು. ಸಾಹಿತಿ ರಾಜಾಚಾರ್ಯ ಅವರು ಆಶಯ ನುಡಿಗಳನ್ನಾಡಿದರು.
ನಿವೃತ್ತ ಪ್ರೊ. ಸಿ. ಉಪೇಂದ್ರ ಸೋಮಯಾಜಿ, ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ, ಜಾದೂಗಾರ ಓಂಗಣೇಶ ಉಪ್ಪುಂದ, ಪತ್ರಕರ್ತ ಯು.ಎಸ್. ಶೆಣೈ ಸೇರಿದಂತೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಕವಿ ಕೆ. ಪುಂಡಲೀಕ ನಾಯಕ್ ಸ್ವಾಗತಿಸಿದರೆ, ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿ, ವಂದಿಸಿದರು.
ಬೀದರನ ದೇಶಪಾಂಡೆ ಸಾಹಿತ್ಯಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕರಾವಳಿಯ ಸಾಧಕರಿಗೆ ಪ್ರಶಸ್ತಿ ಸನ್ಮಾನ, ಶ್ರೇಷ್ಠ ಭಾರತೀಯ ಕವಿ ನಮ್ಮೂರ ಮೋಗೇರಿ ಗೋಪಾಲಕೃಷ್ಣ ಅಡಿಗರ ಸಾಹಿತ್ಯ ಸಂಪದ ಮಾಹಿತಿ, ಕವಿಗೋಷ್ಠಿ ಮತ್ತು ಛಾಯಾಚಿತ್ರಗಳ ಪ್ರದರ್ಶನ ಜರುಗಿದವು. ಕುಂದ ಕನ್ನಡ ಅಧ್ಯಯನ ಕೇಂದ್ರ ಉಪ್ಪುಂದ ಮತ್ತು ಸಿರಿ ಮೊಗೇರಿ ಟ್ರಸ್ಟ್ ಮೊಗೇರಿ ಸಂಸ್ಥೆಗಳು ಸಮಾರಂಭದ ಯಶಸ್ವಿಗೆ ಸಹಕರಿಸಿದ್ದವು.
ಬೆಂಗಳೂರು: ಅವಿರತ ಹರೀಶ್ ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಪ್ರಕಾಶಕ, ಲೇಖಕ, ಸಂಘಟಕ ಅವಿರತ ಹರೀಶ್ 60ರ ಸಾಂಸ್ಕೃತಿಕ ಸ...
ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾದಿಂದ 2023ನೇ ವರ್ಷದ ಮಹಿಳಾ ಶ್ರೇಷ್ಠ ಕನ್ನಡ ಕೃತಿಗಳಿಗೆ “ಮಾತೋಶ್ರೀ...
ಧಾರವಾಡ: ಡಾ. ಗಿರಡ್ಡಿ ಗೋವಿಂದರಾಜ ಫೌಂಡೇಶನ್ ನಿಂದ “ವಿಮರ್ಶಾ ಪ್ರಶಸ್ತಿ"ಗೆ ವಿಮರ್ಶಾ ಕೃತಿಗಳನ್ನು ಆಹ್ವಾ...
©2024 Book Brahma Private Limited.